ಎನ್‌ಐಎ ದಾಳಿ: ರಾಜ್ಯಾದ್ಯಂತ ಪಿಎಫ್‌ಐ ಕಾರ್ಯಕರ್ತರಿಂದ ರಸ್ತೆತಡೆ

By Kannadaprabha NewsFirst Published Sep 23, 2022, 4:29 AM IST
Highlights

ಹುಬ್ಬಳ್ಳಿಯಲ್ಲಿ ಪ್ರತಿಭಟನಾಕಾರರು, ಪೊಲೀಸರ ನಡುವೆ ಚಕಮಕಿ, ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಕಡೆ ಲಘು ಲಾಠಿ ಚಾರ್ಜ್‌

ಹುಬ್ಬಳ್ಳಿ(ಸೆ.23):  ಬೆಂಗಳೂರು, ಮಂಗಳೂರು, ಶಿರಸಿ ಸೇರಿದಂತೆ ಹಲವೆಡೆ ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳ ಕಚೇರಿ, ಮುಖಂಡರ ಮನೆಗಳ ಮೇಲೆ ಎನ್‌ಐಎ ದಾಳಿ ನಡೆಸಿ ಬಂಧಿಸಿರುವುದನ್ನು ವಿರೋಧಿಸಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಗುರುವಾರ ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಹುಬ್ಬಳ್ಳಿ, ಬಳ್ಳಾರಿ ಸೇರಿದಂತೆ ಹಲವೆಡೆ ನೂಕಾಟ, ತಳ್ಳಾಟ ನಡೆದಿದ್ದರಿಂದ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿಚಾಜ್‌ರ್‍ ನಡೆಸಿದ ಪ್ರಸಂಗಗಳೂ ನಡೆದಿವೆ.

ಹುಬ್ಬಳ್ಳಿ, ಬಳ್ಳಾರಿ, ಕೊಪ್ಪಳ, ವಿಜಯನಗರ (ಮರಿಯಮ್ಮನಹಳ್ಳಿ)ಯಲ್ಲಿ ಪಿಎಫ್‌ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಹೆದ್ದಾರಿ ಬಂದ್‌ಗೆ ಯತ್ನಿಸಿದರು. ಈ ಸಂದರ್ಭದಲ್ಲಿ ಪೊಲೀಸರು- ಪಿಎಫ್‌ಐ ಮುಖಂಡರ ನಡುವೆ ಮಾತಿನ ಚಕಮಕಿ, ತಳ್ಳಾಟ ನೂಕಾಟ ಸಹ ನಡೆಯಿತು.

ಭಾರತವನ್ನು ಇಸ್ಲಾಮೀಕರಣ ಮಾಡಲು ಹೊರಟ PFI ವಿರುದ್ಧ NIA ದಾಳಿ, 45 ಶಂಕಿತರು ಅರೆಸ್ಟ್!

ಬೆಂಗಳೂರಿನಲ್ಲಿ ರಿಚ್ಮಂಡ್‌ ಟೌನ್‌ನ ಶಾಕಿಬ್‌ ಮನೆ ಮೇಲೆ ಮುಂಜಾನೆ ದಾಳಿ ನಡೆಸಿದರು. ಶೋಧನೆ ಮುಗಿಸಿ ಹೊರಬರುತ್ತಿದ್ದಂತೆ ಎನ್‌ಐಎ ತಂಡದ ವಿರುದ್ಧ ಪಿಎಫ್‌ಐ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟಿಸಲು ಮುಂದಾದರು. ಈ ವೇಳೆ ಗೋ ಬ್ಯಾಕ್‌ ಗೋ ಬ್ಯಾಕ್‌ ಎಂದು ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ದಿಢೀರ್‌ ಪ್ರತಿಭಟನೆ ಹಿನ್ನಲೆಯಲ್ಲಿ ರಿಚ್ಮಂಡ್‌ ಟೌನ್‌ ಸುತ್ತಮುತ್ತ ಬಿಗುವಿನ ವಾತಾವರಣ ನೆಲೆಸಿತು. ಕೂಡಲೇ ಎಚ್ಚೆತ್ತ ಪೊಲೀಸರು ಲಘುಲಾಠಿಚಾಜ್‌ರ್‍ ಮಾಡಿ ಗುಂಪುಗೂಡಿದ್ದವರನ್ನು ಚದುರಿಸಿದರು.

ಇನ್ನು ಹುಬ್ಬಳ್ಳಿಯ ಕೌಲ್‌ಪೇಟೆಯಲ್ಲಿ ಮಧ್ಯಾಹ್ನ 3.30 ರ ಹೊತ್ತಿಗೆ ಸೇರಿದ ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತರು ಪೂಣಾ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದಿಢೀರ್‌ ಪ್ರತಿಭಟನೆ ನಡೆಸಿ ರಸ್ತೆ ತಡೆಗೆ ಮುಂದಾದರು. ಈ ವೇಳೆ ತಡೆಯಲು ಯತ್ನಿಸಿದ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ಭಾರೀ ಪ್ರಮಾಣದಲ್ಲಿ ತಳ್ಳಾಟ, ನೂಕಾಟ ನಡೆದಿದೆ. ಕೊನೆಗೆ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಅಲ್ಲದೇ, 50ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ.

