
ಮೈಸೂರು, (ಅ.10): ದಸರಾ ಹಬ್ಬದ ಸಂಭ್ರಮ ಪಡುವಾಗಲೇ ಮೈಸೂರಿನ ಅರಮನೆ ಎದುರಲ್ಲೇ ಒಂದೇ ದಿನ ಅಂತರದಲ್ಲಿ ನಡೆದ ಕೊಲೆ ಮತ್ತು ಅಪ್ರಾಪ್ತ ಬಾಲಕಿಯ ಅತ್ಯಾ೧ಚಾರ-ಕೊಲೆಯಂತಹ ಘಟನೆಗಳು ನಡೆದಿರುವುದು ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಎರಡು ಭಯಾನಕ ಘಟನೆಗಳಿಂದ ಸಾರ್ವಜನಿಕರಲ್ಲಿ ಆಕ್ರೋಶ ಮತ್ತು ದಿಗ್ಭ್ರಮೆಯನ್ನು ಹುಟ್ಟಿಸಿವೆ. ಅಲ್ಲದೇ ರಾಜ್ಯ ಸರ್ಕಾರದಲ್ಲಿನ ಕಾನೂನು ವ್ಯವಸ್ಥೆಯ ಕೊರತೆಯನ್ನು ಬಹಿರಂಗಪಡಿಸಿವೆ. ಈ ಸಂದರ್ಭದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ನಾಯಕರನ್ನು ಕಟುವಾಗಿ ಟೀಕಿಸಿದ್ದಾರೆ.
ವಸ್ತುಪ್ರದರ್ಶನ ಆವರಣದಲ್ಲಿ ನಡೆದ ವೆಂಕಟೇಶ್ ಕೊಲೆಯ ನಂತರ ಮರುದಿನವೇ ಪೋಷಕರ ಪಕ್ಕ ಮಲಗಿದ್ದ ಸಣ್ಣ ಬಾಲಕಿಯ ಮೇಲೆ ಅತ್ಯಾ೧ಚಾರ ಮತ್ತು ಕೊಲೆ ನಡೆದಿದೆ. ಮೈಸೂರು ಪ್ರಜ್ಞಾವಂತರ ಊರು ಎಂದು ಹೇಳುತ್ತಾರೆ, ಆದರೆ ಇಂತಹ ಘಟನೆಗಳು ನಡೆಯುತ್ತಿರುವುದನ್ನು ನೋಡಿ ಜನರು ದಿಗ್ಭ್ರಮೆಗೊಂಡಿದ್ದಾರೆ. ಕಾರ್ತಿಕ್ ಸಹಚರ ವೆಂಕಟೇಶ್ ಕೊಲೆ ನಂತರ ಸರ್ಕಾರ ಎಚ್ಚರ ವಹಿಸಬೇಕಿತ್ತು. ಆದರೆ ಡ್ರಗ್ಸ್ ಫ್ಯಾಕ್ಟರಿಯನ್ನು ಸೀಜ್ ಮಾಡಿದ ನಂತರವೂ ಈ ಘಟನೆಗಳ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಪ್ರತಾಪ್ ಸಿಂಹ ಆರೋಪಿಸಿದ್ದಾರೆ.
ಇದನ್ನೂ ಓದಿ: ಮೈಸೂರು: ಬಲೂನ್ ವ್ಯಾಪಾರಕ್ಕೆ ಬಂದಿದ್ದ ಹಕ್ಕಿಪಿಕ್ಕಿ ಜನಾಂಗದ 10 ವರ್ಷದ ಬಾಲಕಿ ಶವ ಪತ್ತೆ! ರೇಪ್ ಅಂಡ್ ಮರ್ಡರ್ ಶಂಕೆ!
