
ಬೆಳಗಾವಿ (ಡಿ.14): ಬೆಳಗಾವಿಯ ವೀರರಾಣಿ ಚನ್ನಮ್ಮ ವೃತ್ತದಲ್ಲಿ ಪಂಚಮಸಾಲಿ ಸಮಾಜಕ್ಕೆ ಸಿಕ್ಕಿದ್ದ 2ಡಿ ಮೀಸಲಾತಿ ಪ್ರತಿಯನ್ನು ಸುಟ್ಟಿದ್ದು ನಮಗೆ ನೋವಾಗಿದೆ ಎಂದು ಕಾಂಗ್ರೆಸ್ ಶಾಸಕರಾದ ವಿನಯ ಕುಲಕರ್ಣಿ, ವಿಜಯಾನಂದ ಕಾಶಪ್ಪನವರ ವಿರುದ್ಧ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮಾಜದವರು ತಮ್ಮ ಮನೆಯ ಮಕ್ಕಳ ಭವಿಷ್ಯದ ಸಲುವಾಗಿ ಹೋರಾಟಕ್ಕೆ ಬರುತ್ತಿದ್ದಾರೆ.
ಮಹಾರಾಷ್ಟ್ರದ ಮರಾಠಿಗಳು ಅಲ್ಲಿನ ಶಾಸಕರನ್ನು ತಮ್ಮ ಹಕ್ಕಿಗಾಗಿ ಮನೆ ಹೊಕ್ಕು ಅವರನ್ನು ಹೊರಗೆ ತಂದರು. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದರು. ವೀರಶೈವ ಲಿಂಗಾಯತ ಹಾಗೂ ಪಂಚಮಸಾಲಿ ಹಾಗೂ ಒಳ ಪಂಗಡಗಳಿಗೆ ಮೀಸಲಾತಿ ನೀಡಬೇಕು. ಇನ್ನು ಮುಂದೆ ರಾಜಕೀಯ ನಾಯಕರನ್ನು ಯಾರೂ ವೇದಿಕೆ ಮೇಲೆ ಕರೆಯಬೇಡಿ ಎಂದು ಸ್ವಾಮೀಜಿಗೆ ಹೇಳುತ್ತೇನೆ. ಕಾಂಗ್ರೆಸ್ನವರಿಗೆ ಸಾಬರ ವೋಟು ಬೇಕು. ಅದಕ್ಕೆ ಅವರು ಒಲೈಕೆ ಮಾಡುತ್ತಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಯಾವುದಾದರೂ ವರ್ಗ ಕೊಡಿ ನಮಗೆ ಮೀಸಲಾತಿ ಬೇಕಷ್ಟೆ: ಬಸವಜಯ ಮೃತ್ಯುಂಜಯ ಸ್ವಾಮೀಜಿ
ಪಂಚಮಸಾಲಿ ಸಮಾಜದ ಎಲ್ಲ ತ್ಯಾಗಕ್ಕೂ ಸಿದ್ಧ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಎಲ್ಲಾ ತ್ಯಾಗಕ್ಕೂ ಸಿದ್ಧ, ಪ್ರಾಣ ತ್ಯಾಗಕ್ಕೂ ಸಿದ್ಧ ಅಂತ ದೊಡ್ಡ ದೊಡ್ಡ ಭಾಷಣ ಮಾಡುತ್ತಾರೆ. ಪ್ರಾಣ ಯಾರಿಗೆ ಬೇಕಾಗಿದೆ ನಮಗೆ ಮೀಸಲಾತಿ ಬೇಕು ಅಷ್ಟೇ ಎಂದು ತಿರುಗೇಟು ನೀಡಿದರು. ನಮ್ಮ ಸರ್ಕಾರ ಇದ್ದ ಸಂದರ್ಭದಲ್ಲಿ ಸದನದ ಒಳಗೆ, ಹೊರಗೆ ಮೀಸಲಾತಿ ಸಂಬಂಧ ಹೋರಾಟ ಮಾಡಿದ್ದೇವೆ. ಯಡಿಯೂರಪ್ಪ, ಬೊಮ್ಮಾಯಿ ವಿರುದ್ಧವೂ ನಾವು ಮಾತನಾಡಿದ್ದೇವೆ. ಹೋರಾಟದ ಫಲವಾಗಿ ನಮ್ಮ ಸಮಾಜಕ್ಕೆ ಅಂದು 2ಡಿ ಮೀಸಲಾತಿಯೂ ಸಿಕ್ಕಿತು. ಮೀಸಲಾತಿ ಪ್ರಶ್ನಿಸಿ ಈಗ ಇಬ್ಬರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಈಗ ಕಾಂಗ್ರೆಸ್ ಸರ್ಕಾರ ಇದೆ. ಶಾಸಕರು ಹಾಗೂ ಸಚಿವರು ಹೋರಾಟ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