
ಬೆಂಗಳೂರು : ಎಲ್ಲ ಸಮುದಾಯದ ವಿದ್ಯಾರ್ಥಿಗಳು ಸಮಭಾವದಿಂದ ಶಿಕ್ಷಣ ಪಡೆಯಲು ಸಾರ್ವಜನಿಕ ಹಾಸ್ಟೆಲ್ಗಳ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಈ ಕಾರ್ಯ ಕೈಗೊಳ್ಳಲಿದ್ದೇನೆ ಎಂದು ಮಾಜಿ ಸಚಿವ ಎಚ್. ಆಂಜನೇಯ ಸ್ಪಷ್ಟಪಡಿಸಿದರು.
ಕರ್ನಾಟಕ ಅಹಿಂದ ಹೋರಾಟ ಸಮಿತಿಯು ಡಾ.ಸಿದ್ದಲಿಂಗಯ್ಯ ಪ್ರತಿಷ್ಠಾನದ ಸಹಯೋಗದೊಂದಿಗೆ ನಯನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಹೊಲೆ ಮಾದಿಗರ ಹಾಡುಗಳಿಗೆ 50 ವರ್ಷ ಹಾಗೂ ನಾಡೋಜ, ಪದ್ಮಶ್ರೀ ಡಾ.ಸಿದ್ದಲಿಂಗಯ್ಯ ಅವರಿಗೆ 73 ನೇ ವರ್ಷದ ನುಡಿನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರ ಹಿಂದುಳಿದ ಜಾತಿ ಸೇರಿದಂತೆ ಎಲ್ಲ ಸಮುದಾಯಗಳ ವಿದ್ಯಾರ್ಥಿಗಳು ಜೊತೆಯಲ್ಲೇ ವಿದ್ಯಾಭ್ಯಾಸ ಮಾಡಲು ಪ್ರತಿ ಜಿಲ್ಲೆಯಲ್ಲೂ ಸಾರ್ವಜನಿಕ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳು ಇರಬೇಕು. ನಾನು ಚುನಾವಣೆಯಲ್ಲಿ ಜಯ ಗಳಿಸಿದ್ದರೆ ಇದನ್ನು ಕಾರ್ಯಗತಗೊಳಿಸುತ್ತಿದ್ದೆ. ಆದರೆ ದುರಾದೃಷ್ಟವಶಾತ್ ಪರಾಭವಗೊಂಡಿದ್ದೇನೆ. ಮುಂದಿನ ದಿನಗಳಲ್ಲಾದರೂ ಇದನ್ನು ಕಾರ್ಯಗತಗೊಳಿಸುತ್ತೇನೆ ಎಂದು ಭರವಸೆ ನೀಡಿದರು.
ಸಿದ್ದಲಿಂಗಯ್ಯ ಅವರು ಎಲ್ಲ ಸಮುದಾಯಗಳನ್ನು ಗೌರವಿಸುತ್ತಿದ್ದರು. ಸಮಾಜದ ದಮನಿತ ಸಮುದಾಯಗಳ ಬಗ್ಗೆ ತಮ್ಮ ಕವನಗಳ ಮೂಲಕ ಧ್ವನಿ ಎತ್ತಿದರು. ಒಂದು ಸಮುದಾಯದ ನೋವು ನಲಿವಿಗೆ ಸಿದ್ದಲಿಂಗಯ್ಯ ಅವರು ಸ್ಪಂದಿಸಿದರೂ ಒಟ್ಟಾರೆ ಸಮಾಜದ ಬದಲಾವಣೆಗೆ ಶ್ರಮಿಸಿದ್ದರು. ಶಿಕ್ಷಣಕ್ಕೆ ಆದ್ಯತೆ ನೀಡಬೇಕೆಂಬುದು ಸಿದ್ದಲಿಂಗಯ್ಯ ಅವರ ಆಶಯವಾಗಿತ್ತು ಎಂದು ಸ್ಮರಿಸಿದರು.
ನಾನು ಸಚಿವನಾಗಿದ್ದಾಗ ಸಿದ್ದಲಿಂಗಯ್ಯ ಮತ್ತು ಸಾಹಿತಿ ದೇವನೂರು ಮಹಾದೇವ ಅವರ ಬಳಿ ಆಗಾಗ್ಗೆ ಸಲಹೆ ಪಡೆಯುತ್ತಿದ್ದೆ. ಇವರ ಆಶಯದಂತೆ ಪ್ರತಿ ಹೋಬಳಿಯಲ್ಲೂ ವಸತಿಸಹಿತ ಶಾಲೆ ಆರಂಭಿಸಲು ಕ್ರಮ ಕೈಗೊಂಡೆ. 125 ಅಂಬೇಡ್ಕರ್ ವಸತಿ ಶಾಲೆ ಮತ್ತು 100 ಇಂದಿರಾಗಾಂಧಿ ವಸತಿ ಶಾಲೆ ಮಂಜೂರು ಮಾಡಿದ್ದೆ ಎಂದು ವಿವರಿಸಿದರು.
ರಂಗಕರ್ಮಿ ಶ್ರೀನಿವಾಸ್ ಜಿ.ಕಪ್ಪಣ್ಣ, ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ, ದಲಿತ ಸಂಘರ್ಷ ಸಮಿತಿಯ ಹಿರಿಯ ಮುಖಂಡ ಮಾವಳ್ಳಿ ಶಂಕರ್, ಡಾ.ಸಿದ್ದಲಿಂಗಯ್ಯ ಪ್ರತಿಷ್ಠಾನದ ಅಧ್ಯಕ್ಷೆ ರಮಾಕುಮಾರಿ ಸಿದ್ದಲಿಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