
ಮೈಸೂರು (ಅ.10): ದಸರಾ ಸಂದರ್ಭದಲ್ಲಿ ಮೈಸೂರನಲ್ಲಿ ನಡೆದ ರೇ* & ಮರ್ಡರ್ ಕೇಸ್ ಪ್ರಕರಣದ ಬಗ್ಗೆ ತೀವ್ರ ವಾಗ್ದಾಳಿ ನಡೆಸಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಸಿಎಂ ಸಿದ್ದರಾಮಯ್ಯ ವಿರುದ್ಧವೇ ಟೀಕಾಪ್ರಹಾರ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೇ ನಿಮಗೆ ಹೆಣ್ಣುಮಕ್ಕಳಿಲ್ಲ. ಆದರೆ, ರಾಜ್ಯದ ಬೇರೆ ಹೆಣ್ಮಕ್ಕಳ ಬಗ್ಗೆ ಕಾಳಜಿ ವಹಿಸಿ ಎಂದು ಮನವಿ ಮಾಡಿದ್ದಾರೆ. ಮೈಸೂರಿನಲ್ಲಿ ಇಂಥ ಅಮಾನುಷ ಕೃತ್ಯ ಆಗಿದ್ದರೂ, ಸಿಎಂ ಸ್ಥಾನದಲ್ಲಿರುವ ವ್ಯಕ್ತಿ ಕನಿಷ್ಠ ಒಂದು ಪ್ರತಿಕ್ರಿಯೆ ನೀಡಿಲ್ಲ ಅಂದ್ರೆ ಏನರ್ಥ?. ನಿಮಗೆ ಹೆಣ್ಣು ಮಕ್ಕಳು ಇಲ್ಲ ಸಿಎಂ ಸಿದ್ದರಾಮಯ್ಯ ಅವ್ರೆ. ಆದರೆ, ಬೇರೆ ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ಬೇಡ್ವಾ ಸರ್ ಎಂದು ಪ್ರಶ್ನೆ ಮಾಡಿದ್ದಾರೆ.
ದಸರಾದಲ್ಲಿ ಪಾಸ್ ಅವ್ಯವಸ್ಥೆ ಆಯ್ತು. ಪೊಲೀಸರಿಗೆ ಜನ ಬೈದರು ಇದರಲ್ಲಿ ಪೊಲೀಸರ ತಪ್ಪಿಲ್ಲ. ಪಾಸ್ ಹೆಚ್ಚಿಗೆ ಪ್ರಿಂಟ್ ಮಾಡಿದ್ದು ಯಾರು? ಈ ಸರ್ಕಾರದಲ್ಲಿ ಹೀನಾಯ ಸ್ಥಿತಿಗೆ ಪೊಲೀಸ್ ಇಲಾಖೆ ತಲುಪಿದೆ. ಮೈಸೂರಿನಲ್ಲಿ ಎಲ್ಲೆಡೆ ಇಸ್ಪೀಟ್ ದಂಧೆ ನಡೆಯುತ್ತಿದೆ. ಅದನ್ನು ಹಿಡಿಯಲು ಹೋದರೆ ರಾಜಕಾರಣಿಗಳು ಬ್ರೇಕ್ ಹಾಕುತ್ತಾರೆ. ಡ್ರಗ್ಸ್ ಮಾಫಿಯಾ ನಡೀತಿದೆ. ಪೊಲೀಸರು ಏನೂ ಮಾಡಬಾರದು ಅಂತಾ ಹೇಳಿದ್ದಾರೆ ಎಂದು ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಶಾಸಕರು, ಮಂತ್ರಿಗಳ ಮನೆ ಮುಂದೆ ಪೊಲೀಸರು ನಿಂತುಕೊಳ್ಳುವ ಸ್ಥಿತಿ ಬಂದಿದೆ. ಗೃಹ ಸಚಿವರಂತೂ ಏನೂ ಮಾಡ್ತಿಲ್ಲ. ಸಿದ್ದರಾಮಯ್ಯ ಚೇರ್ ಖಾಲಿ ಮಾಡಿದ್ರೆ ನಾನು ಕೂರಬೇಕು ಅಂತ ಕಾಯ್ತಿದ್ದಾರೆ. ನಾಗಮಂಗಲ ಘಟನೆ ಆಯ್ತು ಸಣ್ಣಪುಟ್ಟ ಘಟನೆ ಅಂತ ಹೇಳಿದ್ರು. ಇಂತಹ ಗೃಹ ಮಂತ್ರಿಯಿಂದ ಏನು ನಿರೀಕ್ಷೆ ಮಾಡಲು ಸಾಧ್ಯ ಎಂದರು.
