Karnataka State Law University: ಪರೀಕ್ಷೆ ಇಲ್ಲದೇ ಪಾಸು ಮಾಡುವ ಬೇಡಿಕೆ ಒಪ್ಪಲ್ಲ: ಮಾಧುಸ್ವಾಮಿ

By Kannadaprabha NewsFirst Published Dec 15, 2021, 9:19 AM IST
Highlights

*ಕಾನೂನು ವಿವಿ ಪರೀಕ್ಷೆ ರದ್ದತಿಗೆ ಸರ್ಕಾರ ನಕಾರ
*ಪರೀಕ್ಷೆ ಇಲ್ಲದೇ ಪಾಸು ಮಾಡುವ ಬೇಡಿಕೆ ಒಪ್ಪಲ್ಲ 
*ವಿಧಾನಸಭೆಗೆ ಕಾನೂನು ಸಚಿವ ಮಾಧುಸ್ವಾಮಿ ಹೇಳಿಕೆ

ವಿಧಾನಸಭೆ (ಡಿ. 15): ಹುಬ್ಬಳ್ಳಿಯ ಕರ್ನಾಟಕ ಕಾನೂನು ವಿಶ್ವವಿದ್ಯಾಲಯ (Karnataka State Law University) ವಿದ್ಯಾರ್ಥಿಗಳಿಗೆ ಡಿ.14 ರಿಂದ ಪರೀಕ್ಷೆ ನಡೆಸುವ ಸಂಬಂಧದ ಉಪ ಕುಲಪತಿಗಳ ತೀರ್ಮಾನವನ್ನು ರಾಜ್ಯ ಸರ್ಕಾರ ಸಮರ್ಥಿಸಿದ್ದು, ಪರೀಕ್ಷೆ ಇಲ್ಲದೆ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಬೇಕು ಎಂಬ ಬೇಡಿಕೆ ಒಪ್ಪಲು ಸಾಧ್ಯವಿಲ್ಲ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ (J C Madhuswamy) ಸ್ಪಷ್ಟಪಡಿಸಿದ್ದಾರೆ. ಮಂಗಳವಾರ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್‌ ಸದಸ್ಯ ಪ್ರಸಾದ್‌ ಅಬ್ಬಯ್ಯ ವಿಷಯ ಪ್ರಸ್ತಾಪಿಸಿ, ‘ಕುಲಪತಿಗಳು ತರಾತುರಿಯಲ್ಲಿ ಪರೀಕ್ಷೆ ನಿರ್ಧಾರ ಪ್ರಕಟಿಸಿದ್ದು, ಪರೀಕ್ಷೆಯನ್ನು ಸದ್ಯ ನಡೆಸದಂತೆ ವಿದ್ಯಾರ್ಥಿಗಳು ನ್ಯಾಯಾಲಯದ (Court) ಮೆಟ್ಟಿಲೇರಿದ್ದಾರೆ. 26 ಸಾವಿರ ವಿದ್ಯಾರ್ಥಿಗಳ ಭವಿಷ್ಯ ಇದರಲ್ಲಿ ಅಡಗಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಹೇಳಿದರು.

ಈ ವೇಳೆ ಮಾತನಾಡಿದ ಮಾಧುಸ್ವಾಮಿ, ‘ಭವಿಷ್ಯದಲ್ಲಿ ನ್ಯಾಯವಾದಿಗಳು (Lawyers) , ನ್ಯಾಯಾಧೀಶರಂತಹ (Judges) ವೃತ್ತಿ ಅಲಂಕರಿಸುವವರು ಪರೀಕ್ಷೆ ಇಲ್ಲದೆ ಉತ್ತೀರ್ಣ ಮಾಡುವಂತೆ ಮನವಿ ಮಾಡುವುದು ಸರಿಯಲ್ಲ. ಇದರಿಂದ ವಿಶ್ವವಿದ್ಯಾಲಯದ ಘನತೆಗೆ ಕುಂದುಂಟಾಗಲಿದೆ. ಈಗಾಗಲೇ 16 ಸಾವಿರ ವಿದ್ಯಾರ್ಥಿಗಳು ಆಫ್‌ಲೈನ್‌ ಪರೀಕ್ಷೆ (Offline Exam) ಬರೆಯಲು ಸಮ್ಮತಿಸಿದ್ದಾರೆ. ಕುಲಪತಿಗಳ ಬಗ್ಗೆ ವೈಯಕ್ತಿಕ ದೂರುಗಳಿದ್ದರೆ ಸರ್ಕಾರದ ಗಮನಕ್ಕೆ ತರಬಹುದು. ಆದರೆ ಪರೀಕ್ಷೆ ಮಾಡಬಾರದು ಎಂಬುದನ್ನು ಸರ್ಕಾರ ಸಮರ್ಥಿಸುವುದಿಲ್ಲ. ನಿಗದಿಯಂತೆ ಪರೀಕ್ಷೆ ನಡೆಯಲಿದೆ’ ಎಂದು ಸ್ಪಷ್ಟಪಡಿಸಿದರು.

