ವಸತಿ ಯೋಜನೆಗಳ ಜಾರಿಗೆ ಸಚಿವ ಜಮೀರ್‌ ಅಹಮದ್‌ ಗಡುವು

By Kannadaprabha NewsFirst Published Jun 7, 2023, 12:30 AM IST
Highlights

ಒಂದು ಯೋಜನೆ ಮುಗಿದ ಬಳಿಕವೇ ಮತ್ತೊಂದು ಯೋಜನೆ ಜಾರಿ, ವಸತಿ ಇಲಾಖೆ ಅಧಿಕಾರಿಗಳಿಗೆ ಸಚಿವರ ತಾಕೀತು 

ಬೆಂಗಳೂರು(ಜೂ.07):  ಬಡವರಿಗಾಗಿ ರೂಪಿಸಿರುವ ಒಂದೊಂದು ವಸತಿ ಯೋಜನೆಗೆ ನಿಗದಿತ ಕಾಲಮಿತಿ ಹಾಕಿಕೊಂಡು ಅದನ್ನು ಪೂರ್ಣಗೊಳಿಸಿದ ಬಳಿಕವೇ ಮತ್ತೊಂದು ಯೋಜನೆ ಕೈಗೆತ್ತಿಕೊಳ್ಳಬೇಕೆಂದು ವಸತಿ ಸಚಿವ ಜಮೀರ್‌ ಅಹಮದ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಂಗಳವಾರ ವಸತಿ ಇಲಾಖೆ ವ್ಯಾಪ್ತಿಗೆ ಬರುವ ರಾಜೀವ್‌ ಗಾಂಧಿ ವಸತಿ ನಿಗಮದ ಪ್ರಗತಿ ಪರಿಶೀಲನೆ ನಡೆಸಿದ ಅವರು, ನಿಗದಿತ ಅವಧಿಯೊಳಗೆ ಯೋಜನೆ ಪೂರ್ಣಗೊಳ್ಳದಿದ್ದರೆ ಬಡವರಿಗೆ ಸೂರು ಕಲ್ಪಿಸುವ ಉದ್ದೇಶ ಈಡೇರುವುದಿಲ್ಲ. ಯಾವುದೇ ಕಾರಣಕ್ಕೂ ವಿಳಂಬ ಸಹಿಸುವುದಿಲ್ಲ. ಪ್ರತಿ ಯೋಜನೆಗೆ ಬೇಕಾದ ಹಣಕಾಸು ಹೊಂದಿಸಿಕೊಂಡು ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಂಚಿಕೆ ಆದ ನಂತರವಷ್ಟೇ ಮತ್ತೊಂದು ಯೋಜನೆ ಪ್ರಾರಂಭಿಸಬೇಕು. ಆಗ ಮಾತ್ರ ಜನರ ನಂಬಿಕೆ ಗಳಿಸಲು ಸಾಧ್ಯ. ಇದು ಕಡ್ಡಾಯವಾಗಿ ಪಾಲನೆ ಆಗಲೇಬೇಕು ಎಂದು ಸೂಚಿಸಿದರು.

ನನಗೆ ಸಿಕ್ಕ ಖಾತೆಯಲ್ಲಿ ಬಡವರ ಸೇವೆಗೆ ಅವಕಾಶವಿದೆ: ಸಚಿವ ಜಮೀರ್‌ ಅಹಮದ್‌

ಪ್ರಧಾನ ಮಂತ್ರಿ ಅವಾಸ್‌ ಯೋಜನೆಯ ಅವಧಿ ಜೂನ್‌ಗೆ ಮುಗಿಯಲಿದ್ದು, 1.41 ಲಕ್ಷ ಮನೆಗಳ ಗುರಿಯ ಪೈಕಿ 37 ಸಾವಿರ ಮನೆಗಳಿಗೆ ಮಾತ್ರ ಅನುಮತಿ ದೊರೆತಿದೆ. ಚುನಾವಣೆ ಮತ್ತಿತರರ ಕಾರಣಕ್ಕೆ ತಡವಾಗಿದ್ದರೆ ತಕ್ಷಣ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಸಮಯ ವಿಸ್ತರಣೆಗೆ ಅನುಮತಿ ಪಡೆದುಕೊಳ್ಳಿ. ಅಗತ್ಯವಾದರೆ ದೆಹಲಿಗೆ ತೆರಳಿ ಕೇಂದ್ರ ಸಚಿವರ ಜತೆಯೂ ಚರ್ಚೆ ಮಾಡುತ್ತೇನೆ ಎಂದರು.

