ಕರ್ನಾಟಕದ 29 ತಾಲೂಕುಗಳಲ್ಲಿ ಭೂಕುಸಿತದ ಭೀತಿ..!

Published : Aug 01, 2024, 10:04 AM IST
ಕರ್ನಾಟಕದ 29 ತಾಲೂಕುಗಳಲ್ಲಿ ಭೂಕುಸಿತದ ಭೀತಿ..!

ಸಾರಾಂಶ

ಕಡಿದಾದ ಗುಡ್ಡಗಳಲ್ಲಿ ತೆಳುವಾದ ಮಣ್ಣಿನ ಹೊದಿಕೆ, ಇಳಿಜಾರು ಪ್ರದೇಶದ ಭೂ ಸ್ವರೂಪದಲ್ಲಿ ಬದಲಾವಣೆ, ಭಾರೀ ಮಳೆ, ನೈಸರ್ಗಿಕವಾಗಿ ನೀರು ಹರಿಯುವಿಕೆಗೆ ತಡೆ, ಇಳಿಜಾರು ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿಯುವುದು, ನೈಸರ್ಗಿಕ ನಾಲಾಗಳಲ್ಲಿ ತಾತ್ಕಾಲಿಕ ಆಣೆಕಟ್ಟು ನಿರ್ಮಾಣ, ಗುಡ್ಡ ಸೇರಿದಂತೆ ಇಳಿಜಾರು ಪ್ರದೇಶದಲ್ಲಿ ಅರಣ್ಯ ನಾಶ ಮಾಡುವುದರಿಂದ ಭೂಕುಸಿತವಾಗುತ್ತದೆ.  

ಗಿರೀಶ್‌ ಗರಗ

ಬೆಂಗಳೂರು(ಆ.01):  ರಾಜ್ಯ ಸರ್ಕಾರ ಈಗಲೇ ಎಚ್ಚೆತ್ತುಕೊಂಡು ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದರೆ ಮಲೆನಾಡು ಮತ್ತು ಕರಾವಳಿ ಭಾಗದ 29 ತಾಲೂಕಿನ ಹಲವು ಕಡೆಗಳಲ್ಲಿ ಕೇರಳದ ವಯನಾಡಿನ ರೀತಿಯಲ್ಲೇ ಭೂಕುಸಿತ ಸಂಭವಿಸುವ ಅಪಾಯವಿದೆ!

ಹೌದು. ಮಳೆಗಾಲದ ಸಂದರ್ಭದಲ್ಲಿ ರಾಜ್ಯದ ಹಲವು ಕಡೆಗಳಲ್ಲಿ ಉಂಟಾಗುವ ಭೂಕುಸಿತಕ್ಕೆ ಕಾರಣ ಹಾಗೂ ಅದನ್ನು ತಡೆಯುವ ಸಲುವಾಗಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು 2022ರಲ್ಲಿ ಭೂಕುಸಿತ ನಿರ್ವಹಣೆಗಾಗಿ ಕ್ರಿಯಾಯೋಜನೆ ರೂಪಿಸಿತ್ತು. ಆದರೆ, ಆ ಕ್ರಿಯಾಯೋಜನೆಗೆ ತಕ್ಕಂತೆ ಸರ್ಕಾರ ಈವರೆಗೆ ಸಮರ್ಪಕ ಕ್ರಮ ಕೈಗೊಂಡಿಲ್ಲ. ಹೀಗಾಗಿ 2022ರಲ್ಲಿ ಭಾರೀ ಮಳೆಯಿಂದಾಗಿ ರಾಜ್ಯದ 55 ಕಡೆಗಳಲ್ಲಿ ಭೂಕುಸಿತ ಉಂಟಾಗಿತ್ತು. ಅಲ್ಲದೆ, 2023ರಲ್ಲಿ ಮಳೆ ಪ್ರಮಾಣ ಕುಸಿದ ಕಾರಣ ಕೇವಲ 2 ಕಡೆ ಮಾತ್ರ ಭೂಕುಸಿತವಾಗಿತ್ತು. ಆದರೆ, ಈ ಬಾರಿ ಮಳೆಯ ಪ್ರಮಾಣ ತೀವ್ರವಾಗಿರುವ ಕಾರಣದಿಂದಾಗಿ 16ಕ್ಕೂ ಹೆಚ್ಚಿನ ಕಡೆಗಳಲ್ಲಿ ಗುಡ್ಡ ಮತ್ತು ಭೂಕುಸಿತ ಉಂಟಾಗಿದೆ. ಅಲ್ಲದೆ, ಭೂಕುಸಿತ ನಿರ್ವಹಣೆಗಾಗಿ ರೂಪಿಸಲಾಗಿದ್ದ ರಾಜ್ಯ ಕ್ರಿಯಾಯೋಜನೆಯಲ್ಲಿರುವಂತೆ ಭೂಕುಸಿತವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ 29 ತಾಲೂಕಿನ ಹಲವೆಡೆ ಭೂಕುಸಿತ ಪ್ರಮಾಣ ಹೆಚ್ಚುವ ಆತಂಕವಿದೆ.

