
ಬೆಂಗಳೂರು(ಅ.09): ಕರ್ನಾಟಕ ಗೃಹ ಮಂಡಳಿ ರಾಜ್ಯದ ವಿವಿಧೆಡೆ ಅಭಿವೃದ್ಧಿಪಡಿಸಿರುವ ನಿವೇಶನಗಳಿಗೆ ಸಾರ್ವ ಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಖರೀದಿಗೆ ಲಭ್ಯವಿದ್ದ ನಿವೇಶನಗಳಿಗಿಂತಲೂ ಕಡಿಮೆ ಅರ್ಜಿಗಳು ಸಲ್ಲಿಕೆಯಾಗಿವೆ. ಇದೇ ಆಗಸ್ಟ್ ತಿಂಗಳ ಕೊನೆ ವಾರದಲ್ಲಿ ರಾಯಚೂರು, ಧಾರವಾಡ, ಯಾದಗಿರಿ ಸೇರಿದಂತೆ ರಾಜ್ಯದ 11 ಜಿಲ್ಲೆಗಳಲ್ಲಿ ಅಭಿವೃ ದ್ಧಿಪಡಿಸಿರುವ 18 ಯೋಜನೆಗಳಲ್ಲಿ ಲಭ್ಯವಿದ್ದ ಒಂದು ಸಾವಿರಕ್ಕೂ ಹೆಚ್ಚು ನಿವೇಶನಗಳ ಖರೀದಿಗೆ ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಆದರೆ ರಾಯಚೂರು ಜಿಲ್ಲೆಯ ಮಾನ್ವಿ ಯಲ್ಲಿ ಲಭ್ಯವಿದ್ದ 252 ಸೈಟ್ಗಳಿಗೆ ಕೇವಲ 38 ಅರ್ಜಿ ಬಂದಿವೆ.
ಯಾದಗಿರಿಯ ಸುರಪುರದ ಕವಡಿಮಟ್ಟಿಯಲ್ಲಿ 181 ನಿವೇಶನಕ್ಕೆ 11, ವಿಜಯಪುರ ಜಿಲ್ಲೆ ಮುದ್ದೇಬಿಹಾಳದಲ್ಲಿ 132 ನಿವೇಶನಗಳಿಗೆ 16, ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿ 35 ಸೈಟ್ ಗಳಿಗೆ ಕೇವಲ 10 ಅರ್ಜಿಗಳು ಬಂದಿವೆ. ಈ ಸೈಟ್ಗಳ ಮಾರಾಟಕ್ಕೆ ಹಿಂದೊಮ್ಮೆ ಅರ್ಜಿ ಆಹ್ವಾನಿಸಿದಾಗಲೂ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ, 2ನೇ ಬಾರಿ ಅರ್ಜಿ ಕರೆದರೂ ನೀರಸ ಪ್ರತಿಕ್ರಿಯೆ ಕಂಡುಬಂದಿದೆ.
ಚಾಮರಾಜನಗರ: ಗೃಹ ಮಂಡಳಿ ನಿವೇಶನ ಹಂಚಿಕೆ, ಭೂಸ್ವಾಧೀನ ಪ್ರಕ್ರಿಯೆ ಇಲ್ಲದೆ ಜನ ಕಂಗಾಲು..!
ನೀರಸ ಪ್ರತಿಕ್ರಿಯೆ ಏಕೆ?:
ಕೆಎಚ್ಬಿ ಯೋಜನೆಗಳಲ್ಲಿ ಮೂಲಸೌಕರ್ಯ ಕೊರತೆ, ಜನವಸತಿ ಪ್ರದೇಶದಿಂದ ದೂರದಲ್ಲಿರುವುದು, ಸಾರಿಗೆ ಸಂಪರ್ಕ ಇಲ್ಲದಿರುವುದು, ಸಾಧಾರಣ ಗುಣಮಟ್ಟ ಮುಂತಾದ ಕಾರಣಗಳಿಂದ ಸಾರ್ವಜನಿಕರಲ್ಲಿ ಉತ್ತಮ ಅಭಿಪ್ರಾಯ ಇಲ್ಲ. ಹೀಗಾಗಿ, ನಿವೇಶನಗಳಿಗೆ ಬೇಡಿಕೆ ಇಲ್ಲ ಎಂದು ವಿಶ್ಲೇಷಿಸಲಾಗಿದೆ.
