ಕೊಡಗು, ದಕ್ಷಿಣ ಕನ್ನಡಗೆ ಹೈದ್ರಾಬಾದ್‌ ತಜ್ಞರ ತಂಡ: ಸಚಿವ ಆರ್‌. ಅಶೋಕ್‌

By Govindaraj SFirst Published Jul 5, 2022, 5:00 AM IST
Highlights

ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ವ್ಯಾಪ್ತಿಯಲ್ಲಿ ಭೂ ಕಂಪನ ಮತ್ತು ಭೂಕುಸಿತ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಒಂದು ವಾರದ ಕಾಲ ಸಮಗ್ರ ಅಧ್ಯಯನ ನಡೆಸಲು ಹೈದರಾಬಾದ್‌ನ ಭೂಗರ್ಭ ಶಾಸ್ತ್ರಜ್ಞರ ತಂಡವನ್ನು ಕಳುಹಿಸಲಾಗುತ್ತಿದೆ. ಖುದ್ದು ನಾನೂ ಎರಡು ದಿನದಲ್ಲಿ ಜಿಲ್ಲಾ ಪ್ರವಾಸ ಮಾಡುತ್ತಿದ್ದು, ಸಮಸ್ಯೆಗೆ ಪರಿಹಾರ ಕ್ರಮ ಕೈಗೊಳ್ಳುತ್ತೇವೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದ್ದಾರೆ.

ಬೆಂಗಳೂರು (ಜು.05): ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ವ್ಯಾಪ್ತಿಯಲ್ಲಿ ಭೂ ಕಂಪನ ಮತ್ತು ಭೂಕುಸಿತ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಒಂದು ವಾರದ ಕಾಲ ಸಮಗ್ರ ಅಧ್ಯಯನ ನಡೆಸಲು ಹೈದರಾಬಾದ್‌ನ ಭೂಗರ್ಭ ಶಾಸ್ತ್ರಜ್ಞರ ತಂಡವನ್ನು ಕಳುಹಿಸಲಾಗುತ್ತಿದೆ. ಖುದ್ದು ನಾನೂ ಎರಡು ದಿನದಲ್ಲಿ ಜಿಲ್ಲಾ ಪ್ರವಾಸ ಮಾಡುತ್ತಿದ್ದು, ಸಮಸ್ಯೆಗೆ ಪರಿಹಾರ ಕ್ರಮ ಕೈಗೊಳ್ಳುತ್ತೇವೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಭೂಕಂಪನ ಸಮಸ್ಯೆ ಕಾಣಿಸಿಕೊಂಡಿರುವ ಕರಿಕೆ, ಪೆರಾಜೆ, ಅರವತ್ತೊಕ್ಲು, ಸಂಪಾಜೆ, ಕಲ್ಲುಗುಂಡಿ, ಚೆಂಬು ಭಾಗದಲ್ಲಿ ಅಪಾಯಕಾರಿ ಸ್ಥಳಗಳಲ್ಲಿರುವವರನ್ನು ಸ್ಥಳಾಂತರಿಸಲಾಗುವುದು. ಈ ಬಗ್ಗೆ ಸ್ಥಳೀಯರ ಮನವೊಲಿಕೆಗೆ ಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.

