
ಚುನಾವಣೆ ಸಮಯದಲ್ಲಿ ಜನರಿಗೆ ನೀಡಿದ್ದ ಗ್ಯಾರೆಂಟಿ ಭರವಸೆಯಿಂದ ಇದಾಗಲೇ ಸರ್ಕಾರಕ್ಕೆ ಸಾಕಷ್ಟು ಸಂಕಷ್ಟ ಎದುರಾಗಿರುವುದು ತಿಳಿದಿರುವ ವಿಷಯವೇ. ಇದರ ಬೆನ್ನಲ್ಲೇ ಬೆಲೆ ಏರಿಕೆಯ ಬಿಸಿಯೂ ಜನಸಾಮಾನ್ಯರಿಗೆ ತಟ್ಟಿದೆ. ಮನೆಬಳಕೆಯ ವಿದ್ಯುತ್ ಉಚಿತವಾಗಿ ಕೊಟ್ಟರೆ, ವರ್ಷದಿಂದಲೇ, ವಾಣಿಜ್ಯ ಬಳಕೆಯ ವಿದ್ಯುತ್ ಬಿಲ್ ಕಟ್ಟುತ್ತಿರುವವರ ಸ್ಥಿತಿ ಅಯೋಮಯವಾಗಿದೆ. ಮಹಿಳೆಯರಿಗೆ ಇತ್ತ ಉಚಿತ ಬಸ್ ಸೌಲಭ್ಯ ನೀಡುತ್ತಿದ್ದರೆ, ಬೇರೆ ಬೇರೆ ಊರುಗಳಿಗೆ ಬಸ್ನಲ್ಲಿ ಪ್ರಯಾಣಿಸುವವರು ಡಬಲ್ ರೇಟ್ ತೆರುವ ಸ್ಥಿತಿ ನಿರ್ಮಾಣವಾಗಿದೆ. ಹಲವಾರು ರೂಟ್ಗಳಲ್ಲಿ ಇದ್ದ ರಾಜಹಂಸ ಬಸ್ಗಳನ್ನು ರದ್ದುಮಾಡಿ, ಎಲ್ಲವನ್ನೂ ಸ್ಲೀಪರ್ ಕೋಚ್ ಮಾಡಿ ಟಿಕೆಟ್ಗೆ ದುಪ್ಪಟ್ಟು ದರ ನಿಗದಿ ಮಾಡಲಾಗಿದೆ. ಖಾಸಗಿ ಬಸ್ಗಳ ದರಕ್ಕಿಂತಲೂ ಹೆಚ್ಚಾಗಿದೆ ಕೆಎಸ್ಆರ್ಟಿಸಿ ಬಸ್ ದರ. ಇನ್ನೊಂದೆಡೆ, ಸಂಬಳ ಸರಿಯಾಗಿ ಸಿಗುತ್ತಿಲ್ಲ ಎಂದು ಕೆಲವು ಸಂಸ್ಥೆಗಳ ಉದ್ಯೋಗಿಗಳು ಪ್ರತಿಭಟನೆಯನ್ನೂ ಮಾಡುತ್ತಿದ್ದಾರೆ. ಜೊತೆಗೆ ನೀರಿನ ಬಿಲ್, ತೆರಿಗೆ ಇವೆಲ್ಲವೂ ಹೆಚ್ಚಾಗಿದ್ದು, ಇನ್ನು ದರ ಏರುತ್ತಲೇ ಇದೆ. ಇವೆಲ್ಲವುಗಳ ನಡುವೆಯೇ, ಭಾರಿ ಶಾಕಿಂಗ್ ವಿಷಯವೊಂದನ್ನು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿ ಮಾಡಿದೆ.
ಈ ವರದಿಯ ಪ್ರಕಾರ, ರಾಜ್ಯದಲ್ಲಿ 40 ಸರ್ಕಾರಿ ಕಂಪೆನಿಗಳು ದಿವಾಳಿಯಾಗಿವೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ರಾಜೀವ್ ಗಾಂಧಿ ವಸತಿ ನಿಗಮ, ಮೈಸೂರು ಪೇಪರ್ ಮಿಲ್ಸ್ ಲಿಮಿಟೆಡ್, ಕೆಎಸ್ಆರ್ಟಿಸಿ, ಎನ್ಡಬ್ಲ್ಯೂಕೆಆರ್ಟಿಸಿ, ಕೆಕೆಆರ್ಟಿಸಿ ಸೇರಿದಂತೆ 40 ಕಂಪೆನಿಗಳು ಈ ಲಿಸ್ಟ್ಗೆ ಸೇರಿರುವುದಾಗಿ ಸಿಎಜಿ ವರದಿ ಹೇಳಿದೆ. ಈ ಪೈಕಿ ಬಿಎಂಟಿಸಿ, ಬೆಸ್ಕಾಂ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಬಂಡವಾಳ ನಷ್ಟಕ್ಕೀಡಾದ 40 ಸಾರ್ವಜನಿಕ ವಲಯದ ಉದ್ಯಮಗಳಲ್ಲಿ 2023 ರ ಮಾರ್ಚ್ ಅಂತ್ಯದ ವೇಳೆಗೆ ರಾಜ್ಯಕ್ಕೆ ಈ ಸ್ಥಿತಿ ಬರಲು ಆರಂಭವಾಗಿರುವುದಾಗಿ ವರದಿ ಉಲ್ಲೇಖಿಸಿದೆ. ಈ ಕುರಿತು ಸಿಎಜಿ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ. 127 ಸಾರ್ವಜನಿಕ ವಲಯದ ಉದ್ಯಮಗಳಲ್ಲಿ 60 ಕಂಪನಿಗಳು 46,814.47 ಕೋಟಿ ರೂ.ಗಳು ಒಟ್ಟು ನಷ್ಟವನ್ನು ಹೊಂದಿವೆ.
ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: 1 ಕೋಟಿ ಮಂದಿಗೆ 66 ಸಾವಿರ ಸಂಬಳದ ಜೊತೆ ಟ್ರೇನಿಂಗ್! ಕೂಡಲೇ ಅರ್ಜಿ ಸಲ್ಲಿಸಿ...
127 ಸರ್ಕಾರಿ ವಲಯದ ಉದ್ದಿಮೆಗಳಿಗಳಿಂದ 46 ಸಾವಿರ 800 ಕೋಟಿ ರೂಪಾಯಿ ಸಾಲವಿದೆ. ಬಿಎಂಟಿಸಿ ಮತ್ತು ಬೆಸ್ಕಾಮ್ ಸೇರಿದಂತೆ ನಲವತ್ತು ಸಾರ್ವಜನಿಕ ವಲಯದ ಉದ್ಯಮಗಳು (PSE) 33,992.96 ಕೋಟಿ ರೂ.ಗಳ ಸಂಗ್ರಹವಾದ ನಷ್ಟದಿಂದಾಗಿ ಅವುಗಳ ನಿವ್ವಳ ಮೌಲ್ಯವು ಸಂಪೂರ್ಣವಾಗಿ ಕುಸಿತ ಕಂಡಿದೆ. 2022-23ರಲ್ಲಿ 57 ಸಾರ್ವಜನಿಕ ವಲಯದ ಸಂಸ್ಥೆಗಳು 3,132.14 ಕೋಟಿ ರೂಪಾಯಿ ಲಾಭ ಗಳಿಸಿವೆ ಎಂದು ವರದಿ ಹೇಳಿದೆ. ಇಷ್ಟೇ ಅಲ್ಲದೇ 2018-19 ಅವಧಿಯಲ್ಲಿ ಅಂದರೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದ ಸಮಯದಲ್ಲಿ, ಹಾಗೂ 2022-23ರ ಅವಧಿಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಸಮಯದಲ್ಲಿ ಕಿಯೋನಿಕ್ಸ್ ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಇತರ ಸಂಸ್ಥೆಗಳಿಗೆ 1,544.50 ಕೋಟಿ ರೂ. ಮೌಲ್ಯದ ಉಪಕರಣಗಳ ಪೂರೈಕೆಯಲ್ಲಿ ಭಾರಿ ಅವ್ಯವಹಾರ ನಡೆಸಿರುವುದಾಗಿ ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಿಯೋನಿಕ್ಸ್ ಕಂಪೆನಿಯು ಕಾನೂನು ಉಲ್ಲಂಘಿಸಿ ಮತ್ತು ಕಂಪೆನಿಯ ಆದೇಶಕ್ಕೆ ವಿರುದ್ಧವಾಗಿ RO ಪ್ಯೂರಿಫೈಯರ್ಗಳು, ಚಪಾತಿ ತಯಾರಕರು, ಚಿಲ್ಲರ್ಗಳು ಮತ್ತು ತೊಳೆಯುವ ಯಂತ್ರಗಳಂತಹ ಐಟಿ ಅಲ್ಲದ ಉಪಕರಣಗಳನ್ನು ಖರೀದಿಸಿದೆ ಎಂದು ವರದಿ ಉಲ್ಲೇಖಿಸಿದೆ.
ಈಗಾಗಲೇ ನಷ್ಟ ಅನುಭವಿಸುತ್ತಿರುವ ಸರ್ಕಾರಿ ಕಂಪೆನಿಗಳ ವ್ಯವಹಾರ ಮಾದರಿಗಳನ್ನು ಮೌಲ್ಯಮಾಪನ ಮಾಡಿ ಅವುಗಳ ಆರ್ಥಿಕ ನಷ್ಟಕ್ಕೆ ಮೂಲ ಕಾರಣವನ್ನು ಪರಿಹರಿಸಬೇಕಾಗಿದೆ. ಒಂದು ವೇಳೆ ವ್ಯವಹಾರವು ಸರಿಯಾಗಿ ನಡೆಯದೇ ಹೋದರೆ, ಅದು ಸುಸ್ಥಿರವಾಗಿಲ್ಲದಿದ್ದರೆ, ಸರ್ಕಾರವು ಅಂತಹ ಕಂಪೆನಿಗಳನ್ನು ಮುಚ್ಚುವ ಅವಶ್ಯಕತೆ ಇದೆ ಎಂದು ವರದಿ ತಿಳಿಸಿದೆ.
1.50 ಲಕ್ಷ ಐಟಿ ಉದ್ಯೋಗಿಗಳ ಕೆಲಸಕ್ಕೆ ಕತ್ತರಿ, ಬೆಂಗಳೂರಲ್ಲೇ 50 ಸಾವಿರ! ಯಾವ ಕಂಪೆನಿ ಎಷ್ಟು? ಡಿಟೇಲ್ಸ್ ಇಲ್ಲಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