₹ 5 ಅಕ್ರಮದಲ್ಲಿ ಪಾರಾಗಿದ್ದ ಲಮಾಣಿ ₹5 ಲಕ್ಷ ಕೇಸ್‌ನಲ್ಲಿ ಲೋಕಾ ಖೆಡ್ಡಾಕ್ಕೆ!

Kannadaprabha News   | Kannada Prabha
Published : Feb 23, 2026, 06:39 AM IST
Chandru Lamani

ಸಾರಾಂಶ

ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ₹5 ಲಕ್ಷ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದು ಜೈಲು ಪಾಲಾಗಿರುವ ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ, ಈ ಹಿಂದೆಯೂ ಲೋಕಾಯುಕ್ತ ಬಿಸಿ ಎದುರಿಸಿದ್ದರು.

ಗದಗ/ಲಕ್ಷ್ಮೇಶ್ವರ : ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ₹5 ಲಕ್ಷ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದು ಜೈಲು ಪಾಲಾಗಿರುವ ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ, ಈ ಹಿಂದೆಯೂ ಲೋಕಾಯುಕ್ತ ಬಿಸಿ ಎದುರಿಸಿದ್ದರು. ಶಿರಹಟ್ಟಿ ತಾಲೂಕು ಆಸ್ಪತ್ರೆಯಲ್ಲಿ ಅವರು ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾಗ ಆಸ್ಪತ್ರೆಯಲ್ಲಿನ ಹೊರರೋಗಿಗಳಿಂದ ನೋಂದಣಿಗಾಗಿ ಪಡೆಯುತ್ತಿದ್ದ 5 ರು.ಗಳ ಚೀಟಿ ಹಣವನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಲೋಕಾಯುಕ್ತ ಸಂಕಷ್ಟಕ್ಕೆ ಸಿಲುಕಿದ್ದರು ಎಂಬ ಸಂಗತಿ ಬಯಲಾಗಿದೆ.

ಡಾ.ಚಂದ್ರು ಲಮಾಣಿ ಅವರು 2018ರಲ್ಲಿ ಶಿರಹಟ್ಟಿ ತಾಲೂಕು ವೈದ್ಯಾಧಿಕಾರಿಯಾಗಿದ್ದ ವೇಳೆ ತಾಲೂಕು ಆಸ್ಪತ್ರೆಯಲ್ಲಿನ ಹೊರರೋಗಿಗಳಿಂದ ನೋಂದಣಿಗಾಗಿ ₹5 ಹಾಗೂ ಎಕ್ಸ್‌ರೇಗಾಗಿ ₹50 ಹಣವನ್ನು ಪಡೆಯಲಾಗುತ್ತಿತ್ತು. ಆದರೆ, ಆ ಹಣವನ್ನು ಅವರು ಸರ್ಕಾರಕ್ಕೆ ಸಲ್ಲಿಸದೆ, ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಗದಗ ಲೋಕಾಯುಕ್ತರಿಗೆ ದೂರು ನೀಡಿದ್ದರು. ಆ ಸಂಬಂಧ ಅವರ ವಿರುದ್ಧ ಪ್ರಕರಣ ದಾಖಲಾಗಿ ತನಿಖೆಯೂ ನಡೆದಿತ್ತು. ಆದರೆ, 2023ರಲ್ಲಿ ಚುನಾವಣೆಗೆ ನಿಲ್ಲುವ ಮುನ್ನ ಅವರು ಈ ಪ್ರಕರಣದಿಂದ ಖುಲಾಸೆಯಾಗಿದ್ದರು.

32ನೇ ವಯಸ್ಸಿನಲ್ಲಿಯೇ ಶಾಸಕ:

ಡಾ.ಚಂದ್ರು ಲಮಾಣಿ ಅವರು 32ನೇ ವಯಸ್ಸಿನಲ್ಲಿಯೇ (2023ರಲ್ಲಿ) ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ, ಕ್ಷೇತ್ರದ ಜನರಲ್ಲಿ ಹೊಸ ಭರವಸೆ ಮೂಡಿಸಿದ್ದರು. 2023ರಲ್ಲಿ 74,489 ಮತಗಳನ್ನು ಗಳಿಸಿ, ಪಕ್ಷೇತರ ಅಭ್ಯರ್ಥಿ ರಾಮಕೃಷ್ಣ ಶಿದ್ಲಿಂಗಪ್ಪ ದೊಡ್ಡಮನಿ ಅವರನ್ನು 28,520 ಮತಗಳ ಅಂತರದಿಂದ ಸೋಲಿಸಿದ್ದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಅವರ ಕೃಪಾಕಟಾಕ್ಷದಿಂದ ಅವರಿಗೆ ಬಿಜೆಪಿ ಟಿಕೆಟ್ ದಕ್ಕಿತ್ತು. ಪಕ್ಷದ ಯಾವುದೇ ಬ್ಯಾನರ್ ಕಟ್ಟದೇ, ಸಭೆ-ಸಮಾರಂಭಗಳಲ್ಲಿ ಕಾರ್ಯಕರ್ತರಾಗಿ ಕೆಲಸ ಮಾಡದೇ ಕೊನೆಯ ಕ್ಷಣದವರೆಗೂ ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸಿ, ಅಂತಿಮ ಕ್ಷಣದಲ್ಲಿ ಬಿಜೆಪಿ ಟಿಕೆಟ್ ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರು.

