ವಿಧಾನ ಪರಿಷತ್ ಚುನಾವಣೆ: ಮೇಲ್ಮನೆಗೆ 11 ಜನ ಅವಿರೋಧ ಆಯ್ಕೆ ಖಚಿತ

By Kannadaprabha NewsFirst Published Jun 4, 2024, 6:41 AM IST
Highlights

ವಿಧಾನಸಭೆಯಿಂದ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ನಡೆಯುವ ದೈವಾರ್ಷಿಕ ಚುನಾವಣೆಗೆ ನಾಮಪತ್ರ ಸಲ್ಲಿಸಲು ಒಟ್ಟು 12 ಅಭ್ಯರ್ಥಿಗಳಿಂದ 27 ನಾಮಪತ್ರಗಳು ಸಲ್ಲಿಕೆಯಾಗಿವೆ.

ಬೆಂಗಳೂರು (ಜೂ.4) : ವಿಧಾನಸಭೆಯಿಂದ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ನಡೆಯುವ ದೈವಾರ್ಷಿಕ ಚುನಾವಣೆಗೆ ನಾಮಪತ್ರ ಸಲ್ಲಿಸಲು ಒಟ್ಟು 12 ಅಭ್ಯರ್ಥಿಗಳಿಂದ 27 ನಾಮಪತ್ರಗಳು ಸಲ್ಲಿಕೆಯಾಗಿವೆ.

ಸೋಮವಾರ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿತ್ತು. ಕೊನೆಯ ದಿನದಂದೇ ಮೂರು ಪ್ರಮುಖ ರಾಜಕೀಯ ಪಕ್ಷಗಳಿಗೆ ಸೇರಿದ 11 ಅಭ್ಯರ್ಥಿಗಳಿಂದ 26 ನಾಮಪತ್ರಗಳು ಸಲ್ಲಿಕೆಯಾಗಿವೆ.

Latest Videos

ಆಡಳಿತರೂಢ ಕಾಂಗ್ರೆಸ್‌ನಿಂದ 7 ಅಭ್ಯರ್ಥಿಗಳು, ಪ್ರತಿಪಕ್ಷ ಬಿಜೆಪಿಯಿಂದ ಮೂವರು ಮತ್ತು ಜೆಡಿಎಸ್‌ನಿಂದ ಒಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಈ ಮೊದಲು ಪಕ್ಷೇತರ ಅಭ್ಯರ್ಥಿ ಆಸಿಫ್‌ ಪಾಷಾ ಸಹ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ. ಆಸಿಫ್‌ ಪಾಷಾ ಅವರಿಗೆ ಸೂಚಕರು ಇಲ್ಲದ ಕಾರಣ ಅವರ ನಾಮಪತ್ರ ತಿರಸ್ಕೃತವಾಗಲಿದ್ದು, ಇನ್ನುಳಿದ 11 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. (ಲೋಕಸಭಾ ಫಲಿತಾಂಶ ಕ್ಷಣ ಕ್ಷಣದ ಮಾಹಿತಿ ಕ್ಲಿಕ್ ಮಾಡಿ)

ಕಾಂಗ್ರೆಸ್‌ ಅಭ್ಯರ್ಥಿಗಳಾದ ಸಚಿವ ಎನ್‌.ಎಸ್‌.ಬೋಸರಾಜು ಅವರು ಮೂರು ನಾಮಪತ್ರ, ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಎರಡು ನಾಮಪತ್ರ, ಕೆ. ಗೋವಿಂದರಾಜು ಎರಡು ನಾಮಪತ್ರ, ಬಿಲ್ಕಿಸ್ ಬಾನೋ ಎರಡು ನಾಮಪತ್ರ, ಜಗದೇವ ಗುತ್ತೇದಾರ್ ಒಂದು ನಾಮಪತ್ರ, ಐವನ್ ಡಿಸೋಜಾ ಮೂರು ನಾಮಪತ್ರ ಹಾಗೂ ಎ.ವಸಂತ ಕುಮಾರ್ ಮೂರು ನಾಮಪತ್ರ ಸಲ್ಲಿಸಿದ್ದಾರೆ.

ಲೋಕಸಭಾ ಕ್ಷೇತ್ರ ಬಿಟ್ಟುಕೊಟ್ಟ ಸುಮಲತಾಗೆ ಪರಿಷತ್ ಟಿಕೆಟ್ ಭಾಗ್ಯವೂ ಇಲ್ಲ!

