
ವಸಂತಕುಮಾರ್ ಕತಗಾಲ
ಹಾವೇರಿ (ಜ.08): ಕುವೆಂಪು ಸವ್ಯಸಾಚಿ, ವಿಶ್ವಕವಿಗಳ ಸಾಲಿನಲ್ಲಿ ನಿಂತರೆ, ಎಸ್.ಎಲ್.ಭೈರಪ್ಪ ವಿಶ್ವಸಾಹಿತಿ ಎಂದು ಸಾಹಿತಿ ಪ್ರಧಾನ ಗುರುದತ್ ಬಣ್ಣಿಸಿದರು. ಪ್ರಧಾನ ವೇದಿಕೆಯಲ್ಲಿ ‘ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ’ ವಿಶೇಷ ಉಪನ್ಯಾಸದಲ್ಲಿ ಪ್ರಧಾನ ಭಾಷಣ ಮಾಡಬೇಕಿದ್ದ ಪ್ರಸಿದ್ಧ ಸಾಹಿತಿ ಡಾ.ಎಸ್.ಎಲ್.ಭೈರಪ್ಪ (ಅನಾರೋಗ್ಯದಿಂದ) ಅನುಪಸ್ಥಿತಿಯಲ್ಲಿ ಸಾಹಿತಿ ಪ್ರಧಾನ ಗುರುದತ್ ಅವರೊಬ್ಬರೇ ಉಪನ್ಯಾಸ ನಡೆಸಿಕೊಟ್ಟರು. ಭೈರಪ್ಪ ಅವರ ಕೃತಿಗಳು ಬಹುತೇಕ ಎಲ್ಲ ಭಾರತೀಯ ಭಾಷೆಗಳಲ್ಲಿ ಅನುವಾದಗೊಂಡಿವೆ. ಲಂಡನ್ನಲ್ಲಿ ಅವರ ಪರ್ವ ಕಾದಂಬರಿಯ 200 ಪ್ರತಿಗಳು ಮಾರಾಟವಾಗಿವೆ. ಭೈರಪ್ಪ ಅವರ ಹೆಸರು ವಿದೇಶಗಳಲ್ಲೂ ಅನುರಣಿತವಾಗುತ್ತಿದೆ ಎಂದರು.
ಎಸ್.ಎಲ್. ಭೈರಪ್ಪ ಸಂದೇಶ: ಭಾರತದ ಎಲ್ಲ ಭಾಷೆಗಳೂ ಭಾರತ ಮಾತೆಯ ತನುಜಾತೆಯರೇ ಆಗಿದ್ದಾರೆ. ಮೊದಲಿಗೆ ಭಾರತದ ಈ ಎಲ್ಲ ಭಾಷೆಗಳಿಗೂ ಮಾತೃಸ್ಥಾನದಲ್ಲಿದ್ದುದು ಸಂಸ್ಕೃತ ಭಾಷೆ. ಅವುಗಳ ಸಾಹಿತ್ಯದ ಸಂವರ್ಧನೆ, ಸಮೃದ್ಧಿಗೆ ಕಾರಣವಾಗಿದ್ದೂ ಸಂಸ್ಕೃತವೇ. ಭಾರತೀಯ ಭಾಷೆಗಳ ಶಬ್ದ ಸಂಪತ್ತು ಬಹುತೇಕವಾಗಿ ಸಂಸ್ಕೃತದಿಂದ ಪಡೆದಿರುವುದೇ ಆಗಿದೆ ಎಂದು ಭೈರಪ್ಪ ಸಂದೇಶ ಕಳುಹಿಸಿದ್ದರು. ಮೊದಲ ಹಂತದಲ್ಲಿ ದೇಶ ಭಾಷೆಗಳ ಸಮೃದ್ಧಿಗೆ ಸಂಸ್ಕೃತ ಕಾರಣವಾಗಿದ್ದರೆ, ಎರಡನೇ ಹಂತದಲ್ಲಿ ಸಂಸ್ಕೃತ ಭಾಷೆಯ ಸಂವರ್ಧನೆಗೆ ದೇಶ ಭಾಷೆಗಳಿಂದ ಅನುವಾದಿತವಾಗಿರುವ ಸಾಹಿತ್ಯಗಳ ಕೊಡುಗೆ ಸಾಕಷ್ಟಿರುವುದು ಅಪರೂಪದ ವಿದ್ಯಮಾನ.
