ಬೆಂಗಳೂರು: ಮಧ್ಯರಾತ್ರಿ ಮಾಜಿ ಡಾನ್ ಮಗನಿಂದ ಐಷಾರಾಮಿ ಕಾರು ಡ್ರಿಫ್ಟಿಂಗ್, ನಾನವನಲ್ಲ ನಾನವನಲ್ಲ ಅಂತಿರೋ ರಿಕ್ಕಿ ರೈ!

Published : Mar 23, 2026, 03:20 PM IST
Rikki Rai Lamborghini drifting

ಸಾರಾಂಶ

ಬೆಂಗಳೂರಿನ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಮಧ್ಯರಾತ್ರಿ ಲ್ಯಾಂಬೋರ್ಗಿನಿ ಕಾರಿನಿಂದ ಡ್ರಿಫ್ಟಿಂಗ್ ನಡೆಸಿದ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಿವಂಗತ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಹೆಸರು ಕೇಳಿಬಂದಿದ್ದು, ಪೊಲೀಸರು ಕಾರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ರಿಕ್ಕಿ ರೈಗೆ ನೋಟಿಸ್ ಜಾರಿ ಮಾಡಲಾಗಿದೆ.

ಬೆಂಗಳೂರಿನಲ್ಲಿ ಶ್ರೀಮಂತರನ್ನು ಯಾರು ಪ್ರಶ್ನಿಸುವುದೇ ಇಲ್ಲ ಎಂಬಂತಾಗಿದೆ. ಮಧ್ಯರಾತ್ರಿ ಆದ್ರೆ ಸಾಕು ಐಷಾರಾಮಿ ಕಾರುಗಳ ದರ್ಬಾರ್ ಹೆಚ್ಚಾಗುತ್ತಿದೆ. ಜನನಿಬಿಡ ಪ್ರದೇಶದಲ್ಲಿ ಐಷಾರಾಮಿ ಕಾರುಗಳ ಡ್ರಿಫ್ಟಿಂಗ್ ಪ್ರಕರಣ ಹೆಚ್ಚಾಗುತ್ತಿದೆ. ಇದೀಗ ಬೆಂಗಳೂರು ನಗರದ ಮಧ್ಯಭಾಗದಲ್ಲಿ ಐಷರಾಮಿ ಲ್ಯಾಬೋರ್ಗಿನಿ ಕಾರು ಕಾರಿನಿಂದ ಡ್ರಿಫ್ಟಿಂಗ್ ನಡೆಸಿರುವ ಪ್ರಕರಣ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅನಿಲ್ ಕುಂಬ್ಳೆ ಸರ್ಕಲ್ ಬಳಿ ನಡೆದ ಈ ಘಟನೆಗೆ ಸಂಬಂಧಿಸಿ ಮಾಜಿ ಭೂಗತ ದೊರೆ ದಿವಂಗತ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಹೆಸರು ಕೇಳಿಬಂದಿದ್ದು, ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ಪ್ರಕರಣದ ತನಿಖೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

₹3 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ

ಕಳೆದ ಶನಿವಾರ ಮಧ್ಯರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಎಂ.ಜಿ.ರಸ್ತೆಯ ಅನಿಲ್ ಕುಂಬ್ಳೆ ಸರ್ಕಲ್ ಬಳಿ ₹3 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಕಾರಿನಿಂದ ಹಲವು ಬಾರಿ ಡ್ರಿಫ್ಟಿಂಗ್ ನಡೆಸಲಾಗಿದೆ. ಈ ಅಪಾಯಕಾರಿ ಸ್ಟಂಟ್ ಅನ್ನು ಸ್ಥಳೀಯ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಬಳಿಕ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.

ಈ ಪ್ರಕರಣದಲ್ಲಿ ಕಾರಿನ ಮಾಲೀಕರಾಗಿ ಗುರುತಿಸಲ್ಪಟ್ಟಿರುವ ರಿಕ್ಕಿ ರೈ, “ಕಾರು ಓಡಿಸಿದ್ದು ನಾನು ಅಲ್ಲ” ಎಂದು ಪ್ರಾಥಮಿಕವಾಗಿ ಹೇಳಿಕೆ ನೀಡಿದ್ದಾರೆ. ಆದರೆ ಪೊಲೀಸರು ಕಾರು ಸಂಚರಿಸಿದ ಮಾರ್ಗದುದ್ದಕ್ಕೂ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಅದರಲ್ಲಿ ರಿಕ್ಕಿ ರೈ ಸ್ವತಃ ವಾಹನ ಚಲಾಯಿಸುತ್ತಿರುವುದು ದೃಢಪಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ.