ಬೇಡಿಕೆ ಬರುವ ವಿಶ್ವಾಸ: 'ಕೆಎಚ್ ಬಿ ನಿವೇಶನಗಳು ಪಟ್ಟಣ, ನಗರ ಪ್ರದೇಶದಿಂದ ಸ್ವಲ್ಪ ದೂರದಲ್ಲಿರುವುದು ಅರ್ಜಿಗಳು ಕಡಿಮೆ ಸಲ್ಲಿಕೆಯಾಗಲು ಕಾರಣವಾಗಿರಬಹುದು. ಆದರೆ, ಊರುಗಳು ಬೆಳೆಯುತ್ತಲೇ ಇವೆ. ಹೀಗಾಗಿ, ನಿವೇಶನಗಳಿಗೆ ಡಿಮ್ಯಾಂಡ್ ಬಂದೇ ಬರುತ್ತದೆ. ಧಾರವಾಡ ಯೋಜನೆಗೆ ಮೊದಲ ಬಾರಿ ಕರೆದಾಗ ಕಮ್ಮಿ ಅರ್ಜಿ ಬಂದಿದ್ದವು. 2ನೇ ಬಾರಿ ಭಾರಿ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕೆಯಾಗಿವೆ' ಎಂದು ಮಂಡಳಿ ಆಯುಕ್ತರಾದ ಕವಿತಾ. ಎಸ್. ಮಣ್ಣಿಕೇರಿ ತಿಳಿಸಿದರು.
ತಾಲೂಕುಗಳಲ್ಲಿ ನಿರಾಸಕ್ತಿ:
ನಗರದ ನಿವೇಶನಗಳಿಗೆ ಮಾತ್ರ ಉತ್ತಮ ಬೇಡಿಕೆ ಕಂಡು ಬಂದಿದ್ದು, ತಾಲೂಕು, ಪಟ್ಟಣಗಳ ಸಮೀಪದಲ್ಲಿರುವ ಕೆಎಚ್ ಬಿ ನಿವೇಶನಗಳಿಗೆ ಜನರು ನಿರಾಸಕ್ತಿ ತೋರಿದ್ದಾರೆ. ಬಹುತೇಕ ಕಡೆ ಪಟ್ಟಣದಲ್ಲೇ ಸಾಕಷ್ಟು ನಿವೇಶನಗಳು ಲಭ್ಯವಿರುವ ಕಾರಣ, ದೂರದ ಕೆಎಚ್ಬಿ ನಿವೇಶನ ಖರೀದಿಸಲು ಹೆಚ್ಚು ಆಸಕ್ತಿ ತೋರಿಸುವುದಿಲ್ಲ ಎನ್ನಲಾಗಿದೆ.
ಸೂಕ್ಷ್ಮ ಬೆಟ್ಟ ಕೊರೆದು ಲೇಔಟ್ ನಿರ್ಮಿಸುತ್ತಿರುವ ಕರ್ನಾಟಕ ಗೃಹ ನಿರ್ಮಾಣ ಮಂಡಳಿ
ಧಾರವಾಡದಲ್ಲಿ ಡಿಮ್ಯಾಂಡ್!:
ಧಾರವಾಡದ ಹಿರೇಮಲ್ಲಿಗೆವಾಡದಲ್ಲಿ ಐಐಟಿ ಕ್ಯಾಂಪಸ್ ಸಮೀಪದಲ್ಲಿ ಕೆಎಚ್ ಬಿ ಮಾರಾಟಕ್ಕೆ ಇಟ್ಟಿದ್ದ 235 ನಿವೇಶನಗಳಿಗೆ 4,421 ಅರ್ಜಿಗಳು ಸಲ್ಲಿಕೆಯಾಗಿವೆ. ದಾವಣಗೆರೆ ಕುಂದವಾಡದ 16 ಸೈಟ್ಗಳಿಗೆ 472 ಅರ್ಜಿ, ಕಲಬುರಗಿಯ ಕುಸನೂರಿನಲ್ಲಿ 12 ಮನೆಗಳಿಗೆ 42 ಅರ್ಜಿಗಳು ಬಂದಿವೆ.
ಮಾರುಕಟ್ಟೆ ದರಕ್ಕೆ ಹೋಲಿಸಿದರೆ ಕೆಎಚ್ಬಿ ನಿವೇಶನಗಳ ದರ ಕಡಿಮೆ ಇದೆ. ಕೆಲವೇ ವರ್ಷ ಗಳಲ್ಲಿ ಕೆಎಚ್ಬಿ ನಿವೇಶನಗಳಿಗೆ ಹೆಚ್ಚು ಬೇಡಿಕೆ ಬರುತ್ತದೆ. ಉಳಿಕೆ ನಿವೇಶನ ಮಾರಾಟ ಮಾಡಲು ಮತ್ತೊಮ್ಮೆ ಅರ್ಜಿ ಆಹ್ವಾನಿಸಲಾಗುತ್ತದೆ ಎಂದು ಕೆಎಚ್ ಬಿ ಆಯುಕ್ತರು ಕವಿತಾ. ಎಸ್. ಮಣ್ಣಿಕೇರಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