
ಮೂಲ್ಕಿ (ಸೆ.23): ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭವ್ಯವಾಗಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ಮೆರುಗು ಹೆಚ್ಚಿಸಲು ನಿಡ್ಡೋಡಿಯ ವಿನೇಶ್ ಪೂಜಾರಿ ಅವರು ಅಭಿವೃದ್ಧಿ ಪಡಿಸಿದ ನಾಗ ಲಿಂಗ ಗಿಡಗಳು ಕೊರಿಯರ್ ಮೂಲಕ ರವಾನೆಯಾಗಿವೆ. ಗಿಡಗಳು ಅಯೋಧ್ಯೆ ರಾಮ ಮಂದಿರದ ಆಡಳಿತ ಮಂಡಳಿಗೆ ದೊರಕಿದ್ದು, ಅಧಿಕಾರಿಗಳಿಂದ ದೂರವಾಣಿ ಮೂಲಕ ಪ್ರಶಂಸೆ ಬಂದಿದೆ. ಜೊತೆಗೆ ನಾಗಲಿಂಗ ಗಿಡವನ್ನು ನೂತನ ರಾಮ ಮಂದಿರದ ಬದಿಯಲ್ಲಿ ನೆಡುವುದಾಗಿ ತಿಳಿಸಿದ್ದಾರೆ.
ಕಿನ್ನಿಗೋಳಿ ಸಮೀಪದ ನಿಡ್ಡೋಡಿಯಲ್ಲಿ ವಿನೇಶ್ ಪೂಜಾರಿ(Vinesh poojary) ವೃಕ್ಷ ಪ್ರೇಮಿ. ವಿವಿಧ ರೀತಿಯ ಗಿಡಗಳ ಬೀಜಗಳು ಹಾಗೂ ಗಿಡಗಳನ್ನು ತಂದು ತಮ್ಮ ಜಾಗದಲ್ಲಿ ಪೋಷಿಸಿ ಅವಶ್ಯಕತೆಯಿರುವವರಿಗೆ ನೀಡುತ್ತಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಅವಿಭಜಿತ ದ.ಕ. ಜಿಲ್ಲೆಯ ಹಲವಾರು ದೇವಸ್ಥಾನಗಳ ವಠಾರದಲ್ಲಿ ಗಿಡಗಳನ್ನು ನೆಡುವ ಕಾರ್ಯ ಮಾಡುತ್ತಿದ್ದಾರೆ.
ಅಯೋಧ್ಯೆ: ಜ.22ಕ್ಕೆ ಪ್ರಧಾನಿ ನರೇಂದ್ರ ಮೋದಿ ಹೊಸ ರಾಮಮಂದಿರ ಉದ್ಘಾಟನೆ ಸಾಧ್ಯತೆ!
ಹಲವಾರು ಜಾತಿಯ ಗಿಡಗಳು ಅವರಲ್ಲಿದ್ದು ದಕ್ಷಿಣ ಅಮೇರಿಕಾದಲ್ಲಿ ಬೆಳೆಯುವಂತಹ ನಾಗಲಿಂಗ ವೃಕ್ಷದ (Cannonball tree) ಬೀಜವನ್ನು ಮಂಗಳೂರಿನಿಂದ ತಂದು ಅವರು ಗಿಡಗಳನ್ನು ಅಭಿವೃದ್ಧಿ ಪಡಿಸಿದ್ದರು. ನಾಗಲಿಂಗ ವೃಕ್ಷವು ನಾಗಲಿಂಗದ ರೀತಿಯ ಹೂವು ಬಿಡುವ ದೊಡ್ಡ ವೃಕ್ಷವಾಗಿದ್ದು ಅಯೋಧ್ಯೆಯಲ್ಲಿ ನೆಡಬೇಕೆಂಬ ಆಶಯವನ್ನು ಅವರು ಹೊಂದಿದ್ದರು. ಈ ಬಗ್ಗೆ ಅಂತರ್ಜಾಲ ಸಹಾಯದಿಂದ ಅಯೋಧ್ಯ ದೇವಸ್ಥಾನ ಆಡಳಿತ ಮಂಡಳಿಯನ್ನು ಅವರು ಸಂಪರ್ಕಿಸಿದಾಗ, ಅಯೋಧ್ಯೆಯಿಂದ ಗಿಡಗಳನ್ನು ಕಳುಹಿಸಲು ಸೂಚನೆ ಬಂದಿತ್ತು.
ಅದರಂತೆ ಸೆ. 5 ರಂದು 5 ಗಿಡಗಳನ್ನು ಕೊರಿಯರ್ ಮೂಲಕ ಕಳುಹಿಸಿದ್ದರು. ಕೆಲವು ದಿನಗಳ ಬಳಿಕ ಅಲ್ಲಿನ ಅಧಿಕಾರಿಗಳಿಂದ ದೂರವಾಣಿ ಕರೆ ಬಂದಿದ್ದು ಗಿಡ ಸಿಕ್ಕಿದ್ದು ಗಿಡವನ್ನು ಆಯೋಧ್ಯೆಯ ರಾಮ ಮಂದಿರದ ಬದಿಯಲ್ಲಿ ನೆಡುವುದಾಗಿ ಹಾಗೂ ಬಳಿಕ ಚಿತ್ರವನ್ನು ಕಳುಹಿಸುವುದಾಗಿ ತಿಳಿಸಿದ್ದಾರೆ. ವಿನೇಶ್ ಈವರೆಗೆ ಸುಮಾರು 3000 ಕ್ಕೂ ಮಿಕ್ಕಿ ನಾಗಲಿಂಗ ವೃಕ್ಷ ಗಿಡಗಳನ್ನು ಉಚಿತವಾಗಿ ಹಂಚಿದ್ದಾರೆ.
ರಾಮಾಯಣದಲ್ಲಿ ಹನುಮಂತನಂತೆ, ಈಗ ಮೋದಿ ದೇಶಕ್ಕಾಗಿ ತ್ಯಾಗ ಮಾಡ್ತಿದ್ದಾರೆ: ಯೋಗಿ ಆದಿತ್ಯನಾಥ
ಕಳೆದ ಕೆಲವು ಸಮಯಗಳಿಂದ ನಾಗಲಿಂಗ ವೃಕ್ಷವನ್ನು ಬೆಳೆಸಿ ಕರ್ನಾಟಕದ ಶಿವಮೊಗ್ಗ, ಕೋಲಾರ, ರಾಯಚೂರು ಸೇರಿದಂತೆ ಹಲವಾರು ಜಿಲ್ಲೆಗಳಿಗೆ ಉಚಿತವಾಗಿ ನೀಡಿದ್ದೇನೆ. ಅಯೋಧ್ಯೆಯಲ್ಲಿ ಗಿಡ ನೆಡುವ ಉದ್ದೇಶ ಹೊಂದಿದ್ದು ಈ ಬಗ್ಗೆ ಇಂಟರ್ ನೆಟ್ ಮೂಲಕ ಸಂಪರ್ಕಿಸಿದಾಗ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಕಳುಹಿಸಲು ತಿಳಿಸಿದ್ದರು. ಅದರಂತೆ ಕೊರಿಯರ್ ಮೂಲಕ ಕಳುಹಿಸಿದ್ದು ಗಿಡಗಳು ತಲುಪಿದ ಬಳಿಕ ಅಧಿಕಾರಿಗಳು ದೂರವಾಣಿ ಮೂಲಕ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.-ವಿನೇಶ್ ಪೂಜಾರಿ, ವೃಕ್ಷಪ್ರೇಮಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