ಬಿಜೆಪಿ ಅಭ್ಯರ್ಥಿಗಳಾದ ಮಾಜಿ ಸಚಿವ ಸಿ.ಟಿ.ರವಿ ಎರಡು ನಾಮಪತ್ರ, ಮೇಲ್ಮನೆ ಸದಸ್ಯ ಎನ್. ರವಿಕುಮಾರ್ ಎರಡು ನಾಮಪತ್ರ ಮತ್ತು ಮುಳೆ ಮಾರುತಿರಾವ್ ಎರಡು ನಾಮಪತ್ರ ಹಾಗೂ ಜೆಡಿಎಸ್‌ ಅಭ್ಯರ್ಥಿ ಟಿ.ಎನ್.ಜವರಾಯಿಗೌಡ ಮೂರು ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ.

ಮಂಗಳವಾರ ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಜೂ.6ರಂದು ಕಡೆಯ ದಿನವಾಗಿದೆ. ಅಂದೇ ಅಧಿಕೃತವಾಗಿ ಅವಿರೋಧಿ ಆಯ್ಕೆ ಕುರಿತು ಘೋಷಣೆಯಾಗಲಿದೆ. ಒಂದು ವೇಳೆ ಚುನಾವಣೆ ನಡೆಯುವ ಪ್ರಸಂಗ ಬಂದರೆ ಜೂ.13ರಂದು ಮತದಾನ ನಡೆಯಲಿದೆ.

ಲೋಕ ಚುನಾವಣೆಯಲ್ಲಿ ಮರಾಠ ಮತ ವಿಭಜನೆ ತಡೆದ ಮುಳೆಗೆ ಪರಿಷತ್‌ ಟಿಕೆಟ್‌

ಕಾಂಗ್ರೆಸ್‌ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರು, ಶಾಸಕರು ಹಾಗೂ ಪಕ್ಷದ ಮುಖಂಡರು ಹಾಜರಿದ್ದರು. ಇನ್ನು, ಬಿಜೆಪಿ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಕೆ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಮಾಜಿ ಸಚಿವರಾದ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ, ಸುನೀಲ್ ಕುಮಾರ್ ಉಪಸ್ಥಿತರಿದ್ದರು. ಜೆಡಿಎಸ್‌ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಮತ್ತಿತರರು ಹಾಜರಿದ್ದರು.

ವಿಧಾನಪರಿಷತ್‌ ಸದಸ್ಯರಾದ ಅರವಿಂದ್‌ಕುಮಾರ್‌ ಅರಳಿ, ಎನ್‌‍.ಎಸ್‌‍.ಬೋಸರಾಜು, ಕೆ.ಗೋವಿಂದರಾಜ್‌, ಡಾ. ತೇಜಸ್ವಿನಿ ಗೌಡ, ಮುನಿರಾಜು ಗೌಡಪಿ.ಎಂ, ಕೆ.ಪಿ.ನಂಜುಂಡಿ ವಿಶ್ವಕರ್ಮ ಬಿ.ಎಂ.ಫಾರೂಕ್‌, ರಘುನಾಥ ರಾವ್‌ ಮಲ್ಕಾಪುರೆ, ಎನ್‌. ರವಿ ಕುಮಾರ್‌, ಎಸ್‌‍.ರುದ್ರೇಗೌಡ, ಕೆ.ಹರೀಶ್‌ಕುಮಾರ್‌ ಅವರ ಅಧಿಕಾರಾವಧಿ ಮುಕ್ತಾಯವಾಗಲಿದೆ. ಅವರಿಂದ ತೆರವಾಗಲಿರುವ ಈ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಸಚಿವ ಎನ್‌.ಎಸ್‌‍.ಬೋಸರಾಜ್‌, ಗೋವಿಂದರಾಜ್‌ ಮತ್ತು ಎನ್‌.ರವಿಕುಮಾರ್‌ ಪುನಃ ಸ್ಪರ್ಧಿಸಿದ್ದಾರೆ.

ಪದವೀಧರ, ಶಿಕ್ಷಕರ ಚುನಾವಣೆಗೆ ತೆರೆ: 79% ಮತದಾನ

ವಿಧಾನಪರಿಷತ್ತಿನ ಮೂರು ಪದವೀಧರ ಮತ್ತು ಮೂರು ಶಿಕ್ಷಕರ ಕ್ಷೇತ್ರಗಳಿಗೆ ಮಂಗಳವಾರ ಶಾಂತಿಯುತ ಮತದಾನ ನಡೆದಿದ್ದು, ಶೇ.79ರಷ್ಟು ಮಂದಿ ಹಕ್ಕು ಚಲಾವಣೆ ಮಾಡಿದ್ದಾರೆ. ಮತದಾರರು 78 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಬರೆದಿದ್ದಾರೆ. ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ, ಶೇ.95.27ರಷ್ಟು ಮತದಾನವಾಗಿದೆ. ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಕಡಿಮೆ ಅಂದರೆ ಶೇ.65.86 ಮತದಾನವಾಗಿದೆ. ಜೂ.6ರಂದು ಫಲಿತಾಂಶ ಪ್ರಕಟವಾಗಲಿದೆ.

click me!