Raita Ratna 2022 ತೆಂಗಿನಕಾಯಿ ಹಾಲಿನ ಎಣ್ಣೆ ತಯಾರಿಸಿ ಗೆದ್ದ ಕಾಸರಗೋಡಿನ ಪಾವನಾ ಮಹೇಶ್‌

Published : Apr 07, 2022, 11:53 AM IST
Raita Ratna 2022 ತೆಂಗಿನಕಾಯಿ ಹಾಲಿನ ಎಣ್ಣೆ ತಯಾರಿಸಿ ಗೆದ್ದ ಕಾಸರಗೋಡಿನ ಪಾವನಾ ಮಹೇಶ್‌

ಸಾರಾಂಶ

ಕಲಬೆರಕೆ ಇಲ್ಲದ, ತೆಂಗಿನ ಹಾಲಿನಿಂದ ಎಣ್ಣೆ ಉತ್ಪಾದಿಸಿ ಅದಕ್ಕೆ ಉತ್ತಮ ಮಾರುಕಟ್ಟೆಯನ್ನು ಕಂಡುಕೊಂಡವರು ಕಾಸರಗೋಡಿನ ಪಾವನಾ ಮಹೇಶ್‌ ಭಟ್‌.

ಚಿತ್ರಾ ಸಿ.ಆರ್‌.

‘ಜೆನ್‌ಕೋಕಸ್‌’ ಎಂಬ ತೆಂಗಿನ ಎಣ್ಣೆ ಆರೋಗ್ಯವರ್ಧಕ, ಸೌಂದರ್ಯವರ್ಧಕ ಗುಣಗಳನ್ನು ಹೊಂದಿದ್ದು, ಪರಿಶುದ್ಧ ಉತ್ಪನ್ನವಾಗಿ ಜನಪ್ರಿಯವಾಗಿದೆ. ಬಲಿತ ಹಸಿ ತೆಂಗಿನಕಾಯಿಯ ಹಾಲಿನಿಂದ ಉತ್ಪಾದಿಸುವ ಈ ಎಣ್ಣೆ ಯಾವುದೇ ಕಲಬೆರಕೆ ಇಲ್ಲದ ರಾಸಾಯನಿಕ ಮುಕ್ತವಾಗಿರುವ ದೇಸಿ ಉತ್ಪನ್ನವಾಗಿ ಬೇಡಿಕೆ ಕಂಡುಕೊಂಡಿದೆ.

ಐಟಿ ಕಂಪನಿಯ ಉದ್ಯೋಗಿಯನ್ನು ಮದುವೆಯಾಗಿ, ಇಬ್ಬರು ಮಕ್ಕಳಿರುವ ಪಾವನಾ ಮಹೇಶ್‌ ಭಟ್‌ 2014ರಲ್ಲಿ ಮಾಡಿದ ಒಂದು ದೃಢ ನಿರ್ಧಾರ ಇಂದು ಅವರನ್ನು ಓರ್ವ ಸ್ವಾವಲಂಬಿಯನ್ನಾಗಿ ಮಾಡಿದೆ. ಪದವೀಧರೆ ಆಗಿರುವ ಇವರು 15 ವರ್ಷಗಳ ಕಾಲ ಮಂಗಳೂರಿನ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಪತಿಯೊಂದಿಗೆ ನೆಲೆಸಿದ್ದರು. ಊರಿಗೆ ಹೋಗಿ ಅಲ್ಲೇ ಸ್ಥಳೀಯವಾಗಿ ಸ್ವಂತ ಉದ್ಯಮ ಮಾಡಬೇಕು, ಇದರಿಂದ ಸ್ಥಳೀಯ ರೈತರಿಗೂ ಅನುಕೂಲವಾಗಬೇಕೆಂಬ ಕನಸು ಗಟ್ಟಿಯಾದದ್ದೇ ಊರಿಗೆ ಮರಳಿದರು. ಕೇರಳ ರಾಜ್ಯಕ್ಕೆ ಸೇರುವ ಗಡಿನಾಡು ಕಾಸರಗೋಡಿನ ನಾಯ್ಕಾಪು ಸಮೀಪದ ನಾರಾಯಣಮಂಗಲದಲ್ಲಿ 2014ರಲ್ಲಿ ‘ಶ್ರೀಕಲ್ಪ ಇಂಡಸ್ಟ್ರೀಸ್‌’ ಆರಂಭವಾಯಿತು. ಪಿಎಂಇಜಿಪಿ ಹಾಗೂ ಖಾದಿ ಗ್ರಾಮ ಉದ್ಯೋಗದ ಸಹಕಾರದೊಂದಿಗೆ 25 ಲಕ್ಷ ರು. ಬಂಡವಾಳದಲ್ಲಿ ಶುರುವಾದ ಉದ್ಯಮವಿದು. ಇಲ್ಲಿ ತಯಾರಾಗುವ ವರ್ಜಿನ್‌ ತೆಂಗಿನ ಎಣ್ಣೆ, ಸಸ್ಯ ಮೂಲದ ಕೂದಲಿನ ಎಣ್ಣೆ, ನೋವಿನ ಎಣ್ಣೆ ಹಾಗೂ ತೆಂಗಿನಕಾಯಿ ನೀರಿನಿಂದ ತಯಾರಿಸಿದ ವಿನೆಗರ್‌ ಇತ್ಯಾದಿ ಉತ್ಪನ್ನಗಳು ‘ಜೆನ್‌ ಕೋಕಸ್‌’ ಎಂಬ ಬ್ರಾಂಡ್‌ನಲ್ಲಿ ಗುರುತಿಸಿಕೊಂಡಿದೆ. ಪರಿಶುದ್ಧವಾದ ಈ ತೆಂಗಿನ ಎಣ್ಣೆಯ ದರ 1 ಲೀಟರ್‌ಗೆ ಸಾವಿರ ರುಪಾಯಿಯಷ್ಟುಇದೆ.

