
ಬೆಂಗಳೂರು (ಆ.22): ನಗರದಿಂದ ಕೆಂಪೇಗೌಡ ವಿಮಾನ ನಿಲ್ದಾಣ ತಲುಪಲು ಟ್ರಾಫಿಕ್ ಸಮಸ್ಯೆಯಿಂದ ಬೇಸತ್ತಿದ್ದ ಪ್ರಯಾಣಿಕರಿಗೆ ಶೀಘ್ರ ಸಿಹಿ ಸುದ್ದಿ ನೀಡಲು ನಮ್ಮ ಮೆಟ್ರೋ ಶ್ರಮಿಸುತ್ತಿದ್ದು, ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಂಡರೆ ಮುಂದಿನ ವರ್ಷದಿಂದ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಚಾರ ಆರಂಭವಾಗಲಿದೆ.
ಈಗಾಗಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಮೆಟ್ರೊ ನಡುವೆ ಬ್ಲೂ ಲೇನ್ ಮಾರ್ಗದ ನಿರ್ಮಾಣ ಕಾಮಗಾರಿ ಶೇ.75ರಷ್ಟು ಪೂರ್ಣಗೊಂಡಿದ್ದು, ಉಳಿದ ಕಾಮಗಾರಿ ಪೂರ್ಣಗೊಳಿಸಲು ವಿಮಾನ ನಿಲ್ದಾಣ ಪ್ರಾಧಿಕಾರದ ಜೊತೆ ಮೆಟ್ರೋ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧಿಕಾರಿಗಳ ತಂಡ ಸುಮಾರು ಒಂದೂವರೆ ಗಂಟೆ ಸಭೆ ನಡೆಸಿ ಚರ್ಚಿಸಿದ್ದಾರೆ. ಈ ಸಭೆಯಲ್ಲಿ ಕಾಮಗಾರಿ ವಿಳಂಬವಾಗಲು ಕಾರಣಗಳು, ಪರಿಹಾರಗಳನ್ನು ಚರ್ಚಿಸಿ ಕೆಳ ಹಂತದ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ.
ಏರ್ಪೋರ್ಟ್ ಮಾರ್ಗ ಉದ್ಘಾಟನೆಯಾದರೆ, ಎಂಜಿ ರಸ್ತೆಯಿಂದ ವಿಮಾನನಿಲ್ದಾಣಕ್ಕೆ ಕೇವಲ 45 ನಿಮಿಷದ ಪ್ರಯಾಣ. ಸೆಂಟ್ರಲ್ ಸಿಲ್ಕ್ ಬೋರ್ಡ್, ಎಚ್.ಎಸ್.ಆರ್ ಲೇ ಔಟ್, ಮಾರತಹಳ್ಳಿ, ಇಬ್ಬಲೂರು ಕೆ.ಆರ್.ಪುರಂ, ನಾಗವಾರ, ಹೆಬ್ಬಾಳ ನಂತರ ಏರ್ ಪೋರ್ಟ್ ಮಾರ್ಗಗಳಿಗಾಗಿ ಎರಡು ಹಂತದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ಒಳಭಾಗದಲ್ಲಿ (ಕಾರ್ಗೋ ಬಳಿ ಒಂದು, ಟರ್ಮಿನಲ್ 2ಬಳಿ ಮತ್ತೊಂದು ನಿಲ್ದಾಣ) ಎರಡು ಮೆಟ್ರೋ ನಿಲ್ದಾಣಗಳು ನಿರ್ಮಾಣವಾಗಲಿವೆ. ಇವುಗಳಿಗೆ ಸಿಸಿಟಿವಿ ಅಳವಡಿಕೆ, ನಿರ್ವಹಣೆ, ಚೆಕ್ ಇನ್, ಚೆಕ್ ಔಟ್ ಕೆಲಸಗಳಿಗೆ ಬೇಕಾದ ಎಲ್ಲಾ ಕಟ್ಟಡಗಳ ನಿರ್ಮಾಣ ಜವಾಬ್ದಾರಿಯನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಸಂಸ್ಥೆ ವಹಿಸಿಕೊಂಡಿದೆ. ಇವುಗಳಿಗೆ ಹಳಿ ನಿರ್ಮಾಣ, ಸಿಗ್ನಲ್, ಕಮ್ಯುನಿಕೇಷನ್ ಕೆಲಸ ಮಾತ್ರ ಮೆಟ್ರೋ ಜವಾಬ್ದಾರಿಯಾಗಿದೆ. ವಿಮಾನ ನಿಲ್ದಾಣದ ಹೊರಗಿನ ನಿಲ್ದಾಣಗಳ ನಿರ್ಮಾಣ ಕಾಮಗಾರಿ ಸೇರಿದಂತೆ ಎಲ್ಲಾ ಕೆಲಸ ಮೆಟ್ರೋ ವಹಿಸಿಕೊಂಡಿದೆ. ಈ ಎಲ್ಲಾ ಕಾಮಗಾರಿಗಳಿಗೆ ಅಗತ್ಯವಿರುವ ಉಪಕರಣ ಪೂರೈಸಿ, ತ್ವರಿತವಾಗಿ ಕಾಮಗಾರಿ ಮುಗಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಮೆಟ್ರೋ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಿ.ಸಿ.ಜಾಫರ್ ಕನ್ನಡಪ್ರಭಕ್ಕೆ ತಿಳಿಸಿದರು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಹರಿ ಮಾರರ್ ಹಾಗೂ ಅವರ ಅಧಿಕಾರಿಗಳ ತಂಡ ಹಾಗೂ ಮೆಟ್ರೋ ಸಂಸ್ಥೆಯ ಅಧಿಕಾರಿಗಳ ತಂಡ ಸಭೆಯಲ್ಲಿ ಪಾಲ್ಗೊಂಡಿದ್ದರಿಂದ ಈ ಸಭೆ ಮಹತ್ವವಾಗಿದ್ದು, ಕೆಳಹಂತದಲ್ಲಿ ಇಂತಹ ಸಾಮಾನ್ಯ ವಿಷಯಗಳ ಕುರಿತು ಸಮಸ್ಯೆಯಾದರೂ ಹಿರಿಯ ಅಧಿಕಾರಿಗಳ ಹಂತದಲ್ಲಿ ತಕ್ಷಣ ಬಗೆಹರಿಸಲು ಸುಲಭವಾಗಿದೆ ಎನ್ನಲಾಗಿದೆ.
ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸೂಚಿಸಿ ಮೂರು ತಿಂಗಳ ಒಳಗೆ ಕಾಮಗಾರಿ ಮುಗಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಡಿಸೆಂಬರ್ ಮೊದಲ ವಾರದಲ್ಲಿ ಇಬ್ಬರು ವ್ಯವಸ್ಥಾಪಕ ನಿರ್ದೇಶಕರು ಸಭೆ ಸೇರಿ ಈ ಸಭೆಯಲ್ಲಿ ಕೈಗೊಂಡ ತೀರ್ಮಾನಗಳ ಪ್ರಗತಿ ಪರಿಶೀಲಿಸುತ್ತೇವೆ. ಅಂದುಕೊಂಡಂತೆ ಎಲ್ಲಾ ಮುಗಿದರೆ ಮುಂದಿನ ವರ್ಷ ಟ್ರಯಲ್ ಆರಂಭಿಸಬಹುದು ಎಂದು ಎಂಡಿ ಜಾಫರ್ ತಿಳಿಸಿದರು.
ಈಗ ಪ್ರಮುಖವಾಗಿ ಯಲಹಂಕ ರೈಲ್ವೆ ಕ್ರಾಸಿಂಗ್ ಸೇರಿ ಎರಡು ಸ್ಥಳಗಳಲ್ಲಿ ಕಾಮಗಾರಿ ನಡೆಯಬೇಕು. ಕೆ.ಆರ್.ಪುರಂ ಮತ್ತು ಕೇಂದ್ರ ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಸಿವಿಲ್ ಕೆಲಸ ಮುಗಿದಿದೆ. ಕೆ.ಆರ್.ಪುರಂ ಹಾಗೂ ಹೆಬ್ಬಾಳ ಮಧ್ಯೆ, ಟ್ರಾಫಿಕ್ ಸಮಸ್ಯೆ ಹೆಚ್ಚಿರುವುದರಿಂದ ಇಲ್ಲಿ ಸ್ವಲ್ಪ ಕಾಮಗಾರಿ ವಿಳಂಬವಾಗುತ್ತಿದೆ ಎಂದು ತಿಳಿಸಿದರು. ಏರ್ ಪೋರ್ಟ್ ಮಾರ್ಗ (ಬ್ಲೂ ಲೇನ್) ಹಾಗೂ (ಪಿಂಕ್ ಲೇನ್) ಕಾಳೇನ ಅಗ್ರಹಾರದಿಂದ ನಾಗವಾರ ಮಾರ್ಗದ ನಡುವೆ ಸಂಚಾರ ಆರಂಭವಾದರೆ ಎಂಜಿ ರಸ್ತೆಯಿಂದ ಏರ್ ಪೋರ್ಟ್ ಗೆ ಹೋಗುವುದು ಸುಲಭವಾಗುತ್ತದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