ಅದೇ ರೀತಿ ಕೊಪ್ಪಳ, ಬಳ್ಳಾರಿ, ಮಂಗಳೂರು, ಸುರತ್ಕಲ್‌, ಪುತ್ತೂರು, ಉಡುಪಿಗಳಲ್ಲೂ ಪಿಎಫ್‌ಐ ಕಾರ್ಯಕರ್ತರು ಏಕಾಏಕಿ ರಸ್ತೆ ತಡೆ ಪ್ರತಿಭಟನೆಗೆ ಮುಂದಾಗಿದ್ದು ಈ ವೇಳೆ ಪೊಲೀಸರು ಲಾಠಿಚಾಜ್‌ರ್‍ ಮಾಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಕೋಲಾರ, ಮಂಗಳೂರು, ಸುರತ್ಕಲ್‌, ಪುತ್ತೂರುಗಳಲ್ಲಿ ನೂರಾರು ಪ್ರತಿಭಟನಾಕಾರರನ್ನು ಬಂಧಿಸಿ ಬಿಡುಗಡೆಗೊಳಿಸಿದ್ದಾರೆ. ಇನ್ನು ಬೆಳಗಾವಿಯಲ್ಲಿ ಪೊಲೀಸರು ಮಾತಿಗೆ ಬಗ್ಗದ ಪ್ರತಿಭಟನಾಕಾರರ ಕೊರಳ ಪಟ್ಟಿಹಿಡಿದು ಠಾಣೆಗೆ ಕರೆದೊಯ್ದಿದ್ದಾರೆ. ಮಡಿಕೇರಿ, ರಾಮನಗರ, ವಿಜಯನಗರಗಳಲ್ಲೂ ಪ್ರತಿಭಟನೆ ನಡೆದಿದ್ದು ಗೋ ಬ್ಯಾಕ್‌ ಎನ್‌ಐಎ ಘೋಷಣೆಗಳನ್ನು ಕೂಗಲಾಯಿತು.

ED NIA raid PFI; ಶಿರಸಿಯಲ್ಲಿ ದೇಶವಿರೋಧಿ ಚಟುವಟಿಕೆಯಲ್ಲಿದ್ದ ಎಸ್‌ಡಿಪಿಐ ಮುಖಂಡನ ಬಂಧನ

ಬಳ್ಳಾರಿಯಲ್ಲಿ ಯುವಕನ ಮೇಲೆ ಹಲ್ಲೆ

ಪ್ರತಿಭಟನೆ ನಡೆಯುತ್ತಿದ್ದ ವೇಳೆ ಬ್ಯಾರಿಕೇಡ್‌ ಹಾಕಲು ಪೊಲೀಸರಿಗೆ ಸಹಾಯ ಮಾಡುತ್ತಿದ್ದ ಎಂಬ ಆರೋಪದ ಮೇಲೆ ಪ್ರತಿಭಟನಾ ಸ್ಥಳದಲ್ಲಿದ್ದ ಯುವಕನ ಮೇಲೆ ಪಿಎಫ್‌ಐ ಪ್ರತಿಭಟನಾಕಾರರು ಹಲ್ಲೆ ನಡೆಸಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರಿಗೆ ಸಹಾಯ ಮಾಡಲು ಬ್ಯಾರಿಕೇಡ್‌ ತೆರವುಗೊಳಿಸಲು ಮುಂದಾದ ನಗರದ ಕಾರ್ಕಲತೋಟದ ನಿವಾಸಿ ವರುಣ್‌ರೆಡ್ಡಿ ಎಂಬ ಯುವಕನ ಮೇಲೆ ಕಾರ್ಯಕರ್ತರು ತೀವ್ರ ಹಲ್ಲೆ ನಡೆಸಿದ್ದಾರೆ. ಕೂಡಲೇ ಪೊಲೀಸರು ಮಧ್ಯಪ್ರವೇಶಿಸಿ ಯುವಕನನ್ನು ಠಾಣೆಗೆ ಕರೆದೊಯ್ದು ಬಳಿಕ ವಿಮ್ಸ್‌ ಆಸ್ಪತ್ರೆಗೆ ಚಿಕಿತ್ಸೆಗೆಂದು ಕಳಿಸಿಕೊಟ್ಟಿದ್ದಾರೆ.

ಬೆಳಗಾವಿಯಲ್ಲಿ ಸಂಚಾರ ಅಸ್ತವ್ಯಸ್ತ

ಪಿಎಫ್‌ಐನ ಬೆಳಗಾವಿ ಜಿಲ್ಲಾಧ್ಯಕ್ಷ ನವೀದ ಕಟಗಿ ನೇತೃತ್ವದಲ್ಲಿ ಸುಮಾರು 100ಕ್ಕೂ ಹೆಚ್ಚು ಕಾರ್ಯಕರ್ತರು ದಿಢೀರ್‌ ರಾಷ್ಟ್ರೀಯ ಹೆದ್ದಾರಿ ತಡೆದು ಕೆಲ ಸಮಯ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಕಾರ್‌, ಬಸ್‌, ಲಾರಿ ಸೇರಿದಂತೆ ಇನ್ನಿತರ ವಾಹನಗಳು ಹೆದ್ದಾರಿ ಮೇಲೆ ಕಿ.ಮೀ ಗಟ್ಟಲೇ ಸಾಲುಗಟ್ಟಿನಿಂತಿದ್ದವು. ಇದರಿಂದ ವಾಹನ ಸವಾರರು, ಪ್ರಯಾಣಿಕರು ಪರದಾಡುವಂತಾಯಿತು.
 

click me!