ಮುಖ್ಯಮಂತ್ರಿಗಳ ಒಂದು ಲಕ್ಷ ವಸತಿ ಕಲ್ಪಿಸುವ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯಾಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, 2017ರಲ್ಲಿ ಆರಂಭವಾದ ಯೋಜನೆ ಇನ್ನೂ ಮುಗಿದಿಲ್ಲ. 1040 ಎಕರೆ ಪೈಕಿ 553 ಎಕರೆ ಮಾತ್ರ ಸ್ವಾಧೀನಕ್ಕೆ ಪಡೆದಿದ್ದು, 50,797 ಅರ್ಜಿದಾರರಲ್ಲಿ 12,158 ಮಂದಿ ಆರಂಭಿಕ ಹಣ ಪಾವತಿಸಿದ್ದಾರೆ. ಐದು ಸಾವಿರ ಮನೆ ಪೂರ್ಣಗೊಳಿಸಲಾಗಿದೆ. ಇನ್ನೂ ಫಲಾನುಭವಿಗಳಿಗೆ ಕೊಟ್ಟಿಲ್ಲ, ಹೀಗಾದರೆ ನಂಬಿಕೆ ಬರುವುದಾದರೂ ಹೇಗೆ ಎಂದು ಕಿಡಿಕಾರಿದರು.

ರಾಜ್ಯದ ಅಭಿವೃದ್ಧಿಯೇ ನಮ್ಮ ಸರ್ಕಾರದ ಗುರಿ: ಸಚಿವ ಜಮೀರ್‌ ಅಹಮ್ಮದ್‌

ಸಭೆಯಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್‌, ವಸತಿ ಇಲಾಖೆ ಕಾರ್ಯದರ್ಶಿ ರವಿಕುಮಾರ್‌ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಚಿಕ್ಕಬಳ್ಳಾಪುರ ಹಕ್ಕುಪತ್ರ ವಿತರಣೆ ತನಿಖೆಗೆ ಸೂಚನೆ

ಮುಖ್ಯಮಂತ್ರಿಗಳ ನಿವೇಶನ ಯೋಜನೆಯಡಿಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಈ ಹಿಂದಿನ ಶಾಸಕರು ತಮ್ಮ ಭಾವಚಿತ್ರವುಳ್ಳ 10,500 ಹಕ್ಕುಪತ್ರಗಳನ್ನು ಹಂಚಿಕೆ ಮಾಡಿರುವುದು ಕಾನೂನುಬಾಹಿರ ಕೃತ್ಯ. ಸರ್ಕಾರ ಸಿದ್ಧಪಡಿಸಿದ್ದ ಮುಖ್ಯಮಂತ್ರಿ ಹಾಗೂ ವಸತಿ ಸಚಿವರ ಭಾವಚಿತ್ರವುಳ್ಳ ಮಾದರಿಯ ಹಕ್ಕುಪತ್ರ ಮಾತ್ರ ಮಾನ್ಯವಾದದ್ದು ಎಂದು ಅಧಿಕಾರಿಗಳು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಜಮೀರ್‌ ಅಹಮ್ಮದ್‌, ಬಡವರಿಗೆ ಅನ್ಯಾಯ ಆಗಬಾರದು. ಆ ಪ್ರಕರಣದಲ್ಲಿ ತಪ್ಪಾಗಿದ್ದರೆ ವರದಿ ತರಿಸಿಕೊಂಡು ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

click me!