Karnataka CM: ಸಿಎಂ ಹುದ್ದೆಗಾಗಿ ಡಿಕೆಶಿ, ಸಿದ್ದು ಅಭಿಮಾನಿಗಳ ಹರಕೆ

Published : May 16, 2023, 10:45 PM ISTUpdated : May 16, 2023, 10:48 PM IST
Karnataka CM: ಸಿಎಂ ಹುದ್ದೆಗಾಗಿ ಡಿಕೆಶಿ, ಸಿದ್ದು ಅಭಿಮಾನಿಗಳ ಹರಕೆ

ಸಾರಾಂಶ

ರಾಜ್ಯದ ಮುಂದಿನ ಸಿಎಂ ಪಟ್ಟಕ್ಕಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ನಡುವೆ ತೀವ್ರ ಪೈಪೋಟಿ ನಡೆದಿರುವುದರ ನಡುವೆಯೇ ತಮ್ಮ ನಾಯಕನಿಗೆ ಸಿಎಂ ಪಟ್ಟದೊರೆಯಲೆಂದು ಪ್ರಾರ್ಥಿಸಿ ಸಿದ್ದು ಹಾಗೂ ಡಿಕೆಶಿ ಅಭಿಮಾನಿಗಳು ಹರಕೆ, ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಬೆಂಗಳೂರು (ಮೇ.16) : ರಾಜ್ಯದ ಮುಂದಿನ ಸಿಎಂ ಪಟ್ಟಕ್ಕಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ನಡುವೆ ತೀವ್ರ ಪೈಪೋಟಿ ನಡೆದಿರುವುದರ ನಡುವೆಯೇ ತಮ್ಮ ನಾಯಕನಿಗೆ ಸಿಎಂ ಪಟ್ಟದೊರೆಯಲೆಂದು ಪ್ರಾರ್ಥಿಸಿ ಸಿದ್ದು ಹಾಗೂ ಡಿಕೆಶಿ ಅಭಿಮಾನಿಗಳು ಹರಕೆ, ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಸಿದ್ದರಾಮಯ್ಯನವರು ಮುಂದಿನ ಸಿಎಂ((Next CM Siddaramaiah) ಆಗಲೆಂದು ಪ್ರಾರ್ಥಿಸಿ ಅಖಿಲ ಕರ್ನಾಟಕ ರಾಕೇಶ್‌ ಸಿದ್ದರಾಮಯ್ಯನವರ ಅಭಿಮಾನಿಗಳ ಬಳಗದ ವತಿಯಿಂದ ಮಂಗಳವಾರ ಮೈಸೂರಿನ ಚಾಮುಂಡಿಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದಲ್ಲಿ 101 ಈಡುಗಾಯಿ ಒಡೆದು ವಿಶೇಷ ಪೂಜೆ ಸಲ್ಲಿಸಲಾಯಿತು. ಅಲ್ಲದೆ, ಮೈಸೂರಿನ ವರುಣ ಕ್ಷೇತ್ರದ ತುಮ್ಮನೇರಳೆ ಗ್ರಾಪಂ ವ್ಯಾಪ್ತಿಯ 5ಕ್ಕೂ ಹೆಚ್ಚು ಗ್ರಾಮಗಳ ಮುಖಂಡರು ಸಿದ್ದು ಅವರು ಸಿಎಂ ಆಗಲೆಂದು ಮರಡಿಹುಂಡಿ ಗ್ರಾಮದೇವತೆಯಾದ ದಾಳಿಕೇಶ್ವರಸ್ವಾಮಿ ಮತ್ತು ಕಾಳಮ್ಮ ದೇವಾಲಯದಲ್ಲಿ ಹರಕೆ ಹೊತ್ತು, ವಿಶೇಷ ಪೂಜೆ ಸಲ್ಲಿಸಿದರು. ಸಿದ್ದುವಿಗೆ ಸಿಎಂ ಸ್ಥಾನ ಸಿಗಲೆಂದು ಪ್ರಾರ್ಥಿಸಿ ಚಿಕ್ಕಮಗಳೂರು ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಮುರುಗೇಶಪ್ಪ ನೇತೃತ್ವದಲ್ಲಿ ತರೀಕೆರೆಯ ಗುರು ರೇವಣಸಿದ್ದೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸಿದ್ದು ಸಿಎಂ ಆಗಲೆಂದು ಹಾರೈಸಿ ಬಾಗಲಕೋಟೆ ಜಿಲ್ಲೆ ಮನ್ನಿಕಟ್ಟಿಗ್ರಾಮದ ಸುರೇಶ ವಾಲೀಕಾರ ಎಂಬ ಸಿದ್ದು ಅಭಿಮಾನಿ, ಮನ್ನಿಕಟ್ಟಿಗ್ರಾಮದಿಂದ ಕೂಡಲಸಂಗಮಕ್ಕೆ ಸುಮಾರು 35 ಕಿ.ಮೀ.ಗಳಷ್ಟುದೂರ ಪಾದಯಾತ್ರೆಯೊಂದಿಗೆ ದೀರ್ಘದಂಡ ನಮಸ್ಕಾರ ಹಾಕಿದ್ದಾರೆ. ನೂರಾರು ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ವಾದ್ಯ ಮೇಳಗಳೊಂದಿಗೆ ಪಾದಯಾತ್ರೆಯಲ್ಲಿ ಇವರಿಗೆ ಜೊತೆಯಾದರು. ಈ ಮಧ್ಯೆ, ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾ ಅಹಿಂದ ಸಂಘಟನೆಯ ಮುಖಂಡರು, ಸಿದ್ದರಾಮಯ್ಯನವರನ್ನೇ ಸಿಎಂ ಮಾಡುವಂತೆ ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗಲೆಂದು ವಿಶೇಷ ಪೂಜೆ: 1,100 ತೆಂಗಿನಕಾಯಿ ಒಡೆದು ಹರಕೆ ತೀರಿಸಿದ ಅಭಿಮಾನಿಗಳು

