ಏಕತೆಯ ಸಂದೇಶ ಸಾರಿದ್ದ ಕನಕದಾಸರು: ಪ್ರಧಾನಿ ಮೋದಿ

By Govindaraj SFirst Published Nov 12, 2022, 6:34 AM IST
Highlights

ತಮ್ಮ ಜೀವನದುದ್ದಕ್ಕೂ ಮನುಕುಲಕ್ಕೆ ಭಕ್ತಿ ಮಾರ್ಗವನ್ನು ಬೋಧಿಸಿ, ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿ, ಸಾಮಾಜಿಕ ಏಕತೆಯ ಸಂದೇಶವನ್ನು ಸಾರಿದ ದಾಸಶ್ರೇಷ್ಠ ಕನಕದಾಸರಿಗೆ ನಾವು ಸದಾ ಚಿರ ಋುಣಿಯಾಗಿರುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

ಬೆಂಗಳೂರು (ನ.12): ತಮ್ಮ ಜೀವನದುದ್ದಕ್ಕೂ ಮನುಕುಲಕ್ಕೆ ಭಕ್ತಿ ಮಾರ್ಗವನ್ನು ಬೋಧಿಸಿ, ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿ, ಸಾಮಾಜಿಕ ಏಕತೆಯ ಸಂದೇಶವನ್ನು ಸಾರಿದ ದಾಸಶ್ರೇಷ್ಠ ಕನಕದಾಸರಿಗೆ ನಾವು ಸದಾ ಚಿರ ಋುಣಿಯಾಗಿರುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಗರದಲ್ಲಿ ಶುಕ್ರವಾರ ಸಂತ ಕವಿ ಕನಕದಾಸರು ಮತ್ತು ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆಗಳಿಗೆ ಪುಷ್ಪನಮನ ಸಲ್ಲಿಸಿದ ಬಳಿಕ ಟ್ವೀಟ್‌ ಮೂಲಕ ಹಾಗೂ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಕನಕದಾಸರ ಜೀವನ ಸಂದೇಶವನ್ನು ಮೋದಿ ಪ್ರಸ್ತಾಪಿಸಿದರು.

‘ಕುಲ ಕುಲ ಕುಲವೆಂದು ಹೊಡೆದಾಡದಿರಿ’ ಎಂಬ ಸತ್ವಭರಿತ ತತ್ವ ಪದದ ಮೂಲಕ ಕನಕದಾಸರು ಸಮಾಜಕ್ಕೆ ಜಾತಿ-ಜಾತಿಗಳ ನಡುವೆ ಸಂಘರ್ಷ ಬೇಡ ಎಂಬ ಸಂದೇಶ ಸಾರಿದರು. ಮನುಷ್ಯ ಮನುಷ್ಯರನ್ನು ಒಂದುಗೂಡಿಸುವ ಭಗವತ್‌ ಭಕ್ತಿ ಹಾಗೂ ಸಾಮಾಜಿಕ ಶಕ್ತಿಗೆ ಕನಕದಾಸರು ಪ್ರೇರಣೆಯಾಗಿದ್ದರು. ನಾವು ಈಗ ಸಿರಿಧಾನ್ಯಗಳ ಮಹತ್ವವನ್ನು ತಿಳಿಯುತ್ತಿದ್ದೇವೆ. ಆದರೆ, ಹದಿನೈದನೇ ಶತಮಾನದಲ್ಲಿಯೇ ತಮ್ಮ ‘ರಾಮಧಾನ್ಯ ಚರಿತ್ರೆ’ ಕೃತಿಯಲ್ಲಿ ಕನಕದಾಸರು ಸಿರಿಧಾನ್ಯದ ಮಹತ್ವವನ್ನು ಉಲ್ಲೇಖಿಸಿದ್ದಾರೆ. ಸಿರಿಧಾನ್ಯಗಳಲ್ಲೊಂದಾದ ರಾಗಿ ಕರ್ನಾಟಕದ ಬಹುಜನರ ಜನ ಪ್ರಿಯ ಆಹಾರವಾಗಿದೆ ಎಂದು ಮೋದಿ ಹೇಳಿದರು.

ಪ್ರಧಾನಿ ಮೋದಿ ಕಾರ್ಯಕ್ರಮ ಬರೀ ಗಿಮಿಕ್‌: ಸಿದ್ದು ಟೀಕೆ

‘ಕನಕದಾಸರ ಜಯಂತಿಯ ಶುಭ ಸಂದರ್ಭದಲ್ಲಿ ಕನಕದಾಸರ ಪ್ರತಿಮೆಗೆ ಗೌರವ ನಮನ ಸಲ್ಲಿಸಿದ್ದೇನೆ. ಮನುಕುಲಕ್ಕೆ ಭಕ್ತಿ ಮಾರ್ಗವನ್ನು ತೋರಿಸಿ, ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿ, ಸಾಮಾಜಿಕ ಏಕತೆಯ ಸಂದೇಶವನ್ನು ಸಾರಿದ ಸಂತ ಕನಕದಾಸರಿಗೆ ನಾವು ಸದಾ ಚಿರಋುಣಿಗಳಾಗಿರುತ್ತೇವೆ’ ಎಂದರು.

ಭಕ್ತಿಪೂರ್ವಕ ಪುಷ್ಪ ನಮನ: ಇದಕ್ಕೂ ಮುನ್ನ ಕನಕದಾಸರ ಜಯಂತಿ ಹಿನ್ನೆಲೆಯಲ್ಲಿ ಶಾಸಕರ ಭವನದ ಆವರಣದಲ್ಲಿ ಹೂವಿನ ಅಲಂಕಾರದಿಂದ ಸಿಂಗರಿಸಿದ್ದ ಸಂತ ಕವಿ ಕನಕದಾಸರ ಪ್ರತಿಮೆಗೆ ಮೋದಿ ಅವರು ಭಕ್ತಿಪೂರ್ವಕ ಪುಷ್ಪನಮನ ಸಲ್ಲಿಸಿದರು. ಬಳಿಕ ಸಮೀಪದಲ್ಲೇ ಇರುವ ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆಗೂ ಪುಷ್ಪನಮನ ಸಲ್ಲಿಸಿದರು.

ದಕ್ಷಿಣದ ಮೊದಲ ವಂದೇ ಭಾರತ್‌ ರೈಲಿಗೆ ಇಂದು ಮೋದಿ ಚಾಲನೆ

ಈ ವೇಳೆ ಮೋದಿ ಅವರಿಗೆ ಕುರುಬ ಸಮುದಾಯದ ಸಂಪ್ರದಾಯದಂತೆ ಕಂಬಳಿ ಹೊದಿಸಿ ಸಮುದಾಯದ ಸ್ವಾಮೀಜಿಗಳು, ಗಣ್ಯರು ಸನ್ಮಾನಿಸಿದರು. ಸಚಿವ ಬಿ.ಶ್ರೀರಾಮುಲು ಅವರು ವಾಲ್ಮೀಕಿ ಮೂರ್ತಿಯ ಸ್ಮರಣಿಕೆ ನೀಡಿ ಗೌರವಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್‌ ಜೋಷಿ, ಸಚಿವರಾದ ಶ್ರೀರಾಮುಲು, ಎಂಟಿಬಿ ನಾಗರಾಜು, ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದಪುರಿ ಸ್ವಾಮಿಜಿ, ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮಿಜಿ ಉಪಸ್ಥಿತರಿದ್ದರು.

click me!