ಹಿಂದಿ ದಿವಸ್ ವಿರುದ್ಧ ಕರವೇ ಪ್ರತಿಭಟನೆ: 'ಕರಾಳ ದಿನ' ಆಚರಣೆಗೆ ಕರೆ

By Sathish Kumar KHFirst Published Sep 12, 2024, 6:38 PM IST
Highlights

ಸೆಪ್ಟೆಂಬರ್ 14 ರಂದು ಹಿಂದಿ ದಿವಸ್ ಆಚರಣೆಯನ್ನು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕರಾಳ ದಿನವನ್ನಾಗಿ ಆಚರಿಸಲು ನಿರ್ಧರಿಸಿದೆ. ಕರವೇ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ಅವರು ಹಿಂದಿ ಹೇರಿಕೆಯನ್ನು ವಿರೋಧಿಸಿ, ಭಾರತದಲ್ಲಿನ ಭಾಷಾ ವೈವಿಧ್ಯತೆಯನ್ನು ಎತ್ತಿ ಹಿಡಿದರು.

ಬೆಂಗಳೂರು (ಸೆ.12): ಭಾರತದಲ್ಲಿ ಸೆ.14ರಂದು ಹಿಂದಿ ಸಪ್ತಾಹ ಮತ್ತು ಹಿಂದಿ ದಿವಸ್ ಎಂದು ಕೇಂದ್ರ ಸಚರ್ಕಾರದ ಕಚೇರಿಗಳಲ್ಲಿ ಆಯೋಜನೆ ಮಾಡಲಾಗುತ್ತದೆ. ಆದರೆ ದೇಶದಲ್ಲಿ 22 ಅಂಗೀಕೃತ ಭಾಷೆಗಳಲ್ಲಿ ಒಂದು ಭಾಷೆಯಾಗಿರುವ ಹಿಂದಿಯನ್ನು ಹೇರಿಕೆ ಮಾಡುವಕ್ಕೆಂದೇ ಹಿಂದಿ ದಿವಸ್ ಆಚರಣೆ ಮಾಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹಿಂದಿ ದಿವಸ್ ಅನ್ನು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ವತಿಯಿಂದ ಕರಾಳ ದಿನವನ್ನಾಗಿ ಆಚರಣೆ ಮಾಡಲಾಗುವುದು ಎಂದು ಕರವೇ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ಹೇಳಿದ್ದಾರೆ.

ಭಾರತ ಎಂದಾಕ್ಷಣ ಅನೇಕ ಭಾಷೆಗಳು, ಸಾಂಸ್ಕೃತಿಕ ಹಿನ್ನೆಲೆ, ಆಚಾರ ವಿಚಾರ ಒಳಗೊಂಡಿದ್ದು, ಹಿಂದಿ ಭಾಷಿಕರ ದೇಶವಲ್ಲ. ಕನ್ನಡಿಗರ ಮೇಲೆ, ತಮಿಳರು, ಮಲೆಯಾಳಿಗಳು, ತೆಲುಗು ಭಾಷಿಕರ ಮೇಲೆ ಉತ್ತರ ಭಾರತದ ಕೆಲವೇ ರಾಜ್ಯಗಳಲ್ಲಿ ಮಾತನಾಡುವ ಹಿಂದಿ ಭಾಷೆಯನ್ನು ಬಲವಂತವಾಗಿ ನಮ್ಮ ಮೇಲೆ ಹೇರಿಕೆ ಮಾಡುವ ಮೂಲಕ ದಬ್ಬಾಳಿಕೆ ಮಾಡುವುದನ್ನು ನಾವ್ಯಾಕೆ ಇದನ್ನು ಸಹಿಸಿಕೊಳ್ಳಬೇಕು. ಕೇವಲ 650 ವರ್ಷಗಳ ಹಿಂದೆ ಹುಟ್ಟಿಕೊಂಡ ಹಿಂದಿ ಭಾಷೆಯನ್ನು ಇಷ್ಟೊಂದು ವೈಭವೀಕರಿಸುವುದಾದರೆ, ಯಾಕೆ 2000 ವರ್ಷಗಳ ಇತಿಹಾಸವಿರುವ ಕನ್ನಡವನ್ನು ಯಾಕೆ ವೈಭವೀಕರಿಸಬಾರದು ಎಂದು ಕಿಡಿಕಾರಿದರು.