ಬಿಗ್ ಬಾಸ್ ಒಳ್ಳೆ ಕಾರ್ಯಕ್ರಮ ಅಂತ ನಾನು ಹೇಳಲ್ಲ. ಸುದೀಪ್ ಕಂಡ್ರೆ ಆಗಲ್ಲ ಅಂತ ಅದನ್ನು ಬೀಗ ಹಾಕಿಸಿದರು. ರಾಜ್ಯದಲ್ಲಿ ಏನಾಗ್ತಿದೆ ಅಂತನೇ ಗೊತ್ತಾಗ್ತಿಲ್ಲ ಎಂದು ಹೇಳುವ ಮೂಲಕ ಡಿಕೆಶಿ ವಿರುದ್ಧವೂ ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ಮಾಡಿದ್ದಾರೆ.
ಜನರ ಸುಲಿಗೆ ಬಿಟ್ಟರೆ ರಾಜ್ಯ ಸರ್ಕಾರ ಏನು ಮಾಡುತ್ತಿಲ್ಲ. ಗುಂಡಿ ಮುಚ್ಚಲು ಆಗದಂತೆ ಆಗಿದೆ. ಜನ ಅಸಹಾಯಕರಾಗಿ ತಡೆದುಕೊಂಡಿದ್ದಾರೆ. ಎರಡೂವರೆ ವರ್ಷ ಕತ್ತಲೆ ಇದೆ. ಇನ್ನು ಎರಡೂವರೆ ವರ್ಷ ಕಾಯಿರಿ. ಒಳ್ಳೆಯ ಆಡಳಿತ ಕೊಡೋಣ. 2028ಕ್ಕೆ ನಮ್ಮದೇ ಸರ್ಕಾರ ಬರತ್ತೆ. ಒಳ್ಳೆಯ ದಿನಗಳು ಬರುತ್ತವೆ. ನಾನು ರಾಜ್ಯ ರಾಜಕಾರಣಕ್ಕೆ ನಾನು ಬರೋದು ಬಿಡೋದು ಈಗ ಅಪ್ರಸ್ತುತ. ಮುಂದಿನ ದಿನಗಳಲ್ಲಿ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರೇ ನಿಮ್ಮ ಮಗನಿಗೆ ವರ್ಗಾವಣೆ ದಂಧೆ ಬಿಡು ಅಂತಾ ಹೇಳಿ. ಶಾಸಕರು ವಸೂಲಿ ದಂಧೆಗೆ ಇಳಿದಿದ್ದಾಋ. ಮೊಮ್ಮೊಗನನ್ನು ಕರೆದುಕೊಂಡು ಬಂದು ಮುಂದಿನ ಉತ್ತರಾಧಿಕಾರಿ ಎನ್ನುತ್ತಿದ್ದೀರಿ. ಬೇರೆ ಜನಗಳು ಕಾಣಿಸ್ತಿಲ್ವಾ ಸರ್? ಲಂಗು ಲಗಾಮೂ ಏನೂ ಇಲ್ವಾ ಸರ್. ನಿಮ್ಮ ಅಜೆಂಡಾ ಸಿಎಂ ಆಗಿ ಪೂರ್ಣ ಇರೋದು. ಡಿಕೆಶಿ ಅಜೆಂಡಾ ಸಿಎಂ ಆಗೋದು. ಇದು ರಾಜ್ಯದ ಪರಿಸ್ಥಿತಿ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