ಆಯ್ಕೆಯಾದ ನಂತರ ಶಾಸಕರ ವರ್ತನೆಯಿಂದಾಗಿ ಕ್ಷೇತ್ರದಲ್ಲಿನ ಪಕ್ಷದ ಕೆಲವು ಮುಖಂಡರು ಅವರ ವಿರುದ್ಧ ಅಸಮಾಧಾನಗೊಂಡರು. ಇದರಿಂದಾಗಿ ಪಕ್ಷದಲ್ಲಿಯೇ ಎರಡು ಗುಂಪುಗಳಾದವು. ಈ ಬೆಳವಣಿಗೆಯಿಂದಾಗಿ ಅವರು ಕ್ಷೇತ್ರದಲ್ಲಿನ ಲಿಂಗಾಯತ ಪಂಗಡದ ಕೆಲವರ ತೀವ್ರ ವಿರೋಧ ಕಟ್ಟಿಕೊಳ್ಳುವಂತಾಗಿದ್ದು, ಈಗ ನಡೆದಿರುವ ಪ್ರಕರಣಕ್ಕೆ ಅದು ಥಳಕು ಹಾಕಿಕೊಳ್ಳುತ್ತಿದೆ.

ಬಡತನದಲ್ಲಿ ಬೆಳೆದ ಚಂದ್ರು:

ಶಾಸಕ ಡಾ ಚಂದ್ರು ಲಮಾಣಿ ಮುಂಡರಗಿ ತಾಲೂಕಿನ ದಿಂಡೂರ ತಾಂಡಾದ ಬಡಕುಟುಂಬದಲ್ಲಿ 1989ರ ಆ.1ರಂದು ಜನಿಸಿದ್ದು, ಸ್ಥಳೀಯ ಪ್ರಾಥಮಿಕ ಶಿಕ್ಷಣ ಮುಗಿಸಿ, ಡೋಣಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮಾಡಿ, ಪಿಯು ಶಿಕ್ಷಣವನ್ನು ಗದಗಿನಲ್ಲಿ ಪೂರ್ಣಗೊಳಿಸಿದರು.

ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಎಂಬಿಬಿಎಸ್ ಮುಗಿಸಿ, ತುಮಕೂರಿನಲ್ಲಿ ಎಂಡಿ ಪದವಿ ಪಡೆದರು. ಬಳಿಕ, ಶಿರಹಟ್ಟಿಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯ ವೃತ್ತಿಗೆ ಸೇರಿದ ಲಮಾಣಿ ಅಂದಿನ ಶಾಸಕ ರಾಮಣ್ಣ ಲಮಾಣಿ ಅವರ ತೀವ್ರ ವಿರೋಧ ಕಟ್ಟಿಕೊಂಡಿದ್ದರು. ಹೀಗೆ, ಒಂದಿಲ್ಲೊಂದು ವಿವಾದಗಳಿಂದಲೇ ಅವರು ಆಗಾಗ ಸುದ್ದಿಯಾದರು. ಕಡು ಬಡತನದಲ್ಲಿ ಹುಟ್ಟಿ, ಕಷ್ಟದ ಜೀವನ ಕಂಡ ಲಮಾಣಿ, ತಮ್ಮ ಹಿಂದಿನ ಕಹಿ ನೆನಪುಗಳನ್ನು ಮರೆತಿದ್ದೆ ಇಂದು ಈ ರೀತಿಯ ತೊಂದರೆ ಎದುರಿಸಲು ಕಾರಣವಾಗಿದೆ ಎಂಬುದು ಅವರನ್ನು ಸಮೀಪದಿಂದ ಬಲ್ಲವರ ಮಾತು.

ಪರಪ್ಪನ ಅಗ್ರಹಾರದ ಜೈಲು ಸೇರಿದ ಶಾಸಕ

ಬೆಂಗಳೂರು: ಗುತ್ತಿಗೆದಾರನಿಂದ 5 ಲಕ್ಷ ರು. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ಶಿರಹಟ್ಟಿ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಸೇರಿ ಮೂವರು ಆರೋಪಿಗಳನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಾ.2ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಹೀಗಾಗಿ ಮೂವರನ್ನೂ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: ₹ 5 ಅಕ್ರಮದಲ್ಲಿ ಪಾರಾಗಿದ್ದ ಲಮಾಣಿ ₹5 ಲಕ್ಷ ಕೇಸ್‌ನಲ್ಲಿ ಲೋಕಾ ಖೆಡ್ಡಾಕ್ಕೆ!
ಗೌಡ್ರು ಕುಟುಂಬವಾದಿ ಆಗಿದ್ದರೆ ಸಿದ್ದುಗೆ ಕುರ್ಚಿ ಸಿಗ್ತಿರಲಿಲ್ಲ : ಎಚ್ಡಿಕೆ