ಅಂಶಿಪ್ರಸನ್ನ ಕುಮಾರ್‌ ಸೇರಿ 70 ಮಂದಿಗೆ ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ

Kannadaprabha News   | Kannada Prabha
Published : Oct 31, 2025, 05:24 AM IST
Amshi Prasanna Kumar  Award

ಸಾರಾಂಶ

ರಾಜ್ಯ ಸರ್ಕಾರ ನೀಡುವ 70ನೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ‘ಕನ್ನಡಪ್ರಭ’ದ ಕಾರ್ಯನಿರ್ವಾಹಕ ಸಂಪಾದಕ ಅಂಶಿಪ್ರಸನ್ನ ಕುಮಾರ್‌, ಚಲನಚಿತ್ರ ನಟ ಪ್ರಕಾಶ್‌ ರೈ, ಹಿರಿಯ ಸಾಹಿತಿ ರಹಮತ್‌ ತರೀಕೆರೆ, ಪ್ರೊ.ರಾಜೇಂದ್ರ ಚೆನ್ನಿ ಸೇರಿ ವಿವಿಧ ಕ್ಷೇತ್ರಗಳ 70 ಮಂದಿ ಸಾಧಕರು ಭಾಜನರಾಗಿದ್ದಾರೆ.

ಬೆಂಗಳೂರು : ರಾಜ್ಯ ಸರ್ಕಾರ ನೀಡುವ 70ನೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ‘ಕನ್ನಡಪ್ರಭ’ದ ಕಾರ್ಯನಿರ್ವಾಹಕ ಸಂಪಾದಕ ಅಂಶಿಪ್ರಸನ್ನ ಕುಮಾರ್‌, ಚಲನಚಿತ್ರ ನಟ ಪ್ರಕಾಶ್‌ ರೈ, ಹಿರಿಯ ಸಾಹಿತಿ ರಹಮತ್‌ ತರೀಕೆರೆ, ಪ್ರೊ.ರಾಜೇಂದ್ರ ಚೆನ್ನಿ ಸೇರಿ ವಿವಿಧ ಕ್ಷೇತ್ರಗಳ 70 ಮಂದಿ ಸಾಧಕರು ಭಾಜನರಾಗಿದ್ದಾರೆ. ಪ್ರಶಸ್ತಿಯು ತಲಾ 5 ಲಕ್ಷ ರು. ನಗದು, 22 ಕ್ಯಾರೆಟ್‌ನ 25 ಗ್ರಾಂನ ಚಿನ್ನದ ಪದಕ, ಭುವನೇಶ್ವರಿ ವಿಗ್ರಹ, ಪ್ರಮಾಣ ಪತ್ರವನ್ನು ಹೊಂದಿದೆ.

ಗುರುವಾರ ವಿಕಾಸಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟಿಸಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ವಿಶೇಷವಾಗಿ ಈ ಬಾರಿ ಉಳುವವನೇ ಹೊಲದೊಡೆಯ ಚಳವಳಿಯ ಮೂಲಕ ಗೇಣಿದಾರ ರೈತರಿಗೆ ಭೂ ಒಡೆತನ ಸಿಗುವಂತೆ ಮಾಡಿದ ಸಮಾಜವಾದಿ ಹೋರಾಟಗಾರ ಶಿವಮೊಗ್ಗದ ಸ್ವಾತಂತ್ರ್ಯ ಹೋರಾಟಗಾರ ಕೋಣಂದೂರು ಲಿಂಗಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೌರಕಾರ್ಮಿಕರಾದ ಫಕ್ಕೀರಿ, ವೀಣೆ ತಯಾರಕ ಪೆನ್ನ ಓಬಳಯ್ಯ ಅವರ ಸೇವೆ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿದ್ದ ಸಾಧಕರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ

ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿದ್ದ ಸಾಧಕರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಯಾವ ಕ್ಷೇತ್ರದಿಂದಲೂ ಪ್ರಶಸ್ತಿಗೆ ಅರ್ಜಿಗಳನ್ನು ಸ್ವೀಕರಿಸಿಲ್ಲ. ಶೇ.80ರಷ್ಟು ಸಾಧಕರು ಅರ್ಜಿ ಸಲ್ಲಿಸಿಲ್ಲ, ಉಳಿದಂತೆ ಅರ್ಜಿ ಸಲ್ಲಿಸಿದ ಕೆಲ ಸಾಧಕರ ಅರ್ಹತೆ ಗುರುತಿಸಿ ಆಯ್ಕೆ ಮಾಡಲಾಗಿದೆ ಎಂದರು.

