PSI Recruitment Scam: ಅಭ್ಯರ್ಥಿಗಳಿಂದ ಸಿದ್ದರಾಮಯ್ಯ ಭೇಟಿ

By Govindaraj SFirst Published Sep 13, 2022, 3:45 AM IST
Highlights

ಪಿಎಸ್‌ಐ ಪರೀಕ್ಷೆ ಬರೆದಿರುವ ನೂರಾರು ಅಭ್ಯರ್ಥಿಗಳು ಸೋಮವಾರ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಾವೆಲ್ಲಾ ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿದ್ದು, ಸದನದಲ್ಲಿ ತಮ್ಮ ಪರ ಧ್ವನಿ ಎತ್ತಬೇಕೆಂದು ಮನವಿ ಮಾಡಿದ್ದಾರೆ.

ಬೆಂಗಳೂರು (ಸೆ.13): ಪಿಎಸ್‌ಐ ಪರೀಕ್ಷೆ ಬರೆದಿರುವ ನೂರಾರು ಅಭ್ಯರ್ಥಿಗಳು ಸೋಮವಾರ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಾವೆಲ್ಲಾ ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿದ್ದು, ಸದನದಲ್ಲಿ ತಮ್ಮ ಪರ ಧ್ವನಿ ಎತ್ತಬೇಕೆಂದು ಮನವಿ ಮಾಡಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಅವರು ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಕುಮಾರಕೃಪ ಬಳಿ ಇರುವ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸಕ್ಕೆ ಆಗಮಿಸಿದ ನೂರಾರು ಅಭ್ಯರ್ಥಿಗಳು ತಮ್ಮ ಆತಂಕ, ಅಳಲು, ನೋವನ್ನು ತೋಡಿಕೊಂಡಿದ್ದಾರೆ. 

ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದಕ್ಕೆ ನಮಗೂ ಬೇಸರವಿದೆ. ಸರ್ಕಾರ ಸರಿಯಾದ ದಾರಿಯಲ್ಲಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಿ. ಆದರೆ, ಸಂಪೂರ್ಣ ಪರೀಕ್ಷೆ ರದ್ದು ಮಾಡುವಂತಹ ಅಥವಾ ಮರು ಪರೀಕ್ಷೆ ನಡೆಸುವಂತಹ ಯಾವುದೇ ನಿರ್ಧಾರ ಕೈಗೊಂಡರೆ ಹಗಲು-ರಾತ್ರಿ ಕಷ್ಟಪಟ್ಟು ಓದಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿರುವ ನಮ್ಮಂತಹ ವಿದ್ಯಾರ್ಥಿಗಳ ಜೀವನ ಅತಂತ್ರವಾಗಲಿದೆ. ಹಾಗಾಗಿ ಸದನದಲ್ಲಿ ಈ ವಿಷಯ ಪ್ರಸ್ತಾಪಿಸಿ ಸರ್ಕಾರಕ್ಕೆ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡುವಂತೆ ಅಭ್ಯರ್ಥಿಗಳು ಮನವಿ ಮಾಡಿದರು.

PSI Recruitment Scam:ಪಿಎಸ್‌ಐ ಅಕ್ರಮ: ತುಮಕೂರು, ದಾವಣಗೆರೆ, ಮೂಡಬಿದಿರೆಗೂ ಲಿಂಕ್‌..!

ಶಾಸಕ ದಢೇಸೂಗೂರು ಆಡಿಯೋ ವೈರಲ್‌: ‘ಕನ್ನಡಪ್ರಭ’ ಬಯಲಿಗೆಳೆದಿರುವ ಪಿಎಸ್‌ಐ ಪರೀಕ್ಷೆ ನೇಮಕಾತಿ ಅಕ್ರಮದ ನಂಟು ಈಗ ಕೊಪ್ಪಳಕ್ಕೂ ಅಂಟಿಕೊಂಡಿದೆ. ಕನಕಗಿರಿ ಶಾಸಕ ಬಸವರಾಜ ದಢೇಸೂಗೂರು ಅವರು ಅಭ್ಯರ್ಥಿಯೊಬ್ಬರ ಜತೆಗೆ ಮಾತನಾಡಿರುವ ಆಡಿಯೋವೊಂದು ಇದೀಗ ವೈರಲ್‌ ಆಗಿದ್ದು, ಅದರಲ್ಲಿ ಪಿಎಸ್‌ಐ ನೇಮಕಾತಿಗಾಗಿ ಪಡೆದಿದ್ದ .15 ಲಕ್ಷವನ್ನು ಸರ್ಕಾರಕ್ಕೆ ನೀಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇದು ಸರ್ಕಾರವನ್ನು ತೀವ್ರ ಮುಜುಗರಕ್ಕೆ ಸಿಲುಕಿಸಿದೆ. ಈ ಮಧ್ಯೆ ಸಂಭಾಷಣೆಯಲ್ಲಿರುವ ಧ್ವನಿ ತಮ್ಮದೇ ಎಂದು ಒಪ್ಪಿಕೊಂಡಿರುವ ಶಾಸಕರು, ಆದರೆ ನಾನು ಯಾವುದೇ ಹಣ ಪಡೆದಿಲ್ಲ.

