
ವರದಿ : ಮಧು.ಎಂ.ಚಿನಕುರಳಿ
ಮೈಸೂರು (ನ.27): ಅಂತು ಇಂತು ಸಾಕಷ್ಟು ಚರ್ಚೆ ವಿವಾದಕ್ಕೆ ಕಾರಣವಾಗಿದ್ದ ಗುಂಬಜ್ ಮಾದರಿಯ ಬಸ್ ಶೆಲ್ಟರ್ ನಲ್ಲಿದ್ದ ಗುಂಬಜ್ ತೆರೆವು ಮಾಡಲಾಗಿದೆ. ಮೂರು ಗುಂಬಜ್ ಗಳ ಪೈಕಿ ಎರೆಡು ಚಿಕ್ಕ ಗುಂಬಜ್ ಗಳನ್ನ ತೆರೆವು ಮಾಡುವ ಮೂಲಕ ಶಾಸಕ ರಾಮದಾಸ್ ವಿವಾದಕ್ಕೆ ಬ್ರೇಕ್ ಹಾಕಿದ್ದಾರೆ. ಟ್ಚೀಟ್ ಮೂಲಕ ಸಂಸದ ಪ್ರತಾಪ ಸಿಂಹ ಶಾಸಕ ಹಾಗೂ ಜಿಲ್ಲಾಧಿಕಾರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಜೆಎಸ್ ಎಸ್ ಕಾಲೇಜು ಬಳಿ ನಿರ್ಮಾಣವಾಗಿದ್ದ ಬಸ್ ಶೆಲ್ಟರ್ ಶಾಸಕ ರಾಮದಾಸ್ ಹಾಗೂ ಸಂಸದ ಪ್ರತಾಪ ಸಿಂಹ ನಡುವೆ ಗುದ್ದಾಟಕ್ಕೆ ಕಾರಣವಾಗಿತ್ತು. ಶಾಸಕರ ಅನುದಾನದಡಿಯಲ್ಲಿ ಕೆ.ಆರ್ ಕ್ಷೇತ್ರದಲ್ಲಿ 12 ಬಸ್ ಶೆಲ್ಟರ್ ನಿರ್ಮಾಣ ಮಾಡಲು ಕೆಆರ್ಐಡಿಎಲ್ ಗೆ ಕಾಮಗಾರಿ ನೀಡಲಾಗಿತ್ತು. ಮೂಲ ನಕ್ಷೆಯ ಪ್ರಕಾರ ಕಾಮಗಾರಿ ನಡೆದಿದ್ರೆ ಯಾರಿಗೂ ತೊಂದರೆಯಾಗ್ತಿರಲಿಲ್ಲ. ಬದಲಾಗಿ ಬಸ್ ಶೆಲ್ಟರ್ ಮೇಲ್ಬಾಗದಲ್ಲಿ ಮೂರು ಗುಂಬಜ್ ಗಳನ್ನ ನಿರ್ಮಾಣ ಮಾಡಿದ್ದು ಶಾಸಕ ಹಾಗೂ ಸಂಸದ ಜಗಳಕ್ಕೆ ಕಾರಣವಾಗಿತ್ತು. ಟಿಪ್ಪು ನಿಜ ಕನಸುಗಳ ಕೃತಿ ಬಿಡುಗಡೆ ಸಮಾರಂಭ ಮಾತನಾಡಿದ ಸಂಸದ ಪ್ರತಾಪ ಸಿಂಹ ಒಂದು ದೊಡ್ಡ ಗುಂಬಜ್ ಅಕ್ಕ ಪಕ್ಕದಲ್ಲಿ ಚಿಕ್ಕ ಗುಂಬಜ್ ಗಳಿದ್ರೆ ಅದು ಮಸೀದಿನೇ. ಇದನ್ನ ತೆರೆವು ಮಾಡಬೇಕು ಇಲ್ಲವಾದ್ರೆ ನಾನೇ ಜೆಸಿಬಿ ತೆಗೆದುಕೊಂಡು ಹೋಗಿ ತೆರೆವು ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು.
