
ಬೆಂಗಳೂರು (ಜೂ.30): ಆರು ತಿಂಗಳ ಹಿಂದೆ ಹೆಣ್ಣೂರು ಕ್ರಾಸ್ ಬಳಿ ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಸಾವು ಪ್ರಕರಣ ಸಂಬಂಧ ಬೆಂಗಳೂರು ಮೆಟ್ರೋ ರೈಲ್ವೆ ನಿಗಮದ (ಬಿಎಂಆರ್ಸಿಎಲ್) ಮುಖ್ಯ ಎಂಜಿನಿಯರ್ ಹಾಗೂ ನಾಗಾರ್ಜುನ್ ಕನ್ಸ್ಟ್ರಕ್ಷನ್ ಕಂಪನಿ (ಎನ್ಸಿಸಿ) ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ 11 ಮಂದಿ ವಿರುದ್ಧ ನಗರದ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಗೋವಿಂದಪುರ ಠಾಣೆ ಪೊಲೀಸರು ಸಲ್ಲಿಸಿದ್ದಾರೆ.
ಪ್ರಕರಣದ ಬಗ್ಗೆ ತನಿಖೆ ಪೂರ್ಣಗೊಳಿಸಿದ್ದ ಪೊಲೀಸರು, ನಗರದ 11ನೇ ಎಸಿಎಂಎಂ ನ್ಯಾಯಾಲಯಕ್ಕೆ 1,100 ಪುಟಗಳ ಆರೋಪ ಪಟ್ಟಿಯನ್ನು ಬುಧವಾರ ಸಲ್ಲಿಸಿದ್ದಾರೆ. ಈ ದುರಂತಕ್ಕೆ ಪಿಲ್ಲರ್ ಸುರಕ್ಷತೆ ಬಗ್ಗೆ ನಿರ್ಲಕ್ಷ್ಯತನ ಕಾರಣವಾಗಿದೆ ಎಂದು ಪೊಲೀಸರು ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.
ರ್ಯಾಂಪ್ ವಾಕ್ ವೇಳೆ ನಡೆದ ದುರಂತಕ್ಕೆ ಮಾಡೆಲ್ ಸಾವು
ಈ ಪ್ರಕರಣ ಸಂಬಂಧ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ, ಹೈದರಾಬಾದ್ನ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ತಜ್ಞರ ವರದಿಗಳನ್ನು ಕೂಡಾ ಲಗತ್ತಿಸಲಾಗಿದೆ. ಆದರೆ ಈ ಪ್ರಕರಣದಲ್ಲಿ ಆರೋಪಿತ ಯಾರನ್ನೂ ಬಂಧಿಸದೆ ಪೊಲೀಸರು ತನಿಖೆ ಮುಕ್ತಾಯಗೊಳಿಸಿದ್ದಾರೆ.
ಜ.10ರಂದು ಹೆಣ್ಣೂರು ಕ್ರಾಸ್ ಬಳಿ ಮೆಟ್ರೋ ಪಿಲ್ಲರ್ ಕುಸಿದು ಬೈಕ್ನಲ್ಲಿ ತೆರಳುತ್ತಿದ್ದ ಖಾಸಗಿ ಕಂಪನಿ ಉದ್ಯೋಗಿ ತೇಜಸ್ವಿನಿ ಇಲಾಕೆ (28) ಹಾಗೂ ಅವರ ಎರಡೂವರೆ ವರ್ಷದ ಮಗ ವಿಹಾನ್ ಮೃತಪಟ್ಟಿದ್ದರು. ಈ ಘಟನೆಯಲ್ಲಿ ಮೃತ ತೇಜಸ್ವಿನಿ ಪತಿ ಹಾಗೂ ಅವರ ಮಗಳು ಪಾರಾಗಿದ್ದರು. ಈ ಸಂಬಂಧ ಮೃತರ ಪತಿ ದೂರು ಆಧರಿಸಿ ಬಿಎಂಆರ್ಸಿಎಲ್ ಹಾಗೂ ನಾಗಾರ್ಜುನ್ ಕನ್ಸ್ಟ್ರಕ್ಷನ್ ಕಂಪನಿ (ಎನ್ಸಿಸಿ) 11 ಅಧಿಕಾರಿಗಳ ವಿರುದ್ಧ ಗೋವಿಂದಪುರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಪಿಲ್ಲರ್ ಸುರಕ್ಷತೆಗೆ ಉದಾಸೀನತೆ
