ಪ್ರಧಾನಿಗೆ 10,000 ಪೊಲೀಸರ ಭಾರೀ ಭದ್ರತೆ: ಬೆಂಗಳೂರಿನ ಸಂಚಾರ ವ್ಯವಸ್ಥೆ ಬದಲಾವಣೆ, ಹೀಗಿದೆ ಪರ್ಯಾಯ ರಸ್ತೆ

Published : Jun 20, 2022, 06:50 AM ISTUpdated : Jun 20, 2022, 08:26 AM IST
ಪ್ರಧಾನಿಗೆ 10,000 ಪೊಲೀಸರ ಭಾರೀ ಭದ್ರತೆ: ಬೆಂಗಳೂರಿನ ಸಂಚಾರ ವ್ಯವಸ್ಥೆ ಬದಲಾವಣೆ, ಹೀಗಿದೆ ಪರ್ಯಾಯ ರಸ್ತೆ

ಸಾರಾಂಶ

* ‘ಅಗ್ನಿಪಥ್‌’ ವಿರೋಧಿಸಿ ಸಂಘಟನೆಗಳಿಂದ ಬಂದ್‌ ಕರೆ * ಪ್ರಧಾನಿ ಕಾರ‍್ಯಕ್ರಮದಲ್ಲೇ ಪ್ರತಿಭಟನೆ ಬಗ್ಗೆ ಗುಪ್ತಚಾರ ವರದಿ * ಅಹಿತಕರ ಘಟನೆ ನಡೆಯದಂತೆ ನಗರದಲ್ಲಿ ಕಟ್ಟೆಚ್ಚರ * ಪ್ರಧಾನಿ ಸಂಚರಿಸುವ ರಸ್ತೆ, ಕಾರ‍್ಯಕ್ರಮಕ್ಕೆ 10,000 ಖಾಕಿ ಕಾವಲು

ಬೆಂಗಳೂರು(ಜೂ.20): ಸೇನಾ ನೇಮಕಾತಿ ಯೋಜನೆ ‘ಅಗ್ನಿಪಥ್‌’ ವಿರೋಧಿಸಿ ಕೆಲ ಸಂಘಟನೆಗಳು ‘ಭಾರತ್‌ ಬಂದ್‌’ ಕರೆ ನೀಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಸೋಮವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುವ ಕಾರ್ಯಕ್ರಮಗಳಿಗೆ ಮುಂಜಾಗ್ರತಾ ಕ್ರಮವಾಗಿ ಸುಮಾರು 10 ಸಾವಿರಕ್ಕೂ ಅಧಿಕ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ದೆಹಲಿಯಿಂದ ಸೋಮವಾರ ಬೆಳಗ್ಗೆ 11.55ಕ್ಕೆ ಯಲಹಂಕ ವಾಯು ನೆಲೆಗೆ ಬಂದಿಳಿಯುವ ಪ್ರಧಾನ ಮಂತ್ರಿಗಳು, ಮಲ್ಲೇಶ್ವರದ ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ಡಾ| ಬಿ.ಆರ್‌.ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್‌ ಹಾಗೂ ಕೆಂಗೇರಿ ಸಮೀಪದ ಕೊಮ್ಮಘಟ್ಟದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಗಳ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಕರ್ನಾಟಕದಲ್ಲಿಂದು ಮೋದಿ ಹವಾ: ಒಂದೂವರೆ ವರ್ಷದ ಬಳಿಕ ರಾಜ್ಯಕ್ಕೆ ಆಗಮನ

ಪ್ರಧಾನಿ ಮಂತ್ರಿಗಳು ಸಂಚರಿಸುವ ಮಾರ್ಗದ ಉದ್ದಕ್ಕೂ ಭಾನುವಾರದಿಂದಲೇ ಪೊಲೀಸರನ್ನು ಕಾವಲು ಹಾಕಲಾಗಿದೆ. ಭಾರತ್‌ ಬಂದ್‌ ಕರೆ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಗಳು ಭಾಗವಹಿಸುವ ಕಾರ್ಯಕ್ರಮಗಳ ವೇಳೆ ಕೂಡಾ ಕೆಲವರು ಪ್ರತಿಭಟನೆ ನಡೆಸಬಹುದು ಎಂದು ಸರ್ಕಾರಕ್ಕೆ ಗುಪ್ತಚರ ವರದಿ ಸಲ್ಲಿಸಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಪ್ರಧಾನಿಗಳ ಕಾರ್ಯಕ್ರಮಗಳಿಗೆ ಹದ್ದಿನ ಕಣ್ಣೀಡಲಾಗಿದೆ.

