Industrial Tax : ಕೈಗಾರಿಕಾ ತೆರಿಗೆ ಇಳಿಕೆಗೆ ಸರ್ಕಾರದ ಸಮ್ಮತಿ

By Kannadaprabha NewsFirst Published Dec 22, 2021, 8:00 AM IST
Highlights
  •  ಕೈಗಾರಿಕಾ ತೆರಿಗೆ ಇಳಿಕೆಗೆ ಸರ್ಕಾರದ ಸಮ್ಮತಿ
  • ಒಟ್ಟು ಮೂರು ಮಸೂದೆಗಳಿಗೆ ವಿಧಾನಸಭೆ ಅನುಮೋದನೆ
  •  ಶಿಕ್ಷಕರ ವರ್ಗಾವಣೆ ತಿದ್ದುಪಡಿ ಮಸೂದೆ ಅಂಗೀಕಾರ

 ವಿಧಾನಸಭೆ (ಡಿ.22):  ಕರ್ನಾಟಕ (Karnataka)  ನಗರ ಪಾಲಿಕೆಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ, ಕೃಷಿ ವಿಜ್ಞಾನಗಳ (Agriculture science) ವಿಶ್ವವಿದ್ಯಾಲಯಗಳ (ತಿದ್ದುಪಡಿ) ಹಾಗೂ ರಾಜ್ಯ ಸಿವಿಲ್‌ (Civil) ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ವಿಧೇಯಕಕ್ಕೆ ವಿಧಾನಸಭೆ (Assembly) ಮಂಗಳವಾರ ಅನುಮೋದನೆ ನೀಡಿದೆ.  ಕೈಗಾರಿಕೆಗಳ ತೆರಿಗೆಯನ್ನು ವಾಣಿಜ್ಯ ತೆರಿಗೆ ಎಂದು ಪರಿಗಣಿಸದೇ, ಕೈಗಾರಿಕೆಗಳಿಗೆ ಪ್ರತ್ಯೇಕ ತೆರಿಗೆ ರೂಪಿಸಬೇಕು ಎಂಬ ಉದ್ಯಮಿಗಳ ಮನವಿಗೆ ಸರ್ಕಾರ ಒಪ್ಪಿಗೆ ನೀಡಿ, ತಿದ್ದುಪಡಿ ತಂದಿದೆ. ಇದರಿಂದ ಕೈಗಾರಿಕೆಗಳಿಗೆ ತೆರಿಗೆ ಹೊರೆ ಕಡಿಮೆಯಾಗಲಿದೆ.

ಈ ವೇಳೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ (Bhyrathi Basavaraju) ಮಾತನಾಡಿ, ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗಲು ಈ ತಿದ್ದುಪಡಿ ವಿಧೇಯಕ ಜಾರಿಗೊಳಿಸಲಾಗಿದೆ. ಆದರೆ ಯಾವುದೇ ಕೈಗಾರಿಕಾ ಕಟ್ಟಡ ಅಥವಾ ಖಾಲಿ ಭೂಮಿ (Land) ಬಳಸದೇ ಖಾಲಿ ಇದ್ದರೆ, ಆ ಸ್ವತ್ತಿಗೆ ತೆರಿಗೆಯಿಂದ ವಿನಾಯಿತಿ ನೀಡುವುದಿಲ್ಲ ಎಂದು ವಿವರಿಸಿದರು. ಇದಕ್ಕೆ ಧ್ವನಿಗೂಡಿಸಿದ ಮಾಜಿ ಸಚಿವ ಜಗದೀಶ್‌ ಶೆಟ್ಟರ್‌, ಈ ಕಾಯಿದೆಯಿಂದ ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗಲಿದೆ. ಕೈಗಾರಿಕಾ ನೀತಿ ಜಾರಿಯಲ್ಲೂ ಈ ಬಗ್ಗೆ ಪ್ರಸ್ತಾಪಿಸಲಾಗಿತ್ತು ಎಂದು ತಿಳಿಸಿದರು.

ಈ ವೇಳೆ ಪ್ರತಿಪಕ್ಷದ ಸದಸ್ಯರಾದ ಸಾ.ರಾ. ಮಹೇಶ್‌, ಪ್ರಸಾದ್‌ ಅಬ್ಬಯ್ಯ ಸೇರಿದಂತೆ ಅನೇಕರು, ಖಾಲಿ ಜಾಗದ ಮೇಲೆಯೂ ತೆರಿಗೆ ವಿಧಿಸುವ ಸರ್ಕಾರ ಕ್ರಮ ಸರಿಯಲ್ಲ ಎಂದು ವಾದಿಸಿದರು. ಆದರೆ ಇದು ವಾಣಿಜ್ಯೇತರಕ್ಕೆ ಸಂಬಂಧಿಸಿದ ವಿಷಯವಲ್ಲ. ಇದರಿಂದ ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಿಲ್ಲ ಎಂದು ಸಚಿವ ಬೈರತಿ ಬಸವರಾಜ ಸ್ಪಷ್ಟಪಡಿಸಿದರು.

ಶಿವಮೊಗ್ಗ ಕೃಷಿ ವಿವಿಗೆ ಮರು ನಾಮಕರಣ:

ಶಿವಮೊಗ್ಗದಲ್ಲಿರುವ (Shivamogga) ಕೃಷಿ ವಿಶ್ವವಿದ್ಯಾಲಯಕ್ಕೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯವೆಂದು ಮರುನಾಮಕರಣ ಮಾಡಲು ಸದನ ಅನುಮೋದನೆ ನೀಡಿತು. ಸರ್ಕಾರದ ಈ ನಿರ್ಧಾರವನ್ನು ಶಾಸಕ ಕುಮಾರ್‌ ಬಂಗಾರಪ್ಪ (Kumar Bangarapa) ಸ್ವಾಗತಿಸಿದರು.

