ಪ್ರಯಾಗ್ರಾಜ್ನ ಮಹಾಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಬೆಳಗಾವಿಯ ನಾಲ್ವರು ಮೃತಪಟ್ಟಿದ್ದಾರೆ. ಮೃತ ದೇಹಗಳನ್ನು ಪ್ರಯಾಗರಾಜ್ನಿಂದ ದೆಹಲಿಗೆ ರವಾನಿಸಿ, ಬಳಿಕ ಏರ್ ಲಿಫ್ಟ್ ಮೂಲಕ ಬೆಳಗಾವಿಗೆ ತರಲಾಗುತ್ತಿದೆ. ಮೃತರ ಕುಟುಂಬಗಳಿಗೆ ಸಂಸದ, ಶಾಸಕರು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
ಬೆಳಗಾವಿ (ಜ.30): ಪ್ರಯಾಗ್ರಾಜ್ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಬೆಳಗಾವಿಯ ನಗರದ ನಾಲ್ವರು ಮೃತಪಟ್ಟಿದ್ದು, ನಾಲ್ವರ ಮೃತ ದೇಹಗಳನ್ನು ಪ್ರಯಾಗರಾಜ್ನಿಂದ ದೆಹಲಿಗೆ ಆಂಬುಲೆನ್ಸ್ ಮೂಲಕ ರವಾನಿಸಲಾಗಿದೆ. ಬಳಿಕ ದೆಹಲಿಯಿಂದ ಏರ್ ಲಿಫ್ಟ್ ಮೂಲಕ ಬೆಳಗಾವಿಗೆ ತರಲಾಗುತ್ತದೆ.
ಇಂದು ಮದ್ಯಾಹ್ನದ ಹೊತ್ತಿಗೆ ಮೃತ ನಾಲ್ವರ ಶವಗಳು ಬೆಳಗಾವಿಗೆ ಬರಲಿವೆ. ವಡಗಾವಿಯ ನಿವಾಸಿ ಜ್ಯೋತಿ ಹತ್ತರವಾಠ್, ಮೇಘ. ಹತ್ತರವಾಠ್
ಶಿವಾಜಿ ನಗರದ ನಿವಾಸಿ ಮಹಾದೇವಿ ಬಾವನೂರ ಹಾಗೂ ಶೆಟ್ಟಿ ಗಲ್ಲಿಯ ನಿವಾಸಿ ಅರುಣ ಕೋಪರ್ಡ್ ಮೃತರು. ಮೃತರ ಕುಟುಂಬದವರ ಮನೆಯಲ್ಲಿ ಈಗ ಸೂಚಕ ಛಾಯೆ ಆವರಿಸಿದೆ. ಪುಣ್ಯಸ್ನಾನಕ್ಕೆಂದು ತೆರಳಿದವರು ಈಗ ಶವವಾಗಿ ಬರುತ್ತಿರುವುದು ಕುಟುಂಬಸ್ಥರಲ್ಲಿ ಮಹಾ ಆಘಾತವನ್ನೇ ನೀಡಿದೆ. ಇದರ ನಡುವೆ ಮೃತರ ಪಾರ್ಥಿವ ಶರೀರವನ್ನು ವಾಪಸ್ ಬೆಳಗಾವಿಗೆ ಕರೆತರಲು ಜಿಲ್ಲಾಡಳಿತ ಕೂಡ ಪ್ರಯಾಗರಾಜ್ನ ಜಿಲ್ಲಾಡಳಿತದೊಂದಿಗೆ ಸತತ ಸಂಪರ್ಕದಲ್ಲಿದೆ.
ಇದನ್ನೂ ಓದಿ: ಹಿಂದುತ್ವದ ಹೆಸರಿನಲ್ಲಿ ದೇಶ ಪ್ರಾಚೀನ ಕಾಲಕ್ಕೆ ನೂಕುತ್ತಿವೆ: ಮಹಾಕುಂಭಮೇಳದ ವಿರುದ್ಧ ಸಾಹಿತಿ ಸೂಳಿಭಾವಿ ಹೇಳಿದ್ದೇನು?