ಲಘುವಾಗಿ ಮಾತನಾಡಿದ ಮಾಧುಸ್ವಾಮಿಗೆ ಮುಜುಗರ

‘ಸಣ್ಣ ನೀರಾವರಿ ಇಲಾಖೆಯ ಅನುದಾನ ಕೊರತೆ ಇದೆ’ ಎಂಬರ್ಥದ ಉತ್ತರ ನೀಡಿದ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ (J C Madhuswamy) ಅವರು ಪ್ರತಿಪಕ್ಷಗಳ ಸದಸ್ಯರ ಪಾಟೀ ಸವಾಲಿನಿಂದಾಗಿ ಮುಜುಗರಕ್ಕೆ ಸಿಲುಗಿದ ಘಟನೆ ನಡೆಯಿತು. ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಸಿ.ಟಿ.ರವಿ ಪರವಾಗಿ ಬೆಳ್ಳಿ ಪ್ರಕಾಶ್‌, ‘ಸಣ್ಣ ನೀರಾವರಿ ಇಲಾಖೆಯಿಂದ ಅನುದಾನ ಯಾವಾಗ ಲಭ್ಯವಾಗಲಿದೆ?’ ಎಂದು ಪ್ರಶ್ನೆ ಕೇಳಿದರು. 

ಉತ್ತರಿಸಿದ ಮಾಧುಸ್ವಾಮಿ, ‘ಅನುದಾನ ನೀಡುವವರಿಗೆ ಈ ಪ್ರಶ್ನೆ ಹಾಕಿ ಕೇಳಿಬಿಟ್ಟರೆ ನನಗೂ ಕ್ಷೇಮ’ ಎಂದು ಲಘುವಾಗಿ ಹೇಳಿದರು. ಇದಕ್ಕೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ರಿಸವ್‌ರ್‍ ಬ್ಯಾಂಕ್‌ ಆನ್ನು ಕೇಳಬೇಕು’ ಎಂದು ಲೇವಡಿ ಮಾಡಿದರು. ಆಗ ಮಧ್ಯಪ್ರವೇಶಿಸಿದ ಕಾಂಗ್ರೆಸ್‌ ಸದಸ್ಯ ಕೃಷ್ಣ ಬೈರೇಗೌಡ, ಸರ್ಕಾರದಲ್ಲಿ ದುಡ್ಡು ಇಲ್ಲ ಎಂದುಕೊಳ್ಳಬೇಕಾ ಅಥವಾ ದುಡ್ಡು ಇದೆ. ಆದರೆ, ಸಣ್ಣ ನೀರಾವರಿ ಇಲಾಖೆಗೆ ಇಲ್ಲ ಎಂದು ಅರ್ಥ ಮಾಡಿಕೊಳ್ಳಬೇಕಾ?’ ಎಂದರು. ಆಗ ಮುಜುಗರಕ್ಕೊಳಗಾದ ಸಚಿವರು, ‘ನನ್ನ ಇಲಾಖೆಗೆ ಅನ್ಯಾಯ ಆಗಿಲ್ಲ. ಅನುದಾನ ಇದೆ ಎಂದರು.

ಕಡೂರು ತಾಲೂಕು ಸಖರಾಯಪಟ್ಟಣ ಹೋಬಳಿ ಅಯ್ಯನಕೆರೆ ಕೋಡಿ ಬಿದ್ದ ನೀರನ್ನು ಲಿಫ್ಟ್‌ ಮಾಡಿ ಚಿಕ್ಕಮಗಳೂರು ಕ್ಷೇತ್ರದ ಬೆರೆಟಗೆರೆಗೆ ನೀರು ಹರಿಸುವ ಕಾಮಗಾರಿಯ ಪ್ರಸ್ತಾವನೆ ಇದೆ. ಸದರಿ ಕೆರೆಗಳನ್ನು ತುಂಬಿಸಲು ವಿಸ್ತೃತ ಯೋಜನಾ ವರದಿಯನ್ನು 9.96 ಕೋಟಿ ರು.ಗೆ ತಯಾರಿಸಲಾಗಿದೆ. ವಿವರವಾದ ಯೋಜನಾ ವರದಿಯನ್ನು ತಾಂತ್ರಿಕ ಮೌಲ್ಯ ನಿರ್ಣಯ ಸಮಿತಿಯ ಮುಂದೆ ಮಂಡಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ:

1) Scrapping Legislative Council: ಗೆದ್ದವರೆಲ್ಲಾ ಹಣ ಖರ್ಚು ಮಾಡಿದ್ದಾರೆ, ಪರಿಷತ್‌ ರದ್ದು ಚರ್ಚೆ ಅಗತ್ಯ: ಈಶ್ವರಪ್ಪ

2) Belagavi Assembly Session: ಪೊಲೀಸ್‌ ಕ್ವಾರ್ಟರ್ಸ್‌ ಕೋಳಿ ಗೂಡಿನಂತಿವೆ: ಸ್ಪೀಕರ್‌ ಕಾಗೇರಿ ಕಿಡಿ

3) Siddaramaiah Vs Somanna: 'ಕಾಂಗ್ರೆಸ್ ಮಾಡಿದ ಪಾಪದ ಕೊಳೆಯನ್ನು ತೊಳೆಯುತ್ತಿದ್ದೇವೆ'

click me!