
ಬೆಂಗಳೂರು(ಜೂ.30): ‘ಕೆ.ಎನ್. ರಾಜಣ್ಣ ಸಿದ್ಧವಾಗಿದ್ದರೆ ಬಂದು ಕಾವಿ ತೊಡಲಿ. ಅವರಿಗೆ ಮಠ ಬಿಟ್ಟುಕೊಡುವ ನನ್ನ ಮಾತಿಗೆ ಈಗಲೂ ಬದ್ಧನಾಗಿದ್ದೇನೆ. ಆದರೆ ಒಂದು ದಿನಕ್ಕೆ ಕಾವಿ ತೊಟ್ಟು ಹೋಗುವುದಲ್ಲ. ರಾಜಣ್ಣ ಹೇಳಿದಂತೆ ನಡೆದುಕೊಳ್ಳಲಿ’ ಎಂದು ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಅಧ್ಯಕ್ಷ ಚಂದ್ರಶೇಖರನಾಥ ಸ್ವಾಮೀಜಿ ಹೇಳಿದ್ದಾರೆ. ಕೆ.ಎನ್. ರಾಜಣ್ಣ ಅವರನ್ನು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡಿರುವ ಸ್ವಾಮೀಜಿ ಅವರು, ‘ಆ ರಾಜಣ್ಣ ಹಿಂದೆ ಬಾಯಿಗೆ ಬಂದಂತೆ ದೇವೇಗೌಡರ ಬಗ್ಗೆ ಏನೇನೋ ಮಾತನಾಡಿದ್ದ ಎಂದರು.
‘ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲಿ ಎಂಬುದು ನನ್ನ ಅಭಿಪ್ರಾಯ. ನನಗೆ ಯಾರೋ ಹೇಳಿಕೊಟ್ಟು ಇದನ್ನು ನಾನು ಹೇಳಿಲ್ಲ. ಈ ವಿಚಾರದಲ್ಲಿ ದೇವರಂತಹ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹೆಸರು ತರುವುದು ಸಮಂಜಸವಲ್ಲ. ಕಾಂಗ್ರೆಸ್ ಪಕ್ಷಕ್ಕೆ 135 ಸ್ಥಾನ ಬರಬೇಕಾದರೆ ಅದರ ಹಿಂದೆ ಡಿ.ಕೆ. ಶಿವಕುಮಾರ್ ಅವರ ಶ್ರಮ ಇದೆ. ಹೀಗಾಗಿ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೇಳಿದ್ದೇನೆ’ ಎಂದು ಸಮರ್ಥಸಿಕೊಂಡರು.
‘ಸಿದ್ದರಾಮಯ್ಯ 6 ವರ್ಷ ಅಧಿಕಾರ ಅನುಭವಿಸಿದ್ದಾರೆ. ಈಗ ಡಿ.ಕೆ. ಶಿವಕುಮಾರ್ ಅವರ ಸರದಿ. ಹೀಗಾಗಿ ಬಿಟ್ಟುಕೊಡಲಿ ಎಂದು ಹೇಳಿದ್ದೇನೆ. ನನ್ನ ಹೇಳಿಕೆಯಿಂದ ಇಷ್ಟೆಲ್ಲಾ ಆಗುತ್ತದೆ ಎಂದು ತಿಳಿದಿರಲಿಲ್ಲ. ಇನ್ನು ಮುಂದೆ ಸಿದ್ದರಾಮಯ್ಯ ಅವರನ್ನು ಕೇಳುವುದಿಲ್ಲ. ಆದರೆ ದೇವರಲ್ಲಿ ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಹೇಳಿದರು.
‘ಈಗಲೂ ನನ್ನ ಮಾತಿಗೆ ಬದ್ಧನಾಗಿದ್ದೇನೆ. ಚುನಾವಣೆಗೆ ಡಿ.ಕೆ. ಶಿವಕುಮಾರ್ ಹಣ ಖರ್ಚು ಮಾಡಿದ್ದಾರೆ. ಅವರು ಒಮ್ಮೆ ಮುಖ್ಯಮಂತ್ರಿ ಆಗಲಿ. ಬಳಿಕ ಯಾರಾದರೂ ಆ ಸ್ಥಾನಕ್ಕೆ ಬರಲಿ’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