ಹಿಂದಿನ ಸರ್ಕಾರಗಳ ತಪ್ಪಿನಿಂದ ಮಣಿಪುರದಲ್ಲಿ ಹಿಂಸೆ: ಶೋಭಾ ಕರಂದ್ಲಾಜೆ

By Kannadaprabha NewsFirst Published Jul 23, 2023, 7:17 AM IST
Highlights

ಮಣಿಪುರದಲ್ಲಿ ಜಾತಿ, ಧರ್ಮ ಸಂಘರ್ಷ ನಡೆಯುತ್ತಿದೆ. ಹಿಂದಿನ ಸರ್ಕಾರಗಳ ತಪ್ಪುಗಳ ಕಾರಣದಿಂದಾಗಿ ದೊಡ್ಡ ಪ್ರಮಾಣದಲ್ಲಿ ಬೇರೆ ದೇಶದ ನುಸುಳುಕೋರರು ದಕ್ಷಿಣ ಭಾಗದಲ್ಲಿ ಜಮಾ ಆಗಿದ್ದಾರೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಹುಬ್ಬಳ್ಳಿ (ಜು.23) :  ಮಣಿಪುರದಲ್ಲಿ ಜಾತಿ, ಧರ್ಮ ಸಂಘರ್ಷ ನಡೆಯುತ್ತಿದೆ. ಹಿಂದಿನ ಸರ್ಕಾರಗಳ ತಪ್ಪುಗಳ ಕಾರಣದಿಂದಾಗಿ ದೊಡ್ಡ ಪ್ರಮಾಣದಲ್ಲಿ ಬೇರೆ ದೇಶದ ನುಸುಳುಕೋರರು ದಕ್ಷಿಣ ಭಾಗದಲ್ಲಿ ಜಮಾ ಆಗಿದ್ದಾರೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ನಮ್ಮ ಕೇಂದ್ರ ಸರ್ಕಾರ ಇಂತಹ ನುಸುಳುಕೋರರನ್ನು ಪತ್ತೆ ಹಚ್ಚಿ ಅವರನ್ನು ಹೊರ ಹಾಕುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ಈಶಾನ್ಯ ಭಾರತದ ಎಲ್ಲ ರಾಜ್ಯಗಳನ್ನು ಹಿಂದಿನ ಯುಪಿಎ, ಕಾಂಗ್ರೆಸ್‌ ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿತ್ತು. ಅವರೂ ನಾವು ಭಾರತೀಯರು ಎಂದು ಒಪ್ಪಿಕೊಂಡಿರಲಿಲ್ಲ. ಆದರೆ, ಈಗ ಇಡೀ ಈಶಾನ್ಯದ ಎಲ್ಲ ರಾಜ್ಯಗಳಲ್ಲಿ ನಮ್ಮ ಭಾರತ ಎಂದು ಹೆಮ್ಮೆಯಿಂದ ಕರೆಯುತ್ತಿದ್ದಾರೆ ಎಂದರು.

Latest Videos

 

ಶೋಭಾ ಹೇಳಿದ್ದಕ್ಕೆಲ್ಲಾ ನಾನು ಉತ್ತರ ಕೊಡಬೇಕಾ : ಪರಂ

ಮಣಿಪುರದಲ್ಲಿ ಸರ್ಕಾರದಿಂದ ಅಲ್ಲಿ ಹಲವು ಅಭಿವೃದ್ಧಿ ಕೆಲಸಗಳು ಸಹ ನಡೆಯುತ್ತಿವೆ. ಅಲ್ಲಿನ ಜನ ಮೊದಲ ಬಾರಿಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ನೋಡುತ್ತಿದ್ದಾರೆ. ಹೀಗಾಗಿ, ಕೆಲವು ದೇಶದ್ರೋಹಿಗಳು ವಿದ್ರೋಹಿ ಚಟುವಟಿಕೆ ನಡೆಸುವುದಕ್ಕಾಗಿ ಅಲ್ಲಿಗೆ ಬರುತ್ತಿದ್ದಾರೆ ಎಂದು ಆರೋಪಿಸಿದರು.

ಕೊಲ್ಲುವ ರಾಜಕಾರಣ:

ಪಶ್ಚಿಮ ಬಂಗಾಳದ ಮಾಲ್ದಾದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿದ ಪ್ರಕರಣ ಈಗ ಹೊರ ಬರುತ್ತಿದೆ. ರಾಜಕಾರಣ ಎಲ್ಲರೂ ಮಾಡುತ್ತಾರೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಕೊಲ್ಲುವ ರಾಜಕಾರಣ ನಡೆಯುತ್ತಿದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರವನ್ನು ಕೆಟ್ಟದಾಗಿ ಬಿಂಬಿಸುವ ಕೆಲಸ ನಡೆಯುತ್ತಿರುವುದು ಆತಂಕಕಾರಿ ಎಂದು ಕಿಡಿಕಾರಿದರು.