150 ಕ್ಕೂ ಹೆಚ್ಚು ಅಪ್ಪೆ ಮಿಡಿ ಸಂಶೋಧಿಸಿದ ಸಾಗರ ತಾಲೂಕು ಬೇಳೂರಿನ ಕೃಷಿಕ ಸುಬ್ಬಣ್ಣ ಹೆಗಡೆ

ಗಡಿನಾಡು ಕಾಸರಗೋಡು ಜಿಲ್ಲೆಯವರನ್ನೂ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ ವಾಹಿನಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ವಿಶಿಷ್ಟರೀತಿಯಲ್ಲಿ ತಯಾರಿಸುವ ಕೃಷ್ಯುತ್ಪನ್ನ ಸಂಸ್ಥೆ ನಮ್ಮದಾಗಿದೆ. ನಮ್ಮನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ನಮ್ಮ ಈ ವರ್ಜಿನ್‌ ತೆಂಗಿನ ಎಣ್ಣೆ ಬಗ್ಗೆ ನಾಡಿನ ಜನತೆಗೆ ತಿಳಿಸಿದ್ದು ಖುಷಿ ಕೊಟ್ಟಿದೆ.- ಪಾವನಾ ಮಹೇಶ್‌ ಭಟ್‌

ಏನಿದು ವರ್ಜಿನ್‌ ತೆಂಗಿನ ಎಣ್ಣೆ?