ಪಾಸ್ ಅವ್ಯವಸ್ಥೆಯಲ್ಲಿ ಪೊಲೀಸರ ತಪ್ಪಿಲ್ಲ:
ದಸರಾ ಹಬ್ಬದಲ್ಲಿ ಪಾಸ್ ವ್ಯವಸ್ಥೆಯಲ್ಲಿ ಗೊಂದಲ ಸೃಷ್ಟಿಯಾಗಿ, ಪೊಲೀಸರ ಮೇಲೆ ಜನರು ಆಕ್ರೋಶ ಹೊರಹಾಕಿದ್ದರು. ಪೊಲೀಸರಿಗೆ ಜನರು ಬೈದರು, ಆದರೆ ಇದರಲ್ಲಿ ಪೊಲೀಸರ ತಪ್ಪಿಲ್ಲ. ಪಾಸ್ ಹೆಚ್ಚಿಗೆ ಪ್ರಿಂಟ್ ಮಾಡಿದ್ದು ಯಾರು? ಈ ಸರ್ಕಾರದಲ್ಲಿ ಪೊಲೀಸ್ ಇಲಾಖೆ ಹೀನಾಯ ಸ್ಥಿತಿಗೆ ತಲುಪಿದೆ. ಎಲ್ಲೆಡೆ ಇಸ್ಪೀಟ್ ದಂಧೆ, ಡ್ರಗ್ಸ್ ಮಾಫಿಯಾ ನಡೆಯುತ್ತಿದ್ದು, ಪೊಲೀಸರನ್ನು ರಾಜಕಾರಣಿಗಳು ತಡೆಯುತ್ತಿದ್ದಾರೆ. ಎಂಎಲ್ಸಿಗಳು, ಮಂತ್ರಿಗಳ ಮನೆ ಮುಂದೆ ಪೊಲೀಸರು ನಿಂತುಕೊಳ್ಳುವ ಹೀನಾಯ ಸ್ಥಿತಿ ಬಂದಿದೆ. ಪೊಲೀಸರನ್ನು ನಾನು ಬ್ಲೇಮ್ ಮಾಡಲ್ಲ. ಘಟನೆ ಆದ 24 ಗಂಟೆಗಳಲ್ಲಿ ಆರೋಪಿಯನ್ನ ಬಂಧಿಸಿದ್ದಾರೆ. ಆದರೆ ಈ ಸರ್ಕಾರದಲ್ಲಿ ಪೊಲೀಸರ ಸ್ಥಿತಿ ಹೇಗಿದೆ ಅಂದ್ರೆ ಇವರ ಪ್ರೋಟೋಕಾಲ್ ಫಾಲೋ ಮಾಡೋದೇ ಆಗಿದೆ. ಮೈಲಾರಿ ದೋಸೆ, ಕಾಫಿ, ಟೀ ಕುಡಿಯೋಕೆ ಹೋದ್ರೆ ಅಲ್ಲಿ ಪೊಲೀಸರು ಇರಬೇಕು. ಪೊಲೀಸ್ ಇಲಾಖೆಗೆ ಫ್ರೀ ಹ್ಯಾಂಡ್ ಕೊಡಿ. ಪೊಲೀಸರನ್ನು ನಿಮ್ಮ ಪ್ರೋಟೋ ಕಾಲ್ ಫಾಲೋ ಮಾಡಲು ಇಟ್ಟುಕೊಳ್ಳಬೇಡಿ ಎಂದು ಕಿಡಿಕಾರಿದರು.
ಇದನ್ನೂ ಓದಿ: ಅರಮನೆ ಮೈದಾನ ಎದುರಲ್ಲೇ ಭೀಕರ ಕೊಲೆ; ಹಾಡಹಗಲೇ ಕಾರು ಅಡ್ಡಗಟ್ಟಿ, ಖಾರದಪುಡಿ ಎರಚಿ ಹತ್ಯೆ!
ಈ ಸರ್ಕಾರದ ಕೂಗುಮಾರಿಗಳೀಗ ಸೈಲೆಂಟ್:
ಈ ಸರ್ಕಾರದಲ್ಲಿ ಕೆಲವು ಕೂಗು ಮಾರಿಗಳಿದ್ದಾರೆ. ದೇಶದಲ್ಲಿ ಏನೇ ನಡೆದ್ರೂ ಬಾಯಿ ಬಡಿದುಕೊಳ್ಳುತ್ತಾರೆ. ದೇಶದಲ್ಲಿ ಏನೇ ನಡೆದ್ರು ಮೊದಲು ಕೇಂದ್ರದ ವಿರುದ್ಧ ಬಾಯಿತೆಗೆಯುತ್ತಾರೆ. ಆದ್ರೆ ಮೈಸೂರಿನಲ್ಲಿ ಚಿಕ್ಕ ಮಗುವಿನ ಮೇಲೆ ರೇಪ್ ಅಂಡ್ ಮರ್ಡರ್ ಆಯ್ತು. ಸಂತೋಷ್ ಲಾಡ್, ಸಿದ್ದರಾಮಯ್ಯ, ಡಿಕೆಶಿ, ಪ್ರಿಯಾಂಕ್ ಖರ್ಗೆ ಇವರಲ್ಲಿ ಯಾರಾದರೊಬ್ಬರು ಮಾತನಾಡಿದ್ದಾರಾ? ಈ ಹತ್ಯೆ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ದಸರಾ ಸಂದರ್ಭದಲ್ಲೇ ಈ ರೀತಿ ಎರಡೆರಡು ಹತ್ಯೆ ನಡೆಯುತ್ತಂದ್ರೆ ಈ ಸರ್ಕಾರದಲ್ಲಿ ಕಾನೂನು ವ್ಯವಸ್ಥೆ ಹೇಗಿದೆ? ಹಿಂದೆಂದೂ ಈ ರೀತಿ ಹಾಡಹಗಲೇ ಕೊಲೆ ನಡೆದಿರಲಿಲ್ಲ, ಮಕ್ಕಳ ಮೇಲೆ ಅತ್ಯಾ೧ಚಾರ ನಡೆದಿರಲಿಲ್ಲ. ಈ ಸರ್ಕಾರ ಬಂದ ನಂತರ ಕ್ರಿಮಿನಲ್ಗಳಿಗೆ, ರೌಡಿಗಳಿಗೆ ಭಯವೇ ಇಲ್ಲ. ದಸರಾದಲ್ಲಿ ವೀರಾಧಿವೀರ ಅಂತ ಕೊಚ್ಚಿಕೊಂಡು ಹೋದ್ರು. ಯಾವ ಪುರುಷಾರ್ಥಕ್ಕೆ ಈ ರಾಜ್ಯದ ಸಿಎಂ ಆಗಿದ್ದು ನೀವು ಎಂದು ಖಾರವಾಗಿ ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