ವಯನಾಡು ಬಳಿಕ ಕೇರಳದ ಮತ್ತೊಂದು ಜಿಲ್ಲೆಯಲ್ಲೂ 9 ಬಾರಿ ಭೂಕುಸಿತ, ಓರ್ವ ನಾಪತ್ತೆ, 12 ಮನೆಗಳು ಸರ್ವನಾಶ!

13 ವರ್ಷಗಳಲ್ಲಿ 1,272 ಕಡೆ ಭೂಕುಸಿತ:

ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾಹಿತಿಯಂತೆ 2009ರ ಜನವರಿಯಿಂದ 2021ರ ಡಿಸೆಂಬರ್‌ವರೆಗೆ ರಾಜ್ಯದಲ್ಲಿ 1,272 ಕಡೆಗಳಲ್ಲಿ ಭೂಕುಸಿತ ಉಂಟಾಗಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗುವಂತಾಗಿದೆ. ಅದರಲ್ಲೂ ಉತ್ತರಕನ್ನಡ, ಶಿವಮೊಗ್ಗ ಭಾಗದಲ್ಲಿ 2016ರಿಂದೀಚೆಗೆ ಭೂಕುಸಿತ ಪ್ರಮಾಣ ಹೆಚ್ಚಾಗಿದೆ. 2009ರಲ್ಲಿ ಕೇವಲ 27 ಕಡೆಗಳಲ್ಲಿ ಮಾತ್ರ ಭೂಕುಸಿತ ಉಂಟಾಗಿತ್ತು. ಆದರೆ, 2016ರಲ್ಲಿ 125, 2017ರಲ್ಲಿ 219, 2018ರಲ್ಲಿ 462, 2019ರಲ್ಲಿ 161, 2020ರಲ್ಲಿ 264 ಹೀಗೆ ವರ್ಷದಿಂದ ವರ್ಷಕ್ಕೆ ಭೂಕುಸಿತದ ಪ್ರಮಾಣ ಹೆಚ್ಚಾಗುವಂತಾಗಿದೆ. 2018ರಲ್ಲಿಯೇ ಅತಿಹೆಚ್ಚು ಭೂಕುಸಿತ ಸಂಭವಿಸಿದೆ. ಹಾಗೆಯೇ, ಪಶ್ಚಿಮ ಘಟ್ಟ ಮತ್ತು ಕೊಂಕಣ ಪ್ರದೇಶ ವ್ಯಾಪ್ತಿಯಲ್ಲಿ ಹಲವು ಪ್ರದೇಶಗಳಲ್ಲಿ ಈಗಲೂ ಭೂಕುಸಿತದ ಆತಂಕವಿದೆ. 13 ವರ್ಷಗಳಲ್ಲಿ ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ 439 ಕಡೆಗಳಲ್ಲಿ ಭೂಕುಸಿತ ಉಂಟಾಗಿದೆ.

ಶಾಶ್ವತ ಪರಿಹಾರ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ:

ಭೂಕುಸಿತ ನಿರ್ವಹಣೆಗಾಗಿ ರಾಜ್ಯ ಕ್ರಿಯಾಯೋಜನೆಯಲ್ಲಿ 2022ರಲ್ಲಿ ಭೂಕುಸಿತಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಶಾಶ್ವತ ಪರಿಹಾರವನ್ನೂ ಸೂಚಿಸಲಾಗಿತ್ತು. ಅದರಂತೆ ಹೆಚ್ಚು ಮಳೆ ಬೀಳುವ, ಗುಡ್ಡ ಕುಸಿಯುವ ಸಂಭವನೀಯತೆ ಇರುವ ಸ್ಥಳಗಳನ್ನು ಗುರುತಿಸಬೇಕು. ಅಲ್ಲಿ ತಡೆಗೋಡೆ ನಿರ್ಮಾಣ, ಅಲ್ಲಿನ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸುವುದು, ಭೂಕುಸಿತದಂತಹ ಸಂದರ್ಭದಲ್ಲಿ ವಿವಿಧ ಇಲಾಖೆಗಳೊಂದಿಗೆ ತಕ್ಷಣದಲ್ಲಿ ಸಮನ್ವಯ ಸಾಧಿಸಲು ಸೂಕ್ತ ವ್ಯವಸ್ಥೆ ಮಾಡುವುದು, ಪ್ರತಿವರ್ಷ ಕ್ರಿಯಾಯೋಜನೆಯನ್ನು ಉನ್ನತೀಕರಿಸುವುದು, ಭೂಕುಸಿತ ಭೀತಿ ಇರುವಲ್ಲಿ ಭೂ ವೈಜ್ಞಾನಿಕ ಅಧ್ಯಯನ ನಡೆಸುವುದು ಹೀಗೆ ಇನ್ನಿತರ ಅಂಶಗಳನ್ನು ಉಲ್ಲೇಖಿಸಲಾಗಿತ್ತು. ಆದರೆ, ಆ ಅಂಶಗಳನ್ನು ಜಾರಿಗೊಳಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಹೀಗಾಗಿ ಭೂಕುಸಿತ ಘಟನೆಗಳು ನಿರಂತರವಾಗುವಂತಾಗಿದೆ.

