ಬಗರ್‌ ಹುಕುಂ ಇತ್ಯರ್ಥಕ್ಕೆ ಇನ್ನೂ 2 ವರ್ಷ ಅವಕಾಶ?

By Kannadaprabha NewsFirst Published Sep 25, 2020, 12:14 PM IST
Highlights

ಎರಡು ವರ್ಷ ಅವಧಿಗೆ ವಿಸ್ತರಿಸಲು ತಿದ್ದುಪಡಿ ವಿಧೇಯಕ ಮಂಡಿಸಿದ ಕಂದಾಯ ಸಚಿವ ಆರ್‌. ಅಶೋಕ್| ಸಕ್ರಮಗೊಳಿಸಲು ಜಾರಿಗೆ ತಂದ ಕರ್ನಾಟಕ ಭೂ ಕಂದಾಯ ತಿದ್ದುಪಡಿ ಅಧಿನಿಯಮ-2000| ಈ ನಿಯಮದ ಪ್ರಕಾರ 20 ವರ್ಷದೊಳಗೆ ನಿಗದಿಪಡಿಸಿದ ನಿಯಮಗಳಿಗೆ ಒಳಪಟ್ಟು ಸಕ್ರಮಗೊಳಿಸಬಹುದು| 

ಬೆಂಗಳೂರು(ಸೆ.25): ರಾಜ್ಯದ ಸರ್ಕಾರಿ ಜಮೀನುಗಳಲ್ಲಿ ಅನಧಿಕೃತ ಬೇಸಾಯ ಮಾಡುತ್ತಿರುವ 94-ಬಿ ಬಗರ್‌ಹುಕುಂ ಜಮೀನುಗಳನ್ನು ಸಕ್ರಮಗೊಳಿಸಲು ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿಯ ಅವಧಿಯನ್ನು ಎರಡು ವರ್ಷ ವಿಸ್ತರಿಸುವ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕ ಗುರುವಾರ ವಿಧಾನಸಭೆಯಲ್ಲಿ ಮಂಡನೆಯಾಗಿದೆ.

ಕರ್ನಾಟಕ ಭೂ ಕಂದಾಯ ಅಧಿನಿಯಮ 1964ನೇ 94 ಬಿ ಅಡಿ ಸಕ್ರಮಗೊಳಿಸಲು ನಮೂನೆ 50ರಲ್ಲಿ 10,572 ಅರ್ಜಿಗಳು ಮತ್ತು ನಮೂನೆ 53ರಲ್ಲಿ 1,40,781 ಅರ್ಜಿಗಳ ವಿಲೇವಾರಿ ಬಾಕಿ ಇದೆ. ಈ ಅರ್ಜಿಗಳ ವಿಲೇವಾರಿಗೆ ಇದ್ದ ಕಾಲ ಮಿತಿಯು ಏಪ್ರಿಲ್‌ 27, 2020ಕ್ಕೆ ಕೊನೆಗೊಂಡಿರುವುದರಿಂದ ಅವಧಿಯನ್ನು ಎರಡು ವರ್ಷ ಅವಧಿಗೆ ವಿಸ್ತರಿಸಲು ತಿದ್ದುಪಡಿ ವಿಧೇಯಕ ಮಂಡಿಸುತ್ತಿರುವುದಾಗಿ ಕಂದಾಯ ಸಚಿವ ಆರ್‌. ಅಶೋಕ್‌ ಸಭೆಗೆ ಮಾಹಿತಿ ನೀಡಿದರು.

ತಿರಸ್ಕೃತಗೊಂಡ ಅರ್ಜಿದಾರರಿಗೂ ಬಗರ್‌ ಹುಕುಂ ಹಕ್ಕು ಪತ್ರ

1990ರ ಏಪ್ರಿಲ್‌ 14ನೇ ತಾರೀಖಿಗೆ ಮೊದಲು ಯಾವುದೇ ಭೂಮಿ ಅನಧಿಕೃತವಾಗಿ ಒತ್ತುವರಿಯಾಗಿ ಕೃಷಿ ಮಾಡುತ್ತಿದ್ದರೆ 94ಎ ಹಾಗೂ 94 ಬಿ ಅಡಿ ಅಧಿಕೃತವಾಗಿ ಮಂಜೂರು ಮಾಡಲು ಅವಕಾಶವಿದೆ. ಆದರೆ, 1997ರ ಬಳಿಕ ಒತ್ತುವರಿ ಮಾಡಿದವರಿಗೆ ಇದು ಅನ್ವಯಿಸುವುದಿಲ್ಲ. ಸಕ್ರಮಗೊಳಿಸಲು ಜಾರಿಗೆ ತಂದ ಕರ್ನಾಟಕ ಭೂ ಕಂದಾಯ ತಿದ್ದುಪಡಿ ಅಧಿನಿಯಮ-2000 ನಿಯಮದ ಪ್ರಕಾರ 20 ವರ್ಷದೊಳಗೆ ನಿಗದಿಪಡಿಸಿದ ನಿಯಮಗಳಿಗೆ ಒಳಪಟ್ಟು ಸಕ್ರಮಗೊಳಿಸಬಹುದು ಎಂದು ಹೇಳಲಾಗಿದೆ. ಇದನ್ನು ತಿದ್ದುಪಡಿ ಮಾಡಿ 22 ವರ್ಷ ಎಂದು ಮಾಡಲು ವಿಧೇಯಕ ಮಂಡಿಸಲಾಗಿದೆ.

click me!