ಸುರಪುರ: ಕಲುಷಿತ ನೀರು ಸೇವಿಸಿ ಮತ್ತೆ 22ಕ್ಕೂ ಅಧಿಕ ಮಕ್ಕಳು ಅಸ್ವಸ್ಥ!

Published : Aug 28, 2023, 09:27 PM IST
ಸುರಪುರ: ಕಲುಷಿತ ನೀರು ಸೇವಿಸಿ ಮತ್ತೆ 22ಕ್ಕೂ ಅಧಿಕ ಮಕ್ಕಳು ಅಸ್ವಸ್ಥ!

ಸಾರಾಂಶ

ಯಾದಗಿರಿ ಜಿಲ್ಲೆಯಲ್ಲಿ ಕಲುಷಿತ ನೀರು ಸೇವನೆ ಘಟನೆಗಳು ಮೇಲಿಂದ ಮೇಲೆ ಜರುಗುತ್ತಿರುವುದು ಜನತೆಯಲ್ಲಿ ಆತಂಕದ ಛಾಯೆ ಮೂಡಿದೆ. ತಾಲೂಕಿನ ಚಿಕ್ಕಿನಹಳ್ಳಿಯಲ್ಲಿ ಕೈಪಂಪ್‌ನ ನೀರು ಸೇವನೆಯಿಂದ 22ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡ ಘಟನೆ ನಡೆದಿದೆ.

ಸುರಪುರ (ಆ.28) ಯಾದಗಿರಿ ಜಿಲ್ಲೆಯಲ್ಲಿ ಕಲುಷಿತ ನೀರು ಸೇವನೆ ಘಟನೆಗಳು ಮೇಲಿಂದ ಮೇಲೆ ಜರುಗುತ್ತಿರುವುದು ಜನತೆಯಲ್ಲಿ ಆತಂಕದ ಛಾಯೆ ಮೂಡಿದೆ. ತಾಲೂಕಿನ ಚಿಕ್ಕಿನಹಳ್ಳಿಯಲ್ಲಿ ಕೈಪಂಪ್‌ನ ನೀರು ಸೇವನೆಯಿಂದ 22ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡ ಘಟನೆ ನಡೆದಿದೆ. ಕೆಲ ದಿನಗಳ ಹಿಂದೆಯಷ್ಟೇ ಹುಣಸಗಿ ತಾಲೂಕಿನ ಮಾರಲಭಾವಿ, ಗುರುಮಠಕಲ್‌ನ ಅನಪುರ, ಶಿವಪುರ, ಗಾಜರಕೋಟ್‌, 2022ರಲ್ಲಿ ಸುರಪುರದ ಮಾಚಗುಂಡಾಳ ಕುಲಷಿತ ನೀರು ಸೇವನೆ ಅವಾಂತರ ಮಾಸುವ ಮುನ್ನವೇ ಜಿಲ್ಲೆಯ ಸುರಪುರ ತಾಲೂಕಿನ ಚಿಕ್ಕನಹಳ್ಳಿಯಲ್ಲಿ ಕಲುಷಿತ ನೀರು ಸೇವನೆಯಿಂದ 22ಕ್ಕೂ ಹೆಚ್ಚು ಮಕ್ಕಳು, ಇಬ್ಬರು ವಯಸ್ಕರು ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಎದುರಿನ ಕೈಪಂಪ್‌ ನೀರು ಸೇವನೆಯಿಂದ ಇಷ್ಟೆಲ್ಲಾ ಅವಾಂತರ ಸೃಷ್ಟಿಯಾಗಿದೆ ಎಂಬುದು ಅಧಿಕಾರಿಗಳ ಮಾತಾಗಿದೆ. ಬಂಗಾಳಿಗಳು ಭತ್ತ ನಾಟಿ ಮಾಡಲು ಬಂದು ಗ್ರಾಮದಲ್ಲಿ ವಾಸವಾಗಿದ್ದಾರೆ. ಈ ಕೈಪಂಪಿನ ಹತ್ತಿರವೇ ಬಂಗಾಳಿಗಳು ಪಾತ್ರೆ ತೊಳೆಯುತ್ತಿದ್ದರು. ಅಡುಗೆಯನ್ನು ಸಹ ಅಲ್ಲಿಯೇ ಮಾಡುತ್ತಿದ್ದರು. ಅಲ್ಲಿಯ ತ್ಯಾಜ್ಯ ನೀರು ಅಂತರ್ಜಲಕ್ಕೆ ಇಳಿದು ಕೈಪಂಪ್‌ನಿಂದ ಮತ್ತೆ ಬಂದು ಮಕ್ಕಳು ಸೇವಿಸಿದಾಗ ಅವಾಂತರಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.

