Covid Crisis Karnataka : ಸೋಂಕಿತರ ಆಸ್ಪತ್ರೆ ದಾಖಲಾತಿ ಭಾರೀ ಕಡಿಮೆ!

By Kannadaprabha NewsFirst Published Dec 12, 2021, 6:36 AM IST
Highlights
  •  
  •  ಸೋಂಕಿತರ ಆಸ್ಪತ್ರೆ ದಾಖಲಾತಿ ಭಾರೀ ಕಡಿಮೆ!
  • - 7300+ ಸಕ್ರಿಯ ಕೇಸಲ್ಲಿ 415 ಜನ ಮಾತ್ರ ಆಸ್ಪತ್ರೆಯಲ್ಲಿ
  • ಲಸಿಕೆ ಪರಿಣಾಮವೋ? ಕೋವಿಡ್‌ ಎಂಡೆಮಿಕ್‌ ಹಂತಕ್ಕೆ ಬಂದಿದೆಯೋ?
  • - 2 ಡೋಸ್‌ ಲಸಿಕೆ ಪಡೆದವರು 2 ತಿಂಗಳಿನಿಂದ ಐಸಿಯುಗೆ ದಾಖಲಾಗಿಲ್ಲ
  • ಆಸ್ಪತ್ರೆಗಳಲ್ಲಿ ಮೀಸಲಿಟ್ಟಐಸಿಯು, ಆಕ್ಸಿಜನ್‌ ಬೆಡ್‌ ವ್ಯರ್ಥ

ವರದಿ :  ಜಯಪ್ರಕಾಶ್‌ ಬಿರಾದಾರ್‌

 ಬೆಂಗಳೂರು (ಡಿ.12):  ರಾಜ್ಯದಲ್ಲಿ (Karnataka) ಕೊರೊನಾ (Corona) ವೈರಸ್‌ ಸೋಂಕು ಎಂಡೆಮಿಕ್‌ ಹಂತಕ್ಕೆ ಬಂದು ತಲುಪಿದೆಯೋ ಅಥವಾ ಕೊರೊನಾ ಲಸಿಕೆ ಪರಿಣಾಮವೋ ಗೊತ್ತಿಲ್ಲ. ಈ ಮಾರಕ ರೋಗದ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಅತ್ಯಂತ ಕಡಿಮೆಯಿದೆ.

ರಾಜ್ಯದಲ್ಲಿ ಪ್ರಸ್ತುತ ಏಳೂವರೆ ಸಾವಿರ ಸಕ್ರಿಯ ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈ ಪೈಕಿ ಶೇ.5ಕ್ಕಿಂತ (415) ಕಡಿಮೆ ಮಂದಿ ಆಸ್ಪತ್ರೆಯಲ್ಲಿ (hospital) ಚಿಕಿತ್ಸೆ ಪಡೆಯುತ್ತಿದ್ದಾರೆ. ಐಸಿಯುನಲ್ಲಿರುವವರ ಸಂಖ್ಯೆ 38 ಮಾತ್ರ! ವಿಶೇಷವೆಂದರೆ, ಕರೋನಾ ಲಸಿಕೆಯ ಎರಡು ಡೋಸ್‌ ಪಡೆದವರರಾರ‍ಯರು ಕಳೆದ ಎರಡು ತಿಂಗಳಿನಿಂದ ಐಸಿಯುಗೆ ದಾಖಲಾಗಿಯೇ ಇಲ್ಲ!