Kannada Sahitya Sammelana: ಸರ್ಕಾರಗಳಿಂದ ಕನ್ನಡದ ಬಗ್ಗೆ ನಿರ್ಲಕ್ಷ್ಯ: ದೊಡ್ಡರಂಗೇಗೌಡ
ಪರ್ವವೂ ಸೇರಿ ನನ್ನದೇ ಏಳು ಕಾದಂಬರಿಗಳೂ ಅನುವಾದವಾಗಿವೆ. ಭಾರತದ ಇತರ ಭಾಷೆಗಳ ವಿದ್ವಾಂಸರು ಸಂಸ್ಕೃತಕ್ಕೆ ಅನುವಾದಿತವಾಗಿರುವ ನನ್ನ ಸಾಹಿತ್ಯದ ಅಂತೆಯೇ ಕನ್ನಡ ಸಾಹಿತ್ಯದ ಹಿರಿಮೆ ಗರಿಮೆಗಳನ್ನು ಅರ್ಥಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ಒಂದು ಕಾಲದಲ್ಲಿ ಮಾತೃಸ್ವರೂಪಿಯಾಗಿದ್ದ ಸಂಸ್ಕೃತದಿಂದ ದೇಶ ಭಾಷೆಗಳು ಸಮೃದ್ಧಗೊಂಡರೆ, ಸಮೃದ್ಧ ಯೌವನಾವಸ್ಥೆಯಲ್ಲಿರುವ ದೇಶಭಾಷೆಗಳ ತನುಜಾತೆಯರು ಇಂದು ಹಿರಿಯಾಳಾಗಿ ನಿಂತಿರುವ ಸಂಸ್ಕೃತ ಮಾತೆಯನ್ನು ಆರೈಕೆ ಮಾಡುತ್ತಿದ್ದಾರೆಂದು ಸಂತೋಷದಿಂದ ಹೇಳಬಹುದು. ಇದರಿಂದ ಭಾರತೀಯ ಭಾಷೆಗಳ ನಡುವೆ ಭಾಷಿಕ ಸೌಹಾರ್ದ ಮಾತ್ರವಲ್ಲದೆ ಭಾವಸಾಮರಸ್ಯವೂ ಸಾಧಿತವಾಗುತ್ತದೆ ಎಂದು ಹೇಳಬಹುದು ಎಂದು ಡಾ.ಎಸ್.ಎಲ್ ಭೈರಪ್ಪ ತಿಳಿಸಿದ್ದಾರೆ.
Kannada Sahitya Sammelana: ಹಾವೇರಿ ಪುಣ್ಯಭೂಮಿ, ತಫೋಭೂಮಿ: ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ
ಸಿಪಾಯಿ ದಂಗೆ ಹಾಗೂ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲೇ ‘ಸುಜಲಾಂ ಸುಫಲಾಂ ಮಲಯಜ ಶೀತಲಾಂ’ ಎಂಬ ಕವನ ನಮ್ಮ ಸಂಸ್ಕೃತಿಯನ್ನು ಪ್ರತಿಪಾದಿಸುತ್ತದೆ. ಕರ್ನಾಟಕದ ಸಂಸ್ಕೃತಿ ಭಾರತೀಯ ಸಂಸ್ಕೃತಿಯ ಭಾಗವೇ ಆಗಿರುವುದರಿಂದ ‘ಜಯ ಭಾರತ ಜನನಿಯ ತನುಜಾತೆ’ಯಲ್ಲಿ ಜನನಿಯ ಜೋಗುಳ ಎನ್ನುವುದು ವಿಶಿಷ್ಟವಾಗಿ ಹೊರಹೊಮ್ಮಿದೆ. ವಿಶ್ವಕವಿ ರವೀಂದ್ರರ ಕವನದಂತೆ ‘ಜಯ ಭಾರತ ಜನನಿಯ ತನುಜಾತೆ’ಯೂ ವಿವಾದಕ್ಕೆ ಕಾರಣವಾಯಿತು. ಶಂಕರ ರಾಮಾನುಜರ ನಂತರ ಮಧ್ವರ ಹೆಸರನ್ನು ಕೈಬಿಟ್ಟಬಗ್ಗೆ ಆಕ್ಷೇಪ ವ್ಯಕ್ತವಾಯಿತು. ‘ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಸಹ ನಮ್ಮ ಹೆಮ್ಮೆಯ ಗೀತೆ. ದೇಶ, ಭಾಷೆ, ಸಂಸ್ಕೃತಿ ಎಲ್ಲವನ್ನೂ ಬಣ್ಣಿಸುವ ಗೀತೆಯೇ ‘ಜಯ ಹೇ ಕರ್ನಾಟಕ ಮಾತೆ’. ರಾಷ್ಟ್ರಕವಿ ಕುವೆಂಪು ಕನ್ನಡಿಗರ ಅನನ್ಯ ಪ್ರೀತಿಯನ್ನು ಗೆದ್ದುಕೊಂಡಿದ್ದಾರೆ ಎಂದು ವಿವರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