ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಬೀದಿಗಿಳಿದ ಅನ್ನದಾತರು,ಸಿಎಂ ಕಚೇರಿ ಮುತ್ತಿಗೆ ಯತ್ನ!

By Santosh NaikFirst Published Jul 11, 2022, 6:58 PM IST
Highlights

ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಬೆಂಗಳೂರಿನಲ್ಲಿ ಕಬ್ಬು ಬೆಳೆಗಾರರು ನಡೆಸಬೇಕಿದ್ದ ಪ್ರತಿಭಟನೆಯನ್ನು ಹತ್ತಿಕ್ಕುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ರೈತರು ಅಗಮಿಸುತ್ತಿದ್ದಂತೆ ಅವರನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.

ವರದಿ: ಮಮತಾ ಮರ್ಧಾಳ ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು (ಜು11): ರಾಜಧಾನಿ ಬೆಂಗಳೂರಿನಲ್ಲಿಂದು ನೇಗಿಲಯೋಗಿಯ ರಣ ಕಹಳೆ ಜೋರಾಗಿತ್ತು. ದೇಶಕ್ಕೆ ಅನ್ನ ನೀಡೋ ರೈತ ಸಂಕಷ್ಟಕ್ಕೀಡಾಗಿದ್ದಾನೆ. ಜೀವನ ನಡೆಸಲು ಕಷ್ಟವಾಗ್ತಿರೋ ಸಂದರ್ಭದಲ್ಲೂ ಸರ್ಕಾರ ಸುಮ್ಮನಾಗಿದೆ. ಹೀಗಾಗಿ ಸರ್ಕಾರವನ್ನು ಬಡಿದೆಬ್ಬಿಸ್ಬೇಕು ಎಂದು ರಾಜ್ಯ ರಾಜಧಾನಿಗೆ ಸಾವಿರಾರು ಸಂಖ್ಯೆಯಲ್ಲಿ ರೈತರು ಲಗ್ಗೆ ಇಟ್ಟಿದ್ದರು. ಮಂಡ್ಯ ತುಮಕೂರು ಕೋಲಾರ ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳಿಂದ ಸಾವಿರಾರು ರೈತರು ಮೆಜೆಸ್ಟಿಕ್ ನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ‌ ಸೇರಿದ್ದರು. ಬೆಳಗ್ಗೆ 11 ಕ್ಕೆ ಪ್ರತಿಭಟನಾ ಸಮಾವೇಶದ ಮೂಲಕ ಸಿಎಂ ಮನೆಗೆ ಮುತ್ತಿಗೆ ಹಾಕ್ಬೇಕು ಅಂತ ಯೋಜನೆ ರೂಪಿಸಿದ್ದರು. ಆದ್ರೆ ಪಾದಯಾತ್ರೆ‌ ಮುನ್ನವೇ ರೈಲ್ವೆ‌ನಿಲ್ದಾಣದಲ್ಲಿ ರೈತರು ಪ್ರತಿಭಟನೆ ಶುರು ಮಾಡುತ್ತಿದ್ದಂತೆಯೇ ರೈತರನ್ನ ಪೊಲೀಸರು ರೈಲ್ವೆ ನಿಲ್ದಾಣದಲ್ಲಿಯೇ ತಡೆದರು. ಪ್ರತಿಭಟನೆಗೆ ಅವಕಾಶ ಇಲ್ಲದ ಹಿನ್ನಲೆ ಪೊಲೀಸರು ರೈತರನ್ನು ವಶಕ್ಕೆ ಪಡೆದಿದ್ದಾರೆ. ಒಂದು ತಂಡವನ್ನು ವಶಕ್ಕೆ ಪಡೆಯುತ್ತಿದ್ದಂತೆ ಮತ್ತೊಂದು ತಂಡ ರೈಲುಗಳ ಮೂಲಕ ರೈಲ್ವೆ ಸ್ಟೇಷನ್ ಗೆ ಸೇರಿಕೊಳ್ಳುತ್ತಿತ್ತು. ಆದ್ರೆ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿರುವ ರೈತರು , ಹಸಿರು ಶಾಲು ಧರಿಸಿ ಸರ್ಕಾರದ ವಿರುದ್ದ ಧಿಕ್ಕಾರ ಕೂಗುತ್ತಿದ್ದಂತೆ ಪೊಲೀಸರು ವಶಕ್ಕೆ ಪಡೆದಿದ್ರು. ಇನ್ನು ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ಬಿಟ್ಟಿಲ್ಲ ಅಂತ ಸಿಎಂ ಮನೆ ಮುತ್ತಿಗೆ ಹಾಕಲು ಕೆಲ ರೈತರು ಯತ್ನಿಸಿದರು.

