ಗಲಭೆಯಲ್ಲಿ ಮೃತಪಟ್ಟವರ ಬಗ್ಗೆ ಜಮೀರ್‌ ಕನಿಕರ: ಭಾರೀ ವಿವಾದ

By Kannadaprabha NewsFirst Published Aug 14, 2020, 11:24 AM IST
Highlights

ಗುಂಡಿಗೆ ಬಲಿಯಾದ ಯುವಕರ ಮನೆಗೆ ಜಮೀರ್‌ ಭೇಟಿ| ಬೆಂಕಿ ಹಚ್ಚಿದವರು ಯಾರೋ? ಬಲಿಯಾದವರು ಮತ್ತ್ಯಾರೋ?| ಟ್ವೀಟರ್‌ನಲ್ಲಿ ಜಮೀರ್‌ ಮರುಕ| ಬಿಜೆಪಿ ನಾಯಕರ ಆಕ್ರೋಶ| 

ಬೆಂಗಳೂರು(ಆ.14):  ಗಲಭೆಯಲ್ಲಿ ಗೋಲಿಬಾರ್‌ನಿಂದ ಮೃತಪಟ್ಟ ಯುವಕರ ಮನೆಗೆ ನೀಡಿದ್ದಲ್ಲದೇ ಮೃತರು ಅಮಾಯಕರು ಎಂಬಂತೆ ಮಾಜಿ ಸಚಿವ ಜಮೀರ್‌ ಅಹಮದ್‌ ಖಾನ್‌ ಮಾಡಿರುವ ಟ್ವೀಟ್‌ ಹೊಸ ವಿವಾದ ಹುಟ್ಟು ಹಾಕಿದೆ.
ಮೃತರ ಮನೆಗೆ ಭೇಟಿ ನೀಡಿದ್ದೆ. ನಿಜಕ್ಕೂ ಅವರ ಕುಟುಂಬಗಳ ಪರಿಸ್ಥಿತಿ ಕಂಡು ಕಣ್ಣೀರು ಬರುತ್ತಿದೆ. ಬೆಂಕಿ ಹಚ್ಚಿದವರು ಯಾರೋ ಬಲಿಯಾದವರು ಮತ್ತ್ಯಾರೋ’ ಎಂದು ಟ್ವೀಟ್‌ ಮಾಡಿದ್ದರು.

"

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ನಾಯಕರು, ಗಲಭೆಯಲ್ಲಿ ಭಾಗವಹಿಸಿದ್ದವರ ಮನೆಗಳಿಗೆ ಭೇಟಿ ನೀಡಿದ್ದೀರಿ ಎಂದರೆ ಈ ಗಲಭೆಯ ಹಿಂದೆ ಇರುವುದು ಯಾರು ಎಂಬುದು ಸ್ಪಷ್ಟವಾಗಿದೆ. ಗಲಭೆಯಲ್ಲಿ ಭಾಗವಹಿಸಿದ್ದವರು ಅಮಾಯಕರು ಹೇಗೆ ಆಗುತ್ತಾರೆ ಎಂದು ಟೀಕಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಡಾ.ಕೆ. ಸುಧಾಕರ್‌, ಗಲಭೆಕೋರ ಆರೋಪಿಗಳ ಮನೆಗೆ ಮಾಜಿ ಸಚಿವ ಜಮೀರ್‌ ಅಹಮದ್‌ ಖಾನ್‌ ಹೋಗಿದ್ದಾರೆ. ಇದರಿಂದ ಘಟನೆಯ ಹಿಂದೆ ಯಾರಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಇಂತಹ ಮನೋಧೋರಣೆಯನ್ನು ಕೈ ಬಿಡದಿದ್ದರೆ ಕಾಂಗ್ರೆಸ್‌ನ್ನು ರಾಜ್ಯದ ಜನ ಕ್ಷಮಿಸುವುದಿಲ್ಲ ಎಂದು ಟೀಕಿಸಿದರು.

ಅನಂತ ಕುಮಾರ್‌ ಹೆಗಡೆಗೆ ಒಮ್ಮೆಯಾದರೂ ಬುದ್ದಿ ಹೇಳಿದ್ದೀರಾ? ಸಂತೋಷ್‌ಗೆ ಜಮೀರ್‌ ತಿರುಗೇಟು

ಇದಕ್ಕೂ ಮೊದಲು ಟ್ವೀಟ್‌ ಮಾಡಿದ್ದ ಜಮೀರ್‌, ‘ಗೋಲಿಬಾರ್‌ನಿಂದ ಮೃತಪಟ್ಟ ಯುವಕರ ಮನೆಗೆ ಬುಧವಾರ ಭೇಟಿ ನೀಡಿದ್ದೆ. ನಿಜಕ್ಕೂ ಅವರ ಕುಟುಂಬಗಳ ಪರಿಸ್ಥಿತಿ ಕಂಡು ಕಣ್ಣೀರು ಬಂತು. ಇದ್ದ ಒಬ್ಬ ಮಗನನ್ನು ಕಳೆದುಕೊಂಡ ತಾಯಿ, ತಂಗಿಗೆ ಯಾರು ದಿಕ್ಕು? ಯಾರೋ ಕಿಡಿಗೇಡಿಗಳು ಕಲ್ಲು ತೂರಿ, ಬೆಂಕಿ ಹಚ್ಚಿದ್ದು ಮತ್ತ್ಯಾರೋ ಬಲಿಯಾಗಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಿರಿಯ ಪೊಲೀಸ್‌ ಅಧಿಕಾರಿಗಳು, ಧಾರ್ಮಿಕ ಮುಖಂಡರೊಂದಿಗೆ ಚರ್ಚೆ ಮಾಡಿದ್ದೇನೆ. ತಪ್ಪಿತಸ್ಥರಿಗೆ ಖಂಡಿತ ಕಠಿಣ ಶಿಕ್ಷೆ ಆಗಲಿದೆ. ಗಾಳಿ ಸುದ್ದಿಗಳಿಗೆ ಕಿವಿಗೊಡಬೇಡಿ. ಕಾನೂನು ಹೋರಾಟದ ಮೂಲಕ ನ್ಯಾಯ ಪಡೆಯುವ ನಮ್ಮ ನಿರ್ಧಾರ ಅಚಲವಾಗಿರಲಿ’ ಎಂದು ಹೇಳಿದ್ದಾರೆ.

ಇದೇ ವೇಳೆ, ಪ್ರವಾದಿ ಮಹಮ್ಮದ್‌ ಪೈಗಂಬರರನ್ನು ವ್ಯಕ್ತಿಯೊಬ್ಬ ನಿಂದಿಸಿರುವುದು ವೈಯಕ್ತಿಕವಾಗಿ ನನಗೂ ಸಾಕಷ್ಟು ನೋವಾಗಿದೆ. ನಮ್ಮ ನೋವು, ಆಕ್ರೋಶವನ್ನು ಕಾನೂನು ಹೋರಾಟದ ಮೂಲಕ ತೋರಿಸಿ ಕಠಿಣ ಶಿಕ್ಷೆಗೆ ಆಗ್ರಹಿಸಬೇಕೆ ಹೊರತು ಅಶಾಂತಿಯ ಮೂಲಕವಲ್ಲ. ನ್ಯಾಯಕ್ಕಾಗಿ ನಡೆಸುವ ಕಾನೂನು ಹೋರಾಟದಲ್ಲಿ ನಾನೂ ನಿಮ್ಮ ಜೊತೆಗಿರುತ್ತೇನೆ ಎಂದಿದ್ದಾರೆ.
 

click me!