ಗ್ಯಾರಂಟಿ ವಿಫಲ:

ಕಾಂಗ್ರೆಸ್‌ ಜನರಿಗೆ ಯಾವ ಭರವಸೆ ಕೊಟ್ಟು ಅಧಿಕಾರಕ್ಕೆ ಬಂದಿತೋ ಆ ಭರವಸೆಗಳು ಈಗ ಈಡೇರುತ್ತಿಲ್ಲ. ರಾಜ್ಯದ ಹಣಕಾಸಿನ ಸ್ಥಿತಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಅವರು ನೀಡಿದ 5 ಗ್ಯಾರೆಂಟಿಗಳನ್ನು ಮೊದಲ ಕ್ಯಾಬಿನೆಟ್‌ ನಲ್ಲಿ ಮಾಡುತ್ತೇವೆ ಎಂದು ಹೇಳಿಕೊಂಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಕೇಳುತ್ತೇನೆ ನಿಮ್ಮ ಮೊದಲ ಕ್ಯಾಬಿನೆಟ್‌ ಯಾವಾಗ? ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು ಕರಂದ್ಲಾಜೆ.

ಶಕ್ತಿ ಯೋಜನೆಯೂ ಈಗ ಸರಿಯಾಗಿ ನಡೆಯುತ್ತಿಲ್ಲ. ಈಗಾಗಲೇ ಸಾರಿಗೆ ಸಂಸ್ಥೆಯು ನಷ್ಟದಲ್ಲಿ ನಡೆಯುತ್ತಿದೆ. ಇದೇ ರೀತಿ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ವೇತನ ನೀಡುವುದು ಕಷ್ಟವಾಗಲಿದೆ. ಈ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ. ಕಾಂಗ್ರೆಸ್ಸಿನವರು ಇದನ್ನು ಬಿಟ್ಟು ವಿಪಕ್ಷ ನಾಯಕನ ಆಯ್ಕೆ ಕುರಿತು ಹತಾಶರಾಗಿ ಮಾತನಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಸ್ಟ್ಯಾಟರ್ಜಿಯಲ್ಲಿ ನಾವು ವಿಪಕ್ಷ ನಾಯಕನನ್ನು ಆಯ್ಕೆ ಮಾಡುತ್ತೇವೆ ಎಂದರು.

ಗ್ಯಾನವ್ಯಾಪಿ ಸಮೀಕ್ಷೆ ಸ್ವಾಗತಾರ್ಹ:

ಜ್ಞಾನವ್ಯಾಪಿ ಮಸೀದಿ ವಾರಾಣಸಿ ಕಾಶಿಯ ಒಂದು ಭಾಗ. ಕಾಶಿ ವಿಶ್ವನಾಥ ದೇವಸ್ಥಾನ ಒಡೆದು ಮಸೀದಿ ಕಟ್ಟಿದ್ದು ತನಿಖೆ ನಡೆಯಬೇಕು. ಸರ್ವೇಗೆ ಅನುಮತಿ ನೀಡಿರುವುದು ನ್ಯಾಯಕ್ಕೆ ಸಿಕ್ಕ ಜಯವಾಗಿದೆ ಎಂದು ಪ್ರತಿಕ್ರೀಯಿಸದರು.

ಅಲ್ಲಿದ್ದ ಹಿಂದೂ ದೇವಾಲಯ ಧ್ವಂಸ ಮಾಡಿ, ದೇವಾಲಯಗಳ ಕಂಬಗಳ ಮೇಲೆ ಮಸೀದಿ ನಿರ್ಮಾಣ ಮಾಡಲಾಗಿದೆ. ಕಾಶಿಯ ಜ್ಞಾನ ವ್ಯಾಪಿ ಮಸೀದಿ ಕುರಿತು ನ್ಯಾಯಾಲಯದ ತೀರ್ಪು ಒಳ್ಳೆಯದಾಗಿದ್ದು, ತೀರ್ಪು ಹಿಂದೂಗಳ ಪರ ಬರುವ ವಿಶ್ವಾಸವಿದೆ ಎಂದರು.

ರಸಗೊಬ್ಬರ ಹಂಚಿಕೆಯಲ್ಲಿ ತಾರತಮ್ಯ: ಸಚಿವೆ ಶೋಭಾ ಕರಂದ್ಲಾಜೆ ಎಚ್ಚರಿಕೆ

ಹಿಂದೆ ಮಸೀದಿಯೊಳಗೆ ಸರ್ವೇಗೆ ವಿರೋಧ ಮಾಡಿದ್ದು ಸರಿಯಾದ ಕ್ರಮವಲ್ಲ. ಹೀಗಾಗಿ, ಹಿಂದೂಗಳ ಕಡೆಯವರು ಮಸೀದಿ ಸರ್ವೇಗಾಗಿ ನ್ಯಾಯಾಲಯದ ಮೆಟ್ಟಿಲು ಏರಿದ್ದರು. ನ್ಯಾಯಾಲಯ ಈಗ ಈ ಸರ್ವೇಗೆ ಅನುಮತಿ ನೀಡಿರುವುದು ಒಳ್ಳೆಯ ವಿಚಾರ. ಇದರಿಂದ ಹಿಂದೂಗಳಿಗೆ ಅಷ್ಟೇ ಅಲ್ಲ, ಅಲ್ಲಿನ ಜನರಿಗೆ ನ್ಯಾಯ ಸಿಕ್ಕಿದಂತಾಗಿದೆ ಎಂದರು.

click me!