ಆಸ್ತಿ ವಿವರ ಸಲ್ಲಿಸದ ಗ್ರಾ.ಪಂ ಸದಸ್ಯರನ್ನು ವಜಾಗೊಳಿಸಲು ಶೋಕಾಸ್ ನೋಟಿಸ್ ಅಗತ್ಯವಿಲ್ಲ: ಹೈಕೋರ್ಟ್

By Kannadaprabha NewsFirst Published Jul 10, 2023, 11:05 AM IST
Highlights

ನಿಗದಿತ ಸಮಯದೊಳಗೆ ಆಸ್ತಿ ವಿವರ ಸಲ್ಲಿಸದ ಗ್ರಾಮ ಪಂಚಾಯಿತಿ ಸದಸ್ಯರನ್ನು ಅನರ್ಹಗೊಳಿಸಲು ಯಾವುದೇ ಶೋಕಾಸ್‌ ನೀಡಿ ವಿವರಣೆ ಕೇಳುವ ಅಗತ್ಯವಿಲ್ಲ ಎಂದು ಹೈಕೋರ್ಟ್‌ ಆದೇಶಿಸಿದೆ.

ಬೆಂಗಳೂರು (ಜು.10): ನಿಗದಿತ ಸಮಯದೊಳಗೆ ಆಸ್ತಿ ವಿವರ ಸಲ್ಲಿಸದ ಗ್ರಾಮ ಪಂಚಾಯಿತಿ ಸದಸ್ಯರನ್ನು ಅನರ್ಹಗೊಳಿಸಲು ಯಾವುದೇ ಶೋಕಾಸ್‌ ನೀಡಿ ವಿವರಣೆ ಕೇಳುವ ಅಗತ್ಯವಿಲ್ಲ ಎಂದು ಹೈಕೋರ್ಟ್‌ ಆದೇಶಿಸಿದೆ. ಆಸ್ತಿ ವಿವರ ಸಲ್ಲಿಸದ ಕಾರಣಕ್ಕೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮೋಘಾ(ಕೆ) ಗ್ರಾ.ಪಂ ಸದಸ್ಯ ಸ್ಥಾನದಿಂದ ತಮ್ಮನ್ನು ವಜಾಗೊಳಿಸಿದ್ದ ರಾಜ್ಯ ಚುನಾವಣಾ ಆಯೋಗದ ಆದೇಶ ರದ್ದು ಕೋರಿ ಲಲಿತಾಬಾಯಿ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಕಲಬುರಗಿ ಪೀಠದಲ್ಲಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರು ಇತ್ತೀಚೆಗೆ ಈ ಆದೇಶ ಮಾಡಿದ್ದಾರೆ.

ಆಸ್ತಿ ವಿವರ ಸಲ್ಲಿಸುವುದು ಅರ್ಜಿದಾರರ ಸಾಂವಿಧಾನಿಕ ಕರ್ತವ್ಯ. ಅದನ್ನು ನಿರ್ವಹಿಸುವಲ್ಲಿ ಅವರು ವಿಫಲರಾಗಿದ್ದಾರೆ. ನಿಗದಿತ ಅವಧಿ ಮುಗಿದ ನಂತರ 10 ತಿಂಗಳು ಕಾದ ನಂತರ ಚುನಾವಣಾ ಆಯೋಗ ಅರ್ಜಿದಾರರನ್ನು ಗ್ರಾಂ.ಪಂ. ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿರುವ ಕ್ರಮ ಸರಿಯಾಗಿದೆ. ಸದಸ್ಯ ಸ್ಥಾನದಿಂದ ಅನರ್ಹಗೊಳಿಸುವ ಮುನ್ನ ಶೋಕಾಸ್‌ ನೋಟಿಸ್‌ ನೀಡಿಲ್ಲ ಅಥವಾ ವಿಚಾರಣೆ ನಡೆಸಿಲ್ಲ ಎಂಬುದು ಅರ್ಜಿದಾರರ ವಾದವಾಗಿದೆ. 

ಎಚ್‌.ಡಿ.ಕುಮಾರಸ್ವಾಮಿಗೆ ಒಕ್ಕಲಿಗರು ಬೆಳೆಯೋದು ಇಷ್ಟವಿಲ್ಲ: ಸ​ಚಿವ ಚ​ಲು​ವ​ರಾ​ಯ​ಸ್ವಾಮಿ

ಆದರೆ, ನಿಗದಿತ ಸಮಯದೊಳಗೆ ಆಸ್ತಿ ವಿವರ ಸಲ್ಲಿಸದ ಗ್ರಾ.ಪಂ. ಸದಸ್ಯರನ್ನು ಅನರ್ಹಗೊಳಿಸುವ ಮುನ್ನ ಶೋಕಾಸ್‌ ನೋಟಿಸ್‌ ನೀಡಿ, ಅವರ ವಾದ ಕೇಳುವ ಅಗತ್ಯವೇ ಇಲ್ಲ. ಆಸ್ತಿ ವಿವರ ಸಲ್ಲಿಕೆಯಲ್ಲಿ ವಿಳಂಬವಾಗಿರುವುದಕ್ಕೆ ನೀಡಿರುವ ಕಾರಣ ಅಥವಾ ಸಲ್ಲಿಸಿದ ಆಸ್ತಿ ವಿವರದಲ್ಲಿ ತಪ್ಪುಗಳು ಕಂಡು ಬಂದಿದ್ದರೆ ಅದಕ್ಕೆ ನೋಟಿಸ್‌ ನೀಡಿದ ಬಳಿಕ ಅವರ ವಿವರಣೆ ಕೇಳಬಹುದಾಗಿದೆ ಎಂದು ತಿಳಿಸಿದ ಹೈಕೋರ್ಟ್‌, ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರರು ಮೋಘಾ(ಕೆ) ಗ್ರಾಮ ಪಂಚಾಯಿತಿಗೆ 2020ರ ಡಿ.22ರಂದು ನಡೆದ ಚುನಾವಣೆಯಲ್ಲಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಕಾಯ್ದೆ-1992ರ ಸೆಕ್ಷನ್‌ 43ಬಿ(1) ಅಡಿಯಲ್ಲಿ ನಿಗದಿತ ಅವಧಿಯೊಳಗೆ ಆಸ್ತಿ ವಿವರವನ್ನು ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಲಲಿತಾಬಾಯಿ ಅವರನ್ನು ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿ 2022ರ ಫೆ.14ರಂದು ರಾಜ್ಯ ಚುನಾವಣಾ ಆಯೋಗ ಆದೇಶಿಸಿತ್ತು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಅರ್ಜಿದಾರರು, ಸದಸ್ಯ ಸ್ಥಾನದಿಂದ ಅನರ್ಹಗೊಳಿಸುವ ಮುನ್ನ ಶೋಕಾಸ್‌ ನೋಟಿಸ್‌ ನೀಡಿಲ್ಲ ಅಥವಾ ವಿಚಾರಣೆ ನಡೆಸಿಲ್ಲ. ಹಾಗಾಗಿ, ಚುನಾವಣಾ ಆಯೋಗದ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದರು.

ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಜಗಳ: ಯುವಬ್ರಿಗೇಡ್ ಕಾರ್ಯಕರ್ತನ ಕೊಲೆ

ಈ ವಾದವನ್ನು ತಿರಸ್ಕರಿಸಿರುವ ಹೈಕೋರ್ಟ್‌, ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಕಾಯ್ದೆ-1992ರ ಸೆಕ್ಷನ್‌ 43ಬಿ(1)ರ ಹೇಳುವ ಪ್ರಕಾರ ಯಾವುದೇ ಗ್ರಾಮ ಪಂಚಾಯಿತಿ ಸದಸ್ಯರು ಚುನಾಯಿತರಾದ ದಿನಾಂಕ ಅಥವಾ ಅಧಿಕಾರ ವಹಿಸಿಕೊಂಡ ದಿನದಿಂದ ಮೂರು ತಿಂಗಳ ಒಳಗೆ ರಾಜ್ಯ ಚುನಾವಣಾ ಆಯೋಗ ನಿಗದಿಪಡಿಸಿರುವ ನಮೂನೆಯಲ್ಲಿ ಸಂಬಂಧಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೂಲಕ ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸುವುದು ಕಡ್ಡಾಯ. ಆದರೆ, ಈ ನಿಯಮವನ್ನು ಅರ್ಜಿದಾರರು ಪಾಲನೆ ಮಾಡಿಲ್ಲ. ಆದ್ದರಿಂದ ಚುನಾವಣಾ ಆಯೋಗದ ಆದೇಶದಲ್ಲಿ ಯಾವುದೇ ಲೋಪವಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಿದೆ.

click me!