
ಮೈಸೂರು [ಡಿ.25]: ಆಶ್ರಯ ಯೋಜನೆ ಫಲಾನುಭವಿಗಳ ಆಯ್ಕೆ ವೇಳೆ ಲೋಪವಾಗಿರುವುದರಿಂದ ಈ ಹಿಂದಿನ ಗ್ರಾಮ ಸಭೆಯಡಿ ಆಯ್ಕೆ ಪದ್ಧತಿ ಕೈಬಿಡುವ ಜೊತೆಗೆ 7 ಲಕ್ಷ ಮನೆಗಳ ಮಂಜೂರಾತಿ ವಾಪಸ್ ಪಡೆಯಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಚಾಮುಂಡಿಬೆಟ್ಟದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯ್ತಿಗಳಲ್ಲಿ ಗ್ರಾಮಸಭೆ ನಡೆಸಿ ಆಶ್ರಯ ಯೋಜನೆಗೆ ಆಯ್ಕೆ ಮಾಡುವ ವೇಳೆ ಸಾಕಷ್ಟುಅವ್ಯವಹಾರ, ಅಧಿಕಾರ ದುರುಪಯೋಗವಾಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಪಾರದರ್ಶಕತೆ ತರಲು ಗ್ರಾಮಸಭೆಯಡಿ ಆಯ್ಕೆ ಪದ್ಧತಿ ಕೈಬಿಡುವ ಜತೆಗೆ 7 ಲಕ್ಷ ಮನೆಗಳ ಮಂಜೂರಾತಿಗೂ ತಡೆ ನೀಡಲಾಗಿದೆ ಎಂದರು.
ಶಾಸಕರ ಸಮ್ಮುಖದಲ್ಲಿ ಹಂಚಿಕೆ: ಹಿಂದೆ ಗ್ರಾಮಸಭೆಯಲ್ಲಿ ತೆಗೆದುಕೊಂಡ ನಿರ್ಣಯವೇ ಅಂತಿಮವಾಗಿತ್ತು. ಈಗ ಲೋಪದೋಷಗಳು ಕಂಡುಬಂದಿರುವುದರಿಂದ ಇನ್ನು ಮುಂದೆ ಶಾಸಕರ ಸಮ್ಮುಖದಲ್ಲಿ ಹಂಚಿಕೆ ನಡೆಸಬೇಕು. ನಗರ ವ್ಯಾಪ್ತಿಯ ಕ್ಷೇತ್ರ ಹೊರತುಪಡಿಸಿ 187 ಕ್ಷೇತ್ರಗಳಲ್ಲಿ ಮನೆಗಳ ಫಲಾನುಭವಿಗಳ ಪಟ್ಟಿಅಂತಿಮವಾಗಿದ್ದನ್ನು ಕಾರ್ಯ ನಿರ್ವಹಣಾಧಿಕಾರಿ(ಇಒ) ಮತ್ತು ಶಾಸಕರು ಪರಿಶೀಲಿಸುವಂತೆ ಮಾಡಲಾಗುತ್ತದೆ. ನೆರೆ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡುವ ಕೆಲಸದಲ್ಲಿ ಚುರುಕುಗೊಳಿಸಲಾಗಿದೆ. ಸರ್ಕಾರ ಮಂಜೂರು ಮಾಡಿದ ಐದು ಲಕ್ಷ ಹಣದಲ್ಲಿ ಮನೆ ನಿರ್ಮಿಸಿಕೊಳ್ಳಬೇಕು ಎಂದು ಸಚಿವರು ತಿಳಿಸಿದರು.
ಸರ್ಕಾರಿ ನೌಕರರ ರಜೆ ಪಡೆಯುವ ವಿಧಾನವಿನ್ನು ಸುಲಭ...
ವಸತಿ ಇಲಾಖೆಯಿಂದ ಈಗ ಒಂದು ಮತ್ತು ಎರಡನೇ ಹಂತದ ನಿರ್ಮಾಣ ಕಾರ್ಯದಲ್ಲಿ ಇರುವುದನ್ನು ಪೂರ್ಣಗೊಳಿಸಲು 211 ಕೋಟಿ ರು. ಮಂಜೂರು ಮಾಡಲಾಗಿದೆ. ಹಂಚಲಾಗಿದ್ದ 59,000 ಮನೆಗಳ ಪೈಕಿ 6,000 ಬೋಗಸ್ ಎನ್ನುವುದು ಕಂಡುಬಂದಿದೆ. ಬೀದರ್ ಜಿಲ್ಲೆಯ ಒಂದೇ ತಾಲೂಕಿನಲ್ಲಿ 22,000 ಮನೆಗಳ ಲೆಕ್ಕ ತೋರಿಸಲಾಗಿದೆ. ಇದರ ಸತ್ಯಾಂಶ ಹೊರತೆಗೆಯುವ ಅವಶ್ಯಕತೆಯಿದೆ ಎಂದು ಸಚಿವರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