ಕೆಎಸ್ಆರ್ಟಿಸಿ ಬಸ್ ನಲ್ಲಿ ಬಂದ ರೈತರನ್ನು (farmers) ಸಿಎಂ ಕಚೇರಿ (CM Office) ಕಡೆ ಸುಳಿಯಲು ಕೂಡ ಪೊಲೀಸರು (Bengaluru Police) ಬಿಡಲಿಲ್ಲ .ಇನ್ನು ರೈತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದ ಬಳಿಕ ಸಿಎಂ ಮನೆ ಬಳಿ ಕೂಡ ರೈತರನ್ನು ವಶಕ್ಕೆ ಪಡೆಯಲಾಯ್ತು.

ಇದನ್ನೂ ಓದಿ:  ಇದು ಸರ್ಕಾರಿ ಪ್ರಾಯೋಜಿತ ಹಲ್ಲೆ, ನಾಳೆ ರಾಜ್ಯಾದ್ಯಂತ ರೈತರ ಪ್ರತಿಭಟನೆ; ರಾಕೇಶ್‌ ಟಿಕಾಯತ್‌

ಹಾಗಾದ್ರೆ ರೈತರ ಬೇಡಿಕೆಗಳು ಏನು: ಒಂದು ಟನ್ ಕಬ್ಬಿಗೆ (Sugarcane Farmer) 4,500 ನಿಗದಿ ಮಾಡಬೇಕು, ಹಳೆಯ ಬಾಕಿ ಹಣ ಪಾವತಿ ಮಾಡಬೇಕು, ಕಬ್ಬು ಬೆಳೆಗಾರರ ಬೆಲೆ ಮೋಸ ಮತ್ತು ತೂಕ ವಂಚನೆಯನ್ನ ನಿಲ್ಲಿಸಬೇಕು, FRP ಬೆಲೆಯಂತೆ ರೈತರ ಕಬ್ಬನ್ನು ಖರೀದಿ ಮಾಡಬೇಕು, ಗೃಹ ವಿದ್ಯುತ್ ಬಾಕಿ ವಸೂಲಿಯನ್ನು ನಿಲ್ಲಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು (Demands) ಈಡೇರಿಸಬೇಕು ಅಂತ ಪ್ರತಿಭಟನೆ (Protest) ನಡೆಸಿದ್ದರು.

ಇದನ್ನೂ ಓದಿ: ರೈತರದ್ದು ಅನಗತ್ಯ ಪ್ರತಿಭಟನೆ ಎಂದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್!

ಇನ್ನು ಅಷ್ಟಕ್ಕೆ ಬಿಡದ ರೈತರು ನಾವು ಪ್ರಾಣವನ್ನಾದ್ರೂ ಕೊಡ್ತೀವಿ ಪ್ರತಿಭಟನೆ ವಾಪಾಸ್ ಪಡೆಯೋದಿಲ್ಲ ಎಂದು ಪಟ್ಟು ಹಿಡಿದ್ರು. ಚಾಮರಾಜಪೇಟೆಯ ಸಿಆರ್ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸ್ತಿದ್ದಾರೆ.  ಪ್ರತಿಭಟನೆಗೇನೋ ಅವಕಾಶವಿಲ್ಲ ಸರಿ. ಆದ್ರೆ ರೈತರ ಸಂಕಷ್ಟಗಳನ್ನ ಸಿಎಂ ಕೇಳ್ಬೇಕಿತ್ತು ಅನ್ನೋದು ರೈತರ ಅಭಿಪ್ರಾಯ. ಸದ್ಯಕ್ಕೆ ಪ್ರತಿಭಟನೆ ಬೂದಿ ಮುಚ್ಚಿದ ಕೆಂಡದಂತಿದ್ದು  ಮುಂದಿನ ದಿನಗಳಲ್ಲಿ ಇದು ಉಗ್ರರೂಪ ತಾಳುವಂತಹ ಎಲ್ಲಾ ಲಕ್ಷಣಗಳು ಕಾಣಿಸ್ತಿದೆ.

click me!