ರಿಕ್ಕಿ ರೈ ಅವರಿಗೆ ವಿಚಾರಣೆಗೆ ನೋಟಿಸ್

ವಿಡಿಯೋ ಹಾಗೂ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದಾಶಿವನಗರದಲ್ಲಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದು ಟೋಯಿಂಗ್ ಮೂಲಕ ಠಾಣೆಗೆ ತಂದಿದ್ದಾರೆ. ಅಲ್ಲದೆ, ರಿಕ್ಕಿ ರೈ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಹೀಗಾಗಿ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

ನಗರ ಸಂಚಾರಿ ಜಂಟಿ ಆಯುಕ್ತ ಕಾರ್ತಿಕ್ ರೆಡ್ಡಿ ಈ ಕುರಿತು ಮಾತನಾಡಿ, “ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ಡ್ರಿಫ್ಟಿಂಗ್ ನಡೆದಿರುವುದು ವಿಡಿಯೋ ಮೂಲಕ ಸ್ಪಷ್ಟವಾಗಿದೆ. ಕಾರು ರಿಕ್ಕಿ ರೈ ಅವರಿಗೆ ಸೇರಿದದ್ದಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ,” ಎಂದು ತಿಳಿಸಿದ್ದಾರೆ.

ಇನ್ನೊಂದೆಡೆ, ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯಿಸಿ, ಘಟನೆ ಆಗಿದೆ, ಪೊಲೀಸರಿಗೆ ಅವರು ಹೇಳಿ ಇದನ್ನು ಮಾಡಲ್ಲ. ತಕ್ಷಣಕ್ಕೆ ಅವರಿಗೆ ನೋಟೀಸ್ ಕೊಟ್ಟಿದ್ದಾರೆ. ಈಗಾಗಲೇ ಕೇಸ್ ಕೂಡ ರಿಜಿಸ್ಟರ್ ಆಗಿದೆ. ಘಟನೆ ಆದ ತಕ್ಷಣ ಕಾನೂನು ಕ್ರಮ ಕೈಗೊಳ್ಳುತ್ತಾರೆ ಈಗಾಗಲೇ ಅವರಿಗೆ ನೋಟೀಸ್ ನೀಡಿದ್ದಾರೆ, ಕಾನೂನು ಪ್ರಕಾರ ಕೆಲಸ ಮಾಡ್ತಿದ್ದಾರೆ. ಸದಾಶಿವನಗರ ಮನೆಯಲ್ಲಿದ್ದ ಕಾರನ್ನು ಟೋಯಿಂಗ್ ಮಾಡಿ ತಂದಿದ್ದೇವೆ. ನೊಟೀಸ್ ಸಹ ನೀಡಲಾಗಿದೆ. ವಿಚಾರಣೆಗೆ ಹಾಜರಾಗಲು ಸಹ ಸೂಚನೆ ನೀಡಿದ್ದೇವೆ. ರಿಕ್ಕಿ ರೈ ಕಾರು ಡ್ರಿಫ್ಟಿಂಗ್ ಮಾಡಿದ್ದಾರಾ ಅನ್ನೋದರ ಬಗ್ಗೆ ತನಿಕೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಈ ಪ್ರಕರಣದಲ್ಲಿ ₹2000 ವರೆಗೆ ದಂಡ ವಿಧಿಸುವ ಸಾಧ್ಯತೆ ಇದ್ದು, ರಿಕ್ಕಿ ರೈ ಪರವಾಗಿ ಅವರ ವಕೀಲರು ದಂಡವನ್ನು ಪಾವತಿಸಿ ಕಾರನ್ನು ಬಿಡುಗಡೆ ಮಾಡಿಸಿಕೊಳ್ಳಲು ಯೋಜನೆ ರೂಪಿಸಿದ್ದಾರೆ ಎಂಬ ಮಾಹಿತಿ ಇದೆ. ಜೊತೆಗೆ, ಮೂಲ ದಾಖಲೆಗಳನ್ನು ಸಲ್ಲಿಸಿ ಕಾರನ್ನು ಬಿಡುಗಡೆ ಮಾಡಿಸುವ ಸಿದ್ಧತೆಯೂ ನಡೆಯುತ್ತಿದೆ.

