ಮಹದಾಯಿ, ಮೇಕೆದಾಟು ಜಾರಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಿ: ಡಿಕೆಶಿ ತಾಕೀತು

By Kannadaprabha NewsFirst Published May 30, 2023, 10:14 PM IST
Highlights

ಕೇಂದ್ರದಿಂದ ರಾಜ್ಯದ ನೀರಾವರಿ ಯೋಜನೆಗಳಿಗೆ ಅನುಮತಿ ತರಬೇಕು, ಮೇಕೆದಾಟು, ಮಹದಾಯಿ ಯೋಜನೆಗಳನ್ನು ಆದ್ಯತೆ ಮೇರೆಗೆ ಅನುಷ್ಠಾನಕ್ಕೆ ತರಲು ಬೇಕಾದ ಸಿದ್ಧತೆ ಮಾಡಿಕೊಳ್ಳುವಂತೆ ಉಪಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಬೆಂಗಳೂರು (ಮೇ.30) ಕೇಂದ್ರದಿಂದ ರಾಜ್ಯದ ನೀರಾವರಿ ಯೋಜನೆಗಳಿಗೆ ಅನುಮತಿ ತರಬೇಕು, ಮೇಕೆದಾಟು, ಮಹದಾಯಿ ಯೋಜನೆಗಳನ್ನು ಆದ್ಯತೆ ಮೇರೆಗೆ ಅನುಷ್ಠಾನಕ್ಕೆ ತರಲು ಬೇಕಾದ ಸಿದ್ಧತೆ ಮಾಡಿಕೊಳ್ಳುವಂತೆ ಉಪಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಮಂಗಳವಾರ ವಿಕಾಸಸೌಧದಲ್ಲಿ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ‘ನೀರಾವರಿ ಯೋಜನೆಗಳಿಗೆ (Irrigation project)ಮುಂದಿನ ಐದು ವರ್ಷದಲ್ಲಿ 2 ಲಕ್ಷ ಕೋಟಿ ರು. ವಿನಿಯೋಗಿಸುತ್ತೇವೆ ಎಂದು ಮಾತು ಕೊಟ್ಟಿದ್ದೇವೆ. ಸರ್ಕಾರ, ಸಂಸ್ಥೆಗಳು, ಕೇಂದ್ರದ ಅನುದಾನದ ಮೂಲಕ ಸಂಪನ್ಮೂಲ ಒಟ್ಟುಗೂಡಿಸಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸಚಿವ ಶೇಖಾವತ್‌ ಅವರ ಸಹಕಾರ ಪಡೆದುಕೊಳ್ಳೋಣ. ಯೋಜನೆಗಳ ಅನುಷ್ಠಾನಕ್ಕೆ ಅಗತ್ಯ ಇರುವ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದೇವೆ’ ಎಂದು ಹೇಳಿದರು.

DK Shivakumar: 6 ತಿಂಗಳಲ್ಲಿ ಬಿಬಿಎಂಪಿ ಚುನಾವಣೆ: ಡಿಸಿಎಂ ಡಿಕೆಶಿ

‘ಕೇವಲ ಎಲ್‌ಒಸಿ, ಟೆಂಡರ್‌, ಗುತ್ತಿಗೆ ಹಂಚಿಕೆ, ಬಿಲ್‌ ಮಾಡುವ ಕೆಲಸಕ್ಕೆ ಅಧಿಕಾರಿಗಳ, ಸಿಬ್ಬಂದಿಯ ಶ್ರಮ ವಿನಿಯೋಗವಾಗಬಾರದು. ಭ್ರಷ್ಟಾಚಾರಕ್ಕೆ ಆಸ್ಪದ ಇಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿಯ ಅರಿವಿದೆ. ಕೇಂದ್ರದ ಅನುದಾನ ತರಲು ರಾಜ್ಯದ ಸಂಸದರ ಮೂಲಕ ಕೇಂದ್ರದ ಮೇಲೆ ಒತ್ತಡ ಹೇರಬೇಕು. ಭದ್ರಾ ಮೇಲ್ದಂಡೆ ಯೊಜನೆಯನ್ನು ಕೇಂದ್ರ ಯೋಜನೆಯಾಗಿ ಘೋಷಣೆ ಮಾಡಲಾಗಿದೆ. ಇತರೆ ಯೋಜನೆಗಳಿಗೂ ರಾಷ್ಟ್ರೀಯ ಸ್ಥಾನಮಾನ ಪಡೆಯುವ ಸಂಬಂಧ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು.ಮೇಕೆದಾಟು, ಮಹದಾಯಿ ಯೋಜನೆ ಸಂಬಂಧ ಕೇಂದ್ರ ಸಚಿವರನ್ನು ಭೇಟಿ ಮಾಡಿ, ಸಮಸ್ಯೆಗಳಿಗೆ ಪರಿಹಾರ ಏನಿದೆ ಎಂಬ ಬಗ್ಗೆ ಚರ್ಚಿಸಲಾಗುವುದು’ ಎಂದರು.

