ಶಿರಾಡಿ ಘಾಟ್‌ನ 2.5 ಕಿ.ಮೀ. ತಾತ್ಕಾಲಿಕ ಒನ್‌ ವೇ: ಸಚಿವ ಸಿ.ಸಿ.ಪಾಟೀಲ್‌

By Govindaraj SFirst Published Jul 20, 2022, 9:54 AM IST
Highlights

ಹಾಸನ ಜಿಲ್ಲೆ ಶಿರಾಡಿ ಘಾಟ್‌ನ ದೋಣಿಗಲ್‌ ಬಳಿ ಭೂ ಕುಸಿತದಿಂದ ವಾಹನ ಸಂಚಾರಕ್ಕೆ ಆಗಿರುವ ತೊಂದರೆ ಪರಿಹರಿಸಲು ತಕ್ಷಣದಿಂದ ತಾತ್ಕಾಲಿಕವಾಗಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್‌ ತಿಳಿಸಿದ್ದಾರೆ.

ಬೆಂಗಳೂರು (ಜು.20): ಹಾಸನ ಜಿಲ್ಲೆ ಶಿರಾಡಿ ಘಾಟ್‌ನ ದೋಣಿಗಲ್‌ ಬಳಿ ಭೂ ಕುಸಿತದಿಂದ ವಾಹನ ಸಂಚಾರಕ್ಕೆ ಆಗಿರುವ ತೊಂದರೆ ಪರಿಹರಿಸಲು ತಕ್ಷಣದಿಂದ ತಾತ್ಕಾಲಿಕವಾಗಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್‌ ತಿಳಿಸಿದ್ದಾರೆ. ಇತ್ತೀಚೆಗೆ ಸುರಿದ ಭಾರಿ ಮಳೆ ಹಾಗೂ ಭೂ ಕುಸಿತದಿಂದ ರಾಷ್ಟ್ರೀಯ ಹೆದ್ದಾರಿ ಮತ್ತು ಭೂ ಕುಸಿತದಿಂದ ವಿಶೇಷವಾಗಿ ಘಟ್ಟಪ್ರದೇಶಗಳಲ್ಲಿ ಆಗಿರುವ ತೊಂದರೆಗಳ ಕುರಿತು ಅಧಿಕಾರಿಗಳ ಜೊತೆ ಮಂಗಳವಾರ ವಿಕಾಸಸೌಧದಲ್ಲಿ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಸದ್ಯ ಬೆಂಗಳೂರಿನಿಂದ ಮಂಗಳೂರು ಕಡೆಗೆ ಹೋಗುವ ವಾಹನಗಳು ಶಿರಾಡಿ ಘಾಟ್‌ನ ಪ್ರಸ್ತುತ ರಸ್ತೆ ಮೂಲಕವೇ ಹೋಗಲು ಅವಕಾಶ ನೀಡಲಾಗುವುದು. ಆದರೆ ಮಂಗಳೂರಿನಿಂದ ಬೆಂಗಳೂರಿನ ಕಡೆಗೆ ಬರುವ ವಾಹನಗಳಿಗೆ ಪರಾರ‍ಯಯ ಮಾರ್ಗ ಮಾಡಲಾಗುವುದು. ದೋಣಿಗಲ್‌ ಹತ್ತಿರದ ಕಪ್ಪಳ್ಳಿ-ಕೆಸಗಾನಹಳ್ಳಿ ಮಾರ್ಗವಾಗಿ ಹಳೆಯ ರಸ್ತೆಯಿದ್ದು, ಅದನ್ನು ತಾತ್ಕಾಲಿಕವಾಗಿ ವಿಸ್ತರಿಸಿ ಪರ್ಯಾಯ ರಸ್ತೆಯನ್ನಾಗಿ ಮಾಡಲು ನಿರ್ಧರಿಸಲಾಗಿದೆ. ಈ ಸಂಬಂಧ ಕಾಮಗಾರಿ ನಡೆಯುತ್ತಿದೆ ಎಂದರು. ಭೂ ಕುಸಿತದ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾಧಿಕಾರಿಗಳು ವಾಹನ ಸಂಚಾರಕ್ಕೆ ನಿರ್ಬಂಧ ಹೇರಿರಬಹುದು. 

ಕರ್ನಾಟಕದಲ್ಲಿ ಮಳೆಗೆ 1,000 ಕಿಮೀ ರಸ್ತೆ ಹಾನಿ, ತುರ್ತು ದುರಸ್ತಿಗೆ 200 ಕೋಟಿ ರಿಲೀಸ್‌, ಸಿ.ಸಿ. ಪಾಟೀಲ್‌

ಆದರೆ ಸುಮಾರು ಎರಡೂವರೆ ಕಿ.ಮೀ. ರಸ್ತೆಯನ್ನು ಏಕ ಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು. ದೋಣಿಗಲ್‌ ಬಳಿ ಉಂಟಾಗಿರುವ ಭೂ-ಕುಸಿತವನ್ನು ಸರಿಪಡಿಸಲು ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಏಕಮುಖ ಸಂಚಾರ ತಾತ್ಕಾಲಿಕವಾಗಿದ್ದು, ದೋಣಿಗಲ್‌ ಬಳಿ ರಸ್ತೆ ಸರಿಪಡಿಸಿದ ನಂತರ ಮೊದಲಿನಂತೆ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಈ ಕಾಮಗಾರಿಯನ್ನು ಒಂದೂವರೆ ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಸಿ.ಸಿ. ಪಾಟೀಲ್‌ ತಿಳಿಸಿದರು.

ಪಂಚಮಸಾಲಿ ಮೀಸಲಾತಿ: ನನ್ನದು ತಂತಿ ಮೇಲಿನ ನಡಿಗೆ ಸ್ಥಿತಿಯಾಗಿದೆ, ಸಚಿವ ಸಿ.ಸಿ.ಪಾಟೀಲ

ಹಾಸನ, ದಕ್ಷಿಣ ಕನ್ನಡ ರಾಷ್ಟ್ರೀಯ ಹೆದ್ದಾರಿ 75 ಶಿರಾಡಿ ಘಾಟ್‌ನಲ್ಲಿ 13 ಸ್ಥಳಗಳಲ್ಲಿ ಮೈಕ್ರೊಪೈಲಿಂಗ್‌ ಮತ್ತು ಸಾಯಿಲ್‌ ನೈಲಿಂಗ್‌ ಅನ್ನು ಹಾಗೂ 6 ಸ್ಥಳಗಳಲ್ಲಿ ರಕ್ಷಣಾ ಗೋಡೆ ನಿರ್ಮಾಣ ಕಾಮಗಾರಿಯನ್ನು 13 ಕೋಟಿ ರು.ಗಳ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಅದೇ ರೀತಿ ಹಾಸನ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 73 ಚಾರ್ಮಡಿ ಘಾಟ್‌ನಲ್ಲಿ 17 ಕೋಟಿ ರು. ವೆಚ್ಚದಲ್ಲಿ ಮೈಕ್ರೋಪೈಲಿಂಗ್‌ ಹಾಗೂ ಸಾಯಿಲ್‌ ನೈಲಿಂಗ್‌ ಹಾಘೂ 3830 ಮೀಟರ್‌ ಉದ್ದದ ರಕ್ಷಣಾ ಗೋಡೆ ಕಾಮಗಾರಿಯನ್ನು ಕೈಗೆತ್ತಿಗೊಳ್ಳಲಾಗಿದೆ ಎಂದು ಸಚಿವರು ವಿವರಿಸಿದರು.

click me!