ಭೂಕುಸಿತಕ್ಕೆ ಕಾರಣಗಳು?:

ಕಡಿದಾದ ಗುಡ್ಡಗಳಲ್ಲಿ ತೆಳುವಾದ ಮಣ್ಣಿನ ಹೊದಿಕೆ, ಇಳಿಜಾರು ಪ್ರದೇಶದ ಭೂ ಸ್ವರೂಪದಲ್ಲಿ ಬದಲಾವಣೆ, ಭಾರೀ ಮಳೆ, ನೈಸರ್ಗಿಕವಾಗಿ ನೀರು ಹರಿಯುವಿಕೆಗೆ ತಡೆ, ಇಳಿಜಾರು ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿಯುವುದು, ನೈಸರ್ಗಿಕ ನಾಲಾಗಳಲ್ಲಿ ತಾತ್ಕಾಲಿಕ ಆಣೆಕಟ್ಟು ನಿರ್ಮಾಣ, ಗುಡ್ಡ ಸೇರಿದಂತೆ ಇಳಿಜಾರು ಪ್ರದೇಶದಲ್ಲಿ ಅರಣ್ಯ ನಾಶ ಮಾಡುವುದರಿಂದ ಭೂಕುಸಿತವಾಗುತ್ತದೆ.

ಕೇರಳ: ವಯನಾಡು ಭೂಕುಸಿತ, ಹಸು ಚೀರಾಡಿ ಕುಟುಂಬ ಕಾಪಾಡಿತು..!

ಭೂಕುಸಿತದ ಭೀತಿ ಇರುವ ಜಿಲ್ಲೆ, ತಾಲೂಕುಗಳು

ಉತ್ತರ ಕನ್ನಡ:ಅಂಕೋಲಾ, ಹೊನ್ನಾವರ, ಕಾರವಾರ, ಕುಮಟಾ, ಸಿದ್ದಾಪುರ, ಶಿರಸಿ, ಸೂಪಾ, ಯಲ್ಲಾಪುರ
ಉಡುಪಿ: ಹೆಬ್ರಿ, ಕಾರ್ಕಳ, ಬೈಂದೂರು, ಕುಂದಾಪುರ
ಶಿವಮೊಗ್ಗ: ತೀರ್ಥಹಳ್ಳಿ, ಸಾಗರ, ಹೊಸನಗರ
ಕೊಡಗು:ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ
ದಕ್ಷಿಣ ಕನ್ನಡ: ಬೆಳ್ತಂಗಡಿ, ಬಂಟ್ವಾಳ, ಮಂಗಳೂರು, ಕಡಬ, ಸುಳ್ಯಾ, ಪುತ್ತೂರು
ಚಿಕ್ಕಮಗಳೂರು: ಚಿಕ್ಕಮಗಳೂರು, ಮೂಡಿಗೆರೆ, ಎನ್‌ಆರ್‌ ಪುರ, ಶೃಂಗೇರಿ
ಹಾಸನ: ಸಕಲೇಶಪುರ

2009-2021ರ ನಡುವೆ ಸಂಭವಿಸಿರುವ ಭೂಕುಸಿತ: 

ಉತ್ತರಕನ್ನಡ ಜಿಲ್ಲೆಯಲ್ಲಿ 439 ಭೂಕುಸಿತ ಸಂಭವಿಸಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ-356, ಚಿಕ್ಕಮಗಳೂರು-193, ಉಡುಪಿ-99, ದಕ್ಷಿಣ ಕನ್ನಡ-88, ಕೊಡಗು-79, ಹಾಸನ-18 ಸೇರಿದಂತೆ ಇದುವರೆಗೆ ಒಟ್ಟು 1,272 ಭೂಕುಸಿತ ಉಂಟಾಗಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