ಡಿಕೆಶಿ ಪರ ಅಭಿಮಾನಿಗಳ ಪ್ರಾರ್ಥನೆ:

ಈ ಮಧ್ಯೆ, ಡಿ.ಕೆ.ಶಿವಕುಮಾರ್‌(DK Shivakumar) ಅವರು ರಾಜ್ಯದ ಮುಖ್ಯಮಂತ್ರಿಯಾಗಲಿ ಎಂದು ಪ್ರಾರ್ಥಿಸಿ ಕೋಲಾರದಲ್ಲಿ ನಗರದ ಅಧಿದೇವತೆ ಕೋಲಾರಮ್ಮ ದೇವಾಲಯದಲ್ಲಿ ಮಂಗಳವಾರ ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೃಷ್ಣೇಗೌಡ ಅವರ ನೇತೃತ್ವದಲ್ಲಿ 101 ಈಡುಗಾಯಿ ಒಡೆದು ವಿಶೇಷ ಪೂಜೆ ಸಲ್ಲಿಸಲಾಯಿತು. ಇದೇ ವೇಳೆ, ಡಿಕೆಶಿಯನ್ನು ಸಿಎಂ ಮಾಡುವಂತೆ ಉಡುಪಿ ಹಾಗೂ ಮಂಡ್ಯ ಜಿಲ್ಲಾ ಒಕ್ಕಲಿಗರ ಸಂಘಗಳು ಆಗ್ರಹಿಸಿವೆ. ಅಲ್ಲದೆ, ಡಿಕೆಶಿಯನ್ನು ಸಿಎಂ ಮಾಡುವಂತೆ ಆಗ್ರಹಿಸಿ ಮದ್ದೂರಿನಲ್ಲಿ ಮಂಗಳವಾರ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ವತಿಯಿಂದ ಬೃಹತ್‌ ಪ್ರತಿಭಟನೆ ನಡೆಸಿ, ರಸ್ತೆ ತಡೆ ನಡೆಸಲಾಯಿತು.

ಡಿಕೆಶಿ ಸಿಎಂ ಆಗಲೆಂದು ಹರಕೆ: ತಿರುಪತಿಯಿಂದ ಲಾಡು ತಂದ ಅಭಿಮಾನಿ !

ಸತೀಶ ಜಾರಕಿಹೊಳಿ, ಎಂಬಿಪಿ, ಪರಮೇಶ್ವರ್‌ ಪರವೂ ಬ್ಯಾಟಿಂಗ್‌:

ಇದೇ ವೇಳೆ, ಮಾಜಿ ಡಿಸಿಎಂ ಪರಮೇಶ್ವರ್‌(Dr G Parameshwar), ಸತೀಶ ಜಾರಕಿಹೊಳಿ(Satish jarkiholi), ಎಂಬಿ ಪಾಟೀಲ್‌(MB patil) ಅವರುಗಳನ್ನು ಸಿಎಂ ಮಾಡುವಂತೆ ಅವರ ಅಭಿಮಾನಿಗಳು ಆಗ್ರಹಿಸಿದ್ದಾರೆ. ಮಾಜಿ ಉಪಮುಖ್ಯಮಂತ್ರಿ, ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ ಅವರನ್ನು ಮುಖ್ಯಮಂತ್ರಿಯಾಗಿ ಘೋಷಣೆ ಮಾಡಬೇಕು ಎಂದು ಹಾವೇರಿ ಜಿಲ್ಲಾ ಕಾಂಗ್ರೆಸ್‌ ವಕ್ತಾರ ಡಾ.ಸಂಜಯ ಡಾಂ, ತುಮಕೂರು ಜಿಲ್ಲೆ ತಿಪಟೂರು ತಾಲೂಕು ಛಲವಾದಿ ಮಹಾಸಭಾ ಹಾಗೂ ತಿಪಟೂರಿನ ಡಾ.ಜಿ.ಪರಮೇಶ್ವರ್‌ ಅಭಿಮಾನಿ ಬಳಗದವರು ಆಗ್ರಹಿಸಿದ್ದಾರೆ. ಈ ಮಧ್ಯೆ, ಮಾಜಿ ಸಚಿವ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರನ್ನು ಸಿಎಂ ಮಾಡುವಂತೆ ವಾಲ್ಮೀಕಿ ನಾಯಕ ಮಹಾಸಭಾದ ಹಾವೇರಿ ಜಿಲ್ಲಾ ಘಟಕ ಆಗ್ರಹಿಸಿದೆ. ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ.ಪಾಟೀಲ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಎನ್‌ಎಸ್‌ಯುಐನ ವಿಜಯಪುರ ಜಿಲ್ಲಾ ಘಟಕ ಆಗ್ರಹಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೊಸದಾಗಿ 545 ಪಿಎಸ್‌ಐ ಶೀಘ್ರ ಸೇವೆಗೆ ನಿಯೋಜನೆ: ಗೃಹ ಸಚಿವ ಪರಮೇಶ್ವರ್‌
Karnataka News Live: ಮಾಟಗಾತಿಯ ಮಾತು ಕೇಳಿ ಗಂಡು ಮಗುವಿಗಾಗಿ ಪತ್ನಿಯ ತಲೆ ಕೂದಲು ಕತ್ತರಿಸಿದ ಪತಿ