ಕಟಕಟೆಯಲ್ಲಿ ಪ್ರಜ್ವಲ್‌ ರೇವಣ್ಣ ಹರಟೆಗೆ ಹೈಕೋರ್ಟ್‌ ಗರಂ

By Kannadaprabha NewsFirst Published Oct 20, 2022, 1:07 PM IST
Highlights

ಕಟಕಟೆಯಲ್ಲಿ ಕೂತು ವಕೀಲರ ಜೊತೆ ಲೋಕಾಭಿರಾಮ ಸ್ವರೂಪದಲ್ಲಿ ಮಾತನಾಡಲು ಮುಂದಾದ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರ ವರ್ತನೆಗೆ ಹೈಕೋರ್ಟ್‌ ಬುಧವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿ, ‘ಇದು ನ್ಯಾಯಾಲಯ. ಹೊರಗೆ ಮಾತನಾಡಿದಂತೆ ಇಲ್ಲಿ ಮಾತನಾಡಲು ಹೋಗಬೇಡಿ. ಇಲ್ಲಿ ನಿಮ್ಮ ಮಿತಿಯನ್ನು ಅರ್ಥ ಮಾಡಿಕೊಳ್ಳಿ’ ಎಂದು ಕಟುವಾಗಿ ನುಡಿದೆ.

ಬೆಂಗಳೂರು (ಅ.20): ಕಟಕಟೆಯಲ್ಲಿ ಕೂತು ವಕೀಲರ ಜೊತೆ ಲೋಕಾಭಿರಾಮ ಸ್ವರೂಪದಲ್ಲಿ ಮಾತನಾಡಲು ಮುಂದಾದ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರ ವರ್ತನೆಗೆ ಹೈಕೋರ್ಟ್‌ ಬುಧವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿ, ‘ಇದು ನ್ಯಾಯಾಲಯ. ಹೊರಗೆ ಮಾತನಾಡಿದಂತೆ ಇಲ್ಲಿ ಮಾತನಾಡಲು ಹೋಗಬೇಡಿ. ಇಲ್ಲಿ ನಿಮ್ಮ ಮಿತಿಯನ್ನು ಅರ್ಥ ಮಾಡಿಕೊಳ್ಳಿ’ ಎಂದು ಕಟುವಾಗಿ ನುಡಿದೆ.

‘ಪ್ರಜ್ವಲ್‌ ರೇವಣ್ಣ ಚುನಾವಣಾ ಅಕ್ರಮ ಎಸಗಿದ್ದು, ತಮ್ಮ ಆಸ್ತಿಯ ಕುರಿತು ನಿಖರ ಮಾಹಿತಿ ನೀಡಿಲ್ಲ. ಸೂಕ್ತವಾಗಿ ಚುನಾವಣಾ ಖರ್ಚು-ವೆಚ್ಚದ ವಿವರ ನೀಡಿಲ್ಲ. ಆದ್ದರಿಂದ, ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ತಮ್ಮನ್ನು ವಿಜೇತ ಅಭ್ಯರ್ಥಿಯಾಗಿ ಘೋಷಿಸುವಂತೆ’ ಕೋರಿ ಬಿಜೆಪಿ ಪರಾಜಿತ ಅಭ್ಯರ್ಥಿ ಎ.ಮಂಜು ಹೈಕೋರ್ಟ್‌ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ಖರ್ಗೆ ಆಯ್ಕೆ ಕನ್ನಡಿಗರ ಹೆಮ್ಮೆ: ಸಿದ್ದರಾಮಯ್ಯ ಬಣ್ಣನೆ

