
ಆನಂದ್ ಎಂ. ಸೌದಿ
ಯಾದಗಿರಿ(ಸೆ.12): ಕಲಬುರಗಿಯಿಂದ ಶುರುವಾದ ಪಿಎಸೈ ಅಕ್ರಮದ ತನಿಖೆ, ರಾಜ್ಯ ರಾಜಧಾನಿ ಬೆಂಗಳೂರು ನಂತರ ಇದೀಗ ತುಮಕೂರು, ದಾವಣೆಗೆರೆ ಹಾಗೂ ದಕ್ಷಿಣಕನ್ನಡದ ಮೂಡಬಿದಿರೆವರೆಗೂ ಹಬ್ಬಿರುವ ಶಂಕೆ ಸಿಐಡಿ ವಲಯದಲ್ಲಿ ದಟ್ಟವಾಗತೊಡಗಿವೆ. ‘ಕನ್ನಡಪ್ರಭ’ಕ್ಕೆ ಲಭ್ಯ ಸಿಐಡಿ ಮೂಲಗಳ ಮಾಹಿತಿ ಪ್ರಕಾರ, 545 ಹುದ್ದೆಗಳ ನಂತರದಲ್ಲಿ ನಡೆಯಬೇಕಿದ್ದ 402 ಹುದ್ದೆಗಳು ಪಿಎಸೈ ಪರೀಕ್ಷೆಯಲ್ಲಿ ಮುಂಗಡ ಬುಕ್ಕಿಂಗ್ ನಡೆಸಿದ್ದ ಅಕ್ರಮ ಅಭ್ಯರ್ಥಿಯೊಬ್ಬನ ವಿಚಾರಣೆ ನಡೆಸಿದ ಸಿಐಡಿ ತಂಡಕ್ಕೆ, ಇಂತಹ ಮಾಹಿತಿಗಳು ದೊರಕಿವೆ ಎನ್ನಲಾಗುತ್ತಿದೆ.
ತುಮಕೂರಿನ ಪರೀಕ್ಷಾ ಕೇಂದ್ರವೊಂದರಲ್ಲಿ ಪರೀಕ್ಷೆ ಬರೆದಿದ್ದ ಅಕ್ರಮ ಅಭ್ಯರ್ಥಿಯ ವಿಚಾರಣೆ ನಡೆಸಿದಾಗ, ಬ್ಲೂಟೂತ್ ದುರ್ಬಳಕೆ ಪತ್ತೆಯಾಗಿದೆ. ತುಮಕೂರು ಸೇರಿದಂತೆ ದಾವಣಗೆರೆ ಹಾಗೂ ಮೂಡಬಿದರೆಯ ಪ್ರತಿಷ್ಠಿತ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದ ಕಲಬುರಗಿ ಹಾಗೂ ವಿಜಯಪುರ ಮೂಲದ ಕೆಲವರು ಈ ಅಕ್ರಮದಲ್ಲಿ ಭಾಗಿಯಾಗಿರುವ ಸುಳಿವುಗಳು ದೊರಕಿವೆ ಎನ್ನಲಾಗಿದೆ. ಈ ಅಕ್ರಮ ಆರೋಪಿಗಳ ಬಗ್ಗೆ ಮತ್ತಷ್ಟುಸಾಕ್ಷ್ಯಾಧಾರಗಳ ಬೆನ್ನತ್ತಿರುವ ಸಿಐಡಿ ತಂಡ, ಇಷ್ಟರಲ್ಲೇ ಅಲ್ಲಿಯೂ ಕೂಡ ದೂರು ದಾಖಲಿಸುವ ಸಾಧ್ಯತೆಗಳಿವೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
PSI Recruitment Scam: ನಡೆಯದ ಪಿಎಸ್ಐ ನೇಮಕ ಪರೀಕ್ಷೆಯಲ್ಲೂ ಅಕ್ರಮ!
ಅಂಗಿಯ ಕಾಲರ್ನಲ್ಲಿ ಬ್ಲೂಟೂತ್ ಇಟ್ಟು ಹೊಲಿಸಿದ್ದ ಮಾಜಿ ಸೈನಿಕ:
ಪರೀಕ್ಷೆಯಲ್ಲಿ ಬ್ಲೂಟೂತ್ ನಕಲು ಮಾಡುವಾಗ, ಇಯರ್ ಫೋನ್ಗಿಂತ ದೂರದಲ್ಲಿ ಬ್ಲೂಟೂತ್ ಡಿವೈಎಸ್ ಇಟ್ಟರೆ ಸಂಪರ್ಕ ಕಡಿತಗೊಂಡು, ಅಸ್ಪಷ್ಟಉತ್ತರ ಕೇಳಿಸುತ್ತದೆ ಎಂಬ ಕಾರಣಕ್ಕೆ ಅಕ್ರಮ ಅಭ್ಯರ್ಥಿಯೊಬ್ಬ ಅಂಗಿಯ ಕಾಲರ್ನಲ್ಲೇ ಬ್ಲೂಟೂತ್ ಡಿವೈಎಸ್ ಅಡಗಿಸಿಟ್ಟು, ಹೊಲಿದಿದ್ದ ಎಂಬ ಅಚ್ಚರಿ ಸಿಐಡಿ ತನಿಖೆಯ ವೇಳೆ ಗೊತ್ತಾಗಿದೆ.
