ತಮಿಳುನಾಡು ಕ್ಯಾತೆಯಿಂದ ಕೃಷಿ, ಕುಡಿವ ನೀರಿಗೆ ಸಮಸ್ಯೆ ಖಚಿತ..!

Published : Aug 18, 2023, 12:00 AM IST
ತಮಿಳುನಾಡು ಕ್ಯಾತೆಯಿಂದ ಕೃಷಿ, ಕುಡಿವ ನೀರಿಗೆ ಸಮಸ್ಯೆ ಖಚಿತ..!

ಸಾರಾಂಶ

ಪ್ರತಿನಿತ್ಯ 10 ಸಾವಿರ ಕ್ಯುಸೆಕ್ಸ್‌ಗೂ ಹೆಚ್ಚಿನ ನೀರು ಬಿಡುಗಡೆ ಮಾಡುವಂತೆ ತಮಿಳುನಾಡು ಬೇಡಿಕೆ ಇಟ್ಟಿದೆ. ತಮಿಳುನಾಡಿನ ಬೇಡಿಕೆಯಂತೆ ನೀರು ಬಿಡುಗಡೆ ಮಾಡುತ್ತಿದ್ದರೆ, ಮುಂದಿನ ಬೇಸಿಗೆ ವೇಳೆಗೆ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಗಳ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಅಲ್ಲದೆ, ಮಂಡ್ಯ, ಮೈಸೂರು ಭಾಗಗಳಲ್ಲಿ ಎರಡನೇ ಬೆಳೆಗೆ ನೀರಿಲ್ಲದೆ ರೈತರು ಪರದಾಡಬೇಕಾಗಲಿದೆ.

ಗಿರೀಶ್‌ ಗರಗ

ಬೆಂಗಳೂರು(ಆ.18):  ಒಂದೆಡೆ ಮಳೆ ಕೊರತೆ, ಮತ್ತೊಂದೆಡೆ ತಮಿಳುನಾಡಿನ ಕ್ಯಾತೆಯಿಂದಾಗಿ ರೈತರಷ್ಟೇ ಅಲ್ಲದೆ, ಮೈಸೂರು ಕರ್ನಾಟಕ ಭಾಗದ ಮೂರಕ್ಕೂ ಹೆಚ್ಚಿನ ಜಿಲ್ಲೆಗಳ ಜನರು ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಅನುಭವಿಸುವುದು ಬಹುತೇಕ ಖಚಿತವಾಗಿದೆ.

ಕಾವೇರಿ ನದಿ ನೀರು ಹಂಚಿಕೆ ವಿವಾದ ಇದೀಗ ಮತ್ತೆ ಸುಪ್ರೀಂ ಕೋರ್ಟ್‌ಗೆ ತಲುಪಿದೆ. ರಾಜ್ಯದಲ್ಲಿ ಮಳೆ ಕೊರತೆಯಾಗಿ ದಿನದಿಂದ ದಿನಕ್ಕೆ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಅದರ ನಡುವೆ ಪ್ರತಿನಿತ್ಯ 10 ಸಾವಿರ ಕ್ಯುಸೆಕ್ಸ್‌ಗೂ ಹೆಚ್ಚಿನ ನೀರು ಬಿಡುಗಡೆ ಮಾಡುವಂತೆ ತಮಿಳುನಾಡು ಬೇಡಿಕೆ ಇಟ್ಟಿದೆ. ತಮಿಳುನಾಡಿನ ಬೇಡಿಕೆಯಂತೆ ನೀರು ಬಿಡುಗಡೆ ಮಾಡುತ್ತಿದ್ದರೆ, ಮುಂದಿನ ಬೇಸಿಗೆ ವೇಳೆಗೆ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಗಳ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಅಲ್ಲದೆ, ಮಂಡ್ಯ, ಮೈಸೂರು ಭಾಗಗಳಲ್ಲಿ ಎರಡನೇ ಬೆಳೆಗೆ ನೀರಿಲ್ಲದೆ ರೈತರು ಪರದಾಡಬೇಕಾಗಲಿದೆ.