ಬದಲಾಗಿ ಇದಕ್ಕಾಗಿ ನಡೆದಿದ್ದ ವ್ಯವಹಾರದಲ್ಲಿ ರಾಜಿ ಪಂಚಾಯ್ತಿ ಮಾಡಿಸಿದ್ದೇನೆ ಅಷ್ಟೆಎಂದು ಹೇಳಿದ್ದಾರೆ. ಶಾಸಕ ದಢೇಸೂಗೂರು ಹಾಗೂ ಪಿಎಸ್‌ಐ ನೇಮಕಾತಿಗಾಗಿ ಅರ್ಜಿ ಹಾಕಿದ ಅಭ್ಯರ್ಥಿಯ ತಂದೆ ಕುಷ್ಟಗಿ ತಾಲೂಕಿನ ಶಿರಗುಪ್ಪಿ ಗ್ರಾಮದ ಪರಸಪ್ಪ ಎನ್ನುವವರು ಮಾತನಾಡಿದ ಆಡಿಯೋ ಇದು ಎನ್ನಲಾಗಿದೆ. ಪಿಎಸ್‌ಐ ನೇಮಕಾತಿಗಾಗಿ ಒಂದೂವರೆ ವರ್ಷಗಳ ಹಿಂದೆ ನೀಡಲಾಗಿತ್ತು, ನೌಕರಿ ಆಗಲಿಲ್ಲ, ಕೊಟ್ಟಹಣ ವಾಪಸ್‌ ಕೊಡುತ್ತೇನೆ ಎಂದು ಸತಾಯಿಸುತ್ತಲೇ ಇದ್ದೀರಿ ಎನ್ನುವ ಅರ್ಥದಲ್ಲಿ ಸಂಭಾಷಣೆ ಇದೆ. ಈ ವೇಳೆ ಶಾಸಕರು, ಅದು ಸರ್ಕಾರಕ್ಕೆ ಕೊಟ್ಟದುಡ್ಡು. ಅದನ್ನು ವಾಪಸ್‌ ಕೊಡುತ್ತೇನೆ ಎಂದು ಹೇಳುತ್ತಾರೆ. ಜತೆಗೆ, ಕರೆ ಮಾಡಿದ ವ್ಯಕ್ತಿಯನ್ನು ತೀವ್ರವಾಗಿ ತರಾಟೆಗೂ ತೆಗೆದುಕೊಳ್ಳುತ್ತಾರೆ.

PSI Recruitment Scam: ಅಮೃತ್‌ ಪೌಲ್‌ ಮತ್ತೆ 8 ದಿನ ಸಿಐಡಿ ವಶಕ್ಕೆ

ತನಿಖೆ ಮಾಡಿ-ಕಾಂಗ್ರೆಸ್‌: ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಕಾಂಗ್ರೆಸ್‌ ಮುಖಂಡರು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಸರ್ಕಾರ ಈ ಆಡಿಯೋ ಕುರಿತು ತನಿಖೆ ನಡೆಸಬೇಕು, ಶಾಸಕರನ್ನು ಬಂಧಿಸಬೇಕು ಎಂದು ಮಾಜಿ ಸಚಿವರಾದ ಎಂ.ಬಿ.ಪಾಟೀಲ, ಶಿವರಾಜ ತಂಗಡಗಿ ಆಗ್ರಹಿಸಿದ್ದಾರೆ.

click me!