‘ಮೇಕೆದಾಟು ಯೋಜನೆ(Mekedatu project)ಗೆ ಮೀಸಲಿಟ್ಟ1 ಸಾವಿರ ಕೋಟಿ ರು. ಅನುದಾನವನ್ನು ಭೂಸ್ವಾಧೀನದಂತಹ ಪೂರ್ವ ಸಿದ್ಧತೆ ಕೆಲಸಗಳಿಗೆ ಏಕೆ ಬಳಕೆ ಮಾಡಿಲ್ಲ? ಯೋಜನೆಗಳನ್ನು ಆದ್ಯತೆ ಮೇರೆಗೆ ಅನುಷ್ಠಾನಕ್ಕೆ ತರಬೇಕು’ ಎಂದು ಹೇಳಿದ ಅವರು, ‘ನಮಗೆ ಯಾವುದೇ ದ್ವೇಷ ಇಲ್ಲ, ಕೆಲಸವಾಗಬೇಕು ಅಷ್ಟೇ. ಅಧಿಕಾರಿಗಳು ಸರ್ಕಾರಕ್ಕೆ ನಿಷ್ಠರಾಗಿರಬೇಕೇ ಹೊರತು ಪೋಸ್ಟಿಂಗ್‌ ಕೊಟ್ಟವರಿಗರಲ್ಲ. ಅಂತಹವರನ್ನು ಸಹಿಸುವುದಿಲ್ಲ, ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜೀ ಇಲ್ಲ, ಭ್ರಷ್ಟಾಚಾರಕ್ಕೆ ಆಸ್ಪದ ಇಲ್ಲ’ ಎಂದು ಎಚ್ಚರಿಕೆ ನೀಡಿದರು.

‘ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರಕ್ಕೆ ಎಷ್ಟುಯೋಜನೆಗಳು ಬಂದಿವೆ. ನಮ್ಮ ರಾಜ್ಯಕ್ಕೆ ಎಷ್ಟುಬಂದಿವೆ ಎಂಬುದನ್ನು ಹೋಲಿಕೆ ಮಾಡಿಕೊಂಡರೆ ನೀವು ಎಷ್ಟುಚೆನ್ನಾಗಿ ಕೆಲಸ ಮಾಡಿದ್ದೀರಿ ಎಂಬುದು ಗೊತ್ತಾಗುತ್ತದೆ. ಕರ್ನಾಟಕಕ್ಕೆ ಆಗಿರುವ ಅನ್ಯಾಯ ಸರಿಪಡಿಸುವ ಕೆಲಸವಾಗಬೇಕು. ಪ್ರತಿ ಹನಿ ನೀರು ರೈತರ, ಜನರ ಹಿತಕ್ಕೆ ಬಳಕೆಯಾಗಬೇಕೇ ಹೊರತು, ಪೋಲಾಗಬಾರದು. ಎಲ್ಲೆಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡಬಹುದು ಎಂಬುದರ ಬಗ್ಗೆ ತ್ವರಿತಗತಿಯಲ್ಲಿ ನೀಲನಕ್ಷೆ ತಯಾರಿ ಮಾಡಿ, ಕೆಆರ್‌ಎಸ್‌, ಮಂಚನಬೆಲೆ, ತಿಪ್ಪಗೊಂಡನಹಳ್ಳಿ, ಹೇಮಾವತಿ ಜಲಾಶಯ ಸೇರಿದಂತೆ ಇತರೆ ಕಡೆ ಸಿದ್ದವಾಗಿರುವ ನೀಲನಕ್ಷೆಯಂತೆ ಯೋಜನೆಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ತಾಕೀತು ಮಾಡಿದರು.

ಬಿಜೆಪಿ ಶಾಸಕರ ಮಾತು ಕಿವಿಯಲ್ಲಿದೆ: ಡಿಕೆಶಿ

ಬೆಂಗಳೂರು: ನೀರಾವರಿ ಇಲಾಖೆಯ ಭ್ರಷ್ಟಾಚಾರ ಕುರಿತು ಹಿಂದಿನ ಆಡಳಿತ ಪಕ್ಷದ ಶಾಸಕರು ಆಡಿರುವ ಮಾತುಗಳು ನನ್ನ ಕಿವಿಯಲ್ಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಬಿಜೆಪಿಯ ಶಾಸಕರಾಗಿದ್ದ ಗೂಳಿಹಟ್ಟಿಶೇಖರ್‌, ಎಚ್‌.ವಿಶ್ವನಾಥ್‌ ಆಡಿರುವ ಮಾತು ಸಹ ಒಂದೊಂದು ಕಿವಿಯಲ್ಲಿದೆ. ನಾನು ಕಿವಿಯಲ್ಲಿ ಕೇಳಿದ್ದರೂ ಕಣ್ಣಲ್ಲಿ ನೋಡಬೇಕು. ಕಣ್ಣಾರೆ ಕಂಡರೆ ಮಾತ್ರ ಏನಾದರೂ ಹೇಳಬಹುದು. ಅಕ್ರಮದ ತನಿಖೆ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಮುಂದಿನ ದಿನದಲ್ಲಿ ಮಾತನಾಡುತ್ತೇನೆ ಎಂದರು.

ಕಾಂಗ್ರೆಸ್‌ ನೀಡಿರುವ ಭರವಸೆಗಳನ್ನು ಈಡೇರಿಸಲು ಸಿದ್ದು-ಡಿಕೆಶಿ ಬದ್ದ: ಶಾಸಕ ಇಕ್ಬಾಲ್‌

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌(DK Shivakumar) ಅವರು ಮಂಗಳವಾರ ವಿಕಾಸಸೌಧದಲ್ಲಿ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿದರು.

click me!