ವಿವಿಧ ಕ್ಷೇತ್ರಗಳ ಸಾಧಕರಲ್ಲಿ ಸಾಹಿತ್ಯ 6, ಜಾನಪದ 8, ಸಂಗೀತ 2, ನೃತ್ಯ 1, ಚಲನಚಿತ್ರ 2, ಆಡಳಿತ 1, ವೈದ್ಯಕೀಯ 2, ಸಮಾಜಸೇವೆ 5, ಸಂಕೀರ್ಣ 8, ಹೊರನಾಡು/ಹೊರದೇಶ 2, ಪರಿಸರ 2, ಕೃಷಿ 2, ಮಾಧ್ಯಮ 4, ವಿಜ್ಙಾನ/ತಂತ್ರಜ್ಞಾನ 3, ಸಹಕಾರ 1, ಯಕ್ಷಗಾನ 3, ಬಯಲಾಟ 1, ರಂಗಭೂಮಿ 5, ಶಿಕ್ಷಣ 4, ಕ್ರೀಡೆ 3, ನ್ಯಾಯಾಂಗ 1, ಶಿಲ್ಪಕಲೆ 2, ಚಿತ್ರಕಲೆ 1 ಮತ್ತು ಕರಕುಶಲ 1 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಬಾರಿ ಯಾವುದೇ ಸಂಘ-ಸಂಸ್ಥೆಗಳಿಗೆ ಪ್ರಶಸ್ತಿ ನೀಡಿಲ್ಲ. 13 ಮಹಿಳೆಯರಿಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.

ಸಾಮಾಜಿಕ ನ್ಯಾಯ:

ಪ್ರತಿ ಜಿಲ್ಲೆಗೂ ಪ್ರಶಸ್ತಿ ಸಿಗಬೇಕೆನ್ನುವ ಸಾಮಾಜಿಕ ಪರಿಪಾಲನೆಯಡಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 31 ಜಿಲ್ಲೆಗಳಿಂದಲೂ ಸಾಧಕರನ್ನು ಗುರುತಿಸಲಾಗಿದೆ. ಈ ಪೈಕಿ ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಗೆ ತಲಾ 6, ಬೆಂಗಳೂರು ನಗರಕ್ಕೆ 5, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗೆ 4, ಶಿವಮೊಗ್ಗ, ಉಡುಪಿ, ಕೊಪ್ಪಳ, ವಿಜಯಪುರ ಜಿಲ್ಲೆಗಳಿಗೆ ತಲಾ 3, ಬಾಗಲಕೋಟೆ, ಚಿಕ್ಕಬಳ್ಳಾಪುರ, ಹಾಸನ, ಹೊರನಾಡು-ಹೊರದೇಶ, ವಿಜಯನಗರ, ಯಾದಗಿರಿ, ಬೆಂಗಳೂರು ದಕ್ಷಿಣ, ರಾಯಚೂರು, ಕೊಡಗು ಜಿಲ್ಲೆಗಳಿಗೆ ತಲಾ 2 ಮತ್ತು ಉಳಿದ ಜಿಲ್ಲೆಗಳಿಗೆ ತಲಾ ಒಬ್ಬರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ ಎಂದು ಹೇಳಿದರು.

ನ.1ರಂದು ಪ್ರಶಸ್ತಿ ಪ್ರದಾನ:ನ.1ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 6ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡುವರು ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: Bigg Boss ಮನೆಗೆ ಬಂದ ಮಲ್ಲಮ್ಮ ಮೇಲೆ ಧ್ರುವಂತ್‌ಗೆ ಅಸಮಾಧಾನ; ತಲೆ ಮೇಲೆ ನೀರು ಸುರಿದ್ರು!
ದಾಖಲೆಯತ್ತ ಸಿಎಂ ಸಿದ್ದರಾಮಯ್ಯ ಹೆಜ್ಜೆ: 17ನೇ ಬಜೆಟ್‌ನತ್ತ ಎಲ್ಲರ ಚಿತ್ತ