ಯಾದಗಿರಿ: ಕಲುಷಿತ ನೀರು ಸೇವನೆ, 10ಕ್ಕೂ ಅಧಿಕ ಜನರು ಅಸ್ವಸ್ಥ; ಮಹಿಳೆ ಸಾವು?

ಕೆಲ ದಿನಗಳ ಹಿಂದೆ ಕೈ ಪಂಪ್‌ ಕೆಟ್ಟು ಹೋಗಿತ್ತು. ಕಚಕನೂರು ಗ್ರಾಮ ಪಂಚಾಯಿತಿ ಅವರು 15 ದಿನದ ಹಿಂದೆ ಬಂದು ದುರಸ್ತಿ ಮಾಡಿ ಕೆಲ ದಿನಗಳ ಕಾಲ ನೀರು ಬಳಸದಂತೆ ಸೂಚನೆ ನೀಡಲಾಗಿತ್ತು. ಶಾಲೆಗೆ ಇರುವ ಕೈಪಂಪ್‌ ಆದ್ದರಿಂದ ಬಿಸಿಯೂಟ ತಟ್ಟೆತೊಳೆಯಲು, ಕುಡಿಯಲು ಅದೇ ನೀರನ್ನೇ ಬಳಸಿದ್ದಾರೆ. ಇದರಿಂದ ಮಕ್ಕಳು ಮತ್ತು ವಯಸ್ಕರು ಅಸ್ವಸ್ಥಗೊಂಡಿದ್ದಾರೆ ಎಂದು ಗ್ರಾಮದ ಯಲ್ಲಪ್ಪ ಛಲುವಾದಿ ತಿಳಿಸಿದ್ದಾರೆ.

ತಾಲೂಕು ಆರೋಗ್ಯಾಧಿಕಾರಿ ಡಾ. ಆರ್‌.ವಿ. ನಾಯಕ ಮಾತನಾಡಿ, ಅಸ್ವಸ್ಥಗೊಂಡ 4 ಮಕ್ಕಳಿಗೆ ಗ್ಲುಕೋಸ್‌ ಹಚ್ಚಲಾಗಿದೆ. 18 ಮಕ್ಕಳಿಗೆ ಔಷಧ ನೀಡಿ ಚಿಕಿತ್ಸೆ ನೀಡಲಾಗಿದೆ. ಇಬ್ಬರು ವಯಸ್ಕರಿಗೆ ಗ್ಲುಕೋಸ್‌ ಹಾಕಿ ಚಿಕಿತ್ಸೆ ನೀಡಲಾಗಿದೆ. ಚಿಕ್ಕಿನಹಳ್ಳಿ ಗ್ರಾಮದಲ್ಲಿ 400 ಮನೆಗಳಿಂದ 2000 ಜನರಿದ್ದಾರೆ. ಆಶಾ ಕಾರ್ಯತಕರ್ತರು ಎಲ್ಲ ಮನೆಗಳಿಗೆ ಭೇಟಿ ನೀಡಿ ನೀರನ್ನು ಕುದಿಸಿ, ಆರಿಸಿ ಸೇವಿಸಬೇಕು. ಮನೆಯ ಸುತ್ತಮುತ್ತ ಸ್ವಚ್ಛತೆ, ಶುಭ್ರ ಬಟ್ಟೆತೊಡುವಂತೆ ಆರೋಗ್ಯ ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಬಂಗಾಳಿಗಳು ಗುಣಮುಖ:

13 ಜನ ಬಂಗಾಳಿ ಕೆಲಸಗಾರರು ವಿಷಪೂರಿತ ಆಹಾರ ಸೇವನೆ, ಮಾಡುತ್ತಿದ್ದರು. ಈ ಕೈಪಂಪಿನ ಹತ್ತಿರವೇ ಬಂಗಾಳಿಗಳು ಪಾತ್ರೆ ತೊಳೆಯುತ್ತಿದ್ದರು. ಅಡುಗೆಯನ್ನು ಸಹ ಅಲ್ಲಿಯೇ ಮಾಡುತ್ತಿದ್ದರು. ಇದರಿಂದ ನೀರು ಕಲುಷಿತಗೊಂಡಿರಬಹುದು. 13 ಜನರಿಗೆ ಚಿಕಿತ್ಸೆ ನೀಡಿ ಗುಣಮುಖರಾಗಿದ್ದಾರೆ. ಅವರಿಗೆ ಕೈ ಪಂಪಿನ ನೀರು ಸೇವನೆ ಮಾಡದಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಕನ್ನಡಪ್ರಭ ಪತ್ರಿಕೆಯೊಂದಿಗೆ ಮಾತನಾಡಿದ ತಾಲೂಕು ಪಂಚಾಯಿತಿ ಇಒ ಬಸವರಾಜ ಸಜ್ಜನ್‌, ಗ್ರಾಮದಲ್ಲಿ ಓವರ್‌ ಹೆಡ್‌ ಟ್ಯಾಂಕ್‌ ಅಥವಾ ತೆರದ ಬಾವಿ ಆಗಲಿ ಇಲ್ಲ. ಕೈ ಪಂಪ್‌ ಕೊಳವೆ ಬಾವಿಯ ನೀರನ್ನು ಬಳಸುತ್ತಾರೆ. ಮನೆಯಲ್ಲಿರುವ ವೈಯಕ್ತಿಕ ಕೊಳವೆ ಬಾವಿ ನೀರು ಸೇವನೆಯಿಂದಲೂ ವಾಂತಿಭೇದಿ ಆಗಿದೆ. ಗ್ರಾಮದಲ್ಲಿರುವ ಕೊಳವೆಬಾವಿಗಳ ನೀರನ್ನು ಸಂಗ್ರಹಿಸಿ ಆರ್‌.ಡಬ್ಲ್ಯುಎಚ್‌ ನೀರು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

ಒಂದು ವಿಷಪೂರಿತ ಆಹಾರ ಸೇವನೆಯಿಂದ 13 ಜನರು ಅಸ್ವಸ್ಥಗೊಂಡಿದ್ದಾರೆ. ನೀರು ಸೇವನೆಯಿಂದ 6 ವ್ಯಕ್ತಿಗಳಿಗೆ ವಾಂತಿ ಭೇದಿ ಆಗಿದೆ. ಇಬ್ಬರು ವಯಸ್ಕರು, ನಾಲ್ವರು ಮಕ್ಕಳಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. 18 ಮಕ್ಕಳಿಗೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಘಟಕ ಆರಂಭಿಸಲಾಗಿದೆ. 

 

ಯಾದಗಿರಿ: ಗಾಜರಕೋಟದಲ್ಲಿ ಕಲು​ಷಿತ ನೀರು ಸೇವಿ​ಸಿ 19 ಜನ ಅಸ್ವಸ್ಥ

ಚಿಕ್ಕನಹಳ್ಳಿ ಗ್ರಾಮದಲ್ಲಿರುವ ಕೈಪಂಪ್‌ನ್ನು ಸ್ಥಗಿತಗೊಳಿಸಲಾಗಿದೆ. ಕೈಪಂಪಿನ ಸುತ್ತಮುತ್ತ ಮುಳ್ಳು ಬೇಲಿಯನ್ನು ಹಾಕಲಾಗಿದೆ. ಇಲ್ಲಿರುವ ನೀರಿನ ವರದಿ ಬಂದ ಬಳಿಕ ಉಪಯೋಗಿಸಲು ಸೂಚಿಸಲಾಗುವುದು. ಅಲ್ಲಿಯ ತನಕ ಶುದ್ಧ ಕುಡಿಯುವ ನೀರನ್ನು ಮಾತ್ರ ಬಳಸಬೇಕು.

ಬಸವರಾಜ ಸಜ್ಜನ್‌, ತಾಪಂ ಇಒ

ಪೇಠಾ ಅಮ್ಮಾಪುರ ವ್ಯಾಪ್ತಿಯಲ್ಲಿ ಬರುವ ವೈದ್ಯರು, ಸ್ಟಾಪ್‌ನರ್ಸ್‌, ಸಮುದಾಯ ಆರೋಗ್ಯಾಧಿಕಾರಿಗಳು, ಕಿರಿಯ ಆರೋಗ್ಯ ಸಹಾಯಕರು ಮತ್ತು ಸಹಾಯಕಿಯರು ಸೇರಿದಂತೆ 20 ಸಿಬ್ಬಂದಿಗಳು ಮುತ್ತು ಆ್ಯಂಬುಲನ್ಸ್‌ ಸ್ಥಳದಲ್ಲೇ ಇರಿಸಲಾಗಿದೆ. ತೊಂದರೆ ಕಂಡುಬಂದಲ್ಲಿ ತಾಲೂಕು ಆಸ್ಪತ್ರೆಗೆ ತರುವಂತೆ ಸೂಚನೆ ನೀಡಿದ್ದೇನೆ.

ಡಾ.ಆರ್‌.ವಿ.ನಾಯಕ, ತಾಲೂಕು ಆರೋಗ್ಯ ಅಧಿಕಾರಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್