ಅರ್ಜಿಯು ಬುಧವಾರ ನ್ಯಾಯಮೂರ್ತಿ ಕೆ.ನಟರಾಜನ್‌ ಅವರ ಪೀಠದ ಮುಂದೆ ವಿಚಾರಣೆಗೆ ಬಂದಾಗ ಕಟಕಟೆಯಲ್ಲಿ ಹಾಕಲಾಗಿದ್ದ ಕುರ್ಚಿಯಲ್ಲಿ ಕುಳಿತ ಪ್ರಜ್ವಲ್‌ ರೇವಣ್ಣ, ತಮ್ಮ ಪರ ವಕೀಲ ಕೇಶವ ರೆಡ್ಡಿ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದರು. ನಂತರ ವಕೀಲರ ಜೊತೆ ಲೋಕಾಭಿರಾಮ ಸ್ವರೂಪದಲ್ಲಿ ಮಾತನಾಡಲು ಮುಂದಾಗಿದ್ದರು. ಇದರಿಂದ ಬೇಸರಗೊಂಡ ನ್ಯಾಯಮೂರ್ತಿಗಳು, ಪ್ರಜ್ವಲ್‌ ರೇವಣ್ಣ ಅವರಿಗೆ ಕೋರ್ಟ್‌ನಲ್ಲಿ ನಡೆದುಕೊಳ್ಳುವ ರೀತಿಯ ಬಗ್ಗೆ ಪಾಠ ಹೇಳಿಕೊಟ್ಟರು. ಬಳಿಕ ಕೆಲ ಕಾಲ ಸಂಸದರ ಹೇಳಿಕೆ ದಾಖಲಿಸಿಕೊಂಡು, ಪಾಟಿ ಸವಾಲಿಗಾಗಿ ವಿಚಾರಣೆಯನ್ನು ನ.4ಕ್ಕೆ ಮುಂದೂಡಿತು.

‘ಚುನಾವಣೆಯಲ್ಲಿ ನಮ್ಮ ಪರ ಪ್ರಚಾರ ಮಾಡಲು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಲಿಕಾಪ್ಟರ್‌ನಲ್ಲಿ ಕಡೂರಿಗೆ ಬಂದಿದಿದ್ದರು. ಅವರಿಬ್ಬರೂ ಸ್ಟಾರ್‌ ಕ್ಯಾಂಪೇನರ್‌. ಆಯೋಗದ ನಿಯಮಗಳ ಪ್ರಕಾರ ಸ್ಟಾರ್‌ ಕ್ಯಾಂಪೇನರ್‌ ಅವರ ಖರ್ಚು ವೆಚ್ಚಗಳನ್ನು ನಮೂದು ಮಾಡಬೇಕಾಗಿಲ್ಲ. ಲಕ್ಸುರಿ ಕಾರು ಆಟೋರಿಕ್ಷಾ ಹಾಗೂ ಇತರೆ ವಾಹನಗಳಲ್ಲಿ ಜನರನ್ನುಸೇರಿಸಿಕೊಂಡು ದೊಡ್ಡ ಮೊತ್ತದ ಹಣ ವ್ಯಯಿಸಿ ಭರ್ಜರಿ ಪ್ರಚಾರ ನಡೆಸಿರುವುದಾಗಿ ತಮ್ಮ ವಿರುದ್ಧ ಅರ್ಜಿದಾರರು ಮಾಡಿರುವ ಆರೋಪ ಸುಳ್ಳು’ ಎಂದು ಪ್ರಜ್ವಲ್‌ ರೇವಣ್ಣ ಉತ್ತರಿಸಿದರು.

ಹಾಫ್ ಹೆಲ್ಮೆಟ್ ಧರಿಸಿದ ಪೇದೆಗೂ ದಂಡ: ಆದರೂ ಜನರ ತರಾಟೆ

ಲಂಡನ್‌ಗೆ ಹೋಗಲು ಅನುಮತಿ ಕೋರಿಕೆ: ಲಂಡನ್‌ಗೆ ಪ್ರಯಾಣಿಸಲು ಅನುಮತಿ ಕೋರಿ ಪ್ರಮಾಣ ಪತ್ರ ಸಲ್ಲಿಸಿರುವ ಪ್ರಜ್ವಲ್‌ ರೇವಣ್ಣ, ಕಳೆದ ಮೇ 5ರಂದು ಕಾರು ಅಪಘಾತದಲ್ಲಿ ಗಾಯಗೊಂಡಿದ್ದೇನೆ. ಬೆನ್ನುಹುರಿಯ ನೋವಿಗೆ ಲಂಡನ್‌ನಲ್ಲಿ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯಬೇಕಿದೆ. ಇದೇ 23 ಮತ್ತು 26ರಂದು ವೈದ್ಯರು ದಿನಾಂಕ ನಿಗದಿಗೊಳಿಸಿದ್ದಾರೆ. ನ.1ಕ್ಕೆ ವಾಪಸು ಬರುತ್ತೇನೆ ಎಂದು ತಿಳಿಸಿದ್ದಾರೆ.

click me!