ಬೆಳಗಾವಿ ನಗರದ ವಡಗಾವಿಯ ತಾಯಿ ಜ್ಯೋತಿ ದೀಪಕ ಹತ್ತರವಾಠ್ (44), ಅವರ ಪುತ್ರಿ ಮೇಘಾ ದೀಪಕ ಹತ್ತರವಾಠ್ (24) ಅವರ ಸಾವನ್ನು ದೀಪಕ ಹತ್ತರವಾಠ್ ಅವರು ಅರಗಿಸಿಕೊಳ್ಳಲು ಸಾಧ್ಯವಾಗುತ್ತಲೇ ಇಲ್ಲ. ಆರಂಭದಲ್ಲಿ ಗಾಯಗೊಂಡಿದ್ದ ಮಾಹಿತಿ ಪಡೆದಿದ್ದ ಇವರು, ನಂತರ ಸಾವಿನ ಸುದ್ದಿ ಕೇಳಿ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.ಪುತ್ರಿ ಮೇಘಾಳ ವಿವಾಹ ಮಾಡಿಕೊಡಬೇಕು ಎಂದುಕೊಂಡಿದ್ದರು. ಆದರೆ, ಪ್ರಯಾಗರಾಜ್ಗೆ ಭೇಟಿ ನೀಡಿ ಒಮ್ಮೆ ದರ್ಶನ ಪಡೆಯಬೇಕು ಎಂದು ಪುತ್ರಿ ಹಂಬಲಿಸಿದ್ದಳಂತೆ. ಅದರಂತೆ ವಾಪಸಾದ ಮೇಲೆ ವಿವಾಹದ ಕುರಿತು ಚರ್ಚೆ ನಡೆಸಬೇಕು ಎನ್ನುವವರಿದ್ದರು ಎಂದು ಸ್ವತಃ ದೀಪಕ ಹತ್ತರವಾಠ್ ಅವರೇ ಮಾಧ್ಯಮಗಳ ಎದುರು ಹೇಳಿದ್ದಾರೆ.
ಸಂಸದ, ಶಾಸಕರ ಭೇಟಿ, ಸಾಂತ್ವನ:
ಪ್ರಯಾಗ್ರಾಜ್ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ನಗರದ ನಾಲ್ವರು ಮೃತಪಟ್ಟಿರುವ ವಿಷಯ ತಿಳಿದು ಸಂಸದ ಜಗದೀಶ ಶೆಟ್ಟರ್ ಅವರು ವಡಗಾವಿಯಲ್ಲಿರುವ ದೀಪಕ್ ಹತ್ತರವಾಠ ಅವರ ನಿವಾಸಕ್ಕೆ ತೆರಳಿ ಸಾಂತ್ವನ ಹೇಳಿದರು. ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ರಾಜು ಸೇಠ್ ಅವರು ಕೂಡ ಮೃತರ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.
ಬೆಳಗಾವಿಯ ನಾಲ್ವರ ದುರ್ಮರಣ: ಸಚಿವ ಸತೀಶ್ ಸಂತಾಪ
ಬೆಳಗಾವಿ: ಪ್ರಯಾಗ್ರಾಜ್ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಬೆಳಗಾವಿಯ ನಗರದ ನಾಲ್ವರು ಮೃತಪಟ್ಟಿರುವುದು ತಿಳಿದು ದುಃಖಿತನಾಗಿದ್ದೇನೆ. ಆ ದೇವರು ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ಹಾಗೆ ಮೃತರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸಂತಾಪ ಸೂಚಿಸಿದ್ದಾರೆ.ಪ್ರಯಾಗ್ರಾಜ್ ಮಹಾಕುಂಭದಲ್ಲಿ ಏಕಾಏಕಿ ಜನಸಂದಣಿ ಹೆಚ್ಚಾದ ಕಾರಣ ಮಾತಿನ ಚಕಮಕಿ ಉಂಟಾಗಿದೆ. ಈ ವೇಳೆ ಕಾಲ್ತುಳಿತದಿಂದ ಬೆಳಗಾವಿ ಮೂಲದ ನಾಲ್ವರು ಸಾವಣ್ಣಪ್ಪಿದ್ದಾರೆ. ಅಲ್ಲದೇ ಈ ಮಹಾಕುಂಭಮೇಳದಲ್ಲಿ ಬೆಳಗಾವಿ ಮೂಲದ 30 ಜನರು ಭಾಗವಹಿಸಿದ್ದು, ಕೆಲವರು ಗಾಯಗೊಂಡಿರುವ ಮಾಹಿತಿಯಿದೆ. ಅವರೆಲ್ಲರು ಸುರಕ್ಷಿತವಾಗಿ ಮರಳಲಿ ಎಂದು ತಿಳಿಸಿದ್ದಾರೆ.
