ESCOM ಖಾಸಗೀಕರಣ ಇಲ್ಲ: ವಿದ್ಯುತ್‌ ಸರಬರಾಜು ಖಾಸಗಿ ಕಂಪನಿಗಳಿಗೆ ಲೈಸೆನ್ಸ್‌: ಕೇಂದ್ರ ಸಚಿವ

By Kannadaprabha NewsFirst Published Feb 6, 2023, 8:08 AM IST
Highlights

ವಿದ್ಯುತ್‌ ಪೂರೈಕೆ ಕ್ಷೇತ್ರದಲ್ಲಿ ಪೈಪೋಟಿಯ ವಾತಾವರಣ ಸೃಷ್ಟಿಸಲು ಖಾಸಗಿ ಕಂಪನಿಗಳಿಗೆ ವಿದ್ಯುತ್‌ ಸರಬರಾಜು ಪರವಾನಗಿ ನೀಡುವ ಸರ್ಕಾರದ ಪ್ರಯತ್ನಗಳು ಮುಂದುವರಿಯಲಿವೆ. ಆದರೆ, ಎಸ್ಕಾಂಗಳನ್ನು ಖಾಸಗೀಕರಣ ಮಾಡುವುದಿಲ್ಲ ಎಂದು ಕೇಂದ್ರ ಇಂಧನ ಸಚಿವ ಆರ್‌.ಕೆ. ಸಿಂಗ್‌ ತಿಳಿಸಿದ್ದಾರೆ.

ಬೆಂಗಳೂರು (ಫೆ.6) : ವಿದ್ಯುತ್‌ ಪೂರೈಕೆ ಕ್ಷೇತ್ರದಲ್ಲಿ ಪೈಪೋಟಿಯ ವಾತಾವರಣ ಸೃಷ್ಟಿಸಲು ಖಾಸಗಿ ಕಂಪನಿಗಳಿಗೆ ವಿದ್ಯುತ್‌ ಸರಬರಾಜು ಪರವಾನಗಿ ನೀಡುವ ಸರ್ಕಾರದ ಪ್ರಯತ್ನಗಳು ಮುಂದುವರಿಯಲಿವೆ. ಆದರೆ, ಎಸ್ಕಾಂಗಳನ್ನು ಖಾಸಗೀಕರಣ ಮಾಡುವುದಿಲ್ಲ ಎಂದು ಕೇಂದ್ರ ಇಂಧನ ಸಚಿವ ಆರ್‌.ಕೆ. ಸಿಂಗ್‌ ತಿಳಿಸಿದ್ದಾರೆ.

ಭಾನುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಜಿ-20 ಶೃಂಗಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯುತ್‌ ಸರಬರಾಜಿನಲ್ಲಿ ಖಾಸಗಿ ಕಂಪನಿಗಳಿಗೆ ಅವಕಾಶ ನೀಡುವುದರಿಂದ ಎಸ್ಕಾಂಗಳು ಸ್ಪರ್ಧೆ ಎದುರಿಸಬೇಕಾಗುತ್ತದೆ. ಆದರೆ ಗ್ರಾಹಕರಿಗೆ ಆಯ್ಕೆ ಮಾಡಲು ಹೆಚ್ಚಿನ ಅವಕಾಶ ದೊರೆಯುತ್ತದೆ ಎಂದರು.

ಎಸ್ಕಾಂಗಳಿಗೆ ಸರ್ಕಾರದಿಂದಲೇ 5,975 ಕೋಟಿ ಬಾಕಿ..!

2003ರ ಕಾನೂನಿನಡಿ ಒಂದೇ ಪ್ರದೇಶದಲ್ಲಿ ವಿದ್ಯುತ್‌ ಪೂರೈಕೆಗೆ ಬಹು ಪರವಾನಗಿಗಳನ್ನು ಒದಗಿಸಲು ಅವಕಾಶವಿದೆ. ಮುಂಬೈನಲ್ಲಿ ಈಗಾಗಲೇ ಅನೇಕ ಪರವಾನಗಿಗಳನ್ನು ಹೊಂದಿದ್ದೇವೆ. ಆದರೆ ಸಮಸ್ಯೆಯೊಂದು ಕಾಣಿಸಿಕೊಂಡಿದ್ದರಿಂದ ಅದು ಕಾರ್ಯಸಾಧ್ಯವಾಗಿಲ್ಲ. ಹಾಗಾಗಿ ಹಾಲಿ ಇರುವ ಷರತ್ತೊಂದನ್ನು ತಿದ್ದುಪಡಿಯ ಮೂಲಕ ತೆಗೆದುಹಾಕಲು ಪ್ರಯತ್ನಿಸುತ್ತಿದ್ದೇವೆ ಎಂದರು.

ಹಸಿರು ಇಂಧನಕ್ಕೆ ಒತ್ತು:

ಭಾರತವು ಆಯೋಜಿಸಿರುವ ‘ಜಿ-20’ ಶೃಂಗಸಭೆಯು ಇಂಧನ ವಲಯದಲ್ಲಿ ಮಹತ್ವದ ಬದಲಾವಣೆಗಳಿಗೆ ಕಾರಣವಾಗಲಿದೆ. ಹಸಿರು ಇಂಧನದ ಬಳಕೆಗೆ ಒತ್ತು ಸಿಗಲಿದೆ. ಜಿ-20 ಇಂಧನ ಪರಿವರ್ತನೆ ಕಾರ್ಯತಂಡವು ಕೆಲ ಕ್ಷೇತ್ರಗಳಿಗೆ ಆದ್ಯತೆ ನೀಡಿದೆ. ವಿದ್ಯುತ್‌ ಉತ್ಪಾದನೆ ಮತ್ತು ಪೂರೈಕೆ ಸರಪಳಿಯಲ್ಲಿ ತಂತ್ರಜ್ಞಾನದ ಅಂತರವನ್ನು ಪರಿಹರಿಸುವ ಮೂಲಕ ಪ್ರಸ್ತುತ ಆಗುತ್ತಿರುವ ಇಂಧನ ವೆಚ್ಚವನ್ನು ಕಡಿತಗೊಳಿಸುವುದು, ಇಂಧನ ಭದ್ರತೆಯ ಖಾತ್ರಿ, ಪೂರೈಕೆ ಸರಪಳಿಗಳ ಅಂತರ ಕಡಿಮೆ ಮಾಡಲು ಕೈಗೊಳ್ಳಬೇಕಾದ ಕ್ರಮಗಳು, ಇಂಧನ ದಕ್ಷತೆ, ಕೈಗಾರಿಕೆಗಳಿಂದ ಹೊರಸೂಸುವ ಕಾರ್ಬನ್‌ ಪ್ರಮಾಣ ಕಡಿಮೆ ಮಾಡುವುದು ಸೇರಿದಂತೆ ಹಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಜತೆಗೆ ಈ ಎಲ್ಲ ಯೋಜನೆಗಳಿಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಹಣಕಾಸು ಒದಗಿಸುವ ಕುರಿತು ಕ್ರಮ ಕೈಗೊಳ್ಳುವ ಬಗ್ಗೆ ಶೃಂಗಸಭೆಯಲ್ಲಿ ಚರ್ಚೆ ನಡೆದಿದೆ ಎಂದು ತಿಳಿಸಿದರು.

ಇಂಧನ ಉತ್ಪಾದನೆಯ ಜೊತೆಗೆ ಬಳಕೆಯ ವಿಚಾರದಲ್ಲಿಯೂ ವಿವಿಧ ದೇಶಗಳು ಜವಾಬ್ದಾರಿಯುತವಾಗಿ ವರ್ತಿಸಬೇಕು. ಹಸಿರು ಇಂಧನದ ಉತ್ಪಾದನೆ, ಕೈಗೆಟಕುವ ದರದಲ್ಲಿ ಎಲ್ಲೆಡೆ ಲಭ್ಯವಾಗುವಂತೆ ಮಾಡುವುದು ಹಾಗೂ ಅಂತರ್ಗತ ಇಂಧನ ಪರಿವರ್ತನೆ ಮಾರ್ಗಗಳನ್ನು ರೂಪಿಸುವುದರ ಬಗ್ಗೆ ಶೃಂಗದಲ್ಲಿ ಚರ್ಚೆ ನಡೆದಿದೆ ಎಂದು ವಿವರಿಸಿದರು.

ಕೇಂದ್ರದ ಒತ್ತಡ, ಎಸ್ಕಾಂಗಳ ಖಾಸಗೀಕರಣಕ್ಕೆ ರಾಜ್ಯ ಸರ್ಕಾರದ ಮೊದಲ ಹೆಜ್ಜೆ?

ವಿದ್ಯುತ್‌ ಬಳಸಿ ಅಡುಗೆ

ಅಡುಗೆ ತಯಾರಿಗೆ ಎಲ್‌ಪಿಜಿಯನ್ನು ಮಧ್ಯಂತರ ಕ್ರಮವಾಗಿ ಬಳಸಿಕೊಂಡು ಹಸಿರು ವಿದ್ಯುತ್ತನ್ನು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಬಳಸುವಂತಹ ಬದಲಾವಣೆ ತರುವ ಅಗತ್ಯವಿದೆ ಎಂದು ಸಚಿವ ಆರ್‌.ಕೆ.ಸಿಂಗ್‌ ಪ್ರತಿಪಾದಿಸಿದರು. 9.6 ಕೋಟಿ ಗ್ರಾಮೀಣ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕವನ್ನು ಒದಗಿಸಿದ ಕೇಂದ್ರ ಸರ್ಕಾರ ಸಬ್ಸಿಡಿ ಕಡಿತಗೊಳಿಸಿದ ಕುರಿತು ಕೇಳಿದ ಪ್ರಶ್ನೆಗೆ, ಸದ್ಯ ಬಡವರಿಗೆ ಸಬ್ಸಿಡಿ ದೊರೆಯುತ್ತಿದೆ. ಅವಶ್ಯಬಿದ್ದರೆ ಇದನ್ನು ಹೆಚ್ಚಿಸಲಾಗುತ್ತದೆ. ಆದರೆ ಅಡುಗೆ ತಯಾರಿಗೆ ಎಲ್‌ಪಿಜಿ ಬಳಕೆ ಮಧ್ಯಂತರ ಕ್ರಮ ಅಷ್ಟೆ. ಅಂತಿಮವಾಗಿ ಹಸಿರು ಶಕ್ತಿ ಬಳಸಿ ವಿದ್ಯುತ್‌ ಅಡುಗೆ ಮಾಡುವ ಕಡೆಗೆ ಗಮನ ಹರಿಸಬೇಕಿದೆ ಎಂದರು.

click me!