ಜು.16ರಿಂದ ಪೌತಿಖಾತೆ ಅಭಿಯಾನ: ಸಚಿವ ಅಶೋಕ್‌

ಅನಗತ್ಯ ಆತಂಕ ಬೇಡ: ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂಕಂಪನದ ಬಗ್ಗೆ ಆತಂಕ ಬೇಡ ಎಂದು ತಜ್ಞರು ಹೇಳಿದ್ದಾರೆ. ಬೆಟ್ಟದಡಿ ಸುಣ್ಣದ ಕಲ್ಲಿನ ಪದರಗಳು ಇವೆ. ಮಳೆ ನೀರು ಇಳಿದು ಶಬ್ಧವಾಗುತ್ತಿದೆ ಎಂದು ಹೇಳಲಾಗುತ್ತಿದೆ. ರಿಕ್ಟರ್‌ ಮಾಪನದಲ್ಲಿ ವ್ಯತ್ಯಾಸಗಳು ಆಗುತ್ತಿದ್ದರೆ ಗಮನ ನೀಡಿ ಎಂದೂ ಅಧಿಕಾರಿಗಳಿಗೆ ಹೇಳಿದ್ದೇನೆ. ಹೀಗಾಗಿ ಅನಗತ್ಯವಾಗಿ ಆತಂಕ ಪಡುವುದು ಬೇಡ ಎಂದು ಹೇಳಿದರು.

ದಕ್ಷಿಣ ಕನ್ನಡ ಹಾಗೂ ಮಡಿಕೇರಿ, ಸುಳ್ಯ ಭಾಗದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಭೂಗರ್ಭ ಶಾಸ್ತ್ರಜ್ಞರ ಪ್ರಕಾರ ಭೂಮಿ ಅಡಿಯಲ್ಲಿನ ಸುಣ್ಣದ ಕಲ್ಲಿನ ಪದರಕ್ಕೆ ನೀರು ಹರಿದು ಈ ರೀತಿಯ ಬದಲಾವಣೆಗಳು ಆಗುತ್ತಿವೆ. ಹಿಂದೆ ತಜ್ಞರ ಸಮಿತಿಯೊಂದು ಮಿತಿ ಮೀರಿದ ವಾಣಿಜ್ಯ ಚಟುವಟಿಕೆ ಹಾಗೂ ಪ್ರವಾಸೋದ್ಯಮ ಒತ್ತಡದಿಂದ ಸಮಸ್ಯೆ ಆಗುತ್ತಿರುವುದಾಗಿ ಹೇಳಿತ್ತು. ಈ ಬಗ್ಗೆ ಸೂಕ್ತ ಅಧ್ಯಯನಕ್ಕೆ ತಜ್ಞರ ತಂಡ ತೆರಳುತ್ತಿದೆ ಎಂದು ಮಾಹಿತಿ ನೀಡಿದರು.

ತುಮಕೂರು: ದಲಿತರ ಕೇರಿಯಲ್ಲಿ ಸಚಿವ ಅಶೋಕ್‌ ಉಪಾಹಾರ

ಅನಧಿಕೃತ ಹೋಂ ಸ್ಟೇಗಳು: ಹಿಂದೆ ತಜ್ಞರ ಸಮಿತಿ ನೀಡಿದ್ದ ವರದಿ ಆಧರಿಸಿ ಕೊಡಗು ಜಿಲ್ಲೆಯಲ್ಲಿ ವಾಣಿಜ್ಯ ಬಳಕೆಗಾಗಿ ಭೂ ಪರಿವರ್ತನೆ ಮಾಡದಂತೆ ತಡೆ ಹೇರಲಾಗಿದೆ. ಹೀಗಿದ್ದರೂ ಅನಧಿಕೃತ ವಾಣಿಜ್ಯ ಚಟುವಟಿಕೆ ನಡೆಯುತ್ತಿವೆ. ನಮಗೆ ಇರುವ ಮಾಹಿತಿ ಪ್ರಕಾರ ಕೊಡಗು ಜಿಲ್ಲೆ ಒಂದರಲ್ಲೇ 4 ಸಾವಿರಕ್ಕೂ ಹೆಚ್ಚು ಅನಧಿಕೃತ ಹೋಂ ಸ್ಟೇಗಳಿವೆ. ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದು ಸ್ಥಳೀಯ ಮಟ್ಟದಲ್ಲಿ ನಿರ್ವಹಣೆ ಮಾಡುತ್ತಿರುತ್ತಾರೆ. ಈ ಬಗ್ಗೆ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ. ವರದಿ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

click me!