ಸಾಮಾನ್ಯವಾಗಿ ತೆಂಗಿನ ಎಣ್ಣೆಯನ್ನು ಒಣಕೊಬ್ಬರಿಯಿಂದ ತಯಾರಿಸುತ್ತಾರೆ. ಆದರೆ ಇವರು ಉತ್ತಮವಾದ ಬಲಿತ ತೆಂಗಿನಕಾಯಿಯಿಂದ ಎಣ್ಣೆ ತಯಾರಿಸುತ್ತಾರೆ. ಚೆನ್ನಾಗಿ ಬೆಳೆದ ಹಸಿ ತೆಂಗಿನಕಾಯಿಗಳನ್ನು ಸ್ಥಳೀಯ ರೈತರಿಂದ ಖರೀದಿಸಿ ಅದರ ಗೆರಟೆ ಬೇರ್ಪಡಿಸಿ ತೆಂಗಿನಕಾಯಿಯ ಮೇಲಿನ ತೆಳುವಾದ ಸಿಪ್ಪೆಯನ್ನು ತೆಗೆದು, ಸಣ್ಣ ತುಂಡುಗಳನ್ನಾಗಿ ಮಾಡಿ ಹಾಲು ಹಿಂಡಿ, ಉಗಿಯಲ್ಲಿ ಕುದಿಸಿ ಅತ್ಯಾಧುನಿಕ ಉಪಕರಣಗಳ ಮೂಲಕ ಪರಿಶುದ್ಧ ತೆಂಗಿನ ಎಣ್ಣೆ ಉತ್ಪಾದಿಸುತ್ತಾರೆ. ಈ ತೆಂಗಿನಎಣ್ಣೆಯಲ್ಲಿ ರೋಗ ನಿರೋಧಕ ಶಕ್ತಿಯಿದ್ದು, ತಾಯಿಯ ಹಾಲಿಗೆ ಸಮಾನವಾದ ಲುರಿಕ್‌ ಆ್ಯಸಿಡ್‌ ಹೇರಳವಾಗಿ ಹೊಂದಿದೆ. ಆರೋಗ್ಯಕರವಾಗಿರುವ ಈ ಪರಿಶುದ್ಧ ತೆಂಗಿನ ಎಣ್ಣೆ ಸುಲಭವಾಗಿ ಪಚನಗೊಳ್ಳುತ್ತದೆ. ವಿಟಮಿನ್‌ ಇ ಜೀವಸತ್ವ ಹೊಂದಿದೆ. ಶರೀರದಲ್ಲಿ ಬೊಜ್ಜು ಬೆಳೆಯುವುದನ್ನು ಕಡಿಮೆಗೊಳಿಸುತ್ತದೆ. ಈ ತೆಂಗಿನ ಎಣ್ಣೆಯನ್ನು ವೈದ್ಯಕೀಯ ಮತ್ತು ಖಾದ್ಯ ತೈಲವಾಗಿ ಬಳಸಬಹುದು. ಕೂದಲಿನ ಆರೋಗ್ಯಕ್ಕೆ, ಶರೀರದ ಮಸಾಜ್‌ಗೆ, ಸೂರ್ಯನ ಕಿರಣಗಳಿಂದ ರಕ್ಷಣೆ ಪಡೆಯಲು, ಎಳೆಯ ಮಕ್ಕಳ ಚರ್ಮದ ಆರೈಕೆಗೆ, ಚರ್ಮ ರೋಗ ನಿವಾರಣೆಗೆ ಕೂಡ ಬಳಸಲಾಗುತ್ತದೆ.

ಪ್ರತಿ ರಾತ್ರಿ ಬೆಳೆಗಳಿಗೆ ಸಂಗೀತ ಕೇಳಿಸುವ ಬಾಗಲಕೋಟೆ ತೇರದಾಳದ ರೈತ ಧರೆಪ್ಪ ಕಿತ್ತೂರ

ಜೆನ್‌ಕೋಕಸ್‌ ವರ್ಜಿನ್‌ ಆಯಿಲ್‌ಗೆ ಕರ್ನಾಟಕ ಮಾತ್ರವಲ್ಲದೆ ಕೇರಳ, ತಮಿಳುನಾಡು, ಆಂಧ್ರಪ್ರದೇಶಗಲ್ಲಿ ಉತ್ತಮ ಬೇಡಿಕೆ ಇದೆ. ಈ ಎಣ್ಣೆಯ ಪರಿಮಳ ದೀರ್ಘಕಾಲದವರೆಗೆ ಇರುವುದು ಕೂಡ ಬೇಡಿಕೆ ಹೆಚ್ಚಲು ಕಾರಣ. ಸ್ಥಳೀಯ ರೈತರಿಂದ ಬಲಿತ ತೆಂಗಿನಕಾಯಿಯನ್ನು ಖರೀದಿ ಮಾಡುವುದರಿಂದ ಪರಿಸರದ ರೈತರ ಆದಾಯಕ್ಕೂ ಅನುಕೂಲವಾಗಿದೆ. ದಿನಕ್ಕೆ 100 ಕೆಜಿ ತೆಂಗಿನಕಾಯಿಯನ್ನು ಉಪಯೋಗಿಸಿ 10 ಲೀಟರ್‌ನಷ್ಟುತೆಂಗಿನ ಎಣ್ಣೆಯನ್ನು ಉತ್ಪಾದಿಸುತ್ತಾರೆ. ಪಾವನಾ ಅವರು ಉತ್ಪಾದನಾ ವ್ಯವಸ್ಥೆಯನ್ನು ನೋಡಿಕೊಂಡರೆ, ಪತಿ ಮಹೇಶ್‌ ಮಾರ್ಕೆಟಿಂಗ್‌ ವ್ಯವಹಾರದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಸಂಪರ್ಕ ಸಂಖ್ಯೆ: 8086958396

"

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ
ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್