ನಗರದ ಪೊಲೀಸ್‌ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ಅವರೇ ಖುದ್ದು ಭದ್ರತೆಯ ಮೇಲುಸ್ತುವಾರಿ ಹೊತ್ತಿದ್ದು, ಭಾನುವಾರ ನಗರ ಸಂಚಾರ ನಡೆಸಿ ಬಂದೋಬಸ್‌್ತ ವ್ಯವಸ್ಥೆ ಪರಿಶೀಲಿಸಿದರು. ಭದ್ರತೆಗೆ ಇಬ್ಬರು ಹೆಚ್ಚುವರಿ ಆಯುಕ್ತರು, ಇಬ್ಬರು ಜಂಟಿ ಆಯುಕ್ತರು, 12 ಡಿಸಿಪಿಗಳು, 30 ಎಸಿಪಿಗಳು ಹಾಗೂ 80 ಇನ್‌ಸ್ಪೆಕ್ಟರ್‌ಗಳು ಸೇರಿದಂತೆ 10 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲದೆ, ಸಿಐಡಿ, ಎಸಿಬಿ ಸೇರಿದಂತೆ ಇತರೆ ವಿಭಾಗಗಳಲ್ಲಿರುವ ಪೊಲೀಸರನ್ನು ಕೂಡಾ ಬಂದೋಬಸ್‌್ತ ಕಾರ್ಯಕ್ಕೆ ನಿಯೋಜಿಸಲಾಗಿದೆ. ಜತೆಗೆ ಸಿಎಆರ್‌, ಕೆಎಸ್‌ಆರ್‌ಪಿ, ಹಾಗೂ ಗರುಡ ಪಡೆಗಳನ್ನು ಬಂದೋಬಸ್‌್ತ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಚಾರ ವ್ಯವಸ್ಥೆ ಬದಲಾವಣೆ

ಪ್ರಧಾನ ಮಂತ್ರಿಗಳು ಪಾಲ್ಗೊಳ್ಳುವ ಕಾರ್ಯಕ್ರಮಗಳ ಸುತ್ತಮುತ್ತಲಿನ ಪ್ರದೇಶ ವ್ಯಾಪ್ತಿಯಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.

ಪರ್ಯಾಯ ಮಾರ್ಗ

*ಬೆಳಗ್ಗೆ 11ರಿಂದ 1ರವರೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಮತ್ತು ಅಲ್ಲಿಂದ ನಗರಕ್ಕೆ ಆಗಮಿಸುವ ಸಾರ್ವಜನಿಕರು ಕಾವೇರಿ ವೃತ್ತ, ಮೇಖ್ರಿವೃತ್ತ ಮತ್ತು ಹೆಬ್ಬಾಳ ಫ್ಲೈಓವರ್‌ ಬಳಸದೆ ಬೇರೆ ಮಾರ್ಗದಲ್ಲಿ ಸಾಗಬೇಕು.

*ತುಮಕೂರು ರಸ್ತೆ, ಕೆ.ಆರ್‌.ಪುರ, ಯಶವಂತಪುರ, ಯಲಹಂಕ, ದೇವನಹಳ್ಳಿ ಕಡೆ ಸಾಗುವ ಜನರು ಅನ್ಯ ಮಾರ್ಗದಲ್ಲಿ ಸಾಗಬೇಕು.

ಸಂಚಾರ ನಿಷೇಧ ರಸ್ತೆಗಳು

*ಮೈಸೂರು ರಸ್ತೆ ಮತ್ತು ನೈಸ್‌ ಬ್ರಿಡ್ಜ್‌ ಕಡೆಯಿಂದ ಕೆಂಗೇರಿ ಹಾಗೂ ಉತ್ತರಹಳ್ಳಿ ರಸ್ತೆ ಕಡೆಯಿಂದ ಕೆಂಗೇರಿ ಮತ್ತು ಮೈಸೂರು ರಸ್ತೆಗೆ ಸಂಚಾರ ನಿರ್ಬಂಧ.

*ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಮೈಸೂರು-ಬೆಂಗಳೂರು ರಸ್ತೆ ಮತ್ತು ವಿಮಾನ ನಿಲ್ದಾಣ ರಸ್ತೆಯಲ್ಲಿ ಭಾರೀ ವಾಹನ ಸಂಚಾರ ನಿಷೇಧಸಲಾಗಿದೆ.

*ಮಧ್ಯಾಹ್ನ 1ರಿಂದ 3.30ವರೆಗೆ ಕೊಮ್ಮಘಟ್ಟಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಧ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕುಡುಕರ ಲಿವರ್‌ ಚಿಕಿತ್ಸೆಗೆ ಹಣ ಕೇಳಿದ ಶಾಸಕರು: ಪರಿಷತ್‌ನಲ್ಲಿ ಸ್ವಾರಸ್ಯಕರ ಚರ್ಚೆ
ಸಾಲುಮರದ ತಿಮ್ಮಕ್ಕ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ: ಸಿಎಂ ಸಿದ್ದರಾಮಯ್ಯ