
ಬೆಂಗಳೂರು: ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ವಿಚಾರಣೆ ವೇಳೆ ಹೀಗೆಂದು ನುಡಿಯುವ ಮೂಲಕ ಹಾಸ್ಯ ಚಟಾಕಿ ಹಾರಿಸಿದರು. ನ್ಯಾಯಮೂರ್ತಿಗಳ ಈ ಮಾತು ಕೇಳಿ ನ್ಯಾಯಾಲಯದಲ್ಲಿ ನೆರೆದಿದ್ದ ವಕೀಲರು, ಅಧಿಕಾರಿಗಳು ಮತ್ತು ಸಿಬ್ಬಂದಿ ನಗೆಗಡಲಲ್ಲಿ ತೇಲಿದರು.
ವ್ಯಕ್ತಿಯೊಬ್ಬರು ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಿದ ಪ್ರಕರಣದಲ್ಲಿ ತಮ್ಮ ವಿರುದ್ಧ ಪೊಲೀಸರು ದಾಖಲಿಸಿದ ಎಫ್ಐಆರ್ ರದ್ದು ಕೋರಿ ಮದ್ಯ ಮಾರಾಟದ ಸನ್ನದ್ದುದಾರುರು ಸಲ್ಲಿಸಿದ್ದ ವಿಚಾರಣೆ ವೇಳೆ ಈ ಪ್ರಸಂಗ ನಡೆಯಿತು.
ಮದ್ಯ ಮಾರಾಟ ಸನ್ನದ್ದುದಾರರ ಪರ ವಕೀಲರು ಹಾಜರಾಗಿ, ಸ್ವಾಮಿ ಈ ಪ್ರಕರಣದಲ್ಲಿ ವ್ಯಕ್ತಿಯೊಬ್ಬರು ನಮ್ಮ ಮದ್ಯದಂಡಗಡಿಯಿಂದ 90 ಎಂ.ಎಲ್ ಪ್ರಮಾಣ ಮದ್ಯದ 96 ಟೆಟ್ರಾ ಪ್ಯಾಕ್ಟ್ಗಳನ್ನು ಖರೀದಿಸಿದ್ದರು. ನಂತರ ಆ ಪ್ಯಾಕೆಟ್ಗಳನ್ನು ಗ್ರಾಮದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ. ಆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು. ಪೊಲೀಸರು ವಿಚಾರಿಸಿದಾಗ, ಬಂಧಿತನು, ‘ನಾನು ಅರ್ಜಿದಾರರ ಮದ್ಯದಂಗಡಿಯಲ್ಲಿ ಕಡಿಮೆ ಬೆಲೆಗೆ ಮದ್ಯ ಖರೀದಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದೇನೆ’ ಎಂದು ಹೇಳಿಕೆ ನೀಡಿದ್ದರು. ಅದನ್ನು ಆಧರಿಸಿ ಅರ್ಜಿದಾರರ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ವಿವರಿಸಿದರು.
ಅಲ್ಲದೆ, ಅರ್ಜಿದಾರರು ಕಾನೂನುಬದ್ಧವಾಗಿ ಸನ್ನದ್ದು ಪಡೆದು ಮದ್ಯ ಮಾರಾಟ ಮಾಡುತ್ತಿದ್ಧಾರೆ. ಮಾರಾಟ ಮಾಡಿರುವುದಕ್ಕೆ ಬಿಲ್ ಸಹ ಇಟ್ಟುಕೊಂಡಿದ್ದಾರೆ. ಪೊಲೀಸರು ಸುಖಾ ಸುಮ್ಮನೆ ಪ್ರಕರಣ ದಾಖಲಿಸಿದ್ದಾರೆ. ಕಾನೂನು ಪ್ರಕಾರ ಇಂತಹ ಪ್ರಕರಣದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಮಾತ್ರ ಕ್ರಮ ಜರುಗಿಸಬೇಕು. ಪೊಲೀಸರಿಗೆ ಕ್ರಮ ಜರುಗಿಸುವ ಅಧಿಕಾರವಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಆಗ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, ಏನನ್ನು ಮಾರಾಟ ಮಾಡಲಾಗುತ್ತಿತ್ತು? ವಿಸ್ಕಿನಾ ಎಂದು ಪ್ರಶ್ನಿಸಿದರು. ಅರ್ಜಿದಾರರ ಪರ ವಕೀಲರು, ಒರಿಜಿನಲ್ ಚಾಯ್ಸ್ ಎಂದರು.
