​ಕುಮಾರ್‌ ಬಂಗಾರಪ್ಪ ಯಾವುದೇ ಕಾರಣಕ್ಕೂ ಬಿಜೆಪಿ ಬಿಡೋದಿಲ್ಲ: ಸಂಸದ ಬಿವೈ ರಾಘವೇಂದ್ರ ಸ್ಪಷ್ಟನೆ

By Kannadaprabha NewsFirst Published Aug 28, 2023, 9:12 PM IST
Highlights

  ಮುಂಬರುವ ಲೋಕಸಭೆ ಚುನಾವಣೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಗಮನದಲ್ಲಿಟ್ಟುಕೊಂಡು ‘ಬಿಜೆಪಿ ಮತದಾರ ಚೇತನ ಮಹಾಭಿಯಾನ’ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅದರ ಸಿದ್ಧತೆಗಳು ಆರಂಭಗೊಂಡಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಶಿವಮೊಗ್ಗ (ಆ.28) :  ಮುಂಬರುವ ಲೋಕಸಭೆ ಚುನಾವಣೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಗಮನದಲ್ಲಿಟ್ಟುಕೊಂಡು ‘ಬಿಜೆಪಿ ಮತದಾರ ಚೇತನ ಮಹಾಭಿಯಾನ’ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅದರ ಸಿದ್ಧತೆಗಳು ಆರಂಭಗೊಂಡಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮತದಾರರ ನಿರ್ಲಕ್ಷ ್ಯ ಸರಿಯಲ್ಲ. ಮತದಾನ ಒಂದು ಬಹುದೊಡ್ಡ ಶಕ್ತಿಯಾಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಮತದಾರ ಚೇತನ ಮಹಾಭಿಯಾನ ಹಮ್ಮಿಕೊಂಡಿದೆ ಎಂದರು.

ಚಂದ್ರ​ಯಾನ ಯಶಸ್ಸಿನ ಹಿಂದೆ ಪ್ರಧಾನಿ ಮೋದಿ ಪ್ರಬ​ಲ ಸ್ಫೂರ್ತಿ: ಸಂಸದ ರಾಘವೆಂದ್ರ

ಮತದಾರರ ಪಟ್ಟಿಪರಿಷ್ಕರಣೆ ಜೊತೆಗೆ ಹೊಸ ಮತದಾರರ ಸೇರ್ಪಡೆಯನ್ನು ಈ ಅಭಿಯಾನದ ಮೂಲಕ ನಡೆಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲೆ, ವಿಧಾನಸಭಾ ಕ್ಷೇತ್ರ ಮತ್ತು ಶಕ್ತಿ ಕೇಂದ್ರಗಳಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ವಿಧಾನಸಭಾ ಮಟ್ಟದಲ್ಲಿ ಬಿಎಲ್‌ಎ-1, ಬಿಎಲ್‌ಎ-2 ನೇಮಕವಾಗಿದೆ. ಶಕ್ತಿ ಕೇಂದ್ರ ಮಟ್ಟದಲ್ಲಿ ಕಾರ್ಯಾಗಾರಗಳು ನಡೆದಿವೆ. ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಅಭಿಯಾನದ ಬಗ್ಗೆ ಪ್ರಚಾರ ಮಾಡುವರು. ಜೊತೆಗೆ ಸಾಮಾಜಿಕ ಜಾಲತಾಣಗಳನ್ನು ಕೂಡ ಪರಿಣಾಮಕಾರಿಯಾಗಿ ಬಳಸಿಕೊಳ್ಳುವರು. ಹೊಸ ಮತದಾರರ ಸೇರ್ಪಡೆ ಜೊತೆಗೆ ನಕಲಿ ಮತದಾರರನ್ನು ತೆಗೆಯುವುದು ಕೂಡ ಅಭಿಯಾನದಲ್ಲಿ ಸೇರಿದೆ ಎಂದು ಮಾಹಿತಿ ನೀಡಿದರು.

ಕುಮಾರ್‌ ಬಂಗಾರಪ್ಪ ಪಕ್ಷ ಬಿಡೊಲ್ಲ:

ಕುಮಾರ್‌ ಬಂಗಾರಪ್ಪ(Kumara bangarappa) ಅವರು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ ಎಂದು ಸಂಸದ ರಾಘವೇಂದ್ರ(MP BY Raghavendra) ಸ್ಪಷ್ಟಪಡಿಸಿದರು. ಕುಮಾರ್‌ ಬಂಗಾರಪ್ಪ ಅವರು ಪಕ್ಷದ ನಾಯಕರು. ಶಾಸಕರಾಗಿ ಉತ್ತಮ ರೀತಿಯಲ್ಲಿ ಕಾರ್ಯ ಮಾಡಿದ್ದಾರೆ. ಅವರು ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ. ಪಕ್ಷ ತೊರೆಯುತ್ತಾರೆ ಎಂಬದು ಕಾಂಗ್ರೆಸ್‌ ಪಕ್ಷದ ಸುಳ್ಳು ಸುದ್ದಿ. ಈ ರೀತಿಯ ಹುನ್ನಾರ ನಡೆಸುವುದು ಆ ಪಕ್ಷದ ಜಾಯಮಾನ ಎಂದು ಆರೋಪಿಸಿದರು.

