
ಬೆಂಗಳೂರು (ಜೂ.26): ರಾಜ್ಯಾದ್ಯಂತ ವಿಜೃಂಭಣೆಯಿಂದ ನಾಡಪ್ರಭು ಕೆಂಪೇಗೌಡ ದಿನಾಚರಣೆ ಮಾಡಲು ನಿರ್ಧಾರ ಮಾಡಿರುವ ರಾಜ್ಯ ಸರ್ಕಾರವು, ರಾಜ್ಯದ ಜಯದೇವ ಹೃದ್ರೋಗ ಸಂಸ್ಥೆ, ಸ್ಟಾಕ್ ಟ್ರೇಡರ್ ಝೀರೋಧ ಮುಖ್ಯಸ್ಥ ನಿತಿನ್ ಕಾಮತ್ ಹಾಗೂ ಗಾಲ್ಫ್ ಪಟು ಅದಿತಿ ಅಶೋಕ್ ಅವರನ್ನು ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, 514ನೇ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನ ಆಚರಿಸುತ್ತಿದ್ದೇವೆ. ಕೆಂಪೇಗೌಡ ಅಂತರಾಷ್ಟ್ರೀಯ ಪ್ರಶಸ್ತಿಗೆ ಮೂರು ಜನರನ್ನ ಆಯ್ಕೆ ಮಾಡಲಾಗಿದೆ. ನಾಳೆ ವಿಧಾನಸೌಧದಲ್ಲಿ ಕಾರ್ಯಕ್ರಮ ನಡೆಯಲಿದೆ. ಮೂರು ಜನ ಸಾಧಕರನ್ನ ಸರ್ಕಾರ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು 5 ಲಕ್ಷ ರೂಪಾಯಿ ನಗದು ಹಾಗೂ ಫಲಕ ಹೊಂದಿರುತ್ತದೆ ಎಂದು ಮಾಹಿತಿಯನ್ನು ನೀಡಿದರು.
Bengaluru: ಪೀಣ್ಯ- ಹೊಸೂರು ಸುರಂಗ ರಸ್ತೆ ನಿರ್ಮಾಣ: ಕೇಂದ್ರಕ್ಕೆ ರಾಜ್ಯದ ಮನವಿ
ಇನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಮೂವರಿಗೆ ಕೊಡಲು ತೀರ್ಮಾನ ಮಾಡಲಾಗಿತ್ತು. ಅದರಲ್ಲಿ ಈ ವರ್ಷ ಒಂದು ಪ್ರಶಸ್ತಿಯನ್ನು ಸಮಾಜ ಸೇವೆ ಸಲ್ಲಿಸಿದ ಸಂಸ್ಥೆಗೆ ಕೆಂಪೇಗೌಡ ಅಂತರಾಷ್ಟ್ರೀಯ ಪ್ರಶಸ್ತಿ ಕೊಡಲಾಗುತ್ತಿದೆ. ಈ ಪ್ರಶಸ್ತಿಗೆ ಜಯದೇವ ಆಸ್ಪತ್ರೆ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ. ಇನ್ನು ಹೆಸರಾಂತ ಸ್ಟಾಕ್ ಟ್ರೇಡರ್ ಝೀರೋಧ ಮುಖ್ಯಸ್ಥ ನಿತಿನ್ ಕಾಮತ್ ಹಾಗೂ ಟೊಕಿಯೋ ಒಲಿಂಪಿಕ್ ನಲ್ಲಿ ಗಾಲ್ಫ್ ನಲ್ಲಿ ಸಾಧನೆ ಮಾಡಿದ ಮಹಿಳೆ ಅದಿತಿ ಅಶೋಕ್ ಅವರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ ಎಂದು ಹೇಳಿದರು.
