ಕುರಿ ಸತ್ತರೆ ಪರಿಹಾರ ನೀಡುವ ಯೋಜನೆಗೀಗ ಹಣವೇ ಇಲ್ಲ..!

Published : Sep 03, 2023, 07:31 AM IST
ಕುರಿ ಸತ್ತರೆ ಪರಿಹಾರ ನೀಡುವ ಯೋಜನೆಗೀಗ ಹಣವೇ ಇಲ್ಲ..!

ಸಾರಾಂಶ

2013-14ನೇ ಸಾಲಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಆಸಕ್ತಿ ವಹಿಸಿ ಅನುಗ್ರಹ ಕೊಡುಗೆ ಹೆಸರಲ್ಲಿ ಯೋಜನೆ ಜಾರಿಗೊಳಿಸಿದ್ದರು. ಕುರಿ ಇಲ್ಲವೇ ಮೇಕೆ ಸತ್ತರೆ ಐದು ಸಾವಿರ, ಕುರಿ ಮರಿಗಳು ಸತ್ತರೆ 3500 ರುಪಾಯಿ ಪರಿಹಾರ ರೂಪದ ನೆರವನ್ನು ಕುರಿಗಾಹಿಗಳಿಗೆ ನೀಡಲಾಗುತ್ತಿತ್ತು. 2021-22ನೇ ಸಾಲಿನವರೆಗೆ ‘ಅನುಗ್ರಹ’ ಆತಂಕವಿಲ್ಲದೆ ಮುಂದುವರಿದಿತ್ತಾದರೂ 2022-2023ನೇ ಸಾಲಿನಿಂದ ಅನುದಾನದ ಕೊರತೆ ಎದುರಿಸುತ್ತಿದೆ.

ಚಿಕ್ಕಪ್ಪನಹಳ್ಳಿ ಷಣ್ಮುಖ

ಚಿತ್ರದುರ್ಗ(ಸೆ.03): ಕುರಿ ಹಾಗೂ ಮೇಕೆ ಸಾಕಣೆ ಉತ್ತೇಜಿಸುವ ಸಲುವಾಗಿ ರಾಜ್ಯ ಸರ್ಕಾರ ಜಾರಿಗೆ ತಂದ ‘ಅನುಗ್ರಹ’ ಯೋಜನೆಗೆ ಈಗ ದುಡ್ಡೇ ಇಲ್ಲದಂತಾಗಿದೆ. ಕಳೆದೊಂದು ವರ್ಷದಿಂದ ಬಿಡಿಗಾಸೂ ಕೊಡದ ಕಾರಣ ಕುರಿಗಾಹಿಗಳು ಕುರಿ ಹಾಗೂ ಉಣ್ಣೆ ಅಭಿವೃದ್ಧಿ ನಿಗಮದ ಕಚೇರಿಗೆ ಎಡತಾಕಿ ವಾಪಸಾಗುತ್ತಿದ್ದಾರೆ. ರಾಜ್ಯದ 31 ಜಿಲ್ಲೆಗಳಿಂದ ಬರೊಬ್ಬರಿ 50.34 ಕೋಟಿ ಕುರಿಗಾಹಿಗಳಿಗೆ ಸಂದಾಯವಾಗಬೇಕಿದೆ.

ಏನಿದು ಯೋಜನೆ?:

ರೋಗದಿಂದ ಅಥವಾ ನೈಸರ್ಗಿಕ ವಿಕೋಪಗಳಿಗೆ ತುತ್ತಾಗಿ ಕುರಿ ಸತ್ತಾಗ ಕುರಿಗಾಹಿಗಳ ನೆರವಿಗೆ ಸರ್ಕಾರ ಧಾವಿಸುವ ಮಹತ್ವದ ಯೋಜನೆಯಿದು. 2013-14ನೇ ಸಾಲಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಆಸಕ್ತಿ ವಹಿಸಿ ಅನುಗ್ರಹ ಕೊಡುಗೆ ಹೆಸರಲ್ಲಿ ಯೋಜನೆ ಜಾರಿಗೊಳಿಸಿದ್ದರು. ಕುರಿ ಇಲ್ಲವೇ ಮೇಕೆ ಸತ್ತರೆ ಐದು ಸಾವಿರ, ಕುರಿ ಮರಿಗಳು ಸತ್ತರೆ 3500 ರುಪಾಯಿ ಪರಿಹಾರ ರೂಪದ ನೆರವನ್ನು ಕುರಿಗಾಹಿಗಳಿಗೆ ನೀಡಲಾಗುತ್ತಿತ್ತು. 2021-22ನೇ ಸಾಲಿನವರೆಗೆ ‘ಅನುಗ್ರಹ’ ಆತಂಕವಿಲ್ಲದೆ ಮುಂದುವರಿದಿತ್ತಾದರೂ 2022-2023ನೇ ಸಾಲಿನಿಂದ ಅನುದಾನದ ಕೊರತೆ ಎದುರಿಸುತ್ತಿದೆ.

ವಿಜಯಪುರ: ಭೂಮಿಯ ಫಲವತ್ತತೆ ಹೆಚ್ಚಿಸುವ ಕುರಿ ಹಿಕ್ಕಿ ಗೊಬ್ಬರಕ್ಕೆ ಭಾರೀ ಬೇಡಿಕೆ..!

ರಾಜ್ಯದ 31 ಜಿಲ್ಲೆಗಳಿಂದ 85,217 ಕುರಿಗಾಹಿಗಳಿಗೆ 50.34 ಕೋಟಿ ರುಪಾಯಿ ಅನುಗ್ರಹ ಮೊತ್ತ ಸಂದಾಯ ವಾಗಬೇಕಿದೆ. ಕಳೆದ ವರ್ಷ 96,442 ಕುರಿ ಹಾಗೂ 5,835 ಕುರಿ ಮರಿಗಳು ಅಸುನೀಗಿವೆ. ಅನುಗ್ರಹ ಮೊತ್ತದಲ್ಲಿ ಸಿಂಹಪಾಲು ಕೊಪ್ಪಳ ಜಿಲ್ಲೆಗೆ ನೀಡಬೇಕಾಗಿದೆ. 15,616 ಮಂದಿ ಫಲಾನುಭವಿ ಕುರಿಗಾಹಿಗಳಿಗೆ 8.35 ಕೋಟಿ ರು, ನಂತರ ಚಿಕ್ಕಬಳ್ಳಾಪುರ ಜಿಲ್ಲೆಗೆ 4 ಕೋಟಿ, ಗದಗ 3.76, ಕೋಲಾರ 3.67 ಕೋಟಿ ಹಾಗೂ ವಿಜಯನಗರ ಜಿಲ್ಲೆಯ ಕುರಿಗಾಹಿಗಳಿಗೆ 2.94 ಕೋಟಿ ರು. ಅನುಗ್ರಹ ಮೊತ್ತ ಪಾವತಿಸಬೇಕಿದೆ. ಉಳಿದಂತೆ ಇತರೆ ಜಿಲ್ಲೆಗಳ ಗುರಿಗಾಹಿಗಳ ಮೊತ್ತ ಎರಡು ಕೋಟಿ ಒಳಗಿದೆ. ಕೊಡಗು ಜಿಲ್ಲೆಯಲ್ಲಿ ಯಾವೊಂದು ಕುರಿಯೂ ಸತ್ತಿಲ್ಲ.

ಶಹಾಪುರ ತಾಲೂಕಿನಾದ್ಯಂತ ಭಾರೀ ಮಳೆ: ಸಿಡಿಲು ಬಡಿದು 19 ಕುರಿಗಳು ಬಲಿ!

ಜಿಪಿಎಸ್‌ ಆಧಾರದಲ್ಲಿ ನಿರ್ಧಾರ: ಕುರಿ ಸತ್ತಾಗ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸುವ ಕುರಿಗಾಹಿಗಳು ಅವರ ಸಮ್ಮುಖದಲ್ಲಿಯೇ ಮಹಜರು ನಡೆಸುತ್ತಾರೆ. ನಂತರ ಸತ್ತ ಕುರಿ ಛಾಯಾಚಿತ್ರದ ಜೊತೆ ಕುರಿಗಾಹಿಯ ಜಿಪಿಎಸ್‌ ತೆಗೆದುಕೊಂಡು ಅಪ್ಲೋಡ್‌ ಮಾಡಲಾಗುತ್ತದೆ. ಇದಾದ ಬಳಿಕವೇ ಕುರಿಗಾಹಿ ಖಾತೆಗೆ(ಡಿಬಿಟಿ ಮೂಲಕ) ಅನುಗ್ರಹ ಮೊತ್ತ ವರ್ಗಾವಣೆ ಮಾಡಲಾಗುತ್ತದೆ.

ಅನುಗ್ರಹ ಯೋಜನೆಯಡಿ ನನಗೆ 15 ಸಾವಿರ ರು. ಬರಬೇಕಿದೆ. ಈ ಮೊದಲು ಆಯಾ ಕಾಲಕ್ಕೆ ಪರಿಹಾರ ಬಿಡುಗಡೆಯಾಗುತ್ತಿತ್ತು. ಕಳೆದ ಒಂದು ವರ್ಷದಿಂದ ಪರಿ​ಹಾರ ನೀಡಿಲ್ಲ. ಗ್ಯಾರಂಟಿ ಯೋಜನೆಗಳ ನಡುವೆ ಸಿದ್ದರಾಮಯ್ಯ ಕುರಿಗಾಹಿಗಳ ನೋವು ಮರೆಯಬಾರದು ಎಂದು ಹಿರಿಯೂರು ತಾಲೂಕು ಓಣಿಹಟ್ಟಿ ಕುರಿಗಾಹಿ ಬಲರಾಮ ತಿಳಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕರ್ನಾಟಕದ ಎರಡು ಜಿಲ್ಲೆಗಳಲ್ಲಿ ಹೊಸ ಫುಡ್ ಪಾರ್ಕ್ ಭಾಗ್ಯ: ಕೃಷಿ ಉತ್ಪನ್ನಗಳ ಸಂಸ್ಕರಣೆಗೆ ಸಿಗಲಿದೆ ಬೂಸ್ಟ್!
ಬೆಂಗಳೂರು ನಿವಾಸಿಗೆ ಶಾಕ್ ಕೊಟ್ಟ ಬಾಡಿಗೆ, 1BHK ಮನೆಗೆ ತಿಂಗಳಿಗೆ 32 ಸಾವಿರ ರೂ