ಹೊನ್ನಾಳಿ ಕ್ಷೇತ್ರ ಮಾಜಿ ಶಾಸಕ ರೇಣುಕಾಚಾರ್ಯ ಮುಖ್ಯಮಂತ್ರಿಯವ​ರ ಭೇಟಿಗೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ಮುಖ್ಯಮಂತ್ರಿ ಅವ​ರನ್ನು ಯಾರು ಬೇಕಾದರೂ ಭೇಟಿ ಮಾಡುತ್ತಾರೆ. ನಾನು ಕೂಡ ಭೇಟಿ ಮಾಡಿದ್ದೇನೆ. ಕ್ಷೇತ್ರದ ವಿಷಯಕ್ಕೆ ಸಂಬಂಧಿಸಿದಂತೆ ಇಂತಹ ಭೇಟಿ ನಡೆಯುತ್ತಿರುತ್ತದೆ. ಇದಕ್ಕೂ ಪಕ್ಷಾಂತರಕ್ಕೂ ಸಂಬಂಧವಿಲ್ಲ ಎಂದು ಹೇಳಿದರು.

ಬರಗಾಲ ನಿಭಾಯಿಸುವಲ್ಲಿ ಸರ್ಕಾರ ವಿಫಲ:

ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿದೆ. ಆದರೆ ಸರ್ಕಾರ ಇದನ್ನು ನಿಭಾಯಿಸುವಲ್ಲಿ ವಿಫಲವಾಗಿದೆ. ಆಡಳಿತ ಸಂಪೂರ್ಣ ಕುಸಿದು ಬಿದ್ದಿದೆ ಎಂದು ಸಂಸದ ರಾಘ​ವೇಂದ್ರ ದೂರಿದರು.

ರಾಜ್ಯ ಸರ್ಕಾರದ ಆಡಳಿತ ಕುಸಿದಿರುವುದನ್ನು ಮರೆಮಾಚಲು ಬೇರೆ ಬೇರೆ ತಂತ್ರ ಮಾಡುತ್ತಿದ್ದಾರೆ. ಜನರ ಗಮನ ಸೆಳೆಯಲು ಬೇರೆ ವಿಷಯ ಎತ್ತುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ಹಂತದಲ್ಲಿ ಪಠ್ಯಪುಸ್ತಕ ಪರಿಷ್ಕರಣೆಗೆ ಕೈ ಹಾಕಿರುವ ಹಾಲಿ ಶಿಕ್ಷಣ ಸಚಿವರ ಕ್ರಮ ಸರಿಯಲ್ಲ. ಅವರ ಪಕ್ಷದ ಸಿದ್ಧಾಂತ ಏನೇ ಇರಬಹುದು. ಆದರೆ, ಮಕ್ಕಳ ವಿಚಾರದಲ್ಲಿ ಮಾತ್ರ ಹುಡುಗಾಟ ಆಡಬಾರದು. ರಾಜ್ಯದಲ್ಲಿ ವಿದ್ಯುತ್‌ ಕೊರತೆ ಇದೆ. ಜಿಲ್ಲೆಯಲ್ಲಿ ಕೋಟ್ಯಂತರ ರು. ಖರ್ಚು ಮಾಡಿ ಏತನೀರಾವರಿ ಅನುಷ್ಠಾನಗೊಂಡಿದೆ. ಆದರೆ ನೀರು ಬಿಡಲು ವಿದ್ಯುತ್‌ ಶಕ್ತಿ ಇಲ್ಲದಂತಾಗಿದೆ ಎಂದರು.

‘ಪ್ರಧಾನಿ ಸದ​ನ​ದಲ್ಲೇ ಉತ್ತರ ನೀಡಿ​ದ್ದಾ​ರೆ​’

ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ನರೇಂದ್ರ ಮೋದಿ ಮಣಿಪುರಕ್ಕೆ ಹೋಗಲಿ ಎಂದಿದ್ದಾರೆ. ಮಣಿಪುರದ ವಿಷಯಕ್ಕೆ ಸಂಬಂಧಿಸದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸದನದಲ್ಲೇ ಉತ್ತರ ನೀಡಿದ್ದಾರೆ. ವಿಪಕ್ಷಗಳ ಅವಿಶ್ವಾಸ ಗೊತ್ತುವಳಿಗೆ ಸೋಲಾಗಿದೆ. ಅವರಲ್ಲಿ ಇರುವ ಬಲಕ್ಕಿಂತ ಇನ್ನಷ್ಟುಮತ ಕಡಿಮೆಯಾಗಿದೆ. ಈ ಬಗ್ಗೆ ಗಮನಹರಿಸಲಿ. ಪ್ರಧಾನಿಯವರು ಎಷ್ಟುಸಮರ್ಥವಾಗಿ ದೇಶ ಮುನ್ನಡೆಸುತ್ತಿದ್ದಾರೆ ಎಂಬುದು ಇಡೀ ವಿಶ್ವವೇ ಗಮನಿಸುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಇದನ್ನು ಗಮನಿಸಲಿ ಎಂದು ಸಂಸ​ದರು ಸಲಹೆ ನೀಡಿ​ದರು.

click me!