Latest Videos

ಜೈಲಿನಲ್ಲಿದ್ದರೂ ಕರಗಲಿಲ್ಲ ಕೊಬ್ಬು: ಮೀಡಿಯಾಗಳಿಗೆ ಮಿಡಲ್ ಫಿಂಗರ್ ತೋರಿಸಿದ ದರ್ಶನ್

ಕೇವಲ ಹಿಂದೆ ಭಾಷೆಯ ಆಚರಣೆಯನ್ನು ನಮ್ಮ ತೆರಿಗೆ ಹಣದಲ್ಲಿ ಆಚರಣೆ ಮಾಡುವ ಅಗತ್ಯವಾದರೂ ಏನಿದೆ. ನಮ್ಮ ಒಕ್ಕೂಟದ ಭಾರತದಲ್ಲಿ ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ, ತೆಲಂಗಾಣ, ಮಹಾರಾಷ್ಟ್ರ, ಕೇರಳ ಇಲ್ಲವೇ..? ಕೇವಲ ಹಿಂದಿ ರಾಜ್ಯಗಳು ಮಾತ್ರ ಭಾರತದ ಒಕ್ಕೂಟದಲ್ಲಿವೆಯೇ? ಎಂದು ಪ್ರಶ್ನೆ ಮಾಡಿದರು. ನಮ್ಮ ಮೇಲೆ ಪ್ರತಿ ಹಂತದಲ್ಲಿಯೂ ಕೇಂದ್ರದ ಉದ್ದಿಮೆಗಳಲ್ಲಿ ಹಿಂದಿ ಪರೀಕ್ಷೆ ಬರೆಯಲು ನೀಡುವ ಮೂಲಕ ಹಿಂದಿ ಹೇರಿಕೆ ಮಾಡಲಾಗುತ್ತಿದೆ. ಹಿಂದಿ ಬಾರದವರು ಕೇಂದ್ರ ನೌಕರಿಗಳನ್ನು ಪಡೆಯದೇ ದೇಶದಲ್ಲಿ 3ನೇ ದರ್ಜೆಗೆ ತಳ್ಳಲಾಗುತ್ತದೆ. ಎಲ್ಲ ಕೇಂದ್ರ ಸರ್ಕಾರದ ಉದ್ಯಮಗಳಲ್ಲಿ ಆಯಾ ಸ್ಥಳೀಯ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆಗಳನ್ನು ಬರೆಯಲು ಅವಕಾಶ ನಿಡಬೇಕು ಎಂದು ಆಗ್ರಹಿಸಿದರು.

ಕತ್ತೆ ಕಾಯ್ತಿದ್ರಾ ಪೊಲೀಸರು?: ಕಾಂಗ್ರೆಸ್ ಸರ್ಕಾರ ಸರ್ವನಾಶವಾಗುತ್ತೆ ಎಂದಿದ್ಯಾಕೆ ಆರ್.ಅಶೋಕ್

ಕೇಂದ್ರ ಸರ್ಕಾರದಿಂದ ಆಚರಣೆ ಮಾಡುವುದಾದರೆ ಅದನ್ನು ಕರ್ನಾಟಕ ರಕ್ಷಣಾ ವೇದಿಕೆಯಿಂದ ಅದನ್ನು ಕರಾಳ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸೆ.14ರಂದು ಫ್ರೀಡಂ ಪಾರ್ಕ್‌ನಲ್ಲಿ ಹಿಂದಿ ದಿವಸ್ ವಿರೋಧಿಸಿ ಕರಾಳ ದಿನವನ್ನಾಗಿ ಆಚರಣೆ ಮಾಡಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಎಲ್ಲ ಕನ್ನಡಿಗರೂ ಕೂಡ ಫ್ರೀಡಂ ಪಾರ್ಕ್‌ಗೆ ಬಂದು ಆಗಮಿಸಿ ಹಿಂದಿ ವಿರೋಧಿ ದಿನಾಚರಣೆಗೆ ಬೆಂಬಲ ನೀಡಬೇಕು ಎಂದು ಕರವೇ ಅಧ್ಯಕ್ಷ ಟಿ.ಎಮ ನಾರಾಯಣಗೌಡ ಕರೆ ನೀಡಿದ್ದಾರೆ.

click me!