ಆಗ ನ್ಯಾಯಮೂರ್ತಿಗಳು, ಒರಿಜಿಲ್ ಚಾಯ್ಸ್ ಬ್ಯಾಡ್ ಚಾಯ್ಸ್. ಸೆಲ್ಲಿಂಗ್ ವಿಸ್ಕಿ ಈಸ್ ರಿಸ್ಕಿ ಎಂದು ಹೇಳಿ ಹಾಸ್ಯ ಚಟಾಕಿ ಹಾರಿಸಿದರು. ಜೊತೆಗೆ, ಇದು ಒರಿಜಿನಲ್ ಚಾಯ್ಸಾ? ಆಫೀಸರ್ಸ್ ಚಾಯ್ಸಾ? ಎಂದು ಕೇಳಿದರಲ್ಲದೆ, ಆಫೀಸರ್ಸ್ ಚಾಯ್ಸ್ ಆಗಿದ್ದರೆ, ಆರೋಪಿಯನ್ನು ಪೊಲೀಸರು ಬಿಟ್ಟು ಬಿಡುತ್ತಿದ್ದರು. ಇದು ಒರಿಜಿನಲ್ ಚಾಯ್ಸ್ ಆಗಿರುವುದರಿಂದ ಬಿಟ್ಟಿಲ್ಲ ಎಂದು ನುಡಿದರು. ನ್ಯಾಯಮೂರ್ತಿಗಳ ಈ ಮಾತು ಕೇಳಿ ಕೋರ್ಟ್ ಹಾಲ್ನಲ್ಲಿ ನೆರದವರು ಗೊಲ್ ಎಂದು ನಕ್ಕರು.
ನಂತರ ಪ್ರಕರಣದಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳ ಬದಲಿಗೆ ಪೊಲೀಸರು ದೂರು ದಾಖಲಿಸಿರುವ ಮತ್ತು ಅರ್ಜಿದಾರರು ಮದ್ಯವನ್ನು ಹೆಚ್ಚಿನ ಬೆಲೆ ಮಾರಾಟ ಮಾಡದಿರುವ ಅಂಶವನ್ನು ಪರಿಗಣಿಸಿದ ನ್ಯಾಯಮೂರ್ತಿಗಳು, ಅರ್ಜಿದಾರರ ವಿರುದ್ಧದ ಎಫ್ಐಆರ್ ರದ್ದುಪಡಿಸಿದರು.
ಇದನ್ನೂ ಓದಿ: Karnataka HC on Caste Status: ಲಿಂಗಾಯತ, ಗಾಣಿಗಕ್ಕೆ ಕಾನೂನಲ್ಲಿ ಪ್ರತ್ಯೇಕ ಗುರುತಿಲ್ಲ: ಹೈಕೋರ್ಟ್
ಕೊನೆಯೆಲ್ಲಿ ಪೊಲೀಸರು ಸುಮ್ಮನೆ ಪ್ರಕರಣ ದಾಖಲಿಸಿದ್ದಾರೆ. ಇಂತಹ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸುವ ಅಧಿಕಾರ ಪೊಲೀಸರಿಗೆ ಎಲ್ಲಿದೆ? ಅಬಕಾರಿ ಇಲಾಖೆಯ ಅಧಿಕಾರಿಗಳು ಕ್ರಮ ಜರುಗಿಸಬೇಕಿದೆ ಎಂದು ನ್ಯಾಯಮೂರ್ತಿಗಳು, ಸರ್ಕಾರ ಅಭಿಯೋಜಕರನ್ನು ಉದ್ದೇಶಿಸಿ ಖಾರವಾಗಿಯೇ ಹೇಳಿದರು.
ಇದನ್ನೂ ಓದಿ: Karnataka Shakti Scheme dues ‘ಶಕ್ತಿ’ ಯೋಜನೆಯ ಎಷ್ಟು ಹಣ ಬಾಕಿ ಇದೆ?: ಮಾಹಿತಿ ಕೇಳಿದ ಹೈಕೋರ್ಟ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