ನಿತ್ಯ ಸೋಂಕು ದೃಢಪಡುವ ಪ್ರತಿ ನೂರು ಮಂದಿಯಲ್ಲಿ ಮೊದಲ ಅಲೆಯಲ್ಲಿ ಸರಾಸರಿ 22 ಮಂದಿ, ಎರಡನೇ ಅಲೆಯಲ್ಲಿ 18 ಮಂದಿ ಆಸ್ಪತ್ರೆ ದಾಖಲಾಗುತ್ತಿದ್ದರು. ಸದ್ಯ ಆ ಪ್ರಮಾಣ 100ರಲ್ಲಿ 5ಕ್ಕೆ ಇಳಿಕೆಯಾಗಿದೆ. ಜಿಲ್ಲಾಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರಿಗೆಂದು ಮೀಸಲಿಟ್ಟಐಸಿಯು, ಆಕ್ಸಿಜನ್‌ ಹಾಸಿಗೆಗಳು ಇಂದಿಗೂ ಖಾಲಿ ಇವೆ. ಆಸ್ಪತ್ರೆ ದಾಖಲಾತಿ ಬೆರಳೆಣಿಕೆಯಷ್ಟಿರುವುದಿಂದಲೆ ಹಾಸಿಗೆ ನಿರ್ವಹಣಾ ಆನ್‌ಲೈನ್‌ ಪೋರ್ಟಲ್‌ ಸ್ಥಗಿತಗೊಳಿಸಲಾಗಿದೆ ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಲಸಿಕೆ ಪರಿಣಾಮ:

ಸದ್ಯ ರಾಜ್ಯದಲ್ಲಿ ಕೊರೋನಾ ಸೋಂಕಿತರಲ್ಲಿ 38 ಮಂದಿ ಐಸಿಯುನಲ್ಲಿ (ICU)  ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ ಯಾರೋಬ್ಬರು ಎರಡೂ ಡೋಸ್‌ ಲಸಿಕೆ ಪಡೆದಿಲ್ಲ. ಅರ್ಧದಷ್ಟುಮಂದಿ ಒಂದೂ ಡೋಸ್‌ ಪಡೆದಿಲ್ಲ. ಹೀಗಾಗಿಯೇ, ಶ್ವಾಸಕೋಶ ಸೇರಿದಂತೆ ದೇಹದ ಇತರೆ ಅಂಗಾಂಗಳಿಗೆ ಹೆಚ್ಚು ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಲಸಿಕೆ ಎಫೆಕ್ಟ್: ತಜ್ಞರು

ಲಸಿಕೆ ಅಭಿಯಾನದಿಂದಲೂ ಸೋಂಕಿನ ತೀವ್ರತೆ ಹತೋಟಿಗೆ ಬಂದಿದ್ದು, ಇದರಿಂದಲೂ ಆಸ್ಪತ್ರೆ ದಾಖಲಾತಿಗಳು ತಗ್ಗಿವೆ ಎಂದು ಆರೋಗ್ಯ ತಜ್ಞರು ಹೇಳುತ್ತಿದ್ದಾರೆ. ಆರಂಭದ ದಿನಗಳಿಂದಲೂ ಲಸಿಕೆ ಕೊರೋನಾ (Corona) ಸೋಂಕು ಬಾರದಂತೆ ತಡೆಗಟ್ಟುವುದಿಲ್ಲ, ಸೋಂಕು ದೇಹದ ಮೇಲೆ ಉಂಟುಮಾಡುವ ಹಾನಿಯನ್ನು ಶೇ.70-80 ರಷ್ಟುತಗ್ಗಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳಿದ್ದರು. ರಾಜ್ಯದಲ್ಲಿ ಈಗಾಗಲೇ ಶೇ.95 ರಷ್ಟುಮಂದಿಯದ್ದು ಮೊದಲ ಡೋಸ್‌, ಶೇ.68 ರಷ್ಟುಮಂದಿಯದ್ದು ಎರಡೂ ಡೋಸ್‌ ಪೂರ್ಣಗೊಂಡಿದೆ. ಲಸಿಕೆ ಪಡೆದವರಿಗೆ ಸೋಂಕು ತಗುಲುತ್ತಿದ್ದರೂ, ಬಹುತೇಕರಿಗೆ ಸೋಂಕು ಲಕ್ಷಣಗಳು ಕಾಣಿಸಿಕೊಳ್ಳುತ್ತಿಲ್ಲ, ಶ್ವಾಸಕೋಶದ ಹಾನಿ ಮಟ್ಟಕ್ಕೆ ತಲುಪುತ್ತಿಲ್ಲ. ಹೀಗಾಗಿ, ಆಸ್ಪತ್ರೆ ದಾಖಲಾತಿ ಶೇ.5ಕ್ಕೆ ತಗ್ಗಿದ್ದು, ಶೇ.95ರಷ್ಟುಮಂದಿ ಮನೆಯಲ್ಲಿಯೇ ಆರೈಕೆ ಪಡೆಯುತ್ತಿದ್ದಾರೆ.

ಅಂಕಿ-ಅಂಶಗಳು (ಡಿ.11)

ರಾಜ್ಯ

ಸಕ್ರಿಯ ಸೋಂಕಿತರು 7,306

ಆಸ್ಪತ್ರೆ ದಾಖಲು 415

ಐಸಿಯು ದಾಖಲು 38

ಬೆಂಗಳೂರು

ಸಕ್ರಿಯ ಸೋಂಕಿತರು 5,200

ಆಸ್ಪತ್ರೆ ದಾಖಲು 39

ಐಸಿಯು ದಾಖಲು 3

ಲಸಿಕೆಯು ದೇಹದ ಮೇಲೆ ಸೋಂಕಿನ ಹಾನಿಯನ್ನು ಸಾಕಷ್ಟುತಗ್ಗಿಸುತ್ತದೆ. ಲಸಿಕೆ ಪಡೆದವರಲ್ಲಿ ಹೆಚ್ಚು ರೋಗ ಲಕ್ಷಣ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ, ಬಹುತೇಕರು ಸೋಂಕು ದೃಢಪಟ್ಟರು ಆಸ್ಪತ್ರೆ ದಾಖಲಾಗುತ್ತಿಲ್ಲ. ಪಾಸಿಟಿವಿಟಿ ದರ ಸಾಕಷ್ಟುಕಡಿಮೆ ಇದೆ. ಒಮಿಕ್ರೋನ್‌ ರೂಪಾಂತರ ಆತಂಕ ಬಿಟ್ಟರೆ ರಾಜ್ಯದಲ್ಲಿ ಸೊಂಕು ಸಂಪೂರ್ಣ ಹತೋಟಿಯಲ್ಲಿದೆ.

ಡಾ.ಎಂ.ಕೆ.ಸುದರ್ಶನ್‌, ಅಧ್ಯಕ್ಷ, ಕೊರೋನಾ ತಾಂತ್ರಿಕ ಸಲಹಾ ಸಮಿತಿ

ಕೊರೋನಾ ಸೋಂಕಿತರ ಆಸ್ಪತ್ರೆ ದಾಖಲಾತಿ ಶೇ.5ರಷ್ಟಿದೆ. ಅದರಲ್ಲೂ ತುರ್ತು ನಿಗಾದಲ್ಲಿರುವವರ ಸಂಖ್ಯೆ ಶೇ.0.5ಕ್ಕಿಂತಲೂ ಕಡಿಮೆ ಇದೆ. ಸೋಂಕು ಹೊಸ ಪ್ರಕರಣಗಳು ಹತ್ತುಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬೆರಳಣಿಕೆಯಷ್ಟುಮಾತ್ರ ಪತ್ತೆಯಾಗುತ್ತಿವೆ.

ಡಿ.ರಂದೀಪ್‌, ಆಯುಕ್ತರು, ಆರೋಗ್ಯ ಇಲಾಖೆ.


  •  ಸೋಂಕಿತರ ಆಸ್ಪತ್ರೆ ದಾಖಲಾತಿ ಭಾರೀ ಕಡಿಮೆ!
  • - 7300+ ಸಕ್ರಿಯ ಕೇಸಲ್ಲಿ 415 ಜನ ಮಾತ್ರ ಆಸ್ಪತ್ರೆಯಲ್ಲಿ
  • ಲಸಿಕೆ ಪರಿಣಾಮವೋ? ಕೋವಿಡ್‌ ಎಂಡೆಮಿಕ್‌ ಹಂತಕ್ಕೆ ಬಂದಿದೆಯೋ?
  • - 2 ಡೋಸ್‌ ಲಸಿಕೆ ಪಡೆದವರು 2 ತಿಂಗಳಿನಿಂದ ಐಸಿಯುಗೆ ದಾಖಲಾಗಿಲ್ಲ
  • ಆಸ್ಪತ್ರೆಗಳಲ್ಲಿ ಮೀಸಲಿಟ್ಟಐಸಿಯು, ಆಕ್ಸಿಜನ್‌ ಬೆಡ್‌ ವ್ಯರ್ಥ
click me!