ರಾಜ್ಯ ಸಿವಿಲ್‌ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ವಿಧೇಯಕದಲ್ಲಿ ಈ ಹಿಂದೆ ಕಡ್ಡಾಯ ವರ್ಗಾವಣೆಯಿಂದ 50 ವರ್ಷ ಮೇಲ್ಪಟ್ಟಹಾಗೂ ಗರ್ಭಿಣಿಯರಿಗೆ ವಿನಾಯಿತಿ ನೀಡಲಾಗಿತ್ತು. ಆದರೆ ಈ ಕಾಯಿದೆಯಲ್ಲಿ, ಪದವಿಪೂರ್ವ ಉಪನ್ಯಾಸಕರಿಗೆ ಅವಕಾಶ ಇರಲಿಲ್ಲ. ಆದ್ದರಿಂದ ಪದವಿ ಪೂರ್ವ ಕಾಲೇಜಿನ (College) ಪ್ರಾಂಶುಪಾಲರು ಹಾಗೂ ಉಪನ್ಯಾಸಕರಿಗೂ ಅವಕಾಶ ನೀಡುವಂತೆ ತಿದ್ದುಪಡಿ ತರಲಾಗಿದೆ. ಈ ಮೂರು ಮಸೂದೆಗಳನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.

ಸಣ್ಣ ಕೈಗಾರಿಕೆಗಳ ಪ್ರತಿಭಟನೆ :  ಕೈಗಾರಿಕೆಗಳಿಗೆ ಅಗತ್ಯವಿರುವ ಕಚ್ಚಾ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುವಂತೆ ಆಗ್ರಹಿಸಿ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳ ಮಾಲೀಕರು (MSME Association) ಸೋಮವಾರ ಉತ್ಪಾದನಾ ಕಾರ್ಯವನ್ನು ಸ್ಥಗಿತಗೊಳಿಸಿ ರಾಜ್ಯಾದ್ಯಂತ ಮೌನ ಪ್ರತಿಭಟನೆ ನಡೆಸಿದರು. ಬೆಂಗಳೂರು ನಗರ (Bengaluru City) ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿನ ಕೈಗಾರಿಕಾ ಸಂಘಗಳು  ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದು, ರಾಜ್ಯಾದ್ಯಂತ ಒಟ್ಟು 6.5 ಲಕ್ಷ ಕೈಗಾರಿಕೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಅಲ್ಲದೆ, ಆಯಾ ಜಿಲ್ಲಾ ಹಂತದಲ್ಲಿ ಕೈಗಾರಿಕೆಗಳ ಮಾಲೀಕರು (Industrialist) ಮೌನ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆದರು.

ಕಚ್ಚಾ ವಸ್ತುಗಳ ಬೆಲೆ ಗಗನಕ್ಕೇರಿದ್ದನ್ನು ( Raw Materials Prices) ಖಂಡಿಸಿ ‘ಆಲ್‌ ಇಂಡಿಯ ಕೌನ್ಸಿಲ್‌ ಆಫ್‌ ಅಸೋಸಿಯೇಷನ್‌’ (All India council of Association) ಕರೆ ನೀಡಿದ್ದ ಪ್ರತಿಭಟನೆಗೆ ಪೀಣ್ಯ, ಮೈಸೂರು, ಬೆಳಗಾವಿ, ಕರ್ನಾಟಕ ಸ್ಟೇಟ್‌ ಪಾಲಿಮ​ರ್‍ಸ್ ಅಸೋಸಿಯೇಷನ್ಸ್‌, ಫೋಂಡ್ರಿ ಕ್ಲಸ್ಟರ್‌, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫೋಂಡ್ರಿ, ಬೊಮ್ಮಸಂದ್ರ, ಮಾಚೋಹಳ್ಳಿ, ರಾಜಾಜಿನಗರ ಕೈಗಾರಿಕಾ ಸಂಘಗಳು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವು.

ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶ ಸ್ತಬ್ಧ:  ಮುಷ್ಕರದ ಭಾಗವಾಗಿ ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶವಾಗಿರುವ ಪೀಣ್ಯ ಕೈಗಾರಿಕಾ ಪ್ರದೇಶ (Peenya Industrial Area) ಇಡೀ ದಿನ ಸ್ತಬ್ಧವಾಗಿತ್ತು. ಅಲ್ಲದೆ, ಇಲ್ಲಿಯ 16 ಸಾವಿರಕ್ಕೂ ಹೆಚ್ಚು ಸಣ್ಣ ಕೈಗಾರಿಕೆಗಳು ತನ್ನ ಸೇವೆಯನ್ನು ಸ್ಥಗಿತಗೊಳಿಸುವ ಮೂಲಕ ಪ್ರತಿಭಟನೆಗೆ ಬೆಂಬಲ (Protest) ಸೂಚಿಸಿದ್ದವು. ಎಲ್ಲಾ ಕೈಗಾರಿಕೆಗಳ ಮಾಲೀಕರು ಪ್ರತಿಭಟನೆಯಲ್ಲಿ ಭಾಗವಹಿಸಿ ತುಮಕೂರು ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್‌4) ಪಕ್ಕದ ಸವೀರ್‍ಸ್‌ ರಸ್ತೆಯಿಂದ ಪೀಣ್ಯ ಜಿಮ್‌ಕಾನ್‌ ಕ್ಲಬ್‌ ವರೆಗೆ 2 ಕಿ.ಮೀ. ಮೌನ ರಾರ‍ಯಲಿ ನಡೆಸಿದರು.

click me!