ಪ್ರಯಾಗರಾಜ್ ದುರಂತಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಂಬನಿ
ಬೆಳಗಾವಿ: ಉತ್ತರ ಪ್ರದೇಶದ ಪ್ರಯಾಗರಾಜ್ನ ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಕಂಬನಿ ಮಿಡಿದಿದ್ದಾರೆ.ದುರಂತದಲ್ಲಿ ಬೆಳಗಾವಿಯ ನಾಲ್ವರು ಸೇರಿದಂತೆ ಹಲವರು ಸಾವಿಗೀಡಾಗಿರುವ ಸುದ್ದಿ ತಿಳಿದು ಮನಸ್ಸಿಗೆ ನೋವಾಗಿದೆ. ಈ ಸಂದರ್ಭದಲ್ಲಿ ಮೃತರ ಆತ್ಮಗಳಿಗೆ ಶಾಂತಿ ಸಿಗಲೆಂದು ಹಾಗೂ ಕಾಲ್ತುಳಿತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.ಕಾಲ್ತುಳಿತದಲ್ಲಿ ರಾಜ್ಯದ ಇನ್ನು ಕೆಲವು ಜನ ಗಾಯಗೊಂಡಿರುವ ಮಾಹಿತಿಯಿದ್ದು, ಎಲ್ಲರನ್ನು ಕ್ಷೇಮವಾಗಿ ರಾಜ್ಯಕ್ಕೆ ಕರೆತರಲು ರಾಜ್ಯ ಸರ್ಕಾರ ಅಧಿಕಾರಿಗಳನ್ನು ನಿಯೋಜಿಸಿದ್ದು, ನಮ್ಮವರ ರಕ್ಷಣೆಗೆ ಸರ್ಕಾರ ಸಕಲ ಪ್ರಯತ್ನ ಮಾಡುತ್ತಿದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಕುಂಭಮೇಳಕ್ಕೆ ಹೊರಟ ಭಕ್ತರಿಗೆ ಬಾಗಿಲು ತೆರೆಯದ ಪ್ರಯಾಗರಾಜ್ ರೈಲು: ಕಲ್ಲಿನಿಂದ ಡೋರ್ ಒಡೆದ ಪ್ರಯಾಣಿಕರು
ಕಪಿಲೇಶ್ವರ ಮಹಾಸ್ವಾಮಿಗೆ ತ್ರಿವೇಣಿ ಸಂಗಮದ ತೀರ್ಥ ಅಭಿಷೇಕ
ಬೆಳಗಾವಿ: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾದ ಕಪಿಲೇಶ್ವರ ಮಹಾಸ್ವಾಮಿಗೆ ಬೆಳಗಾವಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಪ್ರಯಾಗರಾಜ್ನಲ್ಲಿ ಮಹಾಕುಂಭ ಸ್ನಾನ ಮಾಡಿ ತ್ರಿವೇಣಿ ಸಂಗಮದ ತೀರ್ಥವನ್ನು ಬುಧವಾರ ಅಭಿಷೇಕ ಮಾಡಿದರು. ಮೌನಿ ಅಮಾವಾಸ್ಯೆ ಇರುವುದರಿಂದ ಎಲ್ಲರಿಗೂ ಒಳಿತಾಗಲಿ ಎಂದು ಅಲ್ಲಿಂದ ಬಂದ ತೀರ್ಥವನ್ನು ದೇವಸ್ಥಾನ ಅರ್ಚಕರಿಗೆ ನೀಡಿ ಎಲ್ಲ ಜನರಿಗೆ ಒಳಿತಾಗಲಿ ಎಂದು ತಿಳಿಸಿದರು.