ತಮಿಳುನಾಡು ಎದುರು ದೈನೇಸಿಯಾಗಿ ಮಂಡಿಯೂರಿದ ಕರ್ನಾಟಕ ಕಾಂಗ್ರೆಸ್‌ ಸರ್ಕಾರ : 10 ಟಿಎಂಸಿ ಕಾವೇರಿ ನೀರು ಬಿಡುಗಡೆ

ಶೇ.40 ಒಳಹರಿವು ಕೊರತೆ:

ಕೆಆರ್‌ಎಸ್‌, ಕಬಿನಿ, ಹೇಮಾವತಿ ಜಲಾಶಯಗಳ ಮೇಲ್ಭಾಗದ ಜಲಾನಯನ ಪ್ರದೇಶಗಳಲ್ಲಿ ಮುಂಗಾರು ಅವಧಿಯಲ್ಲಿ ವಾಡಿಕೆ ಮಳೆಯಾದರೆ 300ರಿಂದ 350 ಟಿಎಂಸಿ ನೀರು ಹರಿದು ಬರಲಿದೆ. ಆದರೆ, ಈ ಬಾರಿ ಜಲಾಶಯಗಳ ಮೇಲ್ಭಾಗದ ಜಲಾನಯನ ಪ್ರದೇಶದಲ್ಲಿ ಶೇ.25ಕ್ಕೂ ಹೆಚ್ಚಿನ ಮಳೆ ಕೊರತೆ ಉಂಟಾಗಿದೆ. ಅದರ ಜತೆಗೆ ಭಾರೀ ಮಳೆ ಸುರಿಯದ ಕಾರಣ ಮಳೆ ನೀರು ಸೀದಾ ನದಿಗಳಿಗೆ ಸೇರಲು ಸಾಧ್ಯವಾಗಿಲ್ಲ. ಹೀಗಾಗಿ ಕಾವೇರಿ ಕೊಳ್ಳದ ಜಲಾಶಯಗಳಿಗೆ ಶೇ.40ರಷ್ಟು ಒಳಹರಿವು ಕೊರತೆ ಉಂಟಾಗಿದೆ. ಹೀಗಾಗಿ ಕೆಆರ್‌ಎಸ್‌, ಕಬಿನಿ, ಹೇಮಾವತಿ ಜಲಾಶಯಗಳಲ್ಲಿ ನೀರಿನ ಮಟ್ಟ ವಾಡಿಕೆಗಿಂತ ಕಡಿಮೆಯಾಗಿದೆ.

4 ಜಿಲ್ಲೆಗೆ ಕುಡಿವ ನೀರಿನ ಸಮಸ್ಯೆ:

ಕಾವೇರಿ ನದಿಯಿಂದ ಬೆಂಗಳೂರು, ಮೈಸೂರು, ಮಂಡ್ಯ ಹಾಗೂ ರಾಮನಗರ ಜಿಲ್ಲೆಯ ನಗರ, ಪಟ್ಟಣ ಮತ್ತು ಹಳ್ಳಿಗಳಿಗೆ ನೀರು ಪೂರೈಸಲಾಗುತ್ತದೆ. ಬೆಂಗಳೂರು, ಮೈಸೂರು ಮತ್ತು ಮಂಡ್ಯ ನಗರಗಳು, ಕನಕಪುರ ಸೇರಿದಂತೆ 47 ಪಟ್ಟಣಗಳು, 625 ಹಳ್ಳಿಗಳಿಗೆ ನೀರು ಪೂರೈಸಲಾಗುತ್ತಿದೆ. ಒಂದು ತಿಂಗಳಿಗೆ 3 ಟಿಎಂಸಿ ನೀರು ಅವಶ್ಯಕತೆಯಿದೆ. ಮುಂದಿನ 10 ತಿಂಗಳಿಗೆ ಅಂದರೆ ಜುಲೈವರೆಗೆ ಒಟ್ಟು 30 ಟಿಎಂಸಿ ನೀರಿನ ಅಗತ್ಯವಿದೆ. ಆದರೆ, ಸದ್ಯ ಕೆಆರ್‌ಎಸ್‌ನಲ್ಲಿ 31.76 ಟಿಎಂಸಿ, ಹೇಮಾವತಿಯಲ್ಲಿ 30 ಟಿಎಂಸಿ, ಕಬಿನಿಯಲ್ಲಿ 16.78 ಟಿಎಂಸಿ ನೀರು ಶೇಖರಣೆಯಾಗಿದೆ. ಅದರಲ್ಲಿ ಕನಿಷ್ಠ ಮಟ್ಟಹೊರತುಪಡಿಸಿ ಮೂರು ಜಲಾಶಯಗಳಲ್ಲಿ ಒಟ್ಟು 56.66 ಟಿಎಂಸಿ ನೀರು ಶೇಖರಣೆಯಾಗಿದೆ. ಅದರಲ್ಲಿ ಕುಡಿಯುವ ನೀರಿಗಾಗಿ 30 ಟಿಎಂಸಿ ನೀರನ್ನು ಶೇಖರಣೆ ಮಾಡಿಟ್ಟುಕೊಳ್ಳಬೇಕಿದೆ. ಆದರೆ, ಸದ್ಯದ ನೀರಿನ ಮಟ್ಟಗಮನಿಸಿದರೆ ಕುಡಿಯುವ ನೀರಿಗೆ ಅಗತ್ಯವಿರುವ ನೀರಿನ ಶೇಖರಣೆ ಕಷ್ಟಎಂಬ ಪರಿಸ್ಥಿತಿ ಉದ್ಭವವಾಗಿದೆ.

ಮಳೆ ಬರದಿದ್ದರೆ ಬಹಳ ಕಷ್ಟ

ಜಲಾಶಯಗಳಲ್ಲಿ ಶೇಖರಣೆಯಾಗಿರುವ ಒಟ್ಟು ನೀರಿನಲ್ಲಿ ಕನಿಷ್ಠ ನೀರಿನ ಮಟ್ಟದಷ್ಟುಮಾತ್ರ ನೀರನ್ನು ಬಳಸಬಹುದಾಗಿದೆ. ಹೀಗಾಗಿ ಕನಿಷ್ಠ ಮಟ್ಟವನ್ನು ಹೊರತುಪಡಿಸಿ ಕೆಆರ್‌ಎ, ಕಬಿನಿ ಹಾಗೂ ಹೇಮಾವತಿ ಜಲಾಶಯಗಳಲ್ಲಿ 56.66 ಟಿಎಂಸಿ ನೀರು ಮಾತ್ರ ಉಳಿಯದಿದೆ. ಅದರಲ್ಲಿ 30 ಟಿಎಂಸಿ ನೀರು ಕುಡಿಯುವ ನೀರಿಗೆ ತೆಗೆದಿಟ್ಟರೆ, 26.66 ಟಿಎಂಸಿ ನೀರು ಮಾತ್ರ ಉಳಿಯಲಿದೆ. ಮುಂದಿನ ದಿನಗಳಲ್ಲಿ ಮಳೆಯಾಗದಿದ್ದರೆ ಹಾಗೂ ತಮಿಳುನಾಡಿಗೆ ನೀರು ಪೂರೈಸಿದರೆ ಆ ನೀರಿನ ಪ್ರಮಾಣ ಮತ್ತಷ್ಟುಕಡಿಮೆಯಾಗಿದೆ. ಮಂಡ್ಯ, ಮೈಸೂರು ಭಾಗದ ಜನರ ಕೃಷಿಗೆ ನೀರು ಪೂರೈಕೆ ಕಷ್ಟವಾಗಲಿದೆ.