ನಾಳೆ ಮಧ್ಯಾಹ್ನ ಪ್ರಶ್ತಿ ಪ್ರದಾನ: ನಾಳೆ (ಮಂಗಳವಾರ) ಮಧ್ಯಾಹ್ನ 12ಕ್ಕೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯುವ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಸಾಧಕರಿಗೆ ಸಿಎಂ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ಬಾರಿ ಆರೋಗ್ಯ, ಉದ್ದಿಮೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಈ ಮೂವರು ವ್ಯಕ್ತಿಗಳನ್ನು ಕೆಂಪೇಗೌಡ ಅಂತರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಸಾಧಕರಿಗೆ ನಾಳೆ ವಿಧಾನಸೌಧದಲ್ಲಿ ನಡೆಯಲಿರುವ 514ನೇ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಳೆದ ಸರ್ಕಾರ ಹಾಸನದಲ್ಲಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಿತ್ತು. ಅದನ್ನು ಅಡ್ಡಿಪಡಿಸಲು ನಾವು ಇಚ್ಛಿಸುವುದಿಲ್ಲ. ಬೆಂಗಳೂರಿನ ಕಾರ್ಯಕ್ರಮ ಮುಗಿಸಿ ನಂತರ ಹಾಸನ ಕಾರ್ಯಕ್ರಮಕ್ಕೆ ತೆರಳುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದರು.
ಕಡಿಮೆ ಬೆಲೆಯಲ್ಲಿ ಉತ್ತಮ ಚಿಕಿತ್ಸೆ: ಇನ್ನು ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಡಾ. ಮಂಜುನಾಥ್ ಅವರಿಂದ ಕಸಗುಡಿಸುವ ಕೆಲಸಗಾರರವರೆಗೂ ಎಲ್ಲರೂ ಸೇವೆ ಸಲ್ಲಿಸಿದ್ದು, ಹೀಗಾಗಿ ಈ ಸಂಸ್ಥೆಗೆ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ. ಒಟ್ಟು 1,500ಕ್ಕೂ ಅಧಿಕ ಹಾಸಿಗೆ ಸೌಲಭ್ಯ ಹೊಂದಿರುವ ಹೃದ್ರೋಗ ಆಸ್ಪತ್ರೆಯು ಬಹಳ ಕಡಿಮೆ ದರದಲ್ಲಿ ಎಲ್ಲಾ ವರ್ಗದ ಜನರಿಗೆ ಆರೋಗ್ಯ ಸೇವೆ ನೀಡುತ್ತಾ ಬಂದಿದೆ. ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುವ ಜಯದೇವ ಹೃದ್ರೋಗ ಸಂಸ್ಥೆಯು 2023ನೇ ಸಾಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ 3,647 ಕೋಟಿ ರೂ. ಅನುದಾನ ನೀಡಿದ ಕೇಂದ್ರ ಸರ್ಕಾರ
ದೇಶಕ್ಕೆ ಕೀರ್ತಿ ತಂದ ಬೆಂಗಳೂರಿನ ಅದಿತಿ: ಬೆಂಗಳೂರಿನ ಯುವ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಅವರನ್ನು ಕೂಡ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅದಿತಿ ಅಶೋಕ್ ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ನಾಲ್ಕನೇ ಸ್ಥಾನ ಪಡೆದು ದೇಶಕ್ಕೆ ಕೀರ್ತಿ ತಂದಿದ್ದರು. ವಿಶ್ವ ಗಾಲ್ಫ್ ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡಿರುವ ಆಟಗಾರ್ತಿ ಅದಿತಿ ಅಶೋಕ್ ಆಗಿದ್ದಾರೆ. ಮತ್ತೊಂದೆಡೆ ನಿತಿನ್ ಕಾಮತ್ ಕಿರಿಯ ವಯಸ್ಸಿನಲ್ಲೇ ಜೇರೋಧ ಎಂಬ ನವೋದ್ಯಮ ಆರಂಭಿಸಿ ಯಶಸ್ವಿ ಉದ್ಯಮಿಯಾಗಿ ಬೆಳೆದಿದ್ದಾರೆ. ನವೋದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಈ ಸಂಸ್ಥೆಯಿಂದ ಬರುವ 25% ರಷ್ಟು ದುಡಿಮೆ ಹಣವನ್ನು ಸಾಮಾಜಿಕ ಸೇವೆಗೆ ಮುಡಿಪಿಟ್ಟಿದ್ದಾರೆ. ಈಗ ಕೆಂಪೇಗೌಡ ಪ್ರಶಸ್ತಿಗೆ ಈ ಇಬ್ಬರೂ ಆಯ್ಕೆಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