
ಬೆಂಗಳೂರು(ಮೇ.08): ಕಳೆದ ಹನ್ನೆರಡು ದಿನಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡು ಓಡಾಡುತ್ತಿರುವ ಲೈಂಗಿಕ ಹಗರಣದ ಆರೋಪಿ, ಸಂಸದ ಪ್ರಜ್ವಲ್ ರೇವಣ್ಣ ಮೇ 15ಕ್ಕೆ ಭಾರತಕ್ಕೆ ಮರಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಏ.26ರಂದು ರಾಜ್ಯದಲ್ಲಿ ಮತದಾನ ಮುಗಿಯುತ್ತಿದ್ದಂತೆ ರಾಜತಾಂತ್ರಿಕ ಪಾಸ್ಪೋರ್ಟ್ ಬಳಸಿಕೊಂಡು ಬೆಂಗಳೂರು ವಿಮಾನ ನಿಲ್ದಾಣದಿಂದ ಜರ್ಮನಿಯ ಫ್ರಾಂಕ್ಫರ್ಟ್ಗೆ ಪ್ರಜ್ವಲ್ ಹಾರಿದ್ದರು. ಇತ್ತ ಅತ್ಯಾಚಾರ ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ ಎಸ್ಐಟಿ ಅಧಿಕಾರಿಗಳು ಅವರ ಚಲನವಲನದ ಬಗ್ಗೆ ನಿರಂತರವಾಗಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆರಂಭದಲ್ಲಿ ಯುರೋಪಿನ ಬೇರೆ ಬೇರೆ ನಗರಗಳ ನಡುವೆ ಪ್ರಯಾಣಿಸುತ್ತಿರುವ ಮಾಹಿತಿಯನ್ನು ಎಸ್ಐಟಿ ಅಧಿಕಾರಿಗಳು ಪತ್ತೆ ಮಾಡಿದ್ದರು.
ರಾಜ್ಯದ್ದು ಎಸ್ಐಟಿ ಅಲ್ಲ, ಎಸ್ಎಸ್ಎಸ್ಐಟಿ: ಅಶೋಕ್
ವಿದೇಶದಲ್ಲಿ ತಲೆಮರೆಸಿಕೊಂಡಿರುವ ಆರೋಪಿಯ ಶೀಘ್ರ ಬಂಧನಕ್ಕಾಗಿ ಎಸ್ಐಟಿಯಿಂದ ಸಿಬಿಐಗೆ ಪತ್ರ ಬರೆಯಲಾಗಿತ್ತು. ಸಿಬಿಐ ಮನವಿ ಮೇರೆಗೆ ಈಗಾಗಲೇ ಇಂಟರ್ಪೋಲ್ ‘ಬ್ಲೂ ಕಾರ್ನರ್’ ನೋಟಿಸ್ ಹೊರಡಿಸಿದೆ. ಆರೋಪಿಯ ಇರುವಿಕೆ, ಚಲನವಲನ, ಪ್ರಯಾಣದ ಬಗ್ಗೆ ಇಂಟರ್ಪೋಲ್ನಿಂದ ಸಿಬಿಐ ಮಾಹಿತಿ ಸಂಗ್ರಹಿಸುತ್ತಿದೆ ಎಂದು ತಿಳಿದು ಬಂದಿದೆ.
ಈ ನಡುವೆ ಪ್ರಜ್ವಲ್ ಮೇ 15ಕ್ಕೆ ಭಾರತಕ್ಕೆ ಮರಳುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಸಜ್ಜಾಗಿರುವ ಎಸ್ಐಟಿಯ ತಂಡಗಳು, ಬೆಂಗಳೂರು ಸೇರಿದಂತೆ ದೇಶದ ವಿವಿಧ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಆಗಮನಕ್ಕಾಗಿ ಕಾಯುತ್ತಿವೆ.
ಹಲವು ಮುಗ್ಧ ಹೆಣ್ಣುಮಕ್ಕಳನ್ನು ಬೆದರಿಸಿ, ಆಮಿಷ ಒಡ್ಡಿ ಲೈಂಗಿಕ ದೌರ್ಜನ್ಯ, ಶೋಷಣೆ, ಅತ್ಯಾಚಾರ ಮಾಡಿರುವ ಗಂಭೀರ ಸ್ವರೂಪದ ಆರೋಪಗಳು ಪ್ರಜ್ವಲ್ ವಿರುದ್ಧ ಕೇಳಿಬಂದಿವೆ. ಶೋಷಣೆಗೆ ಒಳಗಾದ ಸಂತ್ರಸ್ತ ಹೆಣ್ಣುಮಕ್ಕಳಿಂದ ದೂರು ಸ್ವೀಕರಿಸಲು ಎಸ್ಐಟಿ ಪ್ರತ್ಯೇಕ ಸಹಾಯವಾಣಿ ಸಂಖ್ಯೆ ಆರಂಭಿಸಿದ್ದು, ಗೌಪ್ಯತೆಯನ್ನು ಕಾಪಾಡಿಕೊಳ್ಳುವುದಾಗಿ ಭರವಸೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