ಮಳೆ ಕೊರತೆ ಮಧ್ಯೆ ತಮಿಳುನಾಡಿಗೆ ನೀರು ರಿಲೀಸ್: ಸಿಟ್ಟಿಗೆದ್ದ ಕಾವೇರಿ ಕೊಳ್ಳದ ರೈತರಿಂದ ನೀರಿಗಿಳಿದು ಪ್ರೊಟೆಸ್ಟ್..!

ನಿಗದಿಯಷ್ಟು ನೀರು ಬಳಸಿದ್ದರೂ ಕ್ಯಾತೆ?

ಮಳೆ ಕೊರತೆಯಿಂದಾಗಿ ಈಗಾಗಲೆ ನೀರಿನ ಸಮಸ್ಯೆ ಎದುರಿಸುವುದು ಪಕ್ಕಾ ಆಗಿದೆ. ಅದರ ನಡುವೆ ತಮಿಳುನಾಡು ಕಾವೇರಿ ನೀರಿಗಾಗಿ ಸುಪ್ರೀಂಕೋರ್ಚ್‌ ಮೆಟ್ಟಿಲೇರಿದೆ. ತಮಿಳುನಾಡಿನ 1.85 ಲಕ್ಷ ಎಕರೆ ವಿಸ್ತೀರ್ಣದ ಭೂಮಿಯಲ್ಲಿನ ಕುರುವೈ ಬೆಳೆಗೆ 32.27 ಟಿಎಂಸಿ ಅಡಿ ನೀರು ಅಗತ್ಯ ಎಂದು ಕಾವೇರಿ ನೀರು ಹಂಚಿಕೆ ಮಾಡಿತ್ತು. ಆದರೆ, ಕಳೆದ ಜೂನ್‌ನಿಂದ ಆಗಸ್ಟ್‌ 7ರವರೆಗೆ ತಮಿಳುನಾಡು ಈವರೆಗೆ ಮೆಟ್ಟೂರು ಜಲಾಶಯದಿಂದ 60.97 ಟಿಎಂಸಿ ಅಡಿಗಿಂತಲೂ ಹೆಚ್ಚಿನ ನೀರನ್ನು ಬಳಸಿಕೊಂಡಿದೆ ಎಂಬ ಮಾಹಿತಿಯಿದೆ.

ಹಂಚಿಕೆಗಿಂತ ಹೆಚ್ಚಿನ ಪ್ರಮಾಣದ ನೀರು ಬಳಕೆ ಮಾಡಿದ್ದರೂ ತಮಿಳುನಾಡು ಮತ್ತೆ ನೀರು ಬಿಡುವಂತೆ ಕರ್ನಾಟಕವನ್ನು ಆಗ್ರಹಿಸುತ್ತಿದೆ. ಒಂದು ವೇಳೆ ತಮಿಳುನಾಡು ಕೇಳಿದಷ್ಟು ನೀರು ಹರಿಸಿದರೆ ರಾಜ್ಯಕ್ಕೆ ಅಗತ್ಯವಿರುವ ನೀರಿನ ಪ್ರಮಾಣ ಕಡಿಮೆಯಾಗಿ ಸಮಸ್ಯೆ ಹೆಚ್ಚಲಿದೆ ಎಂಬುದು ನೀರಾವರಿ ತಜ್ಞರ ವಾದವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಉಳಿ ಪೆಟ್ಟು ಬಿದ್ದಾಗಲಷ್ಟೇ ಶಿಲೆಆಗುತ್ತದೆ ಕಲ್ಲು: ಡಿಕೆ ಹಿತನುಡಿ
ಬೆಂಗಳೂರು ನಗರದಲ್ಲಿ ಮತ್ತೆ 150 ಇಂಡಿಗೋ ವಿಮಾನಗಳ ಸಂಚಾರ ರದ್ದು