ಆದರೆ, ಮಾಲೀಕರೇ ವಾಹನ ಚಲಾಯಿಸಿದ್ದಾರೆಯೇ ಅಥವಾ ಮತ್ತೊಬ್ಬರು ಬಳಸಿದ್ದಾರೆಯೇ ಎಂಬುದರ ಕುರಿತು ಪೊಲೀಸರು ಇನ್ನಷ್ಟು ವಿಚಾರಣೆ ನಡೆಸುತ್ತಿದ್ದಾರೆ. ಯಾವುದೇ ರೀತಿಯ ನಿರ್ಲಕ್ಷ್ಯ ಚಾಲನೆ ಅಥವಾ ಸಾರ್ವಜನಿಕ ಸುರಕ್ಷತೆಗೆ ಧಕ್ಕೆಯುಂಟು ಮಾಡುವ ಕ್ರಮಗಳನ್ನು ಸಹಿಸಲಾಗುವುದಿಲ್ಲ ಎಂಬ ಸಂದೇಶವನ್ನು ಈ ಘಟನೆ ನೀಡಿದೆ.

ಒಟ್ಟಾರೆ, ಬೆಂಗಳೂರಿನ ಹೃದಯ ಭಾಗದಲ್ಲೇ ನಡೆದ ಈ ಡ್ರಿಫ್ಟಿಂಗ್ ಪ್ರಕರಣವು ಟ್ರಾಫಿಕ್ ನಿಯಮಗಳ ಪಾಲನೆಯ ಮಹತ್ವವನ್ನು ಮತ್ತೊಮ್ಮೆ ನೆನಪಿಸಿದ್ದು, ಇಂತಹ ಅಪಾಯಕಾರಿ ಚಟುವಟಿಕೆಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.

ರಿಕ್ಕಿ ರೈ ಮೇಲೆ ಫೈರಿಂಗ್

ಈ ಹಿಂದೆ ಪುತ್ರ ರಿಕ್ಕಿ ರೈ ಮೇಲೆ 2025 ರ ಏಪ್ರಿಲ್‌ನಲ್ಲಿ ರಾಮನಗರ ಜಿಲ್ಲೆಯ ಬಿಡದಿಯ ಫಾರ್ಮ್ ಹೌಸ್ ಬಳಿ ಗುಂಡಿನ ಶೂಟೌಟ್ ನಡೆದಿತ್ತು. ಈ ಘಟನೆಯಲ್ಲಿ ರಿಕ್ಕಿ ರೈ ಅವರ ಮೂಗು ಮತ್ತು ಭುಜಕ್ಕೆ ಗಾಯಗಳಾಗಿದ್ದು, ಕಂಟ್ರಿಮೇಡ್ ಗನ್ ಬಳಸಲಾಗಿದೆ ಎಂದು ವರದಿಯಾಗಿತ್ತು. ಈ ಪ್ರಕರಣದಲ್ಲಿ ಹಲವು ಗೊಂದಲಗಳು ಇತ್ತು. ದಾಳಿಯ ನಂತರ ತಕ್ಷಣವೇ ದೂರು ದಾಖಲಿಸದ ಕಾರಣ ರಿಕ್ಕಿ ರೈ ಮೇಲೆ ಅನುಮಾನ ವ್ಯಕ್ತವಾಗಿತ್ತು. ಇದು ಮಿಸ್‌ಫೈರಿಂಗ್ ಎನ್ನಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾಂಗ್ರೆಸ್‌ಗೆ ತಟ್ಟಿದ ಬಂಡಾಯದ ಬಿಸಿ; ಸಮರ್ಥ್ ಶಾಮನೂರು ನಾಮಪತ್ರಕ್ಕೆ ಜಮೀರ್ ಗೈರು, ಸಾದಿಕ್ ಪೈಲ್ವಾನ್ ಕಾರುಬಾರು!
ಮೂಡುಬಿದಿರೆ ಮಹಿಳೆಯರನ್ನ ಮಂಚಕ್ಕೆ ಕರೆದ ಇನ್ಸ್‌ಪೆಕ್ಟರ್ ಸಂದೇಶ್ ಕೇಸ್ CID ತನಿಖೆಗೆ ಹಸ್ತಾಂತರ; ಸಚಿವ ಪರಮೇಶ್ವರ