ಮೈಸೂರು: ಗುಂಬಜ್ ಮಾದರಿ ಬಸ್ ಶೆಲ್ಟರ್ ವಿವಾದ ಅಂತ್ಯ, ರಾಮದಾಸ್ಗೆ ಪ್ರತಾಪ್ ಸಿಂಹ ಧನ್ಯವಾದ
ಸಂಸದರ ಹೇಳಿಕೆಗೆ ತಿರುಗೇಟು: ಸಂಸದರು ಈ ರೀತಿ ಹೇಳಿಕೆ ಕೊಡುತ್ತಿದಂತೆ ಎಚ್ಚೆತ್ತ ಶಾಸಕ ರಾಮದಾಸ್ ರಾತ್ರೋರಾತ್ರಿ ನಿರ್ಮಾಣದ ಹಂತದಲ್ಲಿದ್ದ ಬಸ್ ಶೆಲ್ಟರ್ ನಲ್ಲಿದ್ದ ಗುಂಬಜ್ ಗಳಿಗೆ ಕಳಸ ಅಳವಡಿಸಿ ಜೆಎಸ್ ಎಸ್ ಬಸ್ ನಿಲ್ದಾಣ ಎಂದು ನಾಮ ಮಾಡಿದ್ದರು. ಜೊತೆಗೆ ಸಿಎಂ, ಪಿಎಂ, ಸುತ್ತೂರು ಶ್ರೀಗಳ ಫೋಟೊ ಅಳವಡಿಸಿ ಗೋಲ್ಡನ್ ಕಲರ್ ನಲ್ಲಿದ್ದ ಗುಂಬಜ್ ಗಳಿಗೆ ರಾತ್ರೋ ರಾತ್ರಿ ಕೆಂಪು ಬಣ್ಣ ಬಳಿಸಿ ಅರಮನೆ ಮಾದರಿಯಲ್ಲಿ ಬಸ್ ಶೆಲ್ಟರ್ ನಿರ್ಮಾಣ ಮಾಡುತ್ತಿದ್ದೇವೆ ಹೊರತು ಯಾವುದೇ ಧರ್ಮದ ಆದಾರದ ಮೇಲೆ ಬಸ್ ಶೆಲ್ಟರ್ ನಿರ್ಮಾಣ ಮಾಡುತ್ತಿಲ್ಲ. ಉನ್ನತ ಮಟ್ಟದ ಸಮಿತಿ ರಚಿಸಿ ಲೋಪವಾಗಿದ್ದರೆ ನಮ್ಮ ಸಂಬಳದಲ್ಲಿ ಕಟ್ಟಿಕೊಡುತ್ತೇನೆಂದು ಸಂಸದರಿಗೆ ತಿರುಗೇಟು ನೀಡಿದ್ದರು.
ಹೆದ್ದಾರಿ ಪ್ರಾಧಿಕಾರಕ್ಕೆ ನ.22ರ ಗಡುವು: ಶಾಸಕ ರಾಮದಾಸ್ ಹೇಳಿಕೆಯಿಂದ ಕೆರಳಿ ಕೆಂಡವಾದ ಸಂಸದ ಪ್ರತಾಪ ಸಿಂಹ ರಾಷ್ಟ್ರೀಯ ಹೆದ್ದಾರಿ ಜಾಗದಲ್ಲಿ ಅನಧಿಕೃತವಾಗಿ ಬಸ್ ಶೆಲ್ಟರ್ ನಿರ್ಮಾಣ ಮಾಡಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಬಸ್ ಶೆಲ್ಟರ್ ನಿರ್ಮಿಸಲಾಗಿದೆ. ಆದರೆ ಗುಂಬಜ್ ಗಳನ್ನ ತೆರೆವು ಮಾಡಲೇಬೇಕೆಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ನ.22 ರವರೆಗೆ ಗಡುವು ನೀಡಿದ್ದರು. ವಿವಾದ ಮತ್ತಷ್ಟು ಹೆಚ್ಚಾಗುತ್ತಿದಂತೆ ಎಚ್ಚತ್ತ ಶಾಸಕ ರಾಮದಾಸ್ ನಿನ್ನೆ ರಾತ್ರಿ ಬಸ್ ಶೆಲ್ಟರ್ ನಲ್ಲಿದ್ದ ಎರೆಡು ಚಿಕ್ಕ ಗುಂಬಜ್ ಗಳನ್ನ ತೆರೆವುಗೊಳಿಸಿದ್ದಾರೆ.
Mysuru : ಗುಂಬಜ್ ವಿವಾದ - ಮುಂದುವರೆದ BJP ನಾಯಕರ ಜಟಾಪಟಿ
ವಿವಾದ ಅಂತ್ಯಗೊಳಿಸಿದ ರಾಮದಾಸ್: ಮೈಸೂರು ಅರಮನೆ ಪರಂಪರೆಗಾಗಿ ಬಸ್ ಶೆಲ್ಟರ್ ಮಾಡಲಾಗುತ್ತಿತ್ತು. ಶಾಸಕರ ಅನುದಾನದಲ್ಲಿ 12 ಬಸ್ ಶೆಲ್ಟರ್ ನಿರ್ಮಿಸಲಾಗುತ್ತಿತ್ತು. ವಿನಾಕಾರಣ ಧರ್ಮದ ಹೆಸರಿನಲ್ಲಿ ವಿವಾದ ಸೃಷ್ಟಿಸಲಾಗುತ್ತಿತ್ತು. ಇದು ಮುಂದೆ ವಿವಾದಿತ ಜಾಗ ಆಗಬರದೆಂದು ಸಾರ್ವಜನಿಕರು ಹಿರಿಯರ ಅನುಮತಿ ಪಡೆದು ಚಿಕ್ಕ ಗುಂಬಜ್ ಗಳನ್ನ ತೆರವುಗೊಳಿಸಲಾಗಿದೆ ಎಂದು ಶಾಸಕ ರಾಮದಾಸ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಇದಕ್ಕೆ ಸಂಸದ ಪ್ರತಾಪ ಸಿಂಹ ಕೂಡ ಟ್ವೀಟ್ ಮಾಡುವ ಮೂಲಕ ಶಾಸಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಒಟ್ಟಾರೆ ಆಡಳಿತ ಪಕ್ಷದ ನಾಯಕರುಗಳೇ ವಿರೋಧ ಪಕ್ಷದವರಂತೆ ಜಗಳವಾಡಿದ್ದು ಮೈಸೂರು ಜಿಲ್ಲೆಯಲ್ಲಿ ಬಿಜೆಪಿ ಪಕ್ಷಕ್ಕೆ ದೊಡ್ಡ ಹೊಡೆತ ಬಿದ್ದಿರುವುದಂತು ಸತ್ಯ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