ಯಾದಗಿರಿ: ಪಿಎಸ್ಐ ಅಕ್ರಮ ದೂರು ನಿರ್ಲಕ್ಷಿಸಿದ್ದವರಿಗೆ ಕಂಟಕ?
ಪಿಎಸೈ ಅಕ್ರಮದಲ್ಲಿ ಬ್ಲೂಟೂತ್ ನಕಲು ನಡೆದಿದೆ ಎಂಬ ಆರೋಪಗಳಿಗೆ ಈ ಪ್ರಕರಣ ಸಿಐಡಿ ತಂಡಕ್ಕೆ ಪ್ರಮುಖ ಹಾಗೂ ಬಹುಮುಖ್ಯ ಸಾಕ್ಷಿ ಆಗಲಿದೆ. 545 ಹುದ್ದೆಗಳ ಪಿಎಸೈ ಲಿಖಿತ ಪರೀಕ್ಷೆಯಲ್ಲಿ ವಿಶ್ವನಾಥ್ ಮಾನೆ ಎಂಬ ಅಭ್ಯರ್ಥಿ ಬ್ಲೂಟೂತ್ ದುರ್ಬಳಕೆ ಮಾಡಿಕೊಂಡಿದ್ದ. ಫಲಿತಾಂಶ ಪ್ರಕಟಗೊಂಡಾಗ, ಮಾಜಿ ಸೈನಿಕ ಕೋಟಾದಡಿ ಈತ ರಾಜ್ಯಕ್ಕೇ ಮೊದಲ ರಾರಯಂಕ್ ಪಡೆದಿದ್ದ. ಪಿಎಸೈ ಅಕ್ರಮದ ತನಿಖೆಯ ವೇಳೆ ಈತನನ್ನು ಬಂಧಿಸಲಾಗಿದೆ.
ಪರೀಕ್ಷಾ ಕೇಂದ್ರಗಳ ವಿಡಿಯೋ ದೃಶ್ಯಾವಳಿಗಳ ಸೂಕ್ಷ್ಮವಾಗಿ ಗಮನಿಸಿದ ಸಿಐಡಿ ತಂಡಕ್ಕೆ, ಈತನ ಅಂಗಿಯ ಎಡಭುಜದ ಕಾಲರ್ ಬಳಿ ಉಬ್ಬಿರುವುದು ಕಂಡುಬಂದಿದೆ. ಪರೀಕ್ಷಾ ಕೊಠಡಿಯಲ್ಲಿ ಮೊದಲ ಸಾಲಿನಲ್ಲಿ ಕುಳಿತಿದ್ದ ಈತ ಬಾಗಿಲ ಬಳಿಯೇ ಇದ್ದ. ನೋಬಲ್ ಪರೀಕ್ಷಾ ಕೇಂದ್ರ ಹಾಗೂ ಪರೀಕ್ಷಾ ಪ್ರಕ್ರಿಯೆ ಚಿತ್ರೀಕರಣ ವೇಳೆ ಸಹಜವಾಗಿ ಈತ ಅದರಲ್ಲಿ ಕಂಡುಬಂದಿದ್ದಾನೆ. ಒಂದೊಂದು ಹಂತದ ತನಿಖೆ ನಡೆಸಿ, ವಿಡಿಯೋ ವೀಕ್ಷಿಸಿದಾಗ, ಕಾಲರ್ ಬಳಿ ಉಬ್ಬು ಕಂಡುಬಂದಿದೆ. ವಿಚಾರಿಸಿದಾಗ, ಬ್ಲೂಟೂತ್ ಕನೆಕ್ಟಿವಿಟಿ ತಪ್ಪದಿರಲಿ ಅನ್ನೋ ಕಾರಣಕ್ಕೆ ಕಿವಿಯ ಸಮೀಪವೇ ಕಾಲರ್ನಲ್ಲಿ ಬ್ಲೂಟೂತ್ ಅಡಗಿಸಿ ಹೊಲಿಯಲಾಗಿತ್ತು ಎಂದು ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