
ಬೆಂಗಳೂರು: ಸಿಂಗಾಪುರವನ್ನು ಮೀರಿಸುವ ರೀತಿಯಲ್ಲಿ ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 32 ಎಕರೆ ಜಾಗದಲ್ಲಿ ಸುಸಜ್ಜಿತ ಬಸ್ ನಿಲ್ದಾಣವನ್ನು ವಾಣಿಜ್ಯ ಸಂಕೀರ್ಣದೊಂದಿಗೆ ನಿರ್ಮಿಸಲು 'ಪ್ರಾಜೆಕ್ಟ್ ಮೆಜೆಸ್ಟಿಕ್' ಯೋಜನೆಗೆ ರಾಜ್ಯ ಸರ್ಕಾರದ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಕಾಂಗ್ರೆಸ್ ಸದಸ್ಯ ಎಂ. ನಾಗರಾಜು ಅವರು ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಮೆಜೆಸ್ಟಿಕ್ ಬಸ್ ನಿಲ್ದಾಣ ಜಾಗ 40 ಎಕರೆ ಪ್ರದೇಶ ಹೊಂದಿದ್ದು, ಈ ಪೈಕಿ ಎಂಟು ಎಕರೆ ಜಾಗವನ್ನು ಮೆಟ್ರೋ ರೈಲು ನಿಲ್ದಾಣಕ್ಕೆ ನೀಡಲಾಗಿದೆ. ಉಳಿದಿರುವ ಕೆಎಸ್ಆರ್ಟಿಸಿಯ 20 ಎಕರೆ ಜಾಗ ಹಾಗೂ ಬಿಎಂಟಿಸಿಯ 12 ಎಕರೆ ಜಾಗದಲ್ಲಿ ಸಿಂಗಾಪುರವನ್ನು ಮೀರಿಸುವ ರೀತಿಯಲ್ಲಿ ಎರಡು ನಿಗಮಗಳು ಜಂಟಿಯಾಗಿ 'ಇಂಟರ್ ಮೋಡಲ್ ಟ್ರಾನ್ಸಿಟ್ ಹಬ್' ಆಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
ಈ ಯೋಜನೆ ಕೈಗೊಳ್ಳಲು ಸರ್ಕಾರ ಮೂಲಭೂತ ಸೌಕರ್ಯ ಅಭಿವೃದ್ಧಿ ಇಲಾಖೆಯ ನೋಂದಾಯಿತ ಮೆ. ರಿಸರ್ಜಂಟ್ ಇಂಡಿಯಾ ಲಿಮಿಟೆಡ್ಗೆ ಟೆಂಡರ್ ಮೇಲೆ ನೇಮಕಗೊಂಡಿದೆ. ಈಗಾಗಲೇ ಕಾರ್ಯಾದೇಶ ಪತ್ರ ಸಹ ನೀಡಲಾಗಿದೆ. ಈ ಸಂಸ್ಥೆ ಯೋಜನೆಯನ್ನು ಅನುಷ್ಠಾನಗೊಳಿಸಲು ಬೇಕಾದ ನಕ್ಷೆ ಯೋಜನೆಯ ರೂಪುರೇಷೆ, ದಾಖಲೆಗಳು, ಅಭಿವೃದ್ಧಿದಾರರನ್ನು ಆಯ್ಕೆ ಮಾಡಲು ಬೇಕಾದ ಟೆಂಡರ್ ದಸ್ತಾವೇಜನ್ನು ತಯಾರಿಸಲು ಬೇಕಾದ ಸಂಚಾರ ಅಧ್ಯಯನ, ಮಾರುಕಟ್ಟೆ ಅಧ್ಯಯನ, ತಾಂತ್ರಿಕ ಅಧ್ಯಯನ ವರದಿಗಳನ್ನು ಪ್ರಾರಂಭಿಸಿರುತ್ತಾರೆ ಎಂದು ವಿವರಿಸಿದರು.
ಇದನ್ನೂ ಓದಿ: ಕಾಳಸಂತೆಯಲ್ಲಿ ವಾಣಿಜ್ಯ ಸಿಲಿಂಡರ್ ₹4000ವರೆಗೂ ಬಿಕರಿ: ಇಂದು ಬೆಂಗಳೂರಿನ 30% ಹೋಟೆಲ್ಗಳು ಬಂದ್ ಸಂಭವ
ಯೋಜನೆಯನ್ನು ಅನುಷ್ಠಾನಗೊಳಿಸಲು ಬೇಕಾದ ಪ್ರಾಥಮಿಕ ಮಾಹಿತಿಗಳನ್ನು ಸಂಗ್ರಹಿಸಿ ಇನ್ಸೆಪ್ಷನ್ ರಿಪೋರ್ಟ್ಗಳನ್ನು ಹಾಗೂ ಕಾನ್ಸೆಪ್ಟ್ ರಿಪೋರ್ಟ್ಗಳನ್ನು ತಯಾರಿಸಿದ್ದಾರೆ. ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ಗಳ ಕಾರ್ಯಾಚರಣೆ ಉಳಿಸಿಕೊಂಡು ಯೋಜನೆ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಯೋಜನೆಯ ಮೊತ್ತ ಸೇರಿದಂತೆ ಇನ್ನಿತರ ವಿವರಗಳು ಖಾಸಗಿ ಸಂಸ್ಥೆ ವರದಿ ನೀಡಿದ ನಂತರ ತಿಳಿಯಲಿದೆ ಎಂದು ಹೇಳಿದರು.
ಇದನ್ನೂ ಓದಿ: ಗಂಗಾವತಿಯಲ್ಲಿ ಹಿರಿಯ ವಕೀಲರ ಮೇಲೆ ಮುಸ್ಲಿಂ ಯುವಕನಿಂದ ಹಲ್ಲೆ: ಠಾಣೆಗೆ ಮುತ್ತಿಗೆ ಹಾಕಿದ ವಕೀಲರು
ಇದಕ್ಕೂ ಮುನ್ನ ಮಾತನಾಡಿದ ಎಂ.ನಾಗರಾಜು, ಸಾವಿರಾರು ಕೋಟಿ ರು. ಬೆಲೆ ಬಾಳುವ ಜಾಗವನ್ನು ಕೇವಲ ಬಸ್ ಸಂಚಾರಕ್ಕೆ ಬಳಸುವುದರಿಂದ ಉಪಯೋಗವಾಗುವುದಿಲ್ಲ. ಈ ಜಾಗದಲ್ಲಿ ಮಾಲ್, ಹೊಟೇಲ್ ಸೇರಿದಂತೆ ಆತ್ಯಾಧುನಿಕ, ಆಕರ್ಷಕವಾದ, ಅಂತಾರಾಷ್ಟ್ರೀಯ ಮಟ್ಟದ ಬಸ್ ನಿಲ್ದಾಣ ನಿರ್ಮಿಸಿದರೆ ಸಾರಿಗೆ ನಿಗಮಗಳಿಗೆ ದೊಡ್ಡ ಆದಾಯ ಬರುತ್ತದೆ. ಆದಷ್ಟು ಬೇಗ ಯೋಜನೆ ಜಾರಿ ಮಾಡಬೇಕೆಂದು ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