Rajakaluve Encroachment: ಒತ್ತುವರಿ ತೆರವಿಗೆ ಪಾಲಿಕೆ ತಾರತಮ್ಯ; ಸ್ಥಳೀಯರಿಂದ ತೀವ್ರ ಆಕ್ರೋಶ

Published : Sep 20, 2022, 07:05 AM IST
Rajakaluve Encroachment: ಒತ್ತುವರಿ ತೆರವಿಗೆ ಪಾಲಿಕೆ ತಾರತಮ್ಯ; ಸ್ಥಳೀಯರಿಂದ ತೀವ್ರ ಆಕ್ರೋಶ

ಸಾರಾಂಶ

ಒತ್ತುವರಿ ತೆರವಿಗೆ ಪಾಲಿಕೆ ತಾರತಮ್ಯ! -ಸ್ಥಳೀಯರಿಂದ ತೀವ್ರ ಆಕ್ರೋಶ ಅರ್ಧಕ್ಕೆ ತೆರವು ಕಾರ್ಯ ಕೈಬಿಟ್ಟಅಧಿಕಾರಿಗಳು ಕೇವಲ 5 ಕಡೆ ಮಾತ್ರ ಒತ್ತುವರಿ ತೆರವು

ಬೆಂಗಳೂರು (ಸೆ.20) : ಮಹದೇವಪುರ ವಲಯದಲ್ಲಿ ಸ್ಥಗಿತಗೊಂಡ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಸೋಮವಾರ ಮತ್ತೆ ಆರಂಭಿಸಲಾಯಿತಾದರೂ ಬಿಬಿಎಂಪಿ ಅಧಿಕಾರಿಗಳ ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ಪರಿಣಾಮ ತೆರವು ಕಾರ್ಯಚರಣೆ ಅರ್ಧಕ್ಕೆ ಕೈಬಿಡಬೇಕಾಯಿತು. ಸೋಮವಾರ ಬಿಬಿಎಂಪಿ ವ್ಯಾಪ್ತಿಯ ಮಹದೇವಪುರ ವಲಯದಲ್ಲಿ ಮಾತ್ರ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದ್ದು, ಕೇವಲ 5 ಕಡೆ ತೆರವು ಮಾಡಲಾಗಿದೆ.

ಬೆಂಗಳೂರಲ್ಲಿ ಲೇಔಟ್‌ಗಾಗಿ 42 ಕೆರೆ ಸ್ವಾಹ: ಸದನದಲ್ಲಿ ಪಟ್ಟಿ ತೆರೆದಿಟ್ಟ ಸಚಿವ ಆರ್.ಅಶೋಕ್

ಬಡವರ ಶೆಡ್‌ಗಳು, ಸಣ್ಣ ಕಾರ್ಖಾನೆ, ಕೋಳಿ ಫಾರಂ, ಕಾಂಪೌಂಡ್‌, ಕಿಟಕಿ ಮತ್ತು ಗೇಟ್‌ಗಳನ್ನು ತೆರವು ಮಾಡಲಾಗುತ್ತಿದೆ. ವಿಪ್ರೋ ಮತ್ತು ಸಾಲಾರ್‌ ಪುರಿಯಾ ಸಂಸ್ಥೆಯಿಂದ ಒತ್ತುವರಿ ಆಗಿರುವುದನ್ನು ಗುರುತು ಮಾಡಲಾಗಿದ್ದರೂ, ಅದನ್ನು ಬಿಟ್ಟು ಬಡವರ ನಾಲ್ಕೈದು ಶೆಡ್‌ಗಳನ್ನು ಮಾತ್ರ ನೆಲಸಮ ಮಾಡಲಾಗಿದೆ.

ನಮ್ಮ ಶೆಡ್‌ಗಳನ್ನು ನಾವೇ ತೆರವು ಮಾಡುತ್ತೇವೆ, ಒಂದೆರಡು ದಿನ ಸಮಯ ನೀಡುವಂತೆ ಕೇಳಿದರೂ ಒಪ್ಪದ ಅಧಿಕಾರಿಗಳು ಒಡೆದು ಹಾಕಿದ್ದಾರೆ. ಆದರೆ, ಸಾವಳಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಯ 10 ಅಡಿ ಜಾಗವನ್ನು ವಿಪ್ರೋ ಸಂಸ್ಥೆ ಸೊಲಾರ್‌ ಪುರಿಯಾ ಸಂಸ್ಥೆಗಳು ಒತ್ತುವರಿ ಮಾಡಿಕೊಂಡಿವೆ. ಇದರಲ್ಲಿ ವಿಪ್ರೋ ಕಾಂಪೌಂಡ್‌ ಮೇಲೆ 2.4 ಮೀ. ಒತ್ತುವರಿ ಆಗಿರುವ ಬಗ್ಗೆ ಮಾರ್ಕಿಗ್‌ ಮಾಡಲಾಗಿದೆ. ಸೊಲಾರ್‌ ಪುರಿಯಾ ಸಂಸ್ಥೆಯಿಂದ ಪೂರ್ಣ ಪ್ರಮಾಣದಲ್ಲಿ ಒತ್ತುವರಿ ಆಗಿದೆ. ಹಾಗಾಗಿ ಈ ಸಂಸ್ಥೆಗಳ ಅತಿಕ್ರಮ ತೆರವುಗೊಳಿಸುವಂತೆ ಸ್ಥಳೀಯರು ಪಟ್ಟು ಹಿಡಿದ ಘಟನೆ ನಡೆಯಿತು.

ಪ್ರಭಾವಿಗಳಿಂದ ಒತ್ತಡ?

ವಿಪ್ರೋ ಸಂಸ್ಥೆಯಿಂದ ನಡೆದಿರುವ ರಾಜಕಾಲುವೆ ಒತ್ತುವರಿ ತೆರವಿಗೆ ಜೆಸಿಬಿ ತೆರಳಿತ್ತಾದರೂ ಸ್ಥಳದಲ್ಲಿದ್ದ ಎಂಜಿನಿಯರ್‌ಗಳಿಗೆ ಕರೆ ಬಂದು ಮಾತನಾಡಿದ ತಕ್ಷಣ ತೆರವು ಕಾರ್ಯ ನಿಲ್ಲಿಸಲಾಯಿತು. ಮುಂದಿನ ಭಾಗದಲ್ಲಿದ್ದ ಶೆಡ್‌ ಮತ್ತು ಖಾಲಿ ಸ್ಥಳದ ತೆರವಿಗೆ ಮುಂದಾದಾಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಪಾಲಿಕೆ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಆಗ ಹೆಚ್ಚಿನ ಪೊಲೀಸ್‌ ಭದ್ರತೆ ಪಡೆದು ಕೋಳಿ ಫಾರಂ ಸೇರಿ ಕೆಲವು ಶೆಡ್‌ಗಳನ್ನು ನೆಲಸಮ ಮಾಡಲಾಯಿತು. ಈ ಶೆಡ್‌ಗಳನ್ನು ತೆರವು ಮಾಡಿದ ನಂತರ ಕೆಲವು ಸ್ಥಳೀಯರು ದೊಡ್ಡ ಕಂಪನಿಗಳ ಒತ್ತುವರಿ ತೆರವುಗೊಳಿಸುವ ಕಾರ್ಯ ಮುಂದುವರೆಸುವಂತೆ ಪಟ್ಟು ಹಿಡಿದರು. ಆಗ ಅಧಿಕಾರಿಗಳು ಕಾರ್ಯಾಚರಣೆ ಸ್ಥಗಿತಗೊಳಿಸಿ ಅಲ್ಲಿಂದ ಹೊರಟು ಹೋದರು.

ಹೂಳು ತೆಗೆಯಲು ಮುಂದಾದ ಸಂಘ: ಹಾಲನಾಯಕನಹಳ್ಳಿ ಕೆರೆಯಿಂದ ಸಾವಳಕೆರೆಗೆ ಸಂಪರ್ಕಿಸುವ ರಾಜಕಾಲುವೆ ಒತ್ತುವರಿ ಮಾಡಿಕೊಂಡು ರೈನ್‌ ಬೋ ಲೇಔಟ್‌ ನಿರ್ಮಿಸಲಾಗಿತ್ತು. ಇದೀಗ ಕೆರೆಗಳನ್ನು ಸಂಪರ್ಕ ಕಲ್ಪಿಸುವ ರಾಜಕಾಲುವೆಯಲ್ಲಿನ ಹೂಳು ತೆಗೆದು ಕಾಲುವೆ ಅಗಲೀಕರಣಕ್ಕೆ ರೈನ್‌ ಬೋ ಲೇಔಟ್‌ನ ಅಸೋಸಿಯೇಷನ್‌ ಮುಂದಾಗಿದೆ.

ಕೇವಲ 5 ಕಡೆ ಒತ್ತುವರಿ ತೆರವು: ಮಾರತಹಳ್ಳಿ ಪೊಲೀಸ್‌ ಠಾಣೆ ಹಿಂಭಾಗ ಕಾಡುಬೀಸನಹಳ್ಳಿಯಲ್ಲಿ ಜಲಮಂಡಳಿಯ ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಸ್ಥಳದಲ್ಲಿ ರಾಜಕಾಲುವೆ ಮೇಲೆ ನಿರ್ಮಿಸಿದ್ದ ಆರ್‌ಸಿಸಿಸಿ ಸೇತುವೆ, ಗರುಡಾಚಾರಪಾಳ್ಯ ಕೆರೆ ಬಳಿಯ ಅಪಾರ್ಚ್‌ಮೆಂಟ್‌ನ ಕಾಂಪೌಂಡ್‌, ಪೂರ್ವ ಪಾರ್ಕ್ ರಿv್ಜ…ನ ಹಿಂಭಾಗ ರಾಜಕಾಲುವೆಯ ಮೇಲಿದ್ದ ಶೆಡ್‌ ಮತ್ತು ರಾಜಕಾಲುವೆ ಮೇಲೆ ನಿರ್ಮಿಸಿದ್ದ ರಸ್ತೆ, ಗ್ರೀನ್‌ ವುಡ್‌ ರೆಸಿಡೆನ್ಸಿ ಆವರಣದಲ್ಲಿ ರಾಜಕಾಲುವೆಯ ಮೇಲೆ ಅಳವಡಿಸಿದ್ದ 150 ಮೀ. ಉದ್ದದ ಸ್ಲಾ್ಯಬ್‌,ಕಾಡುಗೋಡಿಯ ವಿಜಯಲಕ್ಷ್ಮಿ ಕಾಲೋನಿಯಲ್ಲಿ ರಾಜಕಾಲುವೆಯ ಎರಡೂ ಬದಿಯಲ್ಲಿ 75 ಮೀ ಉದ್ದದ ಕಾಂಪೌಂಡ್‌ ಹಾಗೂ 2 ಶೆಡ್‌ಗಳನ್ನು ತೆರವು ಮಾಡಲಾಗಿದೆ. ಇದೇ ವೇಳೆ ರಾಜಕಾಲುವೆ ಮೇಲೆ ವಾಸಿಸುವ 10 ಮನೆಗಳ ಪೈಕಿ 8 ಮನೆಗಳಿಗೆ ನೋಟಿಸ್‌ ನೀಡಲಾಗಿದೆ.

Rajakaluve Encroachment: ಮತ್ತೆ ಘರ್ಜಿಸಲು ಆರಂಭಿಸಿದ ಬುಲ್ಡೋಜರ್‌

ವಿಪ್ರೋ ಸಂಸ್ಥೆ ಒತ್ತುವರಿ ಮಾಡಿಕೊಂಡಿರುವ ಕಾಂಪೌಂಡ್‌ ತೆರವಿಗೆ ಗ್ಯಾಸ್‌ ಕಟಿಂಗ್‌ ಮಾಡಬೇಕಾಗಿದೆ. ಹಾಗಾಗಿ ತಾತ್ಕಾಲಿಕವಾಗಿ ಕೆಲಸ ಸ್ಥಗಿತಗೊಳಿಸಲಾಗಿದೆ.

-ಬಸವರಾಜ್‌ ಕಬಾಡೆ, ಮುಖ್ಯ ಎಂಜಿನಿಯರ್‌, ಮಹದೇವಪುರ ವಲಯ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ
ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್