ಹೆಣ್ಣೂರು ಕ್ರಾಸ್ ಸಮೀಪದ 15.658 ಮೀಟರ್ ಉದ್ದದ ಮೆಟ್ರೋ ಪಿಲ್ಲರ್ ಕುಸಿತಕ್ಕೆ ಸುರಕ್ಷತೆ ವಿಚಾರದಲ್ಲಿ ಎನ್ಸಿಸಿ ಹಾಗೂ ಬಿಎಂಆರ್ಸಿಎಲ್ ಅಧಿಕಾರಿಗಳ ನಿರ್ಲಕ್ಷ್ಯತನ ಪ್ರಮುಖ ಕಾರಣವಾಗಿದೆ. ಪಿಲ್ಲರ್ ನಿರ್ಮಾಣದ ಕಾಮಗಾರಿ ಗುಣಮಟ್ಟದಿಂದ ಕೂಡಿದೆ. ಕಳಪೆ ಕಾಮಗಾರಿ ನಡೆದಿಲ್ಲ ಎಂದು ಐಐಟಿ ತಜ್ಞರು ಸಹ ಸ್ಪಷ್ಟಪಡಿಸಿದ್ದಾರೆ. ಆದರೆ ಪಿಲ್ಲರ್ ಕಟ್ಟಿದ ಬಳಿಕ ಅದರ ಸುರಕ್ಷತೆ ಬಗ್ಗೆ ಅಧಿಕಾರಿಗಳು ಉದಾಸೀನತೆ ತೋರಿದ ಪರಿಣಾಮ ಕುಸಿದಿದೆ ಎಂದು ಆರೋಪ ಪಟ್ಟಿಯಲ್ಲಿ ತನಿಖಾಧಿಕಾರಿ ಉಲ್ಲೇಖಿಸಿರುವುದಾಗಿ ಮೂಲಗಳು ಹೇಳಿವೆ.
Bengaluru: ಪೀಣ್ಯ ಮೇಲ್ಸೇತುವೆಗೆ ವಾರದಲ್ಲಿ ಕೇಬಲ್ ಬದಲಾವಣೆ ಕಾರ್ಯ ಶುರು
ಆರೋಪಿಗಳ ವಿವರ ಹೀಗಿದೆ
1.ಎನ್ಸಿಸಿ (ನಾಗಾರ್ಜುನ್ ಕನ್ಸ್ಟ್ರಕ್ಷನ್ ಕಂಪನಿ) ವ್ಯವಸ್ಥಾಪಕ ನಿರ್ದೇಶಕರ ಹೆಸರು ಉಲ್ಲೇಖಿಸಿಲ್ಲ
2.ಎನ್ಸಿಸಿ ಪ್ರಾಜೆಕ್ಟ್ ಮ್ಯಾನೇಜರ್ ವಿಕಾಸ್ ಕುಮಾರ್ ಸಿಂಗ್
3.ಎನ್ಸಿಸಿ ಸಿನಿಯರ್ ಪ್ರಾಜೆಕ್ಟ್ ಮ್ಯಾನೇಜರ್ ಎ.ಮಥಾಯ್
4.ಎನ್ಸಿಸಿ ಕಿರಿಯ ಎಂಜಿನಿಯರ್ ಪ್ರಭಾಕರ ಮಲಿ
5.ಎನ್ಸಿಸಿ ಸೇಫ್ಟಿಸೂಪರ್ವೈಸರ್ ಭರತೇಶ್ ಶೆಟ್ಟಿಗೇರ್
6.ಎನ್ಸಿಸಿ ಸೈಟ್ ಮ್ಯಾನೇಜರ್ ಕೆ.ಲಕ್ಷ್ಮಪತಿ ರಾಜು
7.ಬೆಂಗಳೂರು ಮೆಟ್ರೋ ರೈಲ್ವೆ ನಿಗಮ (ಬಿಎಂಆರ್ಸಿಎಲ್)ದ ಮುಖ್ಯ ಎಂಜಿನಿಯರ್ ಸಿ.ಎಂ.ರಂಗನಾಥ್
8.ಬಿಎಂಆರ್ಸಿಎಲ್ ಉಪ ಮುಖ್ಯ ಎಂಜಿನಿಯರ್ ಡಿ.ವೆಂಕಟೇಶ್ ಶೆಟ್ಟಿ
9.ಬಿಎಂಆರ್ಸಿಎಲ್ ಕಾರ್ಯನಿರ್ವಾಹಕ ಎಂಜಿನಿಯರ್ ಸಿ.ಎಸ್.ಮಹೇಶ್
10.ಬಿಎಂಆರ್ಸಿಎಲ್ ಸೆಕ್ಷನ್ ಎಂಜಿನಿಯರ್ ಜಾಫರ್ ಸಿದ್ದಿಕಿ
11.ಬಿಎಂಆರ್ಸಿಎಲ್ ಕಿರಿಯ ಎಂಜಿನಿಯರ್ ಜೀವನ್